Advertisement

ದಾವಣಗೆರೆಯ ಉತ್ಸಾಹಿ ಯುವಕನ “ಕೇಸರಿ ಕೃಷಿ” ಯಶೋಗಾಥೆ

02:56 PM Dec 03, 2023 | |

ದಾವಣಗೆರೆ: “ಕೇಸರಿ’ ಎಂದಾಕ್ಷಣ ಥಟ್ಟನೇ ಕಣ್ಪಟಲದಲ್ಲಿ ಕಾಣಿಸುವುದೇ ಕಣಿವೆಗಳ ರಾಜ್ಯ  ಕಾಶ್ಮೀರದ ಬಿಂಬ. ಭಾರತದ ಮುಕುಟ ಎನಿಸಿದ ಕಾಶ್ಮೀರದ ಕೇಸರಿ ಬೆಳೆಯನ್ನು ಇಲ್ಲಿಯ ಯುವ ಕೃಷಿಕನೋರ್ವ ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದ ಮಧ್ಯಭಾಗ ಬಯಲುಸೀಮೆಯ ದಾವಣಗೆರೆ ಜಿಲ್ಲೆಯಲ್ಲಿ ಬೆಳೆಯುವ ಮೂಲಕ ಬೆರಗುಗೊಳಿಸಿದ್ದಾನೆ!

Advertisement

ಹೌದು, ಕಾಶ್ಮೀರದಂಥ ಶೀತವಾತಾವರಣದಲ್ಲಿ ಮಾತ್ರ ಬೆಳೆಯುವ ದುಬಾರಿ ಸಾಂಬಾರ ಪದಾರ್ಥ ಎನಿಸಿದ ಕೇಸರಿಯನ್ನು ಈ ಯುವಕ ಬಯಲುಸೀಮೆಯಲ್ಲಿ ಹೇಗೆ ಬೆಳೆದಿರಬಹುದು ಎಂಬ ಕುತೂಹಲ ತಣಿಯಬೇಕಾದರೆ ನೀವು ದಾವಣಗೆರೆ ಸಮೀಪದ ಹಳೇಬಾತಿಯ ಗುಡ್ಡದ ಕ್ಯಾಂಪ್‌ ಕ್ರಿಶ್ಚಿಯನ್‌ ಕಾಲೋನಿಗೆ ಬರಬೇಕು. ಕಾಶ್ಮೀರ ಹೊರತುಪಡಿಸಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕೇಸರಿ ಬೆಳೆಯಲಾಗುತ್ತಿದೆ.

ಇನ್ನು ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ಕೆಲ ರಾಜ್ಯಗಳಲ್ಲಿ ಅಲ್ಲಲ್ಲಿ ಕೇಸರಿ ಬೆಳೆ ಬೆಳೆಯುವ ಪ್ರಯತ್ನ ನಡೆದಿದೆ. ಆದರೆ ಕರ್ನಾಟಕದ ಮಧ್ಯಭಾಗದಲ್ಲಿ ಮಾಡಿದ ಕೇಸರಿ ಕೃಷಿ ಹೆಚ್ಚು ಕುತೂಹಲ ಕೆರಳಿಸಿದೆ. ಕಾಶ್ಮೀರದ ಬೆಳೆಯನ್ನು ಮಧ್ಯ ಕರ್ನಾಟಕದಲ್ಲಿ ಬೆಳೆಯಲು ಮುಂದಾದ 26 ವರ್ಷದ ಯುವ ಕೃಷಿಕನ ಹೆಸರು ಜಾಕೋಬ್‌ ಸತ್ಯರಾಜ್‌. ಈತ  ದೊಡ್ಡ ಜಮೀನಿನಲ್ಲಿ ಈ ಕೃಷಿ ಮಾಡುತ್ತಿಲ್ಲ. ದೊಡ್ಡಬಾತಿಯಲ್ಲಿ ತಾನು ವಾಸವಾಗಿರುವ ಬಾಡಿಗೆ ಇರುವ ಮನೆಯ ಒಂದು ಕೋಣೆಯಲ್ಲಿ ಕೇಸರಿ ಕೃಷಿ ಮಾಡುತ್ತಿದ್ದಾನೆ. ಮನೆಯ ಒಂದು ಕೋಣೆಯಲ್ಲಿ ಕೃತಕವಾಗಿ ಕಾಶ್ಮೀರಿ ವಾತಾವರಣ ಸೃಷ್ಟಿ ಮಾಡಿ ಕೇಸರಿ ಕೃಷಿ ಮಾಡುತ್ತಿದ್ದು ಆರಂಭದ ಬೆಳೆ ಈತನಿಗೆ ಹೊಸ ಚೈತನ್ಯಮೂಡಿಸಿದೆ.ಕೇಸರಿಯನ್ನು ತಮ್ಮೂರಿನಲ್ಲಿಯೂ ಬೆಳೆಯಬಹುದು ಎಂಬ ಭರವಸೆ ಮೂಡಿಸಿದ್ದು ಮುಂದಿನ ದಿನಗಳಲ್ಲಿ ಇದನ್ನು ದೊಡ್ಡದಾಗಿ ಮಾಡುವ ಕನಸು ಹೊತ್ತಿದ್ದಾನೆ.

ಸ್ವಂತ ಜಮೀನಿಲ್ಲ: ಸ್ವಂತ ಜಮೀನು, ಮನೆ ಇಲ್ಲದ ಜಾಕೋಬ್‌, ಹರಿಹರಕ್ಕೆ ಕುಡಿಯುವ ನೀರು ಪೂರೈಸುವ ಜಾಕ್‌ವೆಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾನೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ತುಡಿತ ಹೊಂದಿರುವ ಈತ, ಗೂಗಲ್‌ನಲ್ಲಿ ಹುಡುಕಿದ ನಾನಾ ಕೃಷಿ, ಸರಳ ಉದ್ಯಮಗಳಲ್ಲಿ ಈತನಿಗೆ ಆಕರ್ಷಿಸಿದ್ದು ಕೇಸರಿ ಕೃಷಿ. ಕೇಸರಿ ಬೆಳೆ ಬೆಳೆಯುವ ರೀತಿ ಅರಿಯಲು ಮುಂದಾದ ಈತ, ಆಂಧ್ರಪ್ರದೇಶದಲ್ಲಿ ಕೇಸರಿ ಬೆಳೆದ ರೈತರೋರ್ವರಿಗೆ ಭೇಟಿಯಾಗಿ ಮಾಹಿತಿ ಪಡೆದ. ನಂತರ ಕೆಲ ಉರ್ದು ಭಾಷೆ ಬರುವ ಸ್ನೇಹಿತರ ಸಹಾಯದಿಂದ ಕಾಶ್ಮೀರಕ್ಕೆ ತೆರಳಿ ಅಲ್ಲಿ ಕೆಲ ದಿನಗಳ ಕಾಲ ನೆಲೆಸಿ ಕೇಸರಿ ಬೆಳೆಯ ಬಗ್ಗೆ ತರಬೇತಿಯೂ ಪಡೆದ. ಊರಿಗೆ ಮರಳಿದ ಜಾಕೋಬ್‌, ಮನೆಯ 5×10 ಕೋಣೆಯನ್ನೇ ಕೇಸರಿ ಕೃಷಿಗೆ ಬಳಸಿಕೊಂಡು ಅಲ್ಲಿ ಥರ್ಮಾಕೋಲ್‌, ಏರ್‌ ಕಂಡಿಶನರ್‌ ಬಳಸಿ ಕಾಶ್ಮೀರದ ತಂಪು ಹವಾಮಾನದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿಕೊಂಡ.

Advertisement

ಸಸಿಗಳನ್ನು ಇಡಲು ನಾಲ್ಕು ಹಂತದ ರ್ಯಾಕ್‌ (ಕಪಾಟುಗಳನ್ನು) ಜೋಡಿಸಿಟ್ಟು ಕೇಸರಿ ಕೃಷಿಗೆ ಮುಂದಡಿ ಇಟ್ಟ. ಇನ್ನು ಕಾಶ್ಮೀರದಲ್ಲಿ ಕೇಸರಿ ಬೀಜ ಮಾರಾಟ ಮಾಡುವ ರೈತರನ್ನು ಪತ್ತೆ ಹಚ್ಚಿ ಅಲ್ಲಿಗೂ ಹೋಗಿ ಕೆಜಿಗೆ 600ರೂ. ನಂತೆ 60 ಕೆಜಿ ಕೇಸರಿ ಬೀಜ ತಂದ. ಅಲ್ಲಿಂದ ಇಲ್ಲಿಗೆ ತರುವಷ್ಟರಲ್ಲಿ 15-20 ಕೆಜಿಯಷ್ಟು ಬೀಜ ಹಾಳಾಯಿತಾದರೂ ಉಳಿದ 40 ಕೆಜಿಯಷ್ಟು ಬೀಜ ಹಾಕಿ ಕೃಷಿಗೆ ಮುಂದಾದ. ಪ್ರಯೋಗಾರ್ಥ ಬಾತಿಯಲ್ಲಿರುವ ನಾಲ್ಕು ಕಡೆಯ ಮಣ್ಣು ಸಂಗ್ರಹಿಸಿ ಅದರಲ್ಲಿನ ಪೋಷಕಾಂಶಗಳನ್ನು ಪರೀಕ್ಷಿಸಿ ನಾಲ್ಕು ರೀತಿಯ ಮಣ್ಣನ್ನು ಕೃಷಿಗೆ ಬಳಸಿಕೊಂಡಿದ್ದಾನೆ.

ಯಾವ ಮಣ್ಣಿನಲ್ಲಿ ಕೇಸರಿ ಹೆಚ್ಚು ಉತ್ಕೃಷ್ಟವಾಗಿ ಬೆಳೆದಿದೆ ಎಂಬುದನ್ನು ಅರಿತು ಮುಂದಿನ ದಿನಗಳಲ್ಲಿ ಆ ಮಣ್ಣನ್ನೇ ಕೃಷಿಗೆ ಬಳಸುವ ಯೋಜನೆ ಹಾಕಿಕೊಂಡಿದ್ದಾನೆ. ಸಾವಯವ ಗೊಬ್ಬರದೊಂದಿಗೆ ಕೃಷಿ ಮಾಡುತ್ತಿದ್ದು ಅಂದಾಜು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಕೇಸರಿ ಕೃಷಿ ಕೈಗೊಂಡಿದ್ದಾನೆ. ಮೊದಲ ಪ್ರಯತ್ನದಲ್ಲೇ ಜಾಕೋಬ್‌ ಯಶಸ್ವಿಯಾಗಿದ್ದು ಈಗಾಗಲೇ 20 ಗ್ರಾಂನಷ್ಟು ಕೇಸರಿ ಜಾಕೋಬ್‌ ಕೈ ಸೇರಿದ್ದು ಅವರ ನಿರೀಕ್ಷೆ ಫಲ ಕೊಟ್ಟಂತಾಗಿದೆ. ಇನ್ನೂ 20-30 ಗ್ರಾಂನಷ್ಟು ಕೇಸರಿ ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಮುಂದಿನ ವರ್ಷ ಫಸಲು ದುಪ್ಪಟ್ಟಾಗುವ ಆಶಾಭಾವ ಹೊಂದಿದ್ದಾನೆ.

ನೈಜ ಕೇಸರಿಗಿದೆ ಬೆಲೆ-ಬೇಡಿಕೆ
ಕೇಸರಿ ಸೀಡ್ಸ್‌ ಆಗಸ್ಟ್‌ನಿಂದ ಆರಂಭವಾಗಿ ಅಕ್ಟೋಬರ್‌, ನವೆಂಬರ್‌ನಲ್ಲಿ ಹೂ ಬಿಡುತ್ತದೆ. ಹೂವಿನಲ್ಲಿ ಬಿಡುವ ಕೇಸರಿಯನ್ನು ಹೂವಿನಿಂದ ಬೇರ್ಪಡಿಸಬೇಕು. ಕಾಶ್ಮೀರದಲ್ಲಿ ನೆಲದಲ್ಲಿ ಕೇಸರಿಯನ್ನು ಬೆಳೆಯುತ್ತಾರೆ. ನಾನು ಒಂದು ಕೋಣೆಯಲ್ಲಿ ಕೃತಕವಾಗಿ ಬೆಳೆದಿದ್ದೇನೆ. ಎಸಿ ಹಾಕಿ ಒಂಭತ್ತು ಡಿಗ್ರಿ ಸೆಲ್ಸಿಯಸ್‌ ತಂಪು ವಾತಾವರಣ ಸೃಷ್ಟಿಸಿದ್ದೇನೆ. ಕೋಣೆಯ ತಂಪು ಹೊರ ಹೋಗದಂತೆ ಥರ್ಮಲ್‌ ಹಾಕಿ ಬಂದೋಬಸ್ತ್ ಮಾಡಿದ್ದೇನೆ. ಹೂವು ಬಿಡುವ ವೇಳೆ ಬೇರೆ ರೀತಿಯಲ್ಲೇ ತಾಪಮಾನ ಕೊಡಬೇಕು.

ಆಗ ಮಾತ್ರ ಉತ್ತಮ ಬೆಳೆ ಬರಲು ಸಾಧ್ಯ. ಕೇಸರಿ ಬೆಲೆ ಮಾರುಕಟ್ಟೆಯಲ್ಲಿ ಅದರ ಗುಣಮಟ್ಟದ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಎ ಗ್ರೇಡ್‌ ಕೇಸರಿ ಒಂದು ಗ್ರಾಂಗೆ 1200 ರೂ. ಬೆಲೆ ಇದೆ. ಇನ್ನು ನಾನು ಬೆಳೆದ ಕೇಸರಿ ಮಾರಾಟ ಮಾಡಿಲ್ಲ. ಸ್ನೇಹಿತರು, ಅಕ್ಕಪಕ್ಕದವರಿಗಷ್ಟೇ ಮಾರಾಟ ಮಾಡಿದ್ದೇನೆ. ಮಾರುಕಟ್ಟೆಯಲ್ಲಿ ಸಿಗುವ ಕೇಸರಿಯಲ್ಲಿ ಅರ್ಧಕರ್ಧ ನಕಲಿ ಇರುವುದರಿಂದ ನೈಜ ಕೇಸರಿಗೆ ಉತ್ತಮ ದರ, ಬೇಡಿಕೆ ಎರಡೂ ಇದೆ. ನಾನು ಬೆಳೆದ ಕೇಸರಿಯ ಗುಣಮಟ್ಟ ಪರೀಕ್ಷಿಸಿ, ಪ್ರಮಾಣಪತ್ರ ಪಡೆದು ಮುಂದಿನ ದಿನಗಳಲ್ಲಿ ನನ್ನದೇ ಬ್ರ್ಯಾಂಡ್‌ ಮಾಡಿ ಮಾರುಕಟ್ಟೆ ಕಂಡುಕೊಳ್ಳುವ ಯೋಚನೆ ಇದೆ ಎನ್ನುತ್ತಾರೆ ಜಾಕೋಬ್‌ ಸತ್ಯರಾಜ್‌.

ಜಾಕೋಬ್‌ನ ಕೇಸರಿ ಕೃಷಿ
ಕೇಸರಿಯ ಸೀಡ್ಸ್‌ನಲ್ಲಿ ಈ ವರ್ಷ ಹೂವು ಬಿಡುತ್ತಿದೆ ಎಂದರೆ ಬಲ್ಬ್ಸ್‌ ನಲ್ಲಿ ಎಲ್ಲ ರೀತಿಯ ಪ್ರೋಟಿನ್‌ಗಳನ್ನು ಅದು
ಹಿಡಿದಿಟ್ಟುಕೊಂಡಿರುತ್ತದೆ.‌ ಇನ್ನು ಹೂವು ಬಿಡುವ ತನಕ ಬಲ್ಬ್ಸ್‌ ಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ, ಅದನ್ನು ತಂದು ಟ್ರೇನಲ್ಲಿ ಇಟ್ಟು ಸೂಕ್ತ ತಾಪಮಾನ ಕೊಟ್ಟರೆ ಹೂವು ಬಿಡುತ್ತದೆ. ಹೂವು ಬಿಟ್ಟ ಬಳಿಕ ಸೀಡ್‌ ಮಲ್ಟಿಫಿಕೇಷನ್‌ ಪ್ರೊಸೆಸ್‌ ಆದರೆ ಮಾತ್ರ ಅದನ್ನು ಮಣ್ಣಲ್ಲಿ ಹಾಕಬೇಕು. ಇನ್ನು ಮುಂದಿನ ಬೆಳೆಗೆ ನಮಗೆ ಸೀಡ್ಸ್‌ ಬೇಕಾದರೂ ನಾವು ಮಣ್ಣಲ್ಲಿ ಹಾಕಬೇಕಾಗುತ್ತದೆ. ಆಗ ತಾಯಿ ಬಲ್ಬ್ಸ್‌ ನಿಂದ ಬೇರೆ ಬಲ್ಬ್ಸ್‌ ಗಳಲ್ಲಿ ಹೆಚ್ಚು ಸೀಡ್ಸ್‌ಗಳು ಹುಟ್ಟಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಹೂವು ಬಿಟ್ಟ ತಕ್ಷಣ ಅದರಲ್ಲಿಯೇ ಕೇಸರಿ ಇರುತ್ತದೆ. ಅದರಲ್ಲಿ ಹೂವಿನ ದಳ ಬೇರೆ, ಕೇಸರಿ ಬೇರೆ, ಕಾಂಡ ಬೇರ್ಪಡಿಸುತ್ತೇವೆ. ಕೇಸರಿಯ ಹೂವು ಔಷಧಿಗೆ ಬಳಕೆಯಾದರೆ, ಕೇಸರಿಯನ್ನು ಜನ ಬಳಕೆ ಮಾಡುತ್ತಾರೆ. ಕಾಂಡವನ್ನು ಸೌಂದರ್ಯವರ್ಧಕಕ್ಕೆ ಬಳಕೆ ಮಾಡುತ್ತಾರೆ ಎನ್ನುತ್ತಾರೆ ಜಾಕೋಬ್‌ ಸತ್ಯರಾಜ್‌.

Advertisement

Udayavani is now on Telegram. Click here to join our channel and stay updated with the latest news.

Next