Advertisement

ಕಾಂಗ್ರೆಸ್‌ನಲ್ಲಿ ಕಾಗೋಡು ನಿಯಂತ್ರಣ ಸಡಿಲ?

11:30 AM Apr 05, 2019 | Naveen |

ಸಾಗರ: ಪಕ್ಷದ ಬ್ಲಾಕ್‌, ನಗರ ಘಟಕ ಸೇರಿದಂತೆ ವಿವಿಧ ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದು, ಪಕ್ಷದ ಕಚೇರಿಯಲ್ಲಿಯೇ ಸಭೆ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರಾಜಿ ಪಂಚಾಯ್ತಿ ನಡೆಸಿ, ಪ್ರಕಟವಾಗಬೇಕಾಗಿದ್ದ ಪದಾಧಿಕಾರಿಗಳ ಪಟ್ಟಿಗೆ ತಾತ್ಕಾಲಿಕ ತಡೆ ತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಹಾಲಿ ಶಾಸಕ ಎಚ್‌. ಹಾಲಪ್ಪ ಅವರಿಗೆ ಆಘಾತ ನೀಡುವಂತೆ ಎಂಟು ಸಾವಿರ ಮತಗಳ ಮುನ್ನಡೆ ಒದಗಿಸಿಕೊಟ್ಟಿದ್ದ ಸಾಗರದಲ್ಲಿ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪಕ್ಷದ ತಾಲೂಕು ಘಟಕದಲ್ಲಿ ಹಲವು ಬದಲಾವಣೆಗಳನ್ನು ತಂದಿರುವ ಕಾಗೋಡು ಪಕ್ಷದ ಪ್ರಮುಖರ ತೀವ್ರ ಅಸಮಾಧಾನವನ್ನು ಎದುರಿಸುತ್ತಿದ್ದಾರೆ. ಇದು ಬರಲಿರುವ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸುವ ಆತಂಕ ವ್ಯಕ್ತವಾಗಿದೆ.

ಭಿನ್ನಮತೀಯರಿಗೇ ಬಲ!
ಏ. 1ರಂದು ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಲ್‌.ಟಿ. ತಿಮ್ಮಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿರುವ ಬ್ಲಾಕ್‌ ಅಧ್ಯಕ್ಷ ಬಿ.ಆರ್‌. ಜಯಂತ್‌ ಸರ್ವಾಧಿ ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಭಿನ್ನಮತೀಯರು ಬುಧವಾರ ಸಂಜೆ ಕಾಗೋಡು ಅವರನ್ನು ಅವರ ಮನೆಯಲ್ಲಿಯೇ ಭೇಟಿ ಮಾಡಿ ಮುಕ್ಕಾಲು ತಾಸು ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ಮುಕ್ತವಾಗಿಯೇ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ಪಕ್ಷದ ಪ್ರಮುಖರಾದ ಎಲ್‌.ಟಿ. ತಿಮ್ಮಪ್ಪ, ಮಕ್ಬೂಲ್‌ ಅಹ್ಮದ್‌, ಉಷಾ, ಎನ್‌. ಲಲಿತಮ್ಮ, ಇದ್ದಿನಬ್ಬ ರಫೀಕ್‌, ಮಂಜೂರಾಲಿ ಖಾನ್‌, ಕುಂಜಾಲಿ, ಗಣಪತಿ ಹೆನಗೆರೆ, ನಾಗರಾಜ ಮಜ್ಜಿಗೆರೆ, ಎಂ.ಡಿ. ರಾಮಚಂದ್ರ, ಪರಿಮಳ, ಮೇಘರಾಜ್‌, ನಾದೀರಾ ತಾಹೀರ್‌, ಮರಿಯಾ ಲೀಮಾ, ಸಬಾನ, ಗ್ರೇಸಿ ಡಯಾಸ್‌, ಸ್ವಾಮಿಗೌಡ ಮೊದಲಾದವರು ನಿಯೋಗದಲಿದ್ದರು.

ಮಲ್ಲಿಕಾರ್ಜುನ ಹಕ್ರೆ ನೇರವಾಗಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಮೇಲೆ ಅಪಪ್ರಚಾರ ನಡೆಸಲಾಗುತ್ತಿದೆ. ನಾನು ಪಕ್ಷದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಗ್ಯಾಸ್‌ ಏಜೆನ್ಸಿಗಳ ಮಾಲೀಕರು ಬಡ ಜನರನ್ನು ಸುಲಿಗೆ ಮಾಡುತ್ತಿರುವುದರ ವಿರುದ್ಧ ಎರಡೂವರೆ ವರ್ಷದಿಂದ ಹೋರಾಟ ಮಾಡುತ್ತಿದ್ದೇನೆ. ಜಯಂತ್‌ ಅಧ್ಯಕ್ಷರಾದ ಮೇಲಿನ ವೈಯುಕ್ತಿಕ ಹೋರಾಟ ಇದಲ್ಲ. ತಹಶೀಲ್ದಾರ್‌ ನೊಟೀಸ್‌ ನೀಡಿರುವುದು, ಸಭೆ ನಡೆದಿರುವುದು, ಡಿಸಿ ಗಮನಕ್ಕೆ ಜಿಲ್ಲೆಯಲ್ಲಿ ನಡೆದಿರುವ ಗ್ರಾಹಕ ಮೋಸವನ್ನು ಗಮನಕ್ಕೆ ತಂದಿರುವುದರ ಹಿಂದೆ ಸಮುದಾಯದ ಪರವಾದ ಹೋರಾಟವಿದೆ ಎಂದು ದಾಖಲೆ ನೀಡಿದ್ದರಿಂದ ಕಾಗೋಡು ಪ್ರಮುಖ ಭಿನ್ನಮತೀಯ ಹಕ್ರೆ ಅವರನ್ನೇ ತರಾಟೆಗೆ ತೆಗೆದುಕೊಳ್ಳಲಾಗಿಲ್ಲ ಎನ್ನಲಾಗಿದೆ.

Advertisement

ತಾವೇ ಮುಂದಿನ ಕಾಂಗ್ರೆಸ್‌ ಎಂಎಲ್‌ಎ ಅಭ್ಯರ್ಥಿ ಎಂದು ಜಯಂತ್‌ ಬೆಂಗಳೂರಿನಲ್ಲಿ ನಗರ ಅಧ್ಯಕ್ಷ ತಶ್ರೀಫ್‌ ಜೊತೆ ಮಾತನಾಡಿದ್ದಾರೆ ಎನ್ನಲಾದ ವಿಚಾರ, ಪಕ್ಷದ ಚಟುವಟಿಕೆಗಳಲ್ಲಿ ಮೈಕೆಲ್‌ ಡಿಸೋಜಾ ಕೈಯಾಡಿಸುತ್ತಿರುವುದು, ಏಕಾಏಕಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲು ಮುಂದಾಗಿರುವುದು, ನಗರ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಧುಮಾಲತಿ ಅವರ ಆಯ್ಕೆ ಮೊದಲಾದ ವಿಷಯಗಳು ಸಂಧಾನ ಸಭೆಯಲ್ಲಿ ಪ್ರಸ್ತಾಪವಾಗಿವೆ. ಅಹವಾಲುಗಳನ್ನು ಆಲಿಸಿದ ಕಾಗೋಡು, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪಟ್ಟಿಯನ್ನು ಸದ್ಯದಲ್ಲಿ ತಡೆಹಿಡಿಯಲಾಗುವುದು. ಚುನಾವಣೆಯ ನಂತರ ಉಸ್ತುವಾರಿ ಸಮಿತಿಯನ್ನು ರಚಿಸಿ ಮಾತುಕತೆ ಮೂಲಕ ಪದಾಧಿಕಾರಿಗಳನ್ನು ಅಂತಿಮಗೊಳಿಸಲಾಗುವುದು ಎಂಬರ್ಥದಲ್ಲಿ ಬೇಡಿಕೆಗಳಿಗೆ ಸಮ್ಮತಿ ನೀಡಿದರು ಎನ್ನಲಾಗಿದೆ.

ಪ್ರಸ್ತುತ ತಾಲೂಕಿನಲ್ಲಿ ಚುನಾವಣಾ ಸಮಿತಿ ಮಾಡಿ ಪ್ರಚಾರ ಕಾರ್ಯ ಕೈಗೊಳ್ಳುವ ಮಾತನ್ನು ಕಾಗೋಡು ಆಡಿದ್ದನ್ನು ಕೇಳಿ ಸಮಾಧಾನಗೊಂಡ ಭಿನ್ನಮತೀಯರು ಈ ಪರೋಕ್ಷ ಗೆಲುವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಗುರುವಾರ ತುಸು ಬೇರೆಯದೇ ಚಿತ್ರ ಕಂಡುಬಂದಿದೆ. ಬ್ಲಾಕ್‌ ಅಧ್ಯಕ್ಷ ಬಿ.ಆರ್‌. ಜಯಂತ್‌, ಚುನಾವಣಾ ಪ್ರಚಾರ ಕಾರ್ಯಕ್ರಮದ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಆದರೆ ಚುನಾವಣಾ ಪ್ರಚಾರ ಸಮಿತಿ ರಚನೆಯಾಗಿರುವ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧದ ಬೆಳವಣಿಗೆಗಳನ್ನು ನಾವು ಗಂಭೀರವಾಗಿ ಗಮನಿಸಿದ್ದೇವೆ. ಆಹ್ವಾನ ಇಲ್ಲದಿದ್ದರೂ ಮಧು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪಾಲ್ಗೊಂಡಿದ್ದೇವೆ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕಷ್ಟವಾಗಲಿದೆ ಎಂಬ ಎಚ್ಚರಿಕೆಯನ್ನು ಹೆಸರು ಬಹಿರಂಗಪಡಿಸಲು ಇಚ್ಛಿಸದ ಭಿನ್ನಮತೀಯ ಪ್ರಮುಖರೊಬ್ಬರು ಪತ್ರಿಕೆಯೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದರು.

ಇನ್ನೆರಡು ದಿನಗಳಲ್ಲಿ ಚುನಾವಣಾ ಸಮಿತಿ ರಚನೆ ಆಗಬಹುದು. ನಾವು ತಾಳ್ಮೆಯಿಂದಲೇ ಕಾಯುತ್ತಿದ್ದೇವೆ. ಜಯಂತ್‌ ನನ್ನನ್ನು ವೈಯಕ್ತಿಕ ನೆಲೆಯಲ್ಲಿ ಆರೋಪಿಸಲು ನಿಂತರೆ ನಾನು ಪ್ರತ್ಯುತ್ತರ ನೀಡಬೇಕಾಗುತ್ತದೆ. ಭೂ ಅತಿಕ್ರಮಣದ ವಿಚಾರದಲ್ಲಿ ನಾನು ಕಾನೂನು ಉಲ್ಲಂಘಿಸಿಲ್ಲ. ಬಗರ್‌ಹುಕುಂ ಕುರಿತ ಅರ್ಜಿಗಳ ವಿಲೇ ಬಾಕಿಯಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಗೋಡು ಸೋಲುವಲ್ಲಿ ಬಗರ್‌ಹುಕುಂ ಸಮಿತಿಯ ಕಾರ್ಯವೈಖರಿಯ ನೇರ ಪ್ರಭಾವವಿದೆ. ಅದನ್ನು ಹಿರಿಯರು ಗಮನಿಸಬೇಕು. ಅಷ್ಟಕ್ಕೂ ನಾನು ಜಯಂತ್‌ ಅವರನ್ನು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನವನ್ನು ವಿಷಯಾಧಾರಿತವಾಗಿ ವಿರೋಧಿ ಸಿ ಅವರನ್ನು ಮತ್ತೆ ಅಧ್ಯಕ್ಷರಾಗಿಸುವಲ್ಲಿ ಕೆಲಸ ಮಾಡಿದ್ದೇನೆ ಎಂದು ಹಕ್ರೆ ಪತ್ರಿಕೆಗೆ ತಿಳಿಸಿದರು.

ಸಂಧಾನದ ಆಯುಷ್ಯಎಷ್ಟು ದಿನ?
ಪಕ್ಷದ ಮೇಲಿನ ನಿಯಂತ್ರಣವನ್ನು ಕಾಗೋಡು ಕಳೆದುಕೊಳ್ಳುತ್ತಿರುವುದು ಪದೇ ಪದೆ ವ್ಯಕ್ತವಾಗುತ್ತಿದ್ದು, ತಾಪಂ ಹಿಂದಿನ ಅವಧಿಯ ಸಂದರ್ಭದಲ್ಲಿ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ
ಹರೀಶ್‌ ಘಂಟೆ, ಜ್ಯೋತಿ ಬಂಡಾಯದ ನೆಲೆಯಲ್ಲಿಯೇ ಆಯ್ಕೆಯಾಗಿದ್ದರೂ ಪಕ್ಷ ಕ್ರಮವನ್ನೇ ತೆಗೆದುಕೊಂಡಿರಲಿಲ್ಲ. ನಗರಸಭೆಯ ಅಧ್ಯಕ್ಷ ಸ್ಥಾನದ ವಿಚಾರದಲ್ಲಂತೂ ಸದಸ್ಯೆ ಪರಿಮಳ ಅವರಿಗೆ ನೀಡಿದ ಭರವಸೆ ಹುಸಿಹೋಗಿ ಬಿ.ಬಿ. ಫಸಿಹಾ, ನಂತರದ ವೀಣಾ ಪರಮೇಶ್ವರ್‌ ಆಯ್ಕೆಯಲ್ಲಿ ಕಾಗೋಡು ವೈಫಲ್ಯ ವ್ಯಕ್ತವಾಗಿತ್ತು. ಪಕ್ಷದ ವಿರುದ್ಧ ಬಂಡೆದ್ದವರನ್ನು ಕಾಗೋಡು
ವಿಚಾರಿಸದೆ ಮೌನ ಸಮ್ಮತಿ ನೀಡಿದ್ದರು. ಅದರ ಮುಂದುವರಿದ ಭಾಗವಾಗಿಯೇ ಈಗಿನ ಭಿನ್ನಮತ ಕಂಡುಬಂದಿದೆ. ಕಾಗೋಡು ತಮಗೆ ಆಪ್ತರಾಗಿರುವ ಜಯಂತ್‌ ವಿರುದ್ಧ ಸಿಡಿದೆದ್ದವರ ಬಗ್ಗೆ ಕ್ರಮ ಕೈಗೊಳ್ಳಲಾಗದೆ ಕೈ ಸುಕಿಕೊಳ್ಳುವಂತಾಗಿರುವುದು ಗಮನಾರ್ಹ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಭಿನ್ನಮತೀಯರ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಹಕ್ರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಳಿದವರ ಅಸಮಾಧಾನಗಳನ್ನು ನಿರ್ಲಕ್ಷಿಸಲಾಗುತ್ತದೆ. ಈ ರೀತಿಯ ಒಡೆದು ಆಳುವುದರಿಂದ ಭಿನ್ನಮತವನ್ನು ಮುರಿಯಬಹುದು ಎಂದು ಕಾಗೋಡು ಆಪ್ತವಲಯದವರು ಚಿಂತನೆ ನಡೆಸಿದ್ದಾರೆ ಎಂಬ ತರ್ಕ ಕೇಳಿಬಂದಿದೆ. ಸದ್ಯ ಚುನಾವಣೆಯಲ್ಲಿ ಗೆಲುವು ಮುಖ್ಯ. ಚುನಾವಣೆಯ ಸಂದರ್ಭದಲ್ಲಿ ನೀವು ಅ ಧಿಕಾರದ ಬಗ್ಗೆ ಚಿಂತನೆ ಮಾಡಬೇಡಿ. ಎಲ್ಲರೂ ಸೇರಿ ಮುಂಬರುವ ಚುನಾವಣೆಯನ್ನು ಎದುರಿಸೋಣ ಎಂದು ಕಾಗೋಡು ಮಾಡಿರುವ ಸಂಧಾನದ ಆಯುಷ್ಯ ಎಷ್ಟು ಎಂಬುದನ್ನು ಮುಂದಿನ ದಿನಗಳು ಹೇಳಲಿವೆ.

„ಮಾವೆಂಸ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next