Advertisement

ಸುರೇಶ “ಅಂಗಡಿ’ಮುಚ್ಚಲು ಸಾಧುನವರ ಕಸರತ್ತು

11:29 PM Apr 17, 2019 | Lakshmi GovindaRaju |

ಬೆಳಗಾವಿ: ಈ ಬಾರಿಯ ಲೋಕಸಭೆ ಚುನಾವಣೆ ಕಣದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳನ್ನು ಕಾಣುತ್ತಿರುವ ಬೆಳಗಾವಿ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಿಂದ ಸತತ ನಾಲ್ಕನೇ ಜಯದ ಆಸೆಯಲ್ಲಿರುವ ಸುರೇಶ ಅಂಗಡಿಗೆ ಕಾಂಗ್ರೆಸ್‌ನಿಂದ ಉದ್ಯಮಿ ಹಾಗೂ ಶಿಕ್ಷಣ ಸಂಸ್ಥೆಗಳ ಮಾಲೀಕರಾದ ಡಾ.ವಿ.ಎಸ್‌. ಸಾಧುನವರ ಸ್ಪರ್ಧೆ ಒಡ್ಡಿದ್ದಾರೆ.

Advertisement

ಗಡಿ ವಿಚಾರವಾಗಿ ಕೇಂದ್ರ ಹಾಗೂ ಸರ್ವೋಚ್ಛ ನ್ಯಾಯಾಲಯದ ಗಮನ ಸೆಳೆಯಬೇಕೆಂಬ ಉದ್ದೇಶದಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬ ಗುರಿ ಹೊಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರ ಕೂಗಿಗೆ ಸ್ವತಃ ಮರಾಠಿ ಭಾಷಿಕರು ಹಾಗೂ ಎಂಇಎಸ್‌ ಸದಸ್ಯರು ಸ್ಪಂದಿಸಲಿಲ್ಲ. ಹೀಗಾಗಿ ಎಂಇಎಸ್‌ ಅಭ್ಯರ್ಥಿಗಳ ಸಂಖ್ಯೆ 45 ದಾಟಲಿಲ್ಲ. ಈಗ ಕಣದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿ 57 ಅಭ್ಯರ್ಥಿಗಳು ಉಳಿದಿದ್ದಾರೆ.

ಟಿಕೆಟ್‌ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿ ಸಾಕಷ್ಟು ಅಪಸ್ವರ, ಅಸಮಾಧಾನ ಹಾಗೂ ಪೈಪೋಟಿ ಕಂಡು ಬಂದಿದ್ದವು. ಹಾಲಿ ಸಂಸದರಿಗೆ ಟಿಕೆಟ್‌ ಖಚಿತ ಎಂದು ಹೇಳಿದ್ದರೂ ಕೆಲವು ನಾಯಕರು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಸಂಸದ ಸುರೇಶ ಅಂಗಡಿಗೆ ಟಿಕೆಟ್‌ ತಪ್ಪಿಸಲು ಒಂದಿಷ್ಟು ಕಸರತ್ತು ಸಹ ನಡೆದಿತ್ತು. ಆದರೆ ಕೊನೆಗೆ ಯಾವುದೂ ಫಲ ಕೊಡಲಿಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ಕೊನೆಯ ಹಂತದವರೆಗೂ ಗೊಂದಲ ಇತ್ತು. ಈ ಗೊಂದಲದ ಲಾಭ ಸಾಧುನವರಗೆ ಸಿಕ್ಕಿತು. ಹೀಗಾಗಿ ಸಾಧುನವರ ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧೆ ಮಾಡುವ ಅವಕಾಶ ಪಡೆದರು.

ಬದಲಾದ ಭದ್ರಕೋಟೆ: ದಶಕಗಳ ಕಾಲ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಬೆಳಗಾವಿ 2004ರಲ್ಲಿ ಬಿಜೆಪಿ ವಶಕ್ಕೆ ಬಂದಿತು. ಲಿಂಗಾಯತ ಮತ್ತು ಮರಾಠಾ ಕ್ಷತ್ರಿಯರ ಉಪಸ್ಥಿತಿ ಬಿಜೆಪಿಯ ಹೆಚ್ಚುತ್ತಿರುವ ಪ್ರಭಾವದ ಕಾರಣ ಎಂದು ಭಾವಿಸಲಾಗುತ್ತಿದೆ. ಜಾತಿ ಆಧಾರಿತ ಚುನಾವಣೆ ಇಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತಲೇ ಬಂದಿದೆ. ಈ ಎರಡು ಸಮುದಾಯಗಳ ಜನರು ಮಹತ್ವದ ಸಾಮಾಜಿಕ-ಆರ್ಥಿಕ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಎರಡೂ ಸಮಾಜದ ಜನರ ಓಲೈಕೆಗೆ ಬಹಳ ಕಸರತ್ತು ನಡೆಯುತ್ತ ಬಂದಿದೆ. ಕ್ಷೇತ್ರದ ಉದ್ದಗಲಕ್ಕೂ ಸಕ್ಕರೆ ಕಾರ್ಖಾನೆಗಳು ಮತ್ತು ಸಹಕಾರ ಸಂಘಗಳ ಪ್ರಭಾವವು ಇತರ ಪ್ರಮುಖ ಅಂಶಗಳಾಗಿವೆ.

ನಿರ್ದಿಷ್ಟ ವಿಷಯಗಳೇ ಇಲ್ಲ: ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅದಾವುದೂ ಪ್ರಚಾರದ ವಸ್ತುಗಳಾಗುತ್ತಲೇ ಇಲ್ಲ. ಜಾತಿ ಸಮೀಕರಣ, ಹೊಂದಾಣಿಕೆ ರಾಜಕಾರಣದ ಆಟದ ಮುಂದೆ ಸಮಸ್ಯೆಗಳು ಗೌಣವಾಗುತ್ತಿವೆ. ಕನ್ನಡ ಮತ್ತು ಮರಾಠಿ ಗುಂಪುಗಳ ನಡುವೆ ಅಥವಾ ಹಿಂದುತ್ವ ಸಂಘಟನೆಗಳ ಚಟುವಟಿಕೆಗಳಿಗೆ ಸಂಬಂಧಿಸಿದ ಸುದ್ದಿಗಳು ಅದು ಇಲ್ಲದಿದ್ದಾಗ, ಮಹದಾಯಿಗಾಗಿ, ರೈತರ ಪ್ರತಿಭಟನೆಗಳಿಗೆ ಅಥವಾ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಪಾವತಿ ವಿಷಯಗಳು ಚುನಾವಣೆಯ ವೇಳೆ ಪ್ರಚಾರಕ್ಕೆ ಬರುತ್ತವೆ.

Advertisement

ಮೋದಿ ಅಲೆಯ ಪ್ರಭಾವ; ಜಾರಕಿಹೊಳಿ ಕಿತ್ತಾಟ: ಬಿಜೆಪಿ ಎಂದಿನಂತೆ ಪ್ರಧಾನಿ ಮೋದಿ ಅವರ ಅಲೆಯನ್ನೇ ನೆಚ್ಚಿಕೊಂಡಿದೆ. ಮೂರು ಬಾರಿ ಸಂಸದರಾಗಿ ಕೆಲಸ ಮಾಡಿದ್ದರೂ ಸುರೇಶ ಅಂಗಡಿ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರ ಸಾಧನೆಯನ್ನೇ ಹೇಳುತ್ತಿದ್ದಾರೆ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಎಲ್ಲ ಕಡೆ ಅಭಿವೃದ್ಧಿ ಕಾರ್ಯಗಳು ಆಗದಿದ್ದರೂ ಸಂಸದರು ಜನರಿಗೆ ಸುಲಭವಾಗಿ ಸಿಗುತ್ತಾರೆ ಎಂಬ ಅಭಿಪ್ರಾಯ ಜನರಲ್ಲಿದೆ. ಇದು ಸುರೇಶ ಅಂಗಡಿಗೆ ಸ್ವಲ್ಪ ಅನುಕೂಲ ಮಾಡಿದೆ. ಆದರೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಅನುಕೂಲಕರವಾಗಿಲ್ಲ. ಮುಖ್ಯವಾಗಿ ಪಕ್ಷದ ಪ್ರಭಾವಿ ನಾಯಕ ರಮೇಶ ಜಾರಕಿಹೊಳಿ ಪ್ರಚಾರದಿಂದ ದೂರ ಉಳಿದಿರುವುದು ಕಾಂಗ್ರೆಸ್‌ ಅಭ್ಯರ್ಥಿಗೆ ದೊಡ್ಡ ಹಿನ್ನಡೆ. ಒಂದು ಸಮಯದಲ್ಲಿ, ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಈಗ ಸಂಪೂರ್ಣ ಮೂಲೆಗುಂಪಾಗಿದೆ.

ಕ್ಷೇತ್ರ ವ್ಯಾಪ್ತಿ: ಬೆಳಗಾವಿ ಲೋಕಸಭಾ ಕ್ಷೇತ್ರವು ಅರಭಾವಿ, ಗೋಕಾಕ, ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇದರಲ್ಲಿ ಐದು ಬಿಜೆಪಿ ಹಾಗೂ ಮೂರು ಕಾಂಗ್ರೆಸ್‌ ಶಾಸಕರನ್ನು ಹೊಂದಿದೆ.

ಒಟ್ಟು ಮತದಾರರು: 17,49,005
ಪುರುಷರು: 8,79,619
ಮಹಿಳೆಯರು: 7,83,333
ಇತರೆ: 53

ಲಿಂಗಾಯತರು: 3.90 ಲಕ್ಷ.
ಕುರುಬರು: 1.84 ಲಕ್ಷ.
ಎಸ್‌ಸಿ: 2 ಲಕ್ಷ
ಎಸ್‌ ಟಿ: 1 ಲಕ್ಷ
ಮುಸ್ಲಿಂ: 1.98 ಲಕ್ಷ.
ಮರಾಠಾ: 1.47 ಲಕ್ಷ.
ಜೈನ್‌: 1.03 ಲಕ್ಷ
ಹಣಬರ: 1.04 ಲಕ್ಷ.

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next