Advertisement

ಸಂಬಳ, ಸೌಲಭ್ಯಕ್ಕೆ ಕತ್ತರಿ ಭಯದಲ್ಲಿ ಬ್ಯಾಂಕ್‌ ಸಿಬಂದಿ?

12:01 PM Mar 23, 2017 | Harsha Rao |

ಬ್ಯಾಂಕುಗಳಲ್ಲಿ ಸುಸ್ತಿ ಸಾಲದ ಪ್ರಮಾಣ ಏರುವುದಕ್ಕೆ ಸಿಬಂದಿ ವೈಫ‌ಲ್ಯಕ್ಕಿಂತ ಬಡ್ಡಿ ಮನ್ನಾ, ಸಾಲ ಮನ್ನಾ ಮತ್ತು ಒಂದೇ ಬಾರಿ ತೀರುವಳಿಯಂಥ ಸಾಲಿಗ ಸ್ನೇಹಿ ನೀತಿ – ವ್ಯವಸ್ಥೆಗಳೇ ಕಾರಣ ಎನ್ನಲಾಗುತ್ತಿದೆ. ಇವು ಸಾಲಗಾರರಲ್ಲಿ ಸಾಲ ಮರುಪಾವತಿ ಸಂಸ್ಕೃತಿಯನ್ನು ಹತ್ತಿಕ್ಕಿವೆ ಎನ್ನುವ ಅಭಿಪ್ರಾಯ ಸುಳ್ಳಲ್ಲ.

Advertisement

ವರ್ಷಗಳ ಹಿಂದಿನ ಮಾತು. ಸುಸ್ತಿ ಸಾಲದ ವಸೂಲಿ ಮತ್ತು ನಿರ್ವಹಣೆ ಬಗೆಗೆ ಚರ್ಚಿಸುತ್ತಿದ್ದ ಬ್ಯಾಂಕ್‌ ಸಿಬ್ಬಂದಿಯಲ್ಲಿ ಕೆಲವರು, ಇದು ಒಂದು ದಿನ ತಮ್ಮ ಸಂಬಳಕ್ಕೆ ಸಂಚಕಾರ ತರದಿದ್ದರೆ ಸಾಕು ಎಂದು ಭಯ ವ್ಯಕ್ತಪಡಿಸಿದ್ದರು ಮತ್ತು ಕೆಲವರು ಹಾಸ್ಯ ಚಟಾಕಿ ಹಾರಿಸಿದ್ದರು. ವಿಪರ್ಯಾಸವೆಂದರೆ, ಅದು ಇಂದು ವಾಸ್ತವಾಗಿ ಪರಿಣಮಿಸುವ ಎಲ್ಲ ಸೂಚನೆಗಳು, ಸಂಕೇತಗಳು ಮತ್ತು ಕುರುಹುಗಳು ಬ್ಯಾಂಕಿಂಗ್‌ ವಲಯದಲ್ಲಿ ಕಾಣುತ್ತಿದ್ದು, ಸುಮಾರು ಒಂದು ಮಿಲಿಯನ್‌ ಬ್ಯಾಂಕ್‌ ಸಿಬ್ಬಂದಿಯ ನಿದ್ರೆ ಕೆಡಿಸಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಬ್ಯಾಂಕ್‌ ಸಿಬ್ಬಂದಿ ಸರಕಾರ ಮತ್ತು ಬ್ಯಾಂಕ್‌ ಆಡಳಿತದ ಈ ಧೋರಣೆಯ ವಿರುದ್ಧ ಬೀದಿಗಿಳಿಯುವುದನ್ನು ತಳ್ಳಿ ಹಾಕಲಾಗದು.

ಕಾರಣ ಏನು?
ಬ್ಯಾಂಕುಗಳಲ್ಲಿ ವಸೂಲಿಯಾಗದ ಸಾಲದ ಪ್ರಮಾಣ ಏರುತ್ತಿದೆ. ಇತ್ತೀಚೆಗಿನ ವರದಿ ಪ್ರಕಾರ ಸುಸ್ತಿ ಸಾಲದ ಪ್ರಮಾಣ 6.05 ಲಕ್ಷ ಕೋಟಿ ರೂ. ಮುಟ್ಟಿದೆ ಮತ್ತು 9.65 ಲಕ್ಷ ಕೋಟಿ ರೂ. ಸಾಲ ಒತ್ತಡದಲ್ಲಿದೆ. ಬ್ಯಾಂಕುಗಳು ಅನುಸರಿಸುವ ವಸೂಲಿಯ ಕ್ರಮಗಳು ನಿರೀಕ್ಷಿತ ಫ‌ಲ ನೀಡುತ್ತಿಲ್ಲ. ಒಂದು ಲಕ್ಷ ಸುಸ್ತಿ ಸಾಲವನ್ನು ವಸೂಲಿ ಮಾಡುವ ಹೊತ್ತಿಗೆ ಇನ್ನೆರಡು ಲಕ್ಷ ಸುಸ್ತಿ ಪಟ್ಟಿಗೆ ಸೇರುತ್ತದೆ ಎಂದು ಹೇಳಲಾಗುತ್ತಿದೆ. ಗಳಿಸಿದ ಲಾಭದಲ್ಲಿ ಗಣನೀಯ ಪ್ರಮಾಣ ಸುಸ್ತಿ ಸಾಲವನ್ನು ಕಡಿಮೆ ಮಾಡಲು ವ್ಯಯವಾಗುತ್ತಿದ್ದು, ಬಂಡವಾಳ ಹೂಡಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ.

ಬಹುತೇಕ ಬ್ಯಾಂಕ್‌ಗಳು ಸರಕಾರದಿಂದ ದುಡಿವ ಬಂಡವಾಳವನ್ನು ಕೇಳುತ್ತಿವೆ, ಸುಸ್ತಿ ಸಾಲದಿಂದಾಗಿ ಬ್ಯಾಂಕುಗಳ ಲಾಭದ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಅವುಗಳ ಬಂಡವಾಳ ಅರ್ಹತೆ ಕೂಡ ಕಡಿಮೆಯಾಗುತ್ತಿದೆ. ಬ್ಯಾಂಕುಗಳು ಲಾಭ ಗಳಿಸುವುದು, ಅವು ಹೆಚ್ಚಿಗೆ ಸಾಲ ನೀಡಿದಾಗ ಮತ್ತು ಆ ಸಾಲವನ್ನು ಬಡ್ಡಿ ಸಮೇತ ವಸೂಲು ಮಾಡಿದಾಗ ಮಾತ್ರ. ಒಂದು ಕಡೆ ಕೊಟ್ಟ ಸಾಲ ಸುಸ್ತಿಯಾಗುವುದರೊಂದಿಗೆ, ಸಾಲದ ಬೇಡಿಕೆಯೂ ನಿರೀಕ್ಷೆಯಂತೆ ಏರದಿರುವುದು ಬ್ಯಾಂಕುಗಳ ಲಾಭದ ಪ್ರಮಾಣದ ಮೇಲೆ ಭಾರೀ ಪರಿಣಾಮ ಬೀರಿದೆ. ಅಂತೆಯೇ ಬ್ಯಾಂಕುಗಳು ತಮ್ಮ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ದೇಶದಲ್ಲಿ ನಿರ್ವಹಣಾ ವೆಚ್ಚ ಕಡಿಮೆ ಮಾಡುವುದು ಅಥವಾ ಅಡಳಿತದಲ್ಲಿ ಮಿತವ್ಯಯ ವಿಷಯ ಬಂದಾಗ, ಮೊದಲು ಕಣ್ಣಿಗೆ ಬೀಳುವುದು ಸಿಬ್ಬಂದಿಗೆ ನೀಡುವ ಸಂಬಳ- ಸೌಲಭ್ಯಗಳು. 2008ರ ಆರ್ಥಿಕ ಹಿಂಜರಿಕೆಯ ಕಾಲದಲ್ಲಿ, ಮಿತವ್ಯಯ ಸಾಧಿಸಲು ಒಂದು ಕಂಪೆನಿಯು ತನ್ನ ಕ್ಯಾಂಟೀನ್‌ ಊಟದಲ್ಲಿ ಒಂದು ಪಲ್ಯ ಮತ್ತು ಹಪ್ಪಳವನ್ನು ಕಡಿಮೆ ಮಾಡಿತ್ತಂತೆ! ಸುಸ್ತಿ ಸಾಲದಲ್ಲಿ ಕಳೆದುಕೊಂಡದ್ದನ್ನು ಸಿಬ್ಬಂದಿಯ ಸಂಬಳ- ಸೌಲಭ್ಯವನ್ನು ಕಡಿಮೆ ಮಾಡುವುದರ ಮೂಲಕ ಗಳಿಸಿಕೊಳ್ಳುವ ಹುನ್ನಾರ ಎಂದು ಬ್ಯಾಂಕ್‌ ಕಾರ್ಮಿಕ ಸಂಘಗಳು ಈ ಬೆಳವಣಿಗೆಯನ್ನು ಬಣ್ಣಿಸುತ್ತಿವೆ.

ಸರಕಾರ ಹೇಳುವುದೇನು?
ಕೆಲವು ಬ್ಯಾಂಕುಗಳು ಸರಕಾರದಿಂದ ದುಡಿಯುವ ಬಂಡವಾಳಕ್ಕಾಗಿ ಬೇಡಿಕೆ ಮಂಡಿಸಿವೆ. ಇದನ್ನು ನೀಡಬೇಕಾದರೆ, ಬ್ಯಾಂಕುಗಳು ತಮ್ಮ ಸಿಬ್ಬಂದಿಯ ಸಂಬಳ ಸೌಲಭ್ಯಗಳಿಗೆ ಕೆಲವು ಕಾಲ ಕತ್ತರಿ  ಪ್ರಯೋಗ ನಡೆಸಬೇಕು ಮತ್ತು ಈ ನಿಟ್ಟಿನಲ್ಲಿ ಸರಕಾರ, ಬ್ಯಾಂಕ್‌ ಮತ್ತು ಬ್ಯಾಂಕ್‌ ಕಾರ್ಮಿಕ ಸಂಘಗಳು ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಬೇಕು ಹಾಗೂ ಪರಿಸ್ಥಿತಿ ಸುಧಾರಿಸಿದಾಗ ಕಡಿತಗೊಳಿಸಿದ ಸೌಲಭ್ಯಗಳನ್ನು ಮರಳಿ ನೀಡಲಾಗುವುದು ಎಂದು ಸರಕಾರ ಷರತ್ತು ಹಾಕಿದೆ. ಸುಮಾರು ಹತ್ತು ಬ್ಯಾಂಕುಗಳಿಗೆ ಸರಕಾರ ಇಂಥ ನಿರ್ದೇಶನ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಬ್ಯಾಂಕುಗಳು ಈ ಪಟ್ಟಿಗೆ ಸೇರಿದರೆ ಆಶ್ಚರ್ಯವಿಲ್ಲ. ಕೆಲವು ವರ್ಷಗಳಿಂದ ಈ ಬ್ಯಾಂಕುಗಳಲ್ಲಿ ಸುಸ್ತಿ ಸಾಲದ ಪ್ರಮಾಣ ಹೆಚ್ಚಾಗಿದೆ ಮತ್ತು ಇವು ದುಡಿಯುವ ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ. ಅಂತೆಯೇ ಬಂಡವಾಳ ಬೇಕಿದ್ದರೆ, ಬ್ಯಾಂಕಿನ ಪರಿಸ್ಥಿತಿ ಸುಧಾರಿಸುವವರೆಗೂ ಸಿಬ್ಬಂದಿಯ ಕೆಲವು ಸೌಲಭ್ಯಗಳಿಗೆ ಕೊಕ್‌ ಕೊಡಬೇಕೆಂಬುದು ಸರಕಾರದ ನಿಲುವು. ಈ ಹಿಂದೆ ಪಿ. ಚಿದಂಬರಂ ಅವರು ವಿತ್ತ ಸಚಿವರಾಗಿ¨ªಾಗ, ಒಂದೆರಡು ಬ್ಯಾಂಕುಗಳಲ್ಲಿ ಇದೇ ಕ್ರಮವನ್ನು ಜಾರಿಗೊಳಿಸಿ ಈ ಬ್ಯಾಂಕುಗಳನ್ನು ಸುಸ್ಥಿತಿಗೆ ಮರಳಿಸಿದ ಉದಾಹರಣೆಗಳನ್ನು ಹಣಕಾಸು ಇಲಾಖೆ ಉÇÉೇಖೀಸುತ್ತಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ; ಸದ್ಯದ ಕಾನೂನು ಚೌಕಟ್ಟು, ಸಾಲ ವಸೂಲಾತಿ ನೀತಿ ನಿಯಮಾವಳಿಗಳ ಅಡಿಯಲ್ಲಿ ಪರಿಸ್ಥಿತಿ ಸುಧಾರಿಸುವ ಬಗೆಗೆ ಹೆಚ್ಚಿನ ಆಶಾ ಭಾವನೆಯನ್ನು ಆರ್ಥಿಕ ತಜ್ಞರು ಮತ್ತು ಬ್ಯಾಂಕ್‌ ಸಿಬ್ಬಂದಿ ಕಾಣುತ್ತಿಲ್ಲ.

Advertisement

ಇದು ಸಾಧ್ಯವೇ?
ಬ್ಯಾಂಕ್‌ ಸಿಬ್ಬಂದಿಯ ವೇತನ ಪರಿಷ್ಕರಣೆ ನವೆಂಬರ್‌ 2017ರಿಂದ ನಡೆಯಬೇಕಾಗಿದ್ದು, ಕಾರ್ಮಿಕ ಸಂಘಗಳು ಈಗಾಗಲೇ ಬೇಡಿಕೆ ಪಟ್ಟಿಯನ್ನು ಸಲ್ಲಿಸಿ ಫೆಬ್ರವರಿಯಲ್ಲಿ ಈ ನಿಟ್ಟಿನಲ್ಲಿ ಒಂದು ದಿನದ ಮುಷ್ಕರವನ್ನೂ ನಡೆಸಿ ಒತ್ತಡ ಹೇರಿವೆ. ನಿವೃತ್ತ ಬ್ಯಾಂಕ್‌ ಸಿಬ್ಬಂದಿ ಕೂಡ ತಮಗೆ ನೀಡುತ್ತಿರುವ ನಿವೃತ್ತಿ ವೇತನದಲ್ಲಿಯ ತಾರತಮ್ಯ -ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸಂಸತ್‌ ಭವನದ ಎದುರು ಧರಣಿ ಕೈಗೊಂಡಿ¨ªಾರೆ. ಬ್ಯಾಂಕ್‌ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಕಾಯುತ್ತಿರುವಾಗ, ಈ ಪ್ರಸ್ತಾವಿತ ವೇತನ – ಸೌಲಭ್ಯ ಕಡಿತಕ್ಕೆ ಒಪ್ಪುವುದು ಅಸಾಧ್ಯ.

ಬ್ಯಾಂಕುಗಳಲ್ಲಿ ಸುಸ್ತಿ ಸಾಲದ ಪ್ರಮಾಣ ಏರುವುದಕ್ಕೆ ಸಿಬ್ಬಂದಿ ವೈಫ‌ಲ್ಯಕ್ಕಿಂತ ಬಡ್ಡಿ ಮನ್ನಾ, ಸಾಲ ಮನ್ನಾ ಮತ್ತು ಒಂದೇ ಬಾರಿ ತೀರುವಳಿ (one time settlement) ಸಾಲಿಗ ಸ್ನೇಹಿ ನೀತಿ- ವ್ಯವಸ್ಥೆಗಳೇ ಕಾರಣ ಎನ್ನಲಾಗುತ್ತಿದೆ. ಇವು ಸಾಲಗಾರರಲ್ಲಿ ಸಾಲ ಮರುಪಾವತಿ ಸಂಸ್ಕೃತಿಯನ್ನು ಹತ್ತಿಕ್ಕಿವೆ ಎನ್ನುವ ಅವರ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. 

ಈ ನೀತಿಗಳಿಂದಾಗಿ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವನೂ ಸಾಲ ಮರುಪಾವತಿಯಲ್ಲಿ ಹಿಂದೇಟು ಹಾಕಿದರೆ ಆಶ್ಚರ್ಯ ಪಡಬೇಕಾಗಿಲ್ಲ. 

ಸಾಲ ವಸೂಲಾತಿಗಾಗಿ ಸಾಲಗಾರನಿಗೆ ಕಾಗದ ಬರೆಯುವುದು, ಫೋನಾಯಿಸುವುದು, ನೋಟೀಸು ನೀಡುವುದು, ಮುಂದಿನ ಬಾರಿ ಸಾಲ ನೀಡದಿರುವುದನ್ನು ಬಿಟ್ಟು ಬ್ಯಾಂಕ್‌ಗಳಿಗೆ ಬೇರೆ ಯಾವ ಅಸ್ತ್ರ ಇದೆ? ಕೇಸು ದಾಖಲಿಸಿದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲವು ಅನಿವಾರ್ಯ ಕಾರಣಗಳಿಂದ ವಿಳಂಬಧಿವಾಗುತ್ತದೆ. ಬ್ಯಾಂಕರುಗಳು ನೇರವಾಗಿ ಸಾಲಗಾರನ ಮನೆಗೆ ವಸೂಲಿಗೆ ಹೋದರೆ ಕೆಲವು ಮಾಧ್ಯಮಗಳು, ಬ್ಯಾಂಕುಗಳನ್ನು ಖಳನಾಯಕರಂತೆ ಬಿಂಬಿಸಿ ಆಕ್ರೋಶ ವ್ಯಕ್ತಪಡಿಸುತ್ತವೆ. ಸರಕಾರವೂ ಇಂಥ ಕ್ರಮಗಳನ್ನು ಬೆಂಬಲಿಸುವುದಿಲ್ಲ. ಸಾಲ ನೀಡುವಾಗ ಸರಿಯಾಗಿ ಕಾಗದ ಪತ್ರಗಳನ್ನು ಮತ್ತು ದಾಖಲೆಗಳನ್ನು ಪಡೆದುಕೊಂಡಿಲ್ಲ, ಸಾಲದ ಅರ್ಜಿಯನ್ನು ಸರಿಯಾಗಿ ವಿಶ್ಲೇಷಿಧಿಸಿಲ್ಲ, ಸಾಲದ ಅಂತಿಮ ಬಳಕೆಯನ್ನು ಪರಿಶೀಲನೆ ಮಾಡಿಲ್ಲ ಮುಂತಾದ ಮಾಮೂಲಿ ಕಾರಣಗಳನ್ನು ಮುಂದೆ ಮಾಡಿ ಸಾಲ ವಸೂಲಾಗದಿರುವುದಕ್ಕೆ ಬ್ಯಾಂಕರುಗಳನ್ನೇ ಹೊಣೆ ಮಾಡಧಿಲಾಗುತ್ತದೆ. ಈ ಆರೋಪಗಳಲ್ಲಿ ಒಂದೆರಡು ಅಪವಾದಗಳು ಇರಬಹುದು, ಸಾಲ ನೀಡಿಕೆಯಲ್ಲಿ ಕೆಲವು ತಪ್ಪುಗಳಾಗಿರಬಹುದು. ಆದರೆ, ಸಾಲ ತೆಗೆದುಕೊಂಡ ಸತ್ಯವನ್ನು ಮರೆಮಾಚಲಾಗದು. ಇವೆಲ್ಲವುಗಳ ಹೊರತಾಗಿಯೂ ಸಾಲ ಮಾಡಿದವನು ಸಾಲ ತೀರಿಸುವುದು ಅವನ ನೈತಿಕ ಕರ್ತವ್ಯವಲ್ಲವೇ? ದುರದೃಷ್ಟವಶಾತ್‌ ಇಂದು ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಿ ಸಮಾಜದಲ್ಲಿ ಸನ್ಮಾನ್ಯನಾಗುವ ಸಂಸ್ಕೃತಿ ಇತಿಹಾಸ ಸೇರಿದೆ. ಬ್ಯಾಂಕ್‌ ಸಾಲ ಸೌಲಭ್ಯವನ್ನು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಂಡು ಸಮಾಜದಲ್ಲಿ ಮೇಲೆ ಬಂದವರು ಸಾಕಷ್ಟು ಜನರಿ¨ªಾರೆ. ಇದಕ್ಕಾಗಿ ಜೀವನಪೂರ್ತಿ ಬ್ಯಾಂಕನ್ನು ಸದಾ ನೆನೆಯುವವರೂ ಇ¨ªಾರೆ.

ಸುಸ್ತಿ ಸಾಲದ ಪ್ರಮಾಣದ ಬಗೆಗೆ ಬ್ಯಾಂಕರುಗಳನ್ನು ಟೀಕಿಸುವವವರು ಸಾಲಗಾರರ ನೈತಿಕ ಕರ್ತವ್ಯದ ಬಗೆಗೆ ಮೌನವಾಗಿರುವುದು ಸೋಜಿಗದ ವಿಷಯ. “ಸಾಲ ಕೇಳುವಾಗ ಸ್ಕೂಟರಿನಲ್ಲಿ ಬರುತ್ತಾರೆ ಮತ್ತು ಸಾಲ ಮನ್ನಾ ಆಗ್ರಹಿಸಲು ಕಾರಿನಲ್ಲಿ ಬರುತ್ತಾರೆ’ ಎಂದು ಹಿಂದಿನ ವಿತ್ತ ಸಚಿವ ಪಿ. ಚಿದಂಬರಂ ಸುಸ್ತಿ ಸಾಲದ ಬಗೆಗೆ ಮಾರ್ಮಿಕವಾಗಿ ಹೇಳಿ ಸುಸ್ತಿ ಸಾಲವನ್ನು ವಿವರಿಸಿದ್ದರು. ಕಾರ್ಮಿಕ ಸಂಘಗಳು ಸುಸ್ತಿ ಸಾಲದ ಬಗೆಗೆ ಲಾಗಾಯ್ತಿನಿಂದ ಎಚ್ಚರಿಕೆ ನೀಡುತ್ತಲೇ ಇದ್ದವು; ಸಾಲ ಮನ್ನಾ, ಬಡ್ಡಿ ಮನ್ನಾ, ಒಂದು ಬಾರಿ ತೀರುವಳಿಯಂಥ ಕ್ರಮಗಳನ್ನು ವಿರೋಧಿಸುತ್ತಿದ್ದವು; ಕಠಿಣವಾದ ಸಾಲ ವಸೂಲಾತಿ ಕ್ರಮಗಳ ಬಗೆಗೆ ಒತ್ತಾಯಿಸುತ್ತಿದ್ದವು. ಸಾಲ ವಸೂಲಾತಿ ಬಗೆಗೆ ಕರೆಯುವ ಬ್ಯಾಂಕರುಗಳ ಸಭೆಯಲ್ಲಿ ತಮ್ಮ ಅಹವಾಲನ್ನೂ ಕೇಳಬೇಕೆಂದು ಕೋರುತ್ತಿದ್ದವು. 

ನಷ್ಟದಲ್ಲಿರುವ ಏರ್‌ ಇಂಡಿಯಾ ಸಂಸ್ಥೆಗೆ 22,280 ಕೋಟಿ ಧನಸಹಾಯ ಮಾಡುವಾಗ ಇಲ್ಲದ ಕಟ್ಟುಪಾಡುಗಳು ಬ್ಯಾಂಕುಗಳಿಗೆ ಬಂಡವಾಳ ಹೂಡುವಾಗ ಮಾತ್ರ ಏಕೆ ಎನ್ನುವ ಬ್ಯಾಂಕ್‌ ಸಿಬ್ಬಂದಿಯ ಅಕ್ರೋಶದಲ್ಲಿ ಅರ್ಥವಿಲ್ಲದಿಲ್ಲ. ಸರಕಾರದ ಈ ನಿರ್ದೇಶನ ಜಾರಿ ಆಗುವುದು ಅಥವಾ ಆಗದಿರುವುದು ಬೇರೆ ಮಾತು. ಆದರೆ ಬ್ಯಾಂಕ್‌ ಸಿಬ್ಬಂದಿಯಲ್ಲಿ ಇದು ಸ್ವಲ್ಪ ಗೊಂದಲ ಮತ್ತು ಭಯ ಹುಟ್ಟಿಸಿರುವುದಂತೂ ನಿಜ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next