Advertisement

ಕಲೆಕ್ಷನ್‌ ಹೇಳಿ ದೊಡ್ಡವರಾಗುವ,ನಂಬಿಸುವ ಅಗತ್ಯವಿಲ್ಲ; ಸುದೀಪ್‌

04:38 PM Mar 02, 2017 | Sharanya Alva |

ಹೆಬ್ಬುಲಿ ಚಿತ್ರದ ಕಲೆಕ್ಷನ್‌ ಸಖತ್‌ ಸೌಂಡ್‌ ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲೇ “ಹೆಬ್ಬುಲಿ’ ಕಲೆಕ್ಷನ್‌ ವಿಷಯದಲ್ಲಿ ದಾಖಲೆ ಬರೆಯುತ್ತಿದೆ ಎನ್ನಲಾಗುತ್ತಿದೆ. ಇದು ಒಬ್ಬ ಹೀರೋಗೆ ಒಳ್ಳೆಯ ಮೈಲೇಜ್‌ ಕೊಡುವ, ಕೆರಿಯರ್‌ಗೆ ಮತ್ತಷ್ಟು ಪ್ಲಸ್‌ ಆಗುವ ವಿಷಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಕಲೆಕ್ಷನ್‌ ಬಗ್ಗೆ ಸುದೀಪ್‌ ಏನು ಹೇಳುತ್ತಾರೆಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಆದರೆ ಸುದೀಪ್‌ ಮಾತ್ರ ಕಲೆಕ್ಷನ್‌ಗಿಂತ ಜನರ ಪ್ರೀತಿ, ಅವರು ಸಿನಿಮಾವನ್ನು ಅಪ್ಪಿಕೊಂಡಿರುವ ರೀತಿಯಷ್ಟೇ ಮುಖ್ಯ ಎನ್ನುತ್ತಾರೆ.

Advertisement

“ನಾವು ಕಲೆಕ್ಷನ್‌ ಬಗ್ಗೆ ಹೇಳಿಕೊಳ್ಳುವ ಅಗತ್ಯ ಬರೋದು ಎರಡು ಸಮಯದಲ್ಲಿ ಅಷ್ಟೇ, ಅದು ನಾವು ಬೇರೆಯವರಿಗಿಂತ ದೊಡ್ಡವರು ಎಂದು ತೋರಿಸಿಕೊಳ್ಳಲು ಅಥವಾ ಮತ್ತೂಬ್ಬರನ್ನು ನಂಬಿಸಬೇಕಾದ ಸಂದರ್ಭ ಬಂದಾಗ ಮಾತ್ರ ಕಲೆಕ್ಷನ್‌ ಬಗ್ಗೆ ಹೇಳಬೇಕು. ಆದರೆ ನಮಗೆ ಆ ಅಗತ್ಯ
ಇಲ್ಲ. ಇವತ್ತು ನಮ್ಮ ಸಿನಿಮಾ ಕಲೆಕ್ಷನ್‌ನಲ್ಲಿ ಮುಂದಿರಬಹುದು, ನಾಳೆ ಅದನ್ನು ಮತ್ತೂಂದು ಸಿನಿಮಾ ಹಿಂದಿಕ್ಕಬಹುದು. ಇಲ್ಲಿ ಕಲೆಕ್ಷನ್‌ಗಿಂತ ಜನರ ಪ್ರೀತಿ, ನಿರ್ಮಾಪಕರ ನಂಬಿಕೆ ಮುಖ್ಯ. ಇವತ್ತು ಸಿನಿಮಾಕ್ಕೆ ದುಡ್ಡು ಹಾಕಿದ ನಿರ್ಮಾಪಕರು ಖುಷಿಯಾಗಿದ್ದಾರೆ, ನಿರ್ದೇಶಕರಿಗೆ ಒಳ್ಳೆಯ ಹೆಸರು ಬಂದಿದೆ ಅಷ್ಟು ಸಾಕು’ ಎನ್ನುವ ಮೂಲಕ ಕಲೆಕ್ಷನ್‌ಗಿಂತ ಜನರ ಪ್ರೀತಿ ಮುಖ್ಯ ಎನ್ನುತ್ತಾರೆ ಸುದೀಪ್‌.

ಇನ್ನು, ಸುದೀಪ್‌ಗೆ “ಹೆಬ್ಬುಲಿ’ಯ ಓಪನಿಂಗ್‌ ಕಂಡು ಅಚ್ಚರಿಯಾಗಿದೆ. “ಸಿನಿಮಾ ಬಗ್ಗೆ ನಿರೀಕ್ಷೆ ಇತ್ತು ನಿಜ. ಆದರೆ ಈ ಮಟ್ಟದ ಓಪನಿಂಗ್‌ ಸಿಗುತ್ತದೆಂದು ಎಂದು ನಾನಂದುಕೊಂಡಿರಲಿಲ್ಲ. ಸಿನಿಮಾ ಬಿಡುಗಡೆ ದಿನ ಥಿಯೇಟರ್‌ಗೆ ಹೋಗಿದ್ದೆ. ಅಲ್ಲಿ ಸೇರಿದ್ದ ಕ್ರೌಡ್‌ ನೋಡಿ ನನಗೆ ಅಚ್ಚರಿಯಾಯಿತು. ಕೆಲವರ ಸಿನಿಮಾಗಳಿಗೆ ಆ ತರಹದ ಅದ್ಭುತ ಓಪನಿಂಗ್‌ ಸಿಕ್ಕಿರೋದನ್ನು ನಾನು ನೋಡಿದ್ದೆ.
“ನಮಗೆ ಯಾವಾಗಪ್ಪಾ ಈ ತರಹ’ ಎಂದು ಮನಸ್ಸಲ್ಲೇ ಅಂದುಕೊಂಡಿದ್ದೆ.

“ಹೆಬ್ಬುಲಿ’ ಮೂಲಕ ಅದು ಈಡೇರಿದೆ. ಈ ತರಹದ ಒಂದು ಪ್ರೀತಿ, ಅಪ್ಪುಗೆಯನ್ನು ಹೇಳಿ ಮಾಡಿಸಿಕೊಳ್ಳಲು, ಪಡೆಯಲು ಸಾಧ್ಯವಿಲ್ಲ. ಅಷ್ಟೊಂದು ನೂಕುನುಗ್ಗಲಿನಲ್ಲಿ ಬಂದು ಸಿನಿಮಾ ನೋಡಿದ್ದಾರೆಂದರೆ ಅದು ಅಭಿಮಾನಿಗಳ ಪ್ರೀತಿ. ಇವತ್ತು ಸಿನಿಮಾ ಚೆನ್ನಾಗಿ ಓಡುತ್ತಿದೆ. ಅದು ಜನ ನಮಗೆ ಕೊಟ್ಟ ಕಾಣಿಕೆ’ ಎಂದು ಅಭಿಮಾನಿಗಳ ಪ್ರೀತಿಯ ಬಗ್ಗೆ ಹೇಳುತ್ತಾರೆ ಸುದೀಪ್‌. ಇನ್ನು ರಾಜ್ಯದ ನಾನಾ ಕಡೆ ಹೋಗಿ ಥಿಯೇಟರ್‌ ವಿಸಿಟ್‌ ಮಾಡುವ ಹಾಗೂ ಜನರೊಂದಿಗೆ ಸ್ವಲ್ಪ ಹೊತ್ತು ಬೆರೆಯುವ ಆಲೋಚನೆ ಕೂಡಾ ಸುದೀಪ್‌ ಅವರಿಗಿದೆ.

ಅಂದಹಾಗೆ, ಸುದೀಪ್‌ ಅವರು ತೆಲಗಿನ “ಈಗ’ ಚಿತ್ರದ ನಟನೆಗಾಗಿ ಆಂಧ್ರ ಸರ್ಕಾರದ ನೀಡುವ ನಂದಿ ಪ್ರಶಸ್ತಿಗೆ ಭಾಜನರಾಗಿದ್ದು, ಅತ್ಯುತ್ತಮ ಖಳನಟ ಪ್ರಶಸ್ತಿ ಅವರ ಪಾಲಾಗಿದೆ. ಈ ಮೂಲಕ “ಹೆಬ್ಬುಲಿ’ ಯಶಸ್ಸಿನ ಜೊತೆಗೆ ಮೊದಲ ತೆಲುಗು ಚಿತ್ರದಲ್ಲೇ ಪ್ರಶಸ್ತಿ ಪಡೆದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದ್ದಾರೆ ಸುದೀಪ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next