Advertisement

ಗೇಟ್‌ಪಾಸ್‌ ಭಯದಲ್ಲಿ ಸಾಯ್‌ ಕೋಚ್‌ಗಳು!

10:05 AM Jul 18, 2017 | Team Udayavani |

ಹೊಸದಿಲ್ಲಿ: ತರಬೇತುದಾರರು ಕ್ರೀಡಾಪಟುಗಳಿಗೆ ವಿವಿಧ ಸವಾಲು ಒಡ್ಡುವುದು, ಸಾಮರ್ಥ್ಯ ಪರೀಕ್ಷಿಸುವುದು ನಾವೆಲ್ಲ ನೋಡಿದ್ದೇವೆ. ಇದೀಗ ಅಂತಹ ತರಬೇತುದಾರರೇ ಸ್ವತಃ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಹೌದು, ಅಂದರೆ ನೀವು ನಂಬುತೀರಾ?. ನಂಬಲು ಕಷ್ಟವಾದರೂ ಇದು ನಿಜ.

Advertisement

ಸದ್ಯ 1000 ಸಾಯ್‌ ಕೋಚ್‌ಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ಪರೀಕ್ಷೆ ನಡೆಯಲಿದೆ. ತರಬೇತುದಾರರ ಸಕ್ಷಮತೆ, ತಾಳ್ಮೆ, ಹೊಂದಿಕೊಳ್ಳುವ ಗುಣ ಪರೀಕ್ಷಿಸಲು ತೀರ್ಮಾನ ನಡೆದಿದೆ. ಉತ್ತರ ವಲಯದಿಂದ ಪರೀಕ್ಷೆ ಆರಂಭವಾಗಲಿದೆ. ಸೆಪ್ಟಂಬರ್‌ಗೆ ಪರೀಕ್ಷೆ ಮುಕ್ತಾಯವಾಗಲಿದೆ. ಫಿಟ್‌ ಆದವರಷ್ಟೇ ಕೋಚ್‌ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರಿಗೆ ಸೇವೆಯಿಂದ ಗೇಟ್‌ಪಾಸ್‌ ಸಿಗಲಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

ಫಿಟ್‌ನೆಸ್‌ ಇಲ್ಲದ ತರಬೇತುದಾರರಿಗೆ ಗೇಟ್‌ಪಾಸ್‌: ಕೇಂದ್ರ ಸರಕಾರದ ಹಠಾತ್‌ ಪರೀಕ್ಷೆ ನಿರ್ಧಾರದಿಂದ ಫಿಟ್‌ನೆಸ್‌ ಹೊಂದಿಲ್ಲದ ತರಬೇತುದಾರರಿಗೆಲ್ಲ ಈಗ ಚಳಿ ಜ್ವರ ಶುರು ವಾದಂತಾಗಿದೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಫ‌ಲಿತಾಂಶಕ್ಕೆ ಕಾಯುವಂತೆ ಕಾಯಬೇಕಾದ ಸನ್ನಿವೇಶ ಎದುರಾಗಿದೆ. ಅನುತ್ತೀರ್ಣಗೊಂಡರೆ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ನೂರಾರು ಕೋಚ್‌ಗಳು ಇದ್ದಾರೆ ಎನ್ನಲಾಗಿದೆ.

ಏನಿದು  ಪರೀಕ್ಷೆ: ಕ್ರೀಡಾ ಸಚಿವಾಲಯ ತರಬೇತುದಾರರಿಗೆ ಒಟ್ಟು ಮೂರು ಹಂತದಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. 800 ಮೀ. ಓಟದ ಪರೀಕ್ಷೆ, ಹೃದಯ ಬಡಿತ ಹೇಗಿದೆ ಎಂಬ ಪರೀಕ್ಷೆ, ದೇಹದ ತೂಕ ಹಾಗೂ ಗಾತ್ರದ ಅಳತೆ, ರಕ್ತದ ಒತ್ತಡ ತಪಾಸಣೆ, ಏರೋಬಿಕ್‌ ಫಿಟ್‌ನೆಸ್‌, ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ) ಪರೀಕ್ಷೆಗಳನ್ನು ನಡೆಸಲಾಗುತ್ತದೆ.  ಜತೆಗೆ ನಾಲ್ಕು ಸ್ಕಿನ್‌ ಫೋಲ್ಡ್‌ ಪರೀಕ್ಷೆ ಇರಲಿದೆ. 

ತಜ್ಞ ವೈದ್ಯರಿಂದ ತಪಾಸಣೆ: ಮೇಲೆ ಹೇಳಿರುವ ಎಲ್ಲ ಪರೀಕ್ಷೆಗಳನ್ನು ವೈಜ್ಞಾನಿಕ ಇಲಾಖೆಯ ತಜ್ಞ ವೈದ್ಯರು ನಡೆಸಲಿದ್ದಾರೆ. ಜಿಟಿಎಂಟಿ (ಜನರಲ್‌ ಥಿಯರಿ ಆ್ಯಂಡ್‌ ಮೆಥಡ್ಸ್‌ ಆಫ್ ನ್ಪೋರ್ಟ್ಸ್ ಟ್ರೈನಿಂಗ್‌), ಶರೀರ ವಿಜ್ಞಾನ ಹಾಗೂ ಆಂಥ್ರೊಪೊಮೆಟ್ರಿ ವಿಭಾಗದವರು ಪರೀಕ್ಷೆ ನಡೆಸಲಿದ್ದಾರೆ.

Advertisement

ಯಾಕಾಗಿ ಇಂತಹ ಕ್ರಮ?: ಇದ್ದಕ್ಕಿದಂತೆ ಕೋಚ್‌ಗಳಿಗೆ ಇಂತಹದೊಂದು ಪರೀಕ್ಷೆಯನ್ನು ನಡೆಸುತ್ತಿರುವುದು ಏಕೆ? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಸ್ವತಃ ಕೇಂದ್ರ ಕ್ರೀಡಾ ಸಚಿವಾಲಯ ಮೂಲಗಳು ಮಾಹಿತಿ ನೀಡಿವೆ. ಕೋಚ್‌ಗಳ ಗುಣಮಟ್ಟ ಹೇಗಿದೆ? ಸದ್ಯ ಅವರು ಉತ್ತಮ ಕೋಚಿಂಗ್‌ ನೀಡುವಷ್ಟು ಸಶಕ್ತರೇ. ಭಾರತೀಯ ಆ್ಯತ್ಲೀಟ್‌ಗಳಿಗೆ ನೀಡಿ ರುವ ಕೋಚ್‌ಗಳಲ್ಲಿ ಎಷ್ಟು ಜನ ಫಿಟ್‌ ಆಗಿದ್ದಾರೆ. ಯಾರೆಲ್ಲ ಫಿಟ್‌ನೆಸ್‌ ಹೊಂದಿಲ್ಲ ಎನ್ನುವಂತಹ ಪ್ರಶ್ನೆಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿದ್ದೇವೆ. ಸಾಯ್‌ ಕೋಚ್‌ಗಳ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುತ್ತೇವೆ ಎಂದು ತಿಳಿಸಲಾಗಿದೆ.

ಅಂತಿಮ ಫ‌ಲಿತಾಂಶ ಪ್ರಕಟಿಸಲಿರುವ ಬಿವಿಪಿ ಸಮಿತಿ: ಸಾಯ್‌ ಆಡಳಿತ ಮಂಡಳಿ ಮುಖ್ಯಸ್ಥ ಬಿವಿಪಿ ರಾವ್‌ ನೇತೃತ್ವದಲ್ಲಿ 5 ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ರಾವ್‌ ನಿವೃತ್ತ ಐಎಎಸ್‌ ಅಧಿಕಾರಿ. ಪರೀಕ್ಷೆಯಲ್ಲಿ ಇವರ ತಂಡ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಪರೀಕ್ಷೆ ನಡೆಸುವುದು ತಜ್ಞ ವೈದ್ಯರ ತಂಡ. ಅಂತಿಮ ವರದಿಯನ್ನು ರಾವ್‌ ನೇತೃತ್ವದ ಸಮಿತಿಗೆ ನೀಡಲಿದ್ದಾರೆ. ಅಂತಿಮ ನಿರ್ಧಾರವನ್ನು ಸಮಿತಿಯೇ ಕೈಗೊಳ್ಳಲಿದೆ.

ಅರ್ಹರಿಗಷ್ಟೇ ಕೆಲಸ: ತರಬೇತುದಾರರ ಫಿಟ್‌ನೆಸ್‌ ವಿಷಯದಲ್ಲಿ ಕ್ರೀಡಾ ಸಚಿವಾಲಯ ಖಡಕ್‌ ನಿರ್ಧಾರ ಪ್ರಕಟಿಸಿದೆ. ಅರ್ಹರಿಗಷ್ಟೇ ಕೆಲಸ ಎನ್ನುವ ಸಂದೇಶ ಸಾರಿದೆ. ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯೆಲ್‌ ರಾಯ್‌ಪುರಕ್ಕೆ ತೆರಳಿದ್ದರು. ಆ್ಯತ್ಲೀಟ್‌ಗಳಿಗೆ ಸಿಗುತ್ತಿರುವ ಕೋಚಿಂಗ್‌ ಬಗ್ಗೆ ಅಸಮಾಧಾನ ಹೊಂದಿದ್ದರು. ಬಳಿಕ ಕೋಚ್‌ಗಳಿಗೆ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next