Advertisement

Thiruvananthapuram; ಶುಲ್ಕ ಪಾವತಿಯಲ್ಲಿ ವಿಳಂಬ; ನೆಲದಲ್ಲೇ ಕೂರಿಸಿ ಪರೀಕ್ಷೆ ಬರೆಸಿದರು

08:15 PM Aug 26, 2023 | Team Udayavani |

ತಿರುವನಂತಪುರ:ಪ್ರತಿ ತಿಂಗಳು ನೀಡಬೇಕಾಗಿರುವ ಶಾಲಾ ಶುಲ್ಕ ಪಾವತಿಯಲ್ಲಿ ವಿಳಂಬವಾಗಿದೆ ಎಂಬ ಕಾರಣದಲ್ಲಿ ಏಳನೇ ತರಗತಿ ವಿದ್ಯಾರ್ಥಿಯನ್ನು ನೆಲದಲ್ಲಿ ಕೂರಿಸಿ ಪರೀಕ್ಷೆ ಬರೆಯಿಸಿದ ಘಟನೆ ಕೇರಳ ರಾಜಧಾನಿ ತಿರುವನಂತಪುರದಲ್ಲಿ ನಡೆದಿದೆ.

Advertisement

ಖಾಸಗಿ ಶಾಲೆಯ ಪ್ರಾಂಶುಪಾಲರ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದ ಬಗ್ಗೆ ಶಿಕ್ಷಣ ಸಚಿವ ವಿ.ಶಿವನ್‌ ಕುಟ್ಟಿ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶ ನೀಡಿದ್ದಾರೆ.

ಆ.24, ಗುರುವಾರದಂದು ತಿರುವನಂತಪುರದಲ್ಲಿರುವ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವಿಜ್ಞಾನ ಪರೀಕ್ಷೆ ನಡೆಸಲಾಗುತ್ತಿತ್ತು. ನಿಗದಿತ ವಿದ್ಯಾರ್ಥಿಯ ಹೆತ್ತವರು ಪ್ರತಿ ತಿಂಗಳು ನೀಡಬೇಕಾಗಿರುವ ಶುಲ್ಕ ಪಾವತಿ ಮಾಡುವುದರಲ್ಲಿ ವಿಳಂಬವಾಗಿತ್ತು. ಅದನ್ನು ಗಮನಿಸಿದ ಪ್ರಾಂಶುಪಾಲರು ವಿದ್ಯಾರ್ಥಿಯ ತರಗತಿಗೆ ಬಂದು ಶುಲ್ಕ ಪಾವತಿ ಮಾಡದೇ ಇರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎದ್ದು ನಿಂತ ವಿದ್ಯಾರ್ಥಿಯನ್ನು ನೆಲದಲ್ಲಿ ಕೂರಲು ಆದೇಶ ನೀಡಿದರು.

ವಿದ್ಯಾರ್ಥಿಯ ಹೆತ್ತವರು ಶಾಲೆಯ ಆಡಳಿತ ಮಂಡಳಿ ಜತೆ ಪ್ರಶ್ನೆ ಮಾಡುತ್ತಿದ್ದಂತೆಯೇ ತುರ್ತು ಕ್ರಮ ಕೈಗೊಂಡು, ಪ್ರಾಂಶುಪಾಲರನ್ನು ಸಸ್ಪೆಂಡ್‌ ಮಾಡಲು ತೀರ್ಮಾನಿಸಿದೆ. ಪ್ರಾಂಶುಪಾಲರ ಕ್ರಮ ನೋವು ತಂದಿದೆ ಎಂದು ವಿದ್ಯಾರ್ಥಿಯ ಹೆತ್ತವರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next