Advertisement

ಶಾಲಾವರಣ ಅನೈತಿಕ ಚಟುವಟಿಕೆ ತಾಣ

02:38 PM May 26, 2022 | Team Udayavani |

ಚಿಕ್ಕಮಗಳೂರು: ಸರ್ಕಾರಿ ಶಾಲೆ ಎಂದರೇ ಮೂಗು ಮುರಿಯುವ ಪೋಷಕರೇ ಜಾಸ್ತಿ, ಅಂತದರಲ್ಲಿ ಇಲ್ಲೊಂದು ಶಾಲೆಗೆ ಸುತ್ತಮುತ್ತಲ ನಿವಾಸಿಗಳೇ ಕಂಟಕವಾಗಿದ್ದಾರೆ. ಸಂಜೆ ಶಾಲೆ ಮುಗಿಯುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ!

Advertisement

ನಗರದ ಶಂಕರಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದು. 1ನೇ ತರಗತಿಯಿಂದ 7ನೇ ತರಗತಿವರೆಗೂ ಇದ್ದು, 75 ಮಕ್ಕಳು ಶಿಕ್ಷಣ ಪಡೆದುಕೊಳ್ಳು ತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಮಕ್ಕಳ ಆಟ, ಪಾಠದಲ್ಲಿ ತಲ್ಲೀನವಾಗುವ ಈ ಶಾಲಾ ಆವರಣ ಸಂಜೆ ಆಗುತ್ತಿದ್ದಂತೆ ಕುಡುಕರ ಅಡ್ಡವಾಗಿ ಮಾರ್ಪಡುತ್ತಿದೆ. ಪ್ರತಿನಿತ್ಯ ಬೆಳಗ್ಗೆ ಶಿಕ್ಷಕರು ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಕುಡುಕರು ಕುಡಿದು ಎಸೆದ ಬಾಟಲಿಗಳನ್ನು ತೆಗೆದು ಹೊರಹಾಕುವುದೇ ಕಾಯಕವಾಗಿದೆ. ಇದು ಒಂದು ದಿನದ ಗೋಳಲ್ಲ. ಪ್ರತಿನಿತ್ಯವು ಇದೇ ಪರಿಸ್ಥಿತಿಯಿಂದ ಶಿಕ್ಷಕರು ಬೇಸತ್ತು ಹೋಗಿದ್ದಾರೆ. ಈ ಪುಂಡರು ಇಷ್ಟಕ್ಕೇ ಸುಮ್ಮನಿರುವುದಿಲ್ಲ. ಕುಡಿದ ಅಮಲಿನಲ್ಲಿ ಶಾಲೆಯ ಮೇಲ್ಛಾವಣಿ ಹಂಚುಗಳನ್ನು ಓಡೆದು ಹಾಕುತ್ತಾರೆ. ಹಂಚುಗಳನ್ನು ತೆಗೆದು ಶಾಲಾ ಕೊಠಡಿಯೊಳ ಪ್ರವೇಶಿಸಲು ಅನೇಕ ಭಾರೀ ಯತ್ನಿಸಿದ್ದಾರೆ. ಈ ಪುಂಡರ ಕಾಟದಿಂದ ಸ್ಥಳೀಯ ನಿವಾಸಿಗಳು, ಪೋಷಕರು ಮತ್ತು ಶಿಕ್ಷಕರು ರೋಸಿ ಹೋಗಿದ್ದಾರೆ.

ಶಾಲೆಯ ಸುತ್ತಲು ಕಾಂಪೌಂಡ್‌ ನಿರ್ಮಿಸಿದ್ದರು. ಕಾಂಪೌಂಡ್‌ ಎಗರಿ ಶಾಲಾ ಆವರಣ ಒಳ ಪ್ರವೇಶಿಸುತ್ತಾರೆ. ಪುಂಡರ ಹಾವಳಿಗೆ ಬೇಸತ್ತು. ಪೊಲೀಸರ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ. ಜ್ಞಾನದೇಗುಲ ಕುಡುಕರ ಅಡ್ಡವಾಗಿರುವುದು ಅತ್ಯಂತ ಶೋಚನೀಯ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಬಿಸಿಯೂಟದ ಅಡಿಕೆ ಕೋಣೆ ಶಿಥಿಲಗೊಂಡು ಚಿಂತಾಜನಕವಾಗಿದೆ. ಎರಡು ಶೌಚಾಗೃಹ ಇದ್ದ, 75ಮಕ್ಕಳಿಗೆ ಸಾಕಾಗದ ಪರಿಸ್ಥಿತಿ ಇದೆ. 75 ವಿದ್ಯಾರ್ಥಿಗಳಿಗೆ ಕೇವಲ 4 ಜನ ಶಿಕ್ಷಕರು ಮಾತ್ರ ಇದ್ದಾರೆ, ಸರ್ಕಾರಿ ಲೆಕ್ಕದಲ್ಲಿ 4 ಜನ ಶಿಕ್ಷಕರು ಸಾಕು ಎನಿಸಿದರು. 75 ವಿದ್ಯಾರ್ಥಿಗಳಿಗೆ 4 ಜನ ಶಿಕ್ಷಕರಿಂದ ಗುಣಮುಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎನ್ನುವುದು ಸ್ಥಳೀಯರ ವಾದವಾಗಿದೆ. ಶಾಲಾ ಆವರಣದಲ್ಲಿ ಡಾ| ಬಿ.ಆರ್. ಅಂಬೇಡ್ಕರ್‌ ಪ್ರೌಢಶಾಲೆ ಇದ್ದು, ಎರಡು ಶಾಲೆಗಳ ಮಕ್ಕಳಿಗೆ ಆಟದ ಮೈದಾನ ಕಿರಿದಾಗಿದೆ.

ಸರ್ಕಾರಿ ಶಾಲೆ ಎಂದರೇ ಅಸಡ್ಡೆ ತೋರುವ ಈ ದಿನಗಳಲ್ಲಿ ಇಲ್ಲಿನ ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ಮುಂದೇ ಬಂದರು ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ ಹಾಗೂ ಸ್ಥಳೀಯ ಪುಂಡರ ಕಾಟವು ವಿಪರೀತವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

Advertisement

ಸೋರುತ್ತಿದೆ ಶಾಲೆ ಮಾಳಿಗೆ

1956ರಲ್ಲಿ ಪ್ರಾರಂಭವಾದ ಈ ಶಾಲೆ 11 ಕೊಠಡಿ ಒಳಗೊಂಡಿದೆ. 1ರಿಂದ 7ನೇ ತರಗತಿ ಇದ್ದು, ಇಲ್ಲಿನ ಸುತ್ತಮುತ್ತಲ 75ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಶಾಲಾ ಕಟ್ಟಡದ ಮೇಲ್ಚಾವಣಿ ಹಂಚುಗಳು ಶಿಥಿಲಗೊಂಡ ಪರಿಣಾಮ ಮಳೆ ಬಂದರೇ ಎಲ್ಲ ಕಡೆಗಳಲ್ಲಿ ಸೋರುತ್ತದೆ. ಇದರಿಂದ ಬೇಸತ್ತ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಿಂದ ಹಂಚುಗಳು ತೆಗೆಸಿ ಹೊಸ ಹಂಚುಗಳನ್ನು ಹಾಕಿಸಿದ್ದು, ಕಟ್ಟಡ ಸೋರುವುದರಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಂದರೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಸಂಜೆಯಾಗುತ್ತಿದಂತೆ ಶಾಲಾ ಆವರಣ ಕುಡುಕರ ಅಡ್ಡವಾಗಿ ಮಾರ್ಪಡುತ್ತದೆ. ಕಾಂಪೌಂಡ್‌ ಎಗರಿ ಬರುವ ಪುಂಡರು ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತಿದೆ. ಪೊಲೀಸರ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಶಾಲಾ ಕಟ್ಟಡ ಮೇಲ್ಚಾವಣಿ ಶಿಥಿಲಗೊಂಡು ಮಳೆ ಬಂದರೇ ಸೋರುತ್ತದೆ. ಅಡಿಕೆ ಕೋಣೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಇಲ್ಲಿನ ಸುತ್ತಮುತ್ತಲ ನಿವಾಸಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದು, ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಸುಸರ್ಜಿತ ಶಾಲಾ ಕಟ್ಟಡ ನಿರ್ಮಿಸಿ, ಸಿಸಿ ಕ್ಯಾಮರಾ ಅಳವಡಿಸಿ ಪುಂಡರ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. -ನಾಗಲತಾ, ಶಾಲಾ ಎಸ್‌ಡಿಎಂಸಿ ಸದಸ್ಯೆ.

Advertisement

Udayavani is now on Telegram. Click here to join our channel and stay updated with the latest news.

Next