Advertisement

Cauvery Issue ನೀರು ಹಂಚಿಕೆ ವಿಚಾರದಲ್ಲಿ ವೈಜ್ಞಾನಿಕ ವರದಿ ಅಗತ್ಯ: ಸಚಿವೆ ಶೋಭಾ

10:48 PM Sep 25, 2023 | Team Udayavani |

ಮಣಿಪಾಲ: ಕಾವೇರಿ ನದಿ ನೀರಿನ್ನು ಆಶ್ರಯಿಸಿರುವ ಬೆಂಗಳೂರು ಸಹಿತ ವಿವಿಧ ಕಡೆಗಳಲ್ಲಿ ಇರುವ ಜನಸಂಖ್ಯೆ, ಕುಡಿಯಲು ಹಾಗೂ ಬೇಸಾಯಕ್ಕೆ ಅಗತ್ಯವಿರುವ ನೀರು ಮತ್ತು ಅಣೆಕಟ್ಟುಗಳಲ್ಲಿ ಶೇಖರಣೆಯಾಗಿರುವ ನೀರಿನ ಲಭ್ಯತೆಯ ವೈಜ್ಞಾನಿಕ ಮಾಹಿತಿಯನ್ನು ರಾಜ್ಯ ಸರಕಾರ ಸಿದ್ಧಪಡಿಸಿಕೊಂಡು ಸುಪ್ರೀಂ ಕೋರ್ಟ್‌, ನದಿ ನೀರು ಹಂಚಿಕೆ ಪ್ರಾಧಿಕಾರಕ್ಕೆ ನೀಡುವ ಮೂಲಕ ವಾದ ಮಂಡಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಮಣಿಪಾಲದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದಲೇ ಒಂದು ತಂಡವನ್ನು ಕರ್ನಾಟಕ ಹಾಗೂ ತಮಿಳುನಾಡಿಗೆ ಕಳುಹಿಸಿ ವಸ್ತುಸ್ಥಿತಿಯ ಅಧ್ಯಯನಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇದು ಎರಡು ರಾಜ್ಯಗಳ ಸಮಸ್ಯೆಯೇ ಹೊರತು, ಭಾರತ-ಪಾಕಿಸ್ಥಾನದ ಸಮಸ್ಯೆಯಲ್ಲ. ಹೀಗಾಗಿ ಬಗೆಹರಿಸಿಕೊಳ್ಳ ಬಹುದು ಎಂದರು.

ರಾಜ್ಯದ ಯಾವುದೇ ತಾಲೂಕಿನಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಹೀಗಾಗಿ ಬರ ಘೋಷಣೆ ಮಾಡಲಾಗಿದೆ. ಅಣೆಕಟ್ಟುಗಳು ಬರಿದಾಗುತ್ತಿವೆ. ಆದ್ದರಿಂದ ಹಳೇ ಲೆಕ್ಕ ಬಿಟ್ಟು ವೈಜ್ಞಾನಿಕ ವರದಿ ಸಿದ್ಧಪಡಿಸಿ ವಾದ ಮಂಡಿಸಬೇಕಾಗಿದೆ. ಪದೇಪದೆ ಕರ್ನಾಟಕ ವಾದದಲ್ಲಿ ಸೋಲಬಾರದು. ಕೇಂದ್ರ ಸರಕಾರ ಸದಾ ಕರ್ನಾಟಕದೊಂದಿಗೆ ಸದಾ ಇರಲಿದೆ ಎಂದರು.

ರಾಜ್ಯ ಸರಕಾರ ವಿಪಕ್ಷ ಅಥವಾ ಕನ್ನಡ ಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಯಾರನ್ನೂ ಕೇಳದೇ 15 ಸಾವಿರ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಟ್ಟಿದೆ. ವೈಜ್ಞಾನಿಕವಾಗಿ ಸತ್ಯಾಸತ್ಯತೆ ತಿಳಿಯಲು ವರದಿ ಅಗತ್ಯವಿದೆ. ಯಾರಧ್ದೋ ಭಯ ಅಥವಾ ತಮಿಳುನಾಡಿನೊಂದಿಗೆ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ನೀರು ಒದಗಿಸುವುದು ಸರಿಯಲ್ಲ. ತಮಿಳುನಾಡು ಕೂಡ ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆ ಮಾಡಿಕೊಂಡು ಬೇಸಾಯ ಮಾಡುತ್ತಿದೆ. ಇದು ಅಪಾರ ಎಂದು ಕಿಡಿಕಾರಿದರು.

ಫ್ರೆಂಡ್ಲಿ ಟಾಕ್‌ ಮಾಡಲಿ
ತಮಿಳುನಾಡಿನಲ್ಲಿರುವ ಆಡಳಿತ ಪಕ್ಷವು ಐಎನ್‌ಡಿಐಎ ಜತೆ ಇರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಹಿತ ಪ್ರಮುಖರು ತಮಿಳುನಾಡಿನ ಮುಖ್ಯಮಂತ್ರಿಯವರೊಂದಿಗೆ ಸ್ನೇಹಯುತ ಮಾತುಕತೆ ನಡೆಸಿ, ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಿಡಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಬೇಕು. ಈ ರೀತಿಯ ಫ್ರೆàಂಡ್ಲಿ ಟಾಕ್‌ ಆದಷ್ಟು ಬೇಗ ಆರಂಭವಾದರೆ ಉತ್ತಮ ಎಂದರು.

Advertisement

ರಾಜ್ಯ ವೈಜ್ಞಾನಿಕ ವರದಿಯಂತೆ
ವಾದ ಮಂಡಿಸಿದೆ: ಹೆಬ್ಬಾಳ್ಕರ್‌
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಪಾಲಿಸಬೇಕಾಗುತ್ತದೆ. ನೆಲ ಜಲದ ಸಂರಕ್ಷಣೆಯ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಇನ್ನಷ್ಟು ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ರಾಜ್ಯ ಸರಕಾರ ಎಲ್ಲ ವರದಿಗಳನ್ನು ಇಟ್ಟುಕೊಂಡೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ. ರಾಜ್ಯ ಸರಕಾರದ ಬಳಿ ವೈಜ್ಞಾನಿಕ ವರದಿ ಇಲ್ಲ, ವಾದ ಮಂಡಿಸಿಲ್ಲ ಎಂದು ಆರೋಪಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಹೇಗೆ ವಾದ ಮಂಡಿಸಬೇಕು ಎಂಬುದನ್ನು ಹೇಳಿಕೊಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next