Advertisement

ಸಮಾಜವಾದಿ ಪಕ್ಷದ 159 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

12:29 AM Jan 25, 2022 | Team Udayavani |

ಸಮಾಜವಾದಿ ಪಕ್ಷವು 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಅಖಿಲೇಶ್ ಅವರು ಕರ್ಹಾಲ್‌ನಿಂದ, ಚಿಕ್ಕಪ್ಪ ಶಿವಪಾಲ್‌ ಯಾದವ್‌ ಜಸ್ವಂತ್‌ನಗರದಿಂದ ಕಣಕ್ಕಿಳಿಯಲಿದ್ದಾರೆ. ವಿಶೇಷವೆಂದರೆ, ಜೈಲಲ್ಲಿರುವ ಅಜಂ ಖಾನ್‌ ಅವರಿಗೆ ರಾಂಪುರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.

Advertisement

ಅಯೋಧ್ಯೆಯಲ್ಲಿ ಸ್ಪರ್ಧಿಸದ್ದು ಒಳ್ಳೆಯದಾಯ್ತು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವೇಳೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಸ್ಥಳೀಯರ ಅಂಗಡಿಗಳು, ಮನೆಗಳನ್ನು ಕೆಡವಬೇಕಾಯಿತು. ಹೀಗಾಗಿ ಸ್ಥಳೀಯರು ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಅವರು ಅಯೋಧ್ಯೆಯಲ್ಲಿ ಸ್ಪರ್ಧಿಸದೇ ಇದ್ದಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಅವರಿಗೆ ತೀವ್ರ ವಿರೋಧ ಎದುರಾಗುತ್ತಿತ್ತು ಎಂದು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

ಈ ಬಗ್ಗೆ ನನ್ನಲ್ಲೂ ಅಭಿಪ್ರಾಯ ಕೇಳಲಾಗಿತ್ತು. ನಾನು ರಾಮ್‌ಲಲ್ಲಾನನ್ನು ಕೇಳಿ ನನ್ನ ಅಭಿಪ್ರಾಯ ತಿಳಿಸಿದ್ದೆ. ಅದರಂತೆ, ಗೋರಖ್‌ಪುರದಲ್ಲಿ ಯೋಗಿ ಅವರು ಕಣಕ್ಕಿಳಿಯಲು ತೀರ್ಮಾನಿಸಿದರು ಎಂದೂ ದಾಸ್‌ ತಿಳಿಸಿದ್ದಾರೆ.

ಎಸ್‌ಪಿ ಶಾಸಕ ಬಿಜೆಪಿಗೆ: ಸಮಾಜವಾದಿ ಪಕ್ಷದ ಶಾಸಕ ಸುಭಾಶ್‌ ರಾಯ್‌ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಅವರ ಸಮ್ಮುಖದಲ್ಲಿ ಅವರು ಪಕ್ಷ ಸೇರಿದ್ದಾರೆ.

ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ ನೇರ ಪ್ರಸಾರಕ್ಕೆ ದೂರದರ್ಶನ ಸಿದ್ಧತೆ : 59 ಕ್ಯಾಮೆರಾ, 160 ಸಿಬ್ಬಂದಿ

Advertisement

ಪ್ರಿಯಾಂಕಾ ಎಫೆಕ್ಟ್:
ಭಾನುವಾರ ಮಹಿಳಾ ನಾಯಕಿಯರೊಂದಿಗೆ ಪ್ರಚಾರ ಆರಂಭಿಸಿರುವ ಬಿಜೆಪಿಯ ಕಾಲೆಳೆದಿರುವ ಕಾಂಗ್ರೆಸ್‌, “ಇದೆಲ್ಲ ಪ್ರಿಯಾಂಕಾ ಎಫೆಕ್ಟ್’ ಎಂದು ಹೇಳಿದೆ. ಅಲ್ಲದೇ, ರಾಜ್ಯ ಸರಕಾರದ ಮುಖ ಉಳಿಸಿಕೊಳ್ಳುವ ತಂತ್ರ ಎಂದೂ ಮೂದಲಿಸಿದೆ. ಇದೇ ವೇಳೆ, ಸೋಮವಾರ ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆಯಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ರಾಹುಲ್‌ಗಾಂಧಿ, ಪ್ರಿಯಾಂಕಾ ವಾದ್ರಾ, ಗುಲಾಂ ನಬಿ ಆಜಾದ್‌, ಸಚಿನ್‌ ಪೈಲಟ್‌ ಮತ್ತಿತರರು ಸ್ಟಾರ್‌ ಪ್ರಚಾರಕರಾಗಿ ಮಿಂಚಲಿದ್ದಾರೆ.

ಪ್ರಧಾನಿ ಮೋದಿ ಮೆಚ್ಚುಗೆ: ಉತ್ತರಪ್ರದೇಶದ ಸಂಸ್ಥಾಪನಾ ದಿನವಾದ ಸೋಮವಾರ ರಾಜ್ಯದ ಜನತೆಗೆ ಶುಭ ಕೋರಿರುವ ಪ್ರಧಾನಿ ಮೋದಿ, “ಕಳೆದ 5 ವರ್ಷಗಳಲ್ಲಿ ಉ.ಪ್ರದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಮೈಲುಗಲ್ಲು ಸಾಧಿಸಿದೆ. ಈ ಬಹು ಆಯಾಮದ ಅಭಿವೃದ್ಧಿಯು ನವಭಾರತದಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next