Advertisement

ಯಶಸ್ಸುಗಳಿಸಿದವರ ಅಂಕ ಪಟ್ಟಿಯು ಕಣ್ಣು ಕುಕ್ಕುವಂತಿಲ್ಲ…

05:12 PM Mar 03, 2021 | Team Udayavani |

ಶಕ್ತಿಯಿಂದ ಸಾಧ್ಯವಾಗದ ಕೆಲಸವನ್ನು ಯುಕ್ತಿಯಿಂದ ಮಾಡೋಣ ಎಂಬಂತೆ, ವಿದ್ಯೆ ಕಾಪಾಡದಿದ್ದರೂ ಬುದ್ಧಿ ಕಾಪಾಡುತ್ತೆ ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಮಾತು. ನಮ್ಮ ಸುತ್ತ ಮುತ್ತ ಇರುವವರನ್ನು ಸೂಕ್ಷ್ಮವಾಗಿ ಗಮನಿಸಿದರೆ ವೃತ್ತಿಯಲ್ಲಿ ಯಶಸ್ಸು ಗಳಿಸಿದ ತುಂಬಾ ಮಂದಿಯ ಅಂಕ ಪಟ್ಟಿಯು ಕಣ್ಣು ಕುಕ್ಕುವಂತಿಲ್ಲ.

Advertisement

ಕೇವಲ ಅಂಕವೊಂದನ್ನೇ ಮೂಲ ಗುರಿಯನ್ನಾಗಿಸಿಕೊಂಡು ಶತ ಪ್ರಯತ್ನ ಮಾಡಿ ಅತ್ಯುತ್ತಮ ರ್‍ಯಾಂಕ್‌ ಪಡೆಯುವಂಥಹ ವಿದ್ಯಾರ್ಥಿಗಳು, ಅನೇಕರು ವ್ಯವಹಾರಿಕ ಬದುಕಿನಲ್ಲಿ ಸೋಲುತ್ತಾರೆ. ಶಾಲೆಯಲ್ಲಿ ಮೊದಲ ಸ್ಥಾನದಲ್ಲಿರುವವರು, ಕಾಲೇಜುಗಳಲ್ಲಿ ರಾಂಕ್‌ ಪಡೆದವರು ನಾಲ್ಕೂ ಜನರೆದುರು ನಿಂತು ಮಾತನಾಡಲೂ ಹಿಂಜರಿಯುತ್ತಾರೆ. ಒಬ್ಬೊಬ್ಬರೆ ಹೊರಗೆ ಹೋಗಲು ಹೆದರುತ್ತಾರೆ. ಪುಸ್ತಕದ ಬದನೆ ಕಾಯಿಯೊಂದು ಬಿಟ್ಟರೆ ಬೇರೇನೂ ಗೊತ್ತಿರೋದಿಲ್ಲ ಅವರಿಗೆ. ಆದರೆ ಶಾಲಾ-ಕಾಲೇಜು ಪರೀಕ್ಷೆಯಲ್ಲಿ ಸೋತವರು ಜೀವನದ ಪರೀಕ್ಷೆಯಲ್ಲಿ ಗೆಲ್ಲುವಲ್ಲಿ ಸಫ‌ಲರಾದ ಉದಾಹರಣೆಗಳಿದೆ. ಹಾಗಂತ ಜೀವನದಲ್ಲಿ ಗೆಲ್ಲಲು ಇಂತಹದೆ ನಿರ್ದಿಷ್ಟ ಕಾರಣ ಅಥವಾ ಸೂತ್ರಗಳೇನು ಬೇಕಾಗಿಲ್ಲ. ಸಮಾಜವನ್ನು ತೆರೆದ ಕಣ್ಣಿನಿಂದ ನೋಡಬೇಕು.

ಎಲ್ಲರೊಂದಿಗೆ ಬೆರೆಯುವ ಗುಣ ಬೆಳೆಸಿಕೊಳ್ಳಬೇಕು. ಇದಕ್ಕೆ ಬೇಕಾದ ಲೋಕ ಜ್ಞಾನ ಬೆಳೆಸಿಕೊಳ್ಳಲು ವಾರ್ತಾಪತ್ರಿಕೆ ಓದಬೇಕು. ಶಾಲಾ ಕಾಲೇಜು ಜೀವನದಲ್ಲಿ ಸ್ಪರ್ಧೆಗಳಲ್ಲಿ ಮುಜುಗರವಿಲ್ಲದೆ ಭಾಗವಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಉತ್ತಮ ಸಂಭಾಷನೆ ನಡೆಸುವ ಕಲೆ ಇದರಿಂದ ಬೆಳೆದು ಬರುತ್ತದೆ. ಸರಿಯಾದ ಸಮಯದಲ್ಲಿ ಒಂದು ತಪ್ಪು ನಿರ್ಧಾರದಿಂದ ಕೆಲವೊಮ್ಮೆ ಜೀವನ ಪೂರ್ತಿ ನೋವನ್ನನುಭವಿಸಬೇಕಾದಿತು. ನಮ್ಮ ಬದುಕಿಗೆ ಸಂಬಂದಪಟ್ಟ ನಿರ್ಧಾರದ ವಿಷಯದಲ್ಲಿ ವಿವೇಚನೆಯಿಂದ ನಿರ್ಧಾರಿಸುವುದನ್ನು ಬಿಟ್ಟು ಸ್ನೇಹಿತರೋ, ಇನ್ಯಾರದೋ ಕಾರಣಕ್ಕಾಗಿ ಅಥವಾ ಸಣ್ಣ ಲಾಭಕ್ಕಾಗಿ ತಪ್ಪು ನಿರ್ಧಾರ ತೆಗೆದು ಕೊಳ್ಳುವವರೇ ಹೆಚ್ಚು.

ಅತಿಯಾದ ಅಮೃತವು ವಿಷ ಎಂಬ ಮಾತಿನಂತೆ ಫೇಸ್‌ಬುಕ್‌, ವಾಟ್ಸ್‌ಪ್‌, ಇಂಟರ್‌ನೆಟ್‌ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಅಗತ್ಯಕ್ಕೆ ತಕ್ಕಷ್ಟು ಸಂಪರ್ಕದಲ್ಲಿದ್ದರೆ ಉತ್ತಮ. ಇವುಗಳ ಅತಿಯಾದ ಬಳಕೆಯಿಂದ, ಅತಿಯಾದ ಮೋಹದಿಂದ ಒಳಿತಿನ ಬದಲಿಗೆ ಕೆಡುಕೆ ಹೆಚ್ಚಾಗುತ್ತದೆ ಎಂಬುದಕ್ಕೆ ಹಲವಾರೂ ಉದಾಹರಣೆಗಳು ನಮ್ಮ ಕಣ್ಣೆದುರೇ ದೊರೆಯುತ್ತವೆ.

ಸರಿಯಾದ ವೇಳೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಎಡವುದೇ ಬಹುತೇಕರ ಸಮಸ್ಯೆಯಾಗಿದೆ. ನಿರ್ಧಾರ ತೆಗೆದುಕೊಂಡ ಬಳಿಕ ತಡವಾಗಿ ತಮ್ಮ ತಪ್ಪಿನ ಅರಿವಾಗಿ ಕಂಗಾಲಾಗುವವರು ಇದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಎಸೆಸೆಲ್ಸಿ ಬಳಿಕ ಮುಂದೇನು? ಎಂಬುವುದು ದೊಡ್ಡ ಯಕ್ಷ ಪ್ರಶ್ನೆಯಾಗಿರುತ್ತದೆ. ಈ ಸಂದರ್ಭದಲ್ಲಿ ಹೆತ್ತವರದೊಂದು ನಿರ್ಧಾರ ಸಂಬಂದಿಕರ ಪುಕ್ಕಟೆ ಅರ್ಥಹಿನ ಸಲಹೆಗಳು ಹಾಗೂ ವಿದ್ಯಾಸಂಸ್ಥೆಯಲ್ಲಿ ಕೆಲವೊಂದು ಕೋರ್ಸ್‌ಗಳು ಉಳಿಯಬೇಕೆಂಬ ಹಠದಲ್ಲಿ ವಿದ್ಯಾರ್ಥಿಗಳನ್ನು ಬ್ರೈನ್ವಾಶ್‌ ಮಾಡಿ ಕನ್‌ಫ್ಯೂಶನ್‌ ಮಾಡುವುದು. ಹೆತ್ತವರಿಗೆ ತನ್ನ ಮಗ ಅಥವಾ ಮಗಳು ವಿಜ್ಞಾನ ವಿಭಾಗದಲ್ಲಿಯೇ ಅಧ್ಯಯನ ನಡೆಸಬೇಕೆಂಬುದು ಆಸೆ ಆಗಿರುತ್ತದೆ. ಆದರೆ ಮಕ್ಕಳ ಆಸೆ ಕಲಾ ವಿಭಾಗ ಆಗಿರುತ್ತದೆ. ಕೊನೆಗೆ ಹೆತ್ತವರ ಒತ್ತಡದಿಂದ ವಿಜ್ಞಾನ ವಿಭಾಗದಲ್ಲಿಯೇ ಸೇರಿಕೊಂಡು ಅದರಲ್ಲಿಯೆ ಮುಂದುವರೆಯುತ್ತಾರೆ.

Advertisement

ಇದರಿಂದ ಮುಂದಕ್ಕೆ ಅನಾಹುತಗಳಾಗುವ ಸಾಧ್ಯತೆಗಳಿರುತ್ತದೆ. ಮನಸ್ಸಿಲ್ಲದ ವಿಷಯಗಳ ಕುರಿತು ಅಧ್ಯಯನ ನಡೆಸಲು ಇಷ್ಟವಿಲ್ಲದಿದ್ದಾಗ, ಮಕ್ಕಳು ದಾರಿ ತಪ್ಪುತ್ತಾರೆ. ಈ ಕಾರಣದಿಂದಾಗಿ ಬಹಳ ಚಿಂತಗ್ರಸ್ಥರಾಗಿ ಬದುಕಿನ ಗುರಿ ಅಸ್ಪಷ್ಟವಾಗುತ್ತದೆ. ವಿಪರೀತ ಗೊಂದಲ ನಿರ್ಮಾಣವಾಗಿ ಬದುಕೇ ಬೇಸರವೆನಿಸುತ್ತದೆ.

ಇದಕ್ಕಾಗಿ ನಾವೂ ಈ ಒತ್ತಡಗಳಿಂದ ದೂರವಿರಲು ನಮಗೆ ಆಸಕ್ತಿಯಿದ್ದ ವಿಷಯದಲ್ಲಿಯೆ ಹೆಚ್ಚಿನ ವಿದ್ಯಾಬ್ಯಾಸ ಮಾಡಬೇಕು. ನಮ್ಮ ಭವಿಷ್ಯವನ್ನು ನಾವೇ ಉತ್ತಮವಾಗಿ ರೂಪಿಸಿಕೊಳ್ಳಬೇಕು. ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಅನಂತರ ಎಲ್ಲ ಹಣೆಬರಹ, ವಿಧಿಯಾಟ ಎಂದುಕೊಳ್ಳುವುದು ನಿಜವಾಗಿಯು ಮೂರ್ಖತನ. ಹೆಚು ಶ್ರಮವಹಿಸಿ ಅಧ್ಯಯನವನ್ನು ನಡೆಸಬೇಕು. ಪ್ರತಿಯೊಬ್ಬ ಸಾಧಕನು ತನ್ನ ಸಾಧನೆಯ ಹಾದಿಯಲ್ಲಿ ಸ್ಫರ್ದೆಗಳಿಂದಲೇ ಮುಂದೆ ಬಂದಿರುತ್ತಾನೆ. ಹಾಗೆಯೇ ನಾವು ಕೂಡ ಮುಂದುವರೆಯಬೇಕು. ಗೆಲುವನ್ನು ಬೇರೆಯವರಿಗೆ ಯಾವತ್ತಿಗೂ ಬಿಟ್ಟುಕೊಡಬಾರದು ಎಂಬ ಹಠವಿರಬೇಕು. ಇಂಥಹ ಹಠವೇ ಸಾಧನೆಯ ಮೆಟ್ಟಿಲುಗಳಾಗುತ್ತದೆ. ಈ ಬಗೆಗೆ ತಿಳಿದವರು ಹೇಳಿದ ಮಾತುಗಳು ನಿತ್ಯ-ಸತ್ಯವಾಗಿದೆ. ಸ್ವಾಮಿ ವಿವೇಕನಂದರ ಒಂದು ಉತ್ತಮ ನುಡಿಯು ಜೀವನಾದರ್ಶವಾಗಿದೆ.

ಯಾರ ಮಾತಿಗೂ ನೀ ಅಂಜಬೇಡ
ಯಾರ ಆಸೆಯಂತೆಯು ನೀ ಇರಬೇಡ
ಯಾರನ್ನು ನೀ ನಂಬಿ ಬದುಕಬೇಡ
ನಿನ್ನ ಜೀವನ ನಿನಗೆ, ನೀ ಮರೆಯಬೇಡ
ಎಂದು ಅದ್ಭುತವಾದ ಮಾತನ್ನು ಹೇಳಿದ್ದಾರೆ. ಸೋತೆ ಎಂದು ನಾವು ಮುಂದಿಟ್ಟಹೆಜ್ಜೆಯನ್ನು ಹಿಂದಿಡಬಾರದು. ಏಕೆಂದರೇ, ಯಾರಿಗೆ ಗೊತ್ತು ಆ ಹೆಜ್ಜೆ ನಿಮ್ಮ ಇತಿಹಾಸವನ್ನೇ ಸೃಷ್ಟಿಸುವ ಹೆಜ್ಜೆಯಾಗಿರಬಾರದು, ಅಲ್ಲವೇ. ಕೆಲವೊಂದು ಬಾರಿ ಕೆಟ್ಟ ದಿನಗಳು ಬರುವುದು ಸಹಜ ಅಂದ ಮಾತ್ರಕ್ಕೆ ಜೀವನವೇ ಕೆಟ್ಟದಾಗಿರಬೇಕೆಂದಿಲ್ಲ ರಾತ್ರಿ ಕಳೆದು ಹೇಗೆ ಹಗಲು ಬರುತ್ತದೆಯೋ ಹಾಗೆಯೇ ಒಳ್ಳೆಯ ದಿನಗಳು ಬಂದೇ ಬರುತ್ತದೆ. ಆತ್ಮವಿಶ್ವಾಸ, ಕೃತಜ್ಞತ ಭಾವ, ದೃಢ ವಿಶ್ವಾಸ ಇದ್ದರೆ ಯಶಸ್ಸು ಯಾವತ್ತಿಗೂ ನಮ್ಮೊಂದಿಗಿರುತ್ತದೆ.


 ನಿಶ್ಮಿತಾ ಹಳೆಮುಂಡ್ಲ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next