Advertisement

Sasthan: ಹೆದ್ದಾರಿಯಲ್ಲಿ ಮಾಸಿದ ಗುರುತುಗಳಿಗೆ ಮರುಬಣ್ಣ

06:07 PM Oct 23, 2024 | Team Udayavani |

ಸಾಸ್ತಾನ: ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರ ದಿಂದ ಉಡುಪಿಯ ತನಕ ರಸ್ತೆಯ ಮಾರ್ಗಸೂಚಿಗಳು ಮಾಸಿ ಹೋಗಿದ್ದವು. ಇದೀಗ ಮಳೆ ಕಡಿಮೆಯಾಗಿರುವುದರಿಂದ ರಿಫ್ಲೆಕ್ಟರ್‌ಗಳು, ಝೀಬ್ರಾ ಕ್ರಾಸಿಂಗ್‌, ಮಾರ್ಗಸೂಚಿ, ಪಾದಚಾರಿ ಬಿಳಿ ಪಟ್ಟಿ ಅಳವಡಿಕೆ ಕಾರ್ಯವನ್ನು ಆರಂಭಿಸಲಾಗಿದೆ.

Advertisement

ಬಿಳಿಪಟ್ಟಿಯ ರಿಫ್ಲೆಕ್ಟರ್‌ ಹಾಗೂ ಇತರ ಸಂಚಾರ ಮಾರ್ಗಸೂಚಿಗಳು ಅಳಿಸಿ ಹೋಗಿದ್ದರಿಂದ ವಾಹನಗಳ ಸುಗಮ ಮತ್ತು ಸುರಕ್ಷಿತ ಚಾಲನೆಗೆ ಸಮಸ್ಯೆಯಾಗಿತ್ತು. ಇದೀಗ ಕೆಲವೆಡೆ ಇವುಗಳ ಅಳವಡಿಕೆ ಆರಂಭವಾಗಿದ್ದರೂ ಅದಕ್ಕೆ ವೇಗ ನೀಡಬೇಕಾಗಿದೆ.

ಮಳೆಗಾಲ ಆರಂಭದ ಮೊದಲು ರಾ.ಹೆ.-66 ರಲ್ಲಿ ಆರಂಭಿಸಲಾದ ಮರು ಡಾಮರೀಕರಣ ಕಾಮಗಾರಿಯಿಂದ ರಿಫ್ಲೆಕ್ಟರ್‌ಗಳು ಅಳಿಸಿಹೋಗಿದ್ದವು. ಡಾಮರೀಕರಣದ ಅನಂತರ ಮಳೆ ಹಾಗೂ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಈ ಗುರುತುಗಳನ್ನು ಮುದ್ರಿಸುವಲ್ಲಿ ಇಲಾಖೆಗೆ ಹಿನ್ನಡೆಯಾಗಿತ್ತು.

ರಸ್ತೆ ಗುರುತುಗಳು ವಾಹನ ಚಾಲಕರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುವುದರ ಜತೆಗೆ ಮಾರ್ಗದ ಬದಿಯಲ್ಲಿ ನಡೆದುಕೊಂಡು ಹೋಗು ವವರಿಗೂ ಎಲ್ಲಿ ನಡೆಯಬಹುದು ಎನ್ನುವುದನ್ನು ಸೂಚಿಸುತ್ತದೆ. ರಸ್ತೆ ಎಲ್ಲಿ ದಾಟಿದರೆ ಸುರಕ್ಷಿತ ಎಂದೂ ತಿಳಿಯುತ್ತದೆ.

ರಾತ್ರಿಯ ಹೊತ್ತಿನಲ್ಲಿ ಡೈವರ್ಷನ್‌ ಮತ್ತಿತರ ಸೂಚನೆಗಳು ಕಡಿಮೆ ಬೆಳಕಿನಲ್ಲೂ ಗೋಚರಿಸುತ್ತವೆ. ರಸ್ತೆ ಅಂಚಿನ ಬಿಳಿ ಗೆರೆಗಳು ಬದಿಗೆ ಸರಿಯುವ ಅಪಾಯವನ್ನು ಕಡಿಮೆ ಮಾಡುತ್ತವೆ. ಇವುಗಳು ಇಲ್ಲದೆ ಹೋದಾಗ ಅಪಾಯ ಎದುರಾಗುತ್ತದೆ.

Advertisement

ಸರ್ವಿಸ್‌ ರಸ್ತೆಯ ಕೊರತೆ
ಬಹುತೇಕ ಕಡೆಗಳಲ್ಲಿ. ರಾ.ಹೆದ್ದಾರಿಗೆ ಸಂದಿಸುವ ಇತರ ರಸ್ತೆಗಳಿಗೆ ವಾಹನಗಳು ಸಂಚರಿಸಬೇಕಾಗಿರುವುದರಿಂದ ಹಾಗು ಇಲ್ಲಿ ಸರ್ವಿಸ್‌ ರಸ್ತೆಗಳು ನಿರ್ಮಾಣವಾಗದೇ ಇರುವುದರಿಂದ ವಾಹನಗಳು ರಾ.ಹೆ.ಯಲ್ಲಿ ಅಭಿಮುಖವಾಗಿ ಸಂಚರಿಸಬೇಕಾದ ಅನಿರ್ವಾರ್ಯತೆ ಇದೆ. ಈ ಭಾಗಗಳಲ್ಲಿ ಆಭಿಮುಖವಾಗಿ ಸಂಚರಿಸುವ ವಾಹನಗಳಿಗೆ ಹಾಗು ನೇರವಾಗಿ ಸಂಚರಿಸುವ ವಾಹನಗಳಿಗೆ ಸಂಚಾರದ ಅರಿವನ್ನು ಮೂಡಿಸಲು ಕೂಡ ಈ ಗುರುತುಗಳು ಅನುಕೂಲಕರ.

ಕಾಮಗಾರಿಗೆ ಚುರುಕು
ಕುಂದಾಪುರದಿಂದ ಉಡುಪಿ ತನಕ ಮಾಸಿಹೋಗಿರುವ ರಸ್ತೆಗುರುತುಗಳನ್ನು ಮರು ಮುದ್ರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಳೆ ಬಿಡುವಿನ ಸಮಯವನ್ನು ನೋಡಿಕೊಂಡು ಈ ಕಾಮಗಾರಿಗೆ ಚುರುಕು ನೀಡಲಾಗುವುದು.
– ತಿಮ್ಮಯ್ಯ, ಟೋಲ್‌ ಸೀನಿಯರ್‌ ಮ್ಯಾನೇಜರ್‌, ಉಡುಪಿ ಟೋಲ್‌ ವೇ

Advertisement

Udayavani is now on Telegram. Click here to join our channel and stay updated with the latest news.

Next