Advertisement

ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ ಆರಂಭ

04:33 PM Oct 26, 2021 | Team Udayavani |

ಕಲಬುರಗಿ: ಕೊರೊನಾ ಹಾವಳಿಯಿಂದ ಕಳೆಗುಂದಿದ್ದ ಶಾಲೆಗಳಿಗೆ ಮತ್ತೆ ಜೀವಕಳೆ ಬಂದಿದೆ. ಸೋಮವಾರ ಚಿಣ್ಣರ ಆಗಮನದಿಂದ ವಿದ್ಯಾ ಕೇಂದ್ರಗಳಲ್ಲಿ ಕಲರವ ಕಂಡು ಬಂತು. ಮಕ್ಕಳಿಗೆ ಶಿಕ್ಷಕರ ವೃಂದ ಅದ್ಧೂರಿ ಸ್ವಾಗತ ನೀಡಿ ಬರ ಮಾಡಿಕೊಂಡಿತು.

Advertisement

ಸರ್ಕಾರದ ಆದೇಶದಂತೆ ಈಗಾಗಲೇ ಜಿಲ್ಲಾದ್ಯಂತ ಹಿರಿಯ ಮತ್ತು ಪ್ರೌಢ ಶಾಲೆಗಳು ಆರಂಭವಾಗಿದೆ. ಸೋಮವಾರದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿ 780 ಶಾಲೆಗಳಲ್ಲೂ ಕಿರಿಯ ಪ್ರಾಥಮಿಕ ಹಂತದ 1ರಿಂದ 5ನೇ ತರಗತಿಗಳು ಕೂಡ ಪ್ರಾರಂಭವಾದವು. ಇದರೊಂದಿಗೆ ಹಿರಿಯ ಮಕ್ಕಳೊಂದಿಗೆ ಕಿರಿಯರು ಕೂಡಿಕೊಂಡು ಶಾಲಾ ಆವರಣಗಳಲ್ಲಿ ಚಿಲಿಪಿಲಿ ವಾತಾವರಣ ಮೂಡಿತ್ತು.

ಶಾಲೆಗಳ ಆರಂಭ ಹಿನ್ನೆಲೆಯಲ್ಲಿ ಬೆಳಗ್ಗೆ 9ರ ಹೊತ್ತಿಗೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳತ್ತ ಕರೆದುಕೊಂಡು ಬಂದರು. ಹಲವು ಕಡೆ ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಶಾಲೆಗಳಿಗೆ ಬಂದ ಮಕ್ಕಳಿಗೆ ಶಿಕ್ಷಕರು ಹೂವು ಮತ್ತು ಚಾಕಲೋಟ್‌ ನೀಡಿ ಸ್ವಾಗತಿಸಿದರು. ಮತ್ತೆ ಕೆಲ ಖಾಸಗಿ ಶಾಲೆಗಳಲ್ಲಿ ಪುಟಾಣಿಗಳಿಗೆ ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡರು.

ಬಹುದಿನಗಳ ನಂತರ ಮುಖಾ-ಮುಖೀಯಾದ ಶಿಕ್ಷಕ ಮತ್ತು ವಿದ್ಯಾರ್ಥಿ ಸಮೂಹದಲ್ಲಿ ಸಂತಸವೂ ಹೆಚ್ಚಾಗಿತ್ತು. ಆರಂಭದಲ್ಲೇ ಮಕ್ಕಳಿಗೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲು ಶಿಕ್ಷಕರು ಸಲಹೆ ನೀಡಿದರು. ಶಾಲಾ ಕೊಠಡಿಗಳಿಗೆ ಮಕ್ಕಳು ಪ್ರವೇಶ ಪಡೆಯುವ ಮುನ್ನ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಮತ್ತು ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಯಿತು. ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿ ಪಾಲನೆ ಮಾಡಲು ಸೂಚಿಸಲಾಯಿತು.

ಇದನ್ನೂ ಓದಿ: ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು

Advertisement

ನಗರ ಪ್ರದೇಶದಲ್ಲಿ ಉತ್ಸಾಹ

ಮೊದಲ ದಿನವೇ ಚಿಣ್ಣರು ಸಂಭ್ರಮದಿಂದಲೇ ಶಾಲೆಗಳಿಗೆ ಬಂದರು. ಪ್ರಸಕ್ತ ವರ್ಷದಲ್ಲಿ 1ರಿಂದ 5ನೇ ತರಗತಿಗಳಿಗೆ ಒಟ್ಟಾರೆ 2.79 ಮಕ್ಕಳು ನೋಂದಾಣಿ ಮಾಡಿಕೊಂಡಿದ್ದು, ಸೋಮವಾರ ಜಿಲ್ಲಾದ್ಯಂತ ಉತ್ತಮ ಹಾಜರಾತಿ ಇತ್ತು. ಇದರಲ್ಲಿ ನಗರ ಪ್ರದೇಶದ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂತು. ಕಲಬುರಗಿ ನಗರದಲ್ಲಿ ಒಟ್ಟಾರೆ ಮಕ್ಕಳು ಹಾಜರಾತಿ ಶೇ.44ರಷ್ಟು ಇದ್ದರೆ, ಜಿಲ್ಲಾದ್ಯಂತ ಶೇ.25ರಷ್ಟು ಮಕ್ಕಳು ತರಗತಿಗಳಿಗೆ ಹಾಜರಾದರು. ಹಿರಿಯ ಪ್ರಾಥಮಿಕ ಶಾಲೆಗಳು ಆರಂಭವಾದ ನಂತರ ಕಿರಿಯ ಪ್ರಾಥಮಿಕ ತರಗತಿಗಳ ಪ್ರಾರಂಭದ ಬಗ್ಗೆ ಪೋಷಕರು ವಿಚಾರಿಸುತ್ತಿದ್ದರು. ಸೋಮವಾರ ಈ ತರಗತಿಗಳು ಆರಂಭವಾದ ಕಾರಣ ಉತ್ತಮ ಪ್ರಕ್ರಿಯೆ ದೊರೆತಿದೆ.

ನಮ್ಮ ಶಾಲೆಯಲ್ಲಿ 1ರಿಂದ 5ನೇ ತರಗತಿಗಳಿಗೆ ಒಟ್ಟು 204 ಮಕ್ಕಳು ನೋಂದಣಿ ಮಾಡಿಕೊಂಡಿದ್ದು, ಮೊದಲ ದಿನವೇ 114 ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ ಎಂದು ಆದರ್ಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಮಡಿವಾಳಮ್ಮ ಪಾಟೀಲ ತಿಳಿಸಿದರು.

ಶಾಲೆಗಳು ಆರಂಭವಾಗದ ಕಾರಣ ಇಷ್ಟು ದಿನ ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸಲಾಗುತ್ತಿತ್ತು. ಚಿಕ್ಕವರು ಆಗಿದ್ದರಿಂದ ಮನನ ಮಾಡಿಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದರು. ಭೌತಿಕ ತರಗತಿಗಳು ಪ್ರಾರಂಭವಾದ ಹಿನ್ನೆಲೆ ಮಕ್ಕಳ ಕಲಿಕೆ ಅನುಕೂಲವಾಗಲಿದೆ. ಶಾಲೆಗೆ ಬಾರದ ಮಕ್ಕಳಿಗೆ ಆನ್‌ಲೈನ್‌ ತರಗತಿ ಸಹ ಮುಂದುವರೆಸಲಾಗುತ್ತದೆ ಎಂದು ಮಾತೋಶ್ರಿ ರಮಾಬಾಯಿ ಅಂಬೇಡ್ಕರ್‌ ಸರ್ಕಾರಿ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಗಡೇದ್‌ ಹೇಳಿದರು.

ನ.2 ರಿಂದ ಬಿಸಿಯೂಟ ನ.2 ರವೆರೆಗೆ ಐದೂ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅರ್ಧ ದಿನ ಮಾತ್ರ ತರಗತಿಗಳು ನಡೆಯಲಿವೆ. ಆದ್ದರಿಂದ ಬಿಸಿಯೂಟ ಕೂಡ ನ.2ರ ನಂತರವೇ ಆರಂಭವಾಗಲಿದೆ. ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನಿತ್ಯವೂ ಬಿಸಿಯೂಟ ಇರಲಿದೆ. ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರು ಸ್ವಯಂ ದೃಢೀಕರಣ ಪತ್ರ ನೀಡುವುದು ಕಡ್ಡಾಯ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next