Advertisement

ಬೇಸಿಗೆಯನು ಕೂಲ್‌ ಆಗಿಸುವ ಸಮರ್ಪಣ

03:38 PM Apr 15, 2017 | Team Udayavani |

ಬೆಂಗ್ಳೂರಿನ ಮಾಲ್‌ಗ‌ಳಲ್ಲಿ ಯಾವುದೇ ವಸ್ತುವಿಗೆ ಕೈ ಹಾಕಿ, ಅದು ಪ್ಲಾಸ್ಟಿಕ್‌ ಆಗಿರುತ್ತೆ! ದಿನಬಳಕೆಯ ಆ ಪ್ಲಾಸ್ಟಿಕ್‌ ವಸ್ತುಗಳೆಲ್ಲ ಬರೋದು ಚೀನಾದಿಂದ. ಉದ್ಯಾನ ನಗರಿಯ ಪರಿಸರ ಮಾಲಿನ್ಯದಲ್ಲಿ ಇವುಗಳ ಪಾತ್ರ ದೊಡ್ಡದು. ಇದಕ್ಕೀಗ ಬ್ರೇಕ್‌ ಹಾಕಲು ಅಲ್ಲಲ್ಲಿ ದೇಸಿ ಮಾದರಿಗಳು ಸಿದ್ಧಗೊಳ್ಳುತ್ತಿವೆ. ಮಣ್ಣಿನಿಂದ ನಿರ್ಮಿತ ಬಾಟಲಿಯೂ ನಿಮ್ಮ ಕೈಸೇರುತ್ತಿದೆ!

Advertisement

ಬೆಂಗ್ಳೂರು ಅಂದ್ರೆ ಸದಾ ಕೂಲ್‌ ಅನ್ನೋದು ಹೊರಗಿನವರ ವ್ಯಾಖ್ಯಾನ. ಈ ಕೂಲ್‌ನೆಸ್‌ ಕಾಪಾಡುವ ರಾಜಧಾನಿಯ ಪರಿಸರ ಸೈನಿಕರಲ್ಲಿ ಒಬ್ಬರು ಶಿವಕುಮಾರ್‌ ಹೊಸಮನಿ. “ಸಮರ್ಪಣ’ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಹೊಸಮನಿ, ಪ್ರತಿ ಬೇಸಿಗೆಯಲ್ಲಿ ಏನನ್ನಾದರೂ ಹೊಸ ಮಾದರಿಯನ್ನು ಪರಿಚಯಿಸುತ್ತಾರೆ. ಒಮ್ಮೆ ಮುಟ್ಟಿದರೆ, ಮುತ್ತಿಕ್ಕೋಣ ಎನ್ನುವ ಸೌಂದರ್ಯದಲ್ಲಿರುವ ಮಣ್ಣಿನ ಬಾಟಲಿಗಳನ್ನು ಅವರು ಮಾರುಕಟ್ಟೆಗೆ ಬಿಟ್ಟಿದ್ದಾರೆ.

ಇದು ದೇಸಿ ಕೈಚಳಕ

500 ಮಿಲಿ ಲೀಟರ್‌, 1 ಲೀಟರ್‌, ಒಂದೂವರೆ ಲೀಟರ್‌ನ ಬಾಟಲಿಗಳು ಸದ್ಯ ಮಾರುಕಟ್ಟೆಯಲ್ಲಿವೆ. ಜನರ ಬೇಡಿಕೆ, ಅಭಿರುಚಿಗೆ ತಕ್ಕಂತೆ ಬಾಟಲಿಗಳನ್ನು ನಿರ್ಮಿಸಲಾಗಿದ್ದು, ಕೆಲವು ಬಿಯರ್‌ ಬಾಟಲಿಯ ಶೈಲಿಯಲ್ಲಿಯೂ ವಿನ್ಯಾಸಗೊಂಡಿವೆ. ಕೆಲವು ಸಾಂಪ್ರದಾಯಿಕ ಲುಕ್ಕಿನಲ್ಲಿ ನಿಮ್ಮನ್ನು ಸೆಳೆಯುತ್ತವೆ. ಇದರ ಮೇಲೆ ಮಾಗಡಿಯ ಕಲಾವಿದನೊಬ್ಬನ ಚಿತ್ತಾರಗಳೂ ಆಕರ್ಷಿಸುತ್ತವೆ. ಈ ಬಾಟಲಿಗಳಲ್ಲಿ ನೀರು ಹಾಕಿ ಕುಡಿದರೆ, ಫ್ರಿಡಿjನಲ್ಲಿನ ತಣ್ಣನೆ ಪಾನೀಯ ಕುಡಿದಷ್ಟು ಕೂಲ್‌ ಆದ ಅನುಭವ ದಕ್ಕುತ್ತದೆ. ಸಾಕಷ್ಟು ಗಟ್ಟಿಮುಟ್ಟಾಗಿಯೇ ಇರುತ್ತವೆ. ಒಂದು ವೇಳೆ ಇವು ಬಿದ್ದು ಒಡೆದು ಹೋದರೂ, ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತವೆ. ಪ್ಲಾಸ್ಟಿಕ್‌ನಂತೆ ಮಣ್ಣಿನಲ್ಲಿ ಕರಗದೆ, ಪರಿಸರಕ್ಕೆ ಮಾರಕ ಆಗುವುದಿಲ್ಲ ಎನ್ನುತ್ತಾರೆ ಶಿವಕುಮಾರ್‌.

ಪಕ್ಷಿಗಳಿಗೆ ಗುಟುಕು ನೀರು!
ಇದು “ಸಮರ್ಪಣ’ ಸಂಸ್ಥೆಯ ಇನ್ನೊಂದು ಅಭಿಯಾನ. 5 ವರ್ಷದಿಂದ ಈ ಯೋಜನೆ ಹಮ್ಮಿಕೊಂಡು ಬಂದಿದ್ದು, ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೆ ಪರಿತಪಿಸುವ ಪಕ್ಷಿಗಳಿಗೆ ಈ ಸಂಸ್ಥೆ ನೆರವಾಗುತ್ತದೆ. ಕರಟ, ತ್ರಿಕೋನಾಕೃತಿ, ಹರಿವಾಣ, ಹೂಕುಂಡ, ಬೋಗುಣಿಯ ಶೈಲಿಯಲ್ಲಿ ನೀರಿನ ಆಸರೆಗಳನ್ನು ನಿರ್ಮಿಸಿ ಉಚಿತವಾಗಿಯೇ ಸಾರ್ವಜನಿಕರಿಗೆ ನೀಡುತ್ತಾರೆ ಶಿವಕುಮಾರ್‌. ಈ ವರ್ಷ ಸುಮಾರು 50 ಸಾವಿರ ಮಂದಿಗೆ ಗುಟುಕು ನೀರಿನ ಆಸರೆ ಮಾದರಿಗಳನ್ನು ವಿತರಿಸಲಾಗಿದೆ.

Advertisement

ಇವಲ್ಲದೆ ಗಣಪತಿ ಹಬ್ಬದ ವೇಳೆ ಜೇಡಿಮಣ್ಣಿನ ಗಣೇಶ ಮೂರ್ತಿಗಳ ನಿರ್ಮಾಣದಲ್ಲೂ ಸಂಸ್ಥೆ ಭಾಗಿಯಾಗಿ, ಪರಿಸರ ಜಾಗೃತಿ ಮೂಡಿಸಿತ್ತು. ಗಣಪನನ್ನು ಯಾರೂ ಸಾರ್ವಜನಿಕ ಕೆರೆಗಳಿಗೆ ಬಿಡಬಾರದೆಂದು, ಆ ಮೂರ್ತಿಯೊಳಗೆ ಬೆಳ್ಳಿ ನಾಣ್ಯಗಳನ್ನು ಹಾಕಿ, ಮನೆಯ ನೀರಿನ ಮೂಲಗಳಲ್ಲಿಯೇ ವಿಸರ್ಜಿಸಲು ಪ್ರೇರೇಪಿಸಿದ್ದರು.

ಮಣ್ಣಿನ ಬಾಟಲಿ ಬೇಕಿದ್ದರೆ…
ಬೆಂಗಳೂರಿಗೆ ಈ ಮಣ್ಣಿನ ಬಾಟಲಿಗಳನ್ನು ಪೂರೈಸುವುದು ಬೆಳಗಾವಿ ಜಿಲ್ಲೆಯ ಕುಂಬಾರ ಸಮುದಾಯ. ಗೋಕಾಕ್‌ ಸಮೀಪದ ಸಾವಳಿಗಿಯ ಶಿವಬಸಪ್ಪ ಅವರ ಬಳಿ ಶಿವಕುಮಾರ್‌ ಹೊಸಮನಿ ಈ ಮಣ್ಣಿನ ಮಾದರಿಗಳನ್ನು ಮಾಡಿಸುತ್ತಾರೆ. ಅಲ್ಲಿನ 30-35 ಕುಟುಂಬಗಳಿಗೆ ಇದು ಒಂದು ಉದ್ಯೋಗವೇ ಆಗಿದೆ. ಬೆಂಗಳೂರು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಗಳನ್ನು ಅಲ್ಲಿ ಸಿದ್ಧಪಡಿಸಲಾಗುತ್ತದೆ. ವಿನ್ಯಾಸಕ್ಕೆ ಅಗತ್ಯ ಸಲಹೆಗಳನ್ನು ಶಿವಕುಮಾರ್‌ ನೀಡುತ್ತಾರೆ. ನಿಮಗೂ ಮಣ್ಣಿನ ಬಾಟಲಿ ಮಾದರಿ ಬೇಕಿದ್ದರೆ ಮೊ. 9980008074, 7795255676 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next