Advertisement

Central Govt ಹೊಸ ಮಾರ್ಗಸೂಚಿ ಬರುವವರೆಗೂ ಈ ಬಾರಿ ಮರಳು ತೆಗೆಯುವಂತಿಲ್ಲ

01:01 AM Aug 27, 2023 | Team Udayavani |

ಮಂಗಳೂರು: ಈ ಬಾರಿ ಸಿಆರ್‌ಝಡ್‌ ಹೊಸ ಅಧಿಸೂಚನೆ (2019) ಕಾರ್ಯರೂಪಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮರಳು ದಿಣ್ಣೆ ತೆರವುಗೊಳಿಸಲು ಕೇಂದ್ರ ಸರಕಾರದ ಅಂತಿಮ ಅಧಿಸೂಚನೆ ಹೊರಡುವ ವರೆಗೆ ಕಾಯಲೇಬೇಕಿದೆ.

Advertisement

ಹೊಸ ಮಾರ್ಗಸೂಚಿಗಳ ಆಧಾರದಲ್ಲಿಯೇ ಮರಳೂ ತೆರವುಗೊಳಿಸಬೇಕು. ಈ ಬಗ್ಗೆ ಮಾರ್ಚ್‌ನಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಎಲ್ಲ ರಾಜ್ಯಗಳಿಗೂ ಸಿಆರ್‌ಝಡ್‌ ಪ್ರದೇಶದಲ್ಲಿ ಮರಳು ತೆಗೆಯುವ ಕುರಿತು ಕರಡು ಮಾರ್ಗಸೂಚಿ ಕಳುಹಿಸಿತ್ತು. ಇದರ ಆಕ್ಷೇಪದ ಅವಧಿ ಒಂದು ತಿಂಗಳ ಕಾಲ ಇದ್ದು, ಇದುವರೆಗೆ ಅಂತಿಮ ಅಧಿಸೂಚನೆ ಬಂದಿಲ್ಲ.

23 ನಾನ್‌ ಸಿಆರ್‌ಝಡ್‌ ಪ್ರದೇಶಗಳಲ್ಲಿ ಮರಳು ಬ್ಲಾಕ್‌ಗಳಿಂದ ಮಾತ್ರವೇ ಮರಳು ತೆಗೆಯಲಾಗುತ್ತದೆ. ಆದರೆ ನಾನ್‌ ಸಿಆರ್‌ಝಡ್‌ ಮರಳು ಎಲ್ಲ ಕಡೆ ಸಿಗದಿರುವ ಕಾರಣ ಹೆಚ್ಚಿನ ಕಡೆ ಬ್ಲ್ಯಾಕ್‌ ಮಾರ್ಕೆಟ್‌ ಮರಳನ್ನೇ ಆಶ್ರಯಿಸುವಂತಾಗಿದೆ.

ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಯುನಿಟ್‌ಗೆ
ಸುಮಾರು 6ರಿಂದ 8 ಸಾವಿರ ರೂ. ವಸೂಲಿ ಮಾಡುತ್ತಿದ್ದು, ಸಿಆರ್‌ಝಡ್‌ ಮರಳು ಪೂರೈಕೆ ಆರಂಭಗೊಂಡರೆ ಯುನಿಟ್‌ಗೆ 4ರಿಂದ 5 ಸಾವಿರ ರೂ. ಲಭ್ಯವಾಗಲಿದೆ.

ನೂತನ ಅಧಿಸೂಚನೆ
2019ರ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ ಅನುಷ್ಠಾನಕ್ಕೆ ಬಂದಿದೆ. ಅದರ ಆಧಾರದಲ್ಲೇ ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರ (ಎನ್‌ಸಿಎಸ್‌ಸಿಎಂ) ಮರಳು ದಿಣ್ಣೆಗಳ ತೆರವು ಬಗ್ಗೆ ರಾಜ್ಯ ಸರಕಾರಗಳು, ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರಗಳ ಜತೆ ಸಮಾಲೋಚಿಸಿ ವಿಸ್ತೃತ ಮಾರ್ಗಸೂಚಿ ನಡೆಸುವಂತೆ
ಶಿಫಾರಸು ಮಾಡಿತ್ತು. ಕರಡು ಮಾರ್ಗ ಸೂಚಿಯ ಬಳಿಕ ಅಂತಿಮ ಮಾರ್ಗ ಸೂಚಿ ಬರುವವರೆಗೆ ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ಅಸಾಧ್ಯ ಎನ್ನುತ್ತಾರೆ ಅಧಿಕಾರಿಗಳು. ಜಿಲ್ಲೆಯಿಂದ ಈ ಕರಡು ಮಾರ್ಗಸೂಚಿಗೆ ಯಾರೂ ಆಕ್ಷೇಪ ಸೂಚಿಸಿಲ್ಲ. ತೆರವುಗೊಳಿಸಲಾದ ಮರಳನ್ನು ಮರಳು ಕೊಚ್ಚಿಕೊಂಡು ಹೋಗಿರುವ ತೀರ ಪ್ರದೇಶದ ಪೋಷಣೆಗೆ ಬಳಸಬೇಕು ಎನ್ನುವ ಅಂಶಕ್ಕೆ ಉಡುಪಿಯ ಮರಳು ತೆರವುಗೊಳಿಸುವವರು ಆಕ್ಷೇಪ ವ್ಯಕ್ತಪಡಿಸಿದ್ದರು.

Advertisement

ಮತ್ತೆ ಬೆಥಮೆಟ್ರಿ ಸಮೀಕ್ಷೆ
ಕಳೆದ ಸೀಸನ್‌ನ ಮರಳುಗಾರಿಕೆ ಸಿಆರ್‌ಝಡ್‌ ಪ್ರದೇಶದಲ್ಲಿ ಮಾ. 4ಕ್ಕೆ ಸ್ಥಗಿತಗೊಂಡಿತ್ತು. ಆ ಬಳಿಕ ಇಸಿ (ಪರಿಸರ ಕ್ಲಿಯರೆನ್ಸ್‌) ಮತ್ತೆ ಪಡೆಯಲು ಬೇಕಾದ ಬೆಥಮೆಟ್ರಿ ಸರ್ವೇ ಮೇ ತಿಂಗಳಲ್ಲಿ ಕೈಗೊಳ್ಳಲಾಗಿತ್ತು. ಆದರೆ ಆ ವರದಿಯನ್ನು ಜಿಲ್ಲಾಧಿ ಕಾರಿಗಳು ನಿರಾಕರಿಸಿದ್ದು, ಮಳೆಗಾಲದ ಬಳಿಕ ಮತ್ತೆ ಸರ್ವೇ ನಡೆಸಲಾಗುವುದು.
ಸಾಮಾನ್ಯವಾಗಿ ಮಳೆಗಾಲದಲ್ಲಿ ಅಧಿಕ ನೀರಿನ ಹರಿವು, ಪ್ರವಾಹದ ಕಾರಣ ಮರಳು ದಿಬ್ಬಗಳು ಸ್ಥಾನ ಪಲ್ಲಟಗೊಳ್ಳುತ್ತವೆ. ಹಾಗಾಗಿ ಮಳೆಗಾಲದ ಮೊದಲು ಸರ್ವೇ ನಡೆಸಿದರೆ ಸರಿಯಾಗದು ಎನ್ನುವ ನಿಟ್ಟಿನಲ್ಲಿ ಮತ್ತೆ ಸರ್ವೇ ನಡೆಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಕಳೆದ ಬಾರಿ
ಕಳೆದ ಬಾರಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಗೆ ಇಸಿ ನೀಡಲಾಗಿತ್ತು. ಆದರೆ ಇಸಿ ನೀಡಿದ ಪ್ರಾರಂಭಿಕ ಅವಧಿಯಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿ ಹಸುರು ನ್ಯಾಯಾಧಿಕರಣವು ಸಿಆರ್‌ಝಡ್‌ ಮರಳುಗಾರಿಕೆಗೆ ಸಂಬಂಧಿಸಿ ಆದೇಶ ನೀಡಿತ್ತು. ಅದನ್ನು ದ.ಕ. ಜಿಲ್ಲಾಧಿಕಾರಿಯವರು ಇಲ್ಲಿಗೆ ಅನ್ವಯಿ ಸಿದ್ದರಿಂದ ದ.ಕ.ದಲ್ಲೂ ಮರಳುಗಾರಿಕೆ ನಿಷೇಧಗೊಂಡಿತ್ತು. ಇದಾದ ಕೆಲವು ತಿಂಗಳ ಬಳಿಕ ಜಿಲ್ಲಾಧಿಕಾರಿಗಳು ಜಿಲ್ಲಾ ಕ್ರಿಯಾ ಸಮಿತಿ ಸಭೆ ನಡೆಸಿ 205 ಮಂದಿಗೆ ಪರವಾನಿಗೆ ನೀಡಿದ್ದರು.

ನೂತನ ಕರಡು ಮಾರ್ಗಸೂಚಿಯ ಪ್ರಮುಖ ಅಂಶಗಳು
01. ಆಯಾ ರಾಜ್ಯಗಳಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯುವ ಸಮುದಾಯಕ್ಕೆ ಮರಳು ದಿಬ್ಬ ತೆರವಿಗೆ ಅನುಮತಿ ನೀಡುವ ಅಧಿಕಾರ.

02.ನಿರ್ದಿಷ್ಟ ಪ್ರಮಾಣದ ಮರಳು ನಿರ್ದಿಷ್ಟ ಕಾಲಾವಧಿಯಲ್ಲಿ ತೆರವುಗೊಳಿಸು ವುದಕ್ಕೆ ಯೋಜನೆ ಸಿದ್ಧಪಡಿಸಲು ತಾಂತ್ರಿಕ ಸಂಸ್ಥೆಗಳು, ವಿ.ವಿ.ಗಳ ನೆರವು.

03.ಸೂಕ್ಷ್ಮ ಕರಾವಳಿ ಪರಿಸರದ ಹವಳ ದಿಬ್ಬ, ಸಮುದ್ರ ಹುಲ್ಲು, ಕಾಂಡ್ಲಾ, ಮತ್ತಿತರ ಸಂರಕ್ಷಿತ ಪ್ರದೇಶಕ್ಕೆ ಸರಿಯಾದ ಸುರಕ್ಷೆ ಇರಬೇಕು.

04.ರಾಜ್ಯ ಪ್ರಾಧಿಕಾರದ ಸಮಾಲೋಚನೆಯಲ್ಲಿ ಯೋಜನೆ ಸಿದ್ಧಗೊಳ್ಳಬೇಕು.

05.ಏಳರಿಂದ 10 ಸದಸ್ಯರ ಸಮಿತಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತೀ ಕರಾವಳಿ ಜಿಲ್ಲೆಯಲ್ಲಿ ರಚಿಸಬೇಕು. ಅಧಿಕಾರಿ, ತಾಂತ್ರಿಕ ಸಂಸ್ಥೆಗಳ ಪ್ರತಿನಿಧಿ, ಸ್ಥಳೀಯ ಸಾಂಪ್ರದಾಯಿಕ ಸಮುದಾಯ, ಮೀನುಗಾರ ಸಮುದಾಯದ ಇಬ್ಬರು ಪ್ರತಿನಿಧಿಗಳು ಇರಬೇಕು. ಮರಳು ದಿಬ್ಬ ತೆರವಿನ ಜವಾಬ್ದಾರಿ ಈ ಸಮಿತಿಯದು.

06.ತೆರವಾದ ಮರಳು ಕರಾವಳಿಯಲ್ಲಿ ಕೊರೆತ ಉಂಟಾದ ಕಡೆ ಪೋಷಣೆಗೆ ಬಳಕೆ. ಷರತ್ತಿಗೊಳಪಟ್ಟು ಮರಳಿನ ಬಳಕೆಯನ್ನು ನಿರ್ಧರಿಸಬಹುದು.

ಸಿಆರ್‌ಝಡ್‌ ಮರಳು ಬಳಕೆ ಹೇಗೆ ಎನ್ನುವುದು ಈ ಕುರಿತ ಅಂತಿಮ ಮಾರ್ಗಸೂಚಿ ಬಂದ ಬಳಿಕ ಸ್ಪಷ್ಟಗೊಳ್ಳಲಿದೆ. ಅಲ್ಲಿವರೆಗೆ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ನಡೆಸುವಂತಿಲ್ಲ.
-ದಿನೇಶ್‌ ಕುಮಾರ್‌, ಪ್ರಾದೇಶಿಕ ನಿರ್ದೇಶಕರು, ಪರಿಸರ ಇಲಾಖೆ

- ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next