Advertisement

ಐಸಿಜೆ ತೀರ್ಪು ಧಿಕ್ಕರಿಸಿದ ರಷ್ಯಾ : ಪುತಿನ್‌ರನ್ನು ಯುದ್ಧಾಪರಾಧಿ ಎಂದ ಬೈಡೆನ್‌

12:03 AM Mar 18, 2022 | Team Udayavani |

ಕೀವ್/ಮಾಸ್ಕೋ: “ಕೂಡಲೇ ಯುದ್ಧ ನಿಲ್ಲಿಸಿ’ ಎಂಬ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿರುವ ರಷ್ಯಾ, ಗುರುವಾರ ಉಕ್ರೇನ್‌ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.

Advertisement

ಗುರುವಾರ ಬೆಳ್ಳಂಬೆಳಗ್ಗೆಯೇ ಕೀವ್‌ನ ಕಟ್ಟಡಗಳನ್ನು ರಷ್ಯಾ ರಾಕೆಟ್‌ಗಳು ಅಪ್ಪಳಿಸಿವೆ. 16 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ 30 ಮಂದಿಯನ್ನು ರಕ್ಷಿಸಲಾಗಿದೆ. ಮೆರೆಫಾದಲ್ಲಿ ಶಾಲೆ ಮತ್ತು ಸಮುದಾಯ ಕೇಂದ್ರವೊಂದನ್ನು ಪುತಿನ್‌ ಸೇನೆ ನಾಶಗೊಳಿಸಿದೆ. ಖಾರ್ಕಿವ್‌ನಲ್ಲಿ ಭಾರೀ ಸ್ಫೋಟ, ಗುಂಡಿನ ಕಾಳಗ ನಡೆದಿದೆ. ಚೆರ್ನಿಹಿವ್‌ನಲ್ಲಿ ರಷ್ಯಾ ವೈಮಾನಿಕ ದಾಳಿಯಲ್ಲಿ 53 ನಾಗರಿಕರು ಸಾವಿಗೀಡಾಗಿದ್ದಾರೆ. ಈ ಪೈಕಿ ಅಮೆರಿಕನ್‌ ನಾಗರಿಕರೂ ಇರುವುದಾಗಿ ಮೂಲಗಳು ತಿಳಿಸಿವೆ.

ರಷ್ಯಾದ ಉದ್ಧಟತನದ ವಿರುದ್ಧ ಕಿಡಿಕಾರಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, “ಪುತಿನ್‌ ಒಬ್ಬ ಯುದ್ಧಾಪರಾಧಿ’ ಎಂದು ಬಣ್ಣಿಸಿದ್ದಾರೆ. ಬೈಡೆನ್‌ ಹೇಳಿಕೆಗೆ ಆಕ್ರೋಶ ಹೊರ ಹಾಕಿರುವ ರಷ್ಯಾ, “ದೇಶವೊಂದರ ನಾಯಕ ಈ ರೀತಿಯ ಹೇಳಿಕೆ ನೀಡುವುದು ಅಕ್ಷಮ್ಯ’ ಎಂದಿದೆ. ಇದಕ್ಕೆ ಪ್ರತಿ ಕ್ರಿಯಿಸಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ, “ಯುದ್ಧಭೂಮಿಯಲ್ಲಿನ ಮನಕಲಕುವ ದೃಶ್ಯಗಳೇ ಎಲ್ಲ ಕಥೆಗಳನ್ನೂ ಹೇಳುತ್ತಿವೆ. ಆ ಭೀಕರತೆಯನ್ನು ನೋಡಿ ನೊಂದು ಬೈಡೆನ್‌ ಈ ಮಾತುಗಳನ್ನಾಡಿದ್ದಾರೆ’ ಎಂದು ಹೇಳಿದ್ದಾರೆ.

ಇದೇ ವೇಳೆ, ನ್ಯಾಟೋ ಸದಸ್ಯ ರಾಷ್ಟ್ರವಾದ ಪೋಲೆಂಡ್‌ಗೆ ಕ್ಷಿಪಣಿ ರಕ್ಷಣ ವ್ಯವಸ್ಥೆಯನ್ನು ರವಾನಿಸುವುದಾಗಿ ಗುರುವಾರ ಯುಕೆ ಘೋಷಿಸಿದೆ. ಉಕ್ರೇನ್‌ ಜತೆ ಪೋಲೆಂಡ್‌ ಗಡಿ ಹಂಚಿಕೊಂಡಿದ್ದು, ರಷ್ಯಾದ ಆಕ್ರಮಣದಿಂದ ಪೋಲೆಂಡ್‌ ಅನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರಷ್ಯಾ ಆಕ್ರಮಣ ಖಂಡಿಸುವಂತೆ ಭಾರತದ ನಾಯಕರನ್ನು ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಮೆರಿಕ  ಹೇಳಿದೆ.

ಶೆಲ್ ದಾಳಿಗೆ 21 ಬಲಿ: ಪೂರ್ವ ಉಕ್ರೇನ್‌ನ ನಗರದಲ್ಲಿ ಪುತಿನ್‌ ಪಡೆಗಳು ನಡೆಸಿದ ಶೆಲ್‌ ದಾಳಿಗೆ 21 ಮಂದಿ ಬಲಿಯಾಗಿ, 25 ಮಂದಿ ಗಾಯಗೊಂಡಿದ್ದಾರೆ. ಮೆರೆಫಾ ನಗರದ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಮೇಲೆ ಶೆಲ್‌ಗ‌ಳು ಅಪ್ಪಳಿಸಿದ್ದರಿಂದ ಈ ಸಾವು-ನೋವು ಉಂಟಾಗಿದೆ. ಗಾಯಾಳುಗಳ ಪೈಕಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ.

Advertisement

ಮರಿಯುಪೋಲ್‌ನಲ್ಲಿ ಸಾವಿರಾರು ಮಂದಿ ಆಶ್ರಯ ಪಡೆದಿದ್ದ ಥಿಯೇಟರ್‌ವೊಂದರ ಮೇಲೆ ಬುಧವಾರ ರಾತ್ರಿ ರಷ್ಯಾ ಪಡೆಗಳು ವೈಮಾನಿಕ ದಾಳಿ ನಡೆಸಿದ್ದವು. 3 ಅಂತಸ್ತಿನ ಕಟ್ಟಡವು ಸಂಪೂರ್ಣ ಹಾನಿಯಾಗಿದ್ದು, ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ.

ಝೆಲೆನ್ಸ್ಕಿ ಹೆಸರಿನ ಟೀ: ಅಸ್ಸಾಂ ಮೂಲದ ಅರೋಮಿಕಾ ಟೀ ಎಂಬ  ಸ್ಟಾರ್ಟಪ್‌ ಕಂಪೆನಿಯು ತಮ್ಮ ಹೊಸ ಸಿಟಿಸಿ ಚಹಾಗೆ ಉಕ್ರೇನ್‌ ಅಧ್ಯಕ್ಷ “ಝೆಲೆನ್‌ಸ್ಕಿ’ ಹೆಸರನ್ನಿಟ್ಟಿದೆ. ರಷ್ಯಾ ಯುದ್ಧ ಸಾರಿದ್ದರೂ ಧೈರ್ಯ ಹಾಗೂ ದಿಟ್ಟತನದಿಂದ ಉಕ್ರೇನ್‌ನಲ್ಲೇ ಉಳಿದಿರುವ ಮತ್ತು ಯುದ್ಧಕಾಲದ ನಾಯಕನೆನಿಸಿಕೊಂಡಿರುವ ಝೆಲೆನ್‌ಸ್ಕಿ ಅವರ ಗೌರವಾರ್ಥ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪೆನಿ ನಿರ್ದೇಶಕ ರಂಜಿತ್‌ ಬರುವಾ ಹೇಳಿದ್ದಾರೆ.

ಯುದ್ಧಾಪರಾಧಿ ಯಾರು?   ತೀರ್ಮಾನ ಹೇಗೆ?  :

ಪುತಿನ್‌ರನ್ನು ಅಮೆರಿಕ ಅಧ್ಯಕ್ಷ ಯುದ್ಧಾಪರಾಧಿ (ವಾರ್‌ ಕ್ರಿಮಿನಲ್‌) ಎಂದು ನೇರವಾಗಿ ಆರೋಪಿಸಿದ್ದಾರೆ. ಆದರೆ ಯಾವುದೇ ವ್ಯಕ್ತಿಯನ್ನು ಸುಲಭವಾಗಿ ಯುದ್ಧಾಪರಾಧಿ ಎಂದು ಕರೆಯುವು ದಕ್ಕಾಗದು. ಯುದ್ಧಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಯಲ್ಲಿರುವ ಕಾನೂನನ್ನು ಉಲ್ಲಂ ಸಿದರೆ ಮಾತ್ರ ಅವರನ್ನು ಹಾಗೆ ಕರೆಯಲಾಗುತ್ತದೆ. ಆ ಕಾನೂನು ಏನು, ಅದರಲ್ಲಿರುವ ಅಂಶಗಳು ಯಾವುವು? ಇತ್ಯಾದಿಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

ಕಾನೂನು ಮುರಿದರೆ ಅಪರಾಧಿಯಾಗಿ ಪರಿಗಣನೆ :

ಶತಮಾನಗಳ ಹಿಂದೆ, ವಿಶ್ವ ನಾಯಕರೆಲ್ಲರೂ ಒಟ್ಟಾಗಿ ರೂಪಿಸಿರುವ “ಲಾ ಆಫ್ ಆರ್ಮ್x ಕಾನ್‌ಫ್ಲಿಕ್ಟ್’ ಎಂಬ ಕಾನೂನನ್ನು ಉಲ್ಲಂ ಸುವವರನ್ನು ಯುದ್ಧಾಪರಾಧಿ ಎಂದು ಕರೆಯಬಹುದು. ಕಾಲಾನುಕ್ರಮ ದಲ್ಲಿ ಈ ಕಾನೂನಿನಲ್ಲಿ ಹಲವಾರು ಬದಲಾವಣೆಗಳು, ಪರಿಷ್ಕರಣೆಗಳು ಆಗಿವೆ. 2ನೇ ಮಹಾಯುದ್ಧದ ಅನಂತರ ಏರ್ಪಟ್ಟ ಜಿನಿವಾ ಒಪ್ಪಂದಗಳನ್ನು ಇಂದಿಗೂ ಅನುಸರಿಸಬೇಕಿರುತ್ತದೆ.

ಜಿನಿವಾ ಒಪ್ಪಂದದ ಪ್ರಮುಖಾಂಶಗಳೇನು? :

ಯುದ್ಧದಲ್ಲಿ ಪಾಲ್ಗೊಳ್ಳದ ಜನರ ರಕ್ಷಣೆಗೆ ಯುದ್ಧ ಮಾಡುವ ಎರಡೂ ರಾಷ್ಟ್ರಗಳು ಬದ್ಧರಾಗಿರಬೇಕು ಎಂಬುದು ಈ ಕಾನೂನಿನಲ್ಲಿರುವ ಪ್ರಮುಖ ನಿಯಮ. ವೈದ್ಯರು, ಶುಶ್ರೂಷಕಿಯರಿಗೆ, ಗಾಯಗೊಂಡ ಸೈನಿಕರಿಗೆ, ಕೈದಿಗಳಿಗೆ ಸೂಕ್ತವಾದ ರಕ್ಷಣೆ ನೀಡಬೇಕು ಎಂದೂ ಈ ಕಾನೂನಿನಲ್ಲಿ ಉಲ್ಲೇಖೀಸಲಾಗಿದೆ. ಇದಲ್ಲದೆ, ಎಂಥ ಪರಿಸ್ಥಿತಿಯಲ್ಲಿ ಯುದ್ಧ ಮಾಡಬೇಕು, ಯುದ್ಧ ಮಾಡುವುದೇ ಆದರೆ ಯಾವ ಶಸ್ತ್ರಾಸ್ತ್ರಗಳನ್ನು ಬಳಸಬೇಕು, ಯಾವುದನ್ನು ಬಳಸಬಾರದು ಎಂಬ ನಿಯಮಗಳಿವೆ.

ಯಾವುದು ವಾರ್ಕ್ರೈಂ? :

  • ಉದ್ದೇಶಪೂರ್ವಕವಾಗಿ ನಗರಗಳನ್ನು ವ್ಯಾಪಕವಾಗಿ ಹಾನಿಗೊಳಿಸುವುದು.
  • ಆವಶ್ಯಕತೆ ಇಲ್ಲದ ಕಡೆಯಲ್ಲೆಲ್ಲ ದಾಳಿ ನಡೆಸುವುದು.
  • ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುವುದು ಅಥವಾ ಅವರನ್ನು ಸೆರೆಹಿಡಿದು ಅವರನ್ನು ತಮ್ಮ ಗುರಾಣಿಯನ್ನಾಗಿ ಬಳಸುವುದು.
  • ಸೆರೆ ಹಿಡಿಯಲ್ಪಟ್ಟ ನಾಗರಿಕರನ್ನು ಕೊಲ್ಲುವುದು, ನಿರ್ನಾಮಗೊಳಿಸುವುದು, ಬಲವಂತವಾಗಿ ಬೇರೆಡೆ ರವಾನಿಸುವುದು, ಹಿಂಸಿಸುವುದು, ಅತ್ಯಾಚಾರ ಹಾಗೂ ಇನ್ನಿತರ ಹೇಯ ಕೃತ್ಯಗಳನ್ನು ಮಾಡುವುದು.

ಸಮರಾಂಗಣದಲ್ಲಿ  :

  • 9 ರಷ್ಯಾ ಸೈನಿಕರ ಬದಲಿಗೆ ಮೆಲಿಟೋಪೋಲ್‌ ಮೇಯರ್‌ ಅನ್ನು ಬಿಡುಗಡೆ ಮಾಡಿದ ರಷ್ಯಾ
  • ಯುದ್ಧ ಆರಂಭವಾದಾಗಿನಿಂದ ಈವರೆಗೆ ರಷ್ಯಾದ 7 ಸಾವಿರ ಸೈನಿಕರು ಸಾವಿಗೀಡಾಗಿದ್ದಾರೆ: ಅಮೆರಿಕ ಗುಪ್ತಚರ ವರದಿ
  • ರಷ್ಯಾದಿಂದ 20 ಲಕ್ಷ ಬ್ಯಾರೆಲ್‌ ಉರಲ್ಸ್‌ ಕಚ್ಚಾ ತೈಲವನ್ನು ಖರೀದಿಸಿದ ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿ.
  • ರಷ್ಯಾದ ಸರಕಾರಿ ವೆಬ್‌ ಸೈಟ್‌ಗಳ ಮೇಲೆ ಮುಂದುವರಿದ ನಿರಂತರ ಸೈಬರ್‌ ದಾಳಿ
  • ಪಶ್ಚಿಮ ಉಕ್ರೇನ್‌ನ ಸೇನಾ ಡಿಪೋ ಮೇಲೆ ದಾಳಿ ನಡೆಸಿದ್ದಾಗಿ ಪುತಿನ್‌ ಪಡೆ ಘೋಷಣೆ.

ಪ್ರಿಯತಮೆ ಅಗಲಿಕೆಯ ನೋವಿನಲ್ಲಿ ಸಂಸದ :

ರಷ್ಯಾದ ದಾಳಿಗೆ ಇತ್ತೀಚೆಗೆ ಯುವ ಪತ್ರಕರ್ತೆ ಅಲೆಕ್ಸಾಂಡರ್‌ ಕುವ್ಶಿನೋವಾ(25) ಕೂಡ ಸಾವನ್ನಪ್ಪಿದ್ದಾರೆ.

ಅಂದ ಹಾಗೆ ಆಕೆ ಉಕ್ರೇನ್‌ ಸಂಸದ ಸ್ವಿಟೊಸ್ಲಾವ್‌ ಯುರಾಶ್‌(26) ಅವರ ಪ್ರಿಯತಮೆಯಾಗಿದ್ದರಂತೆ. ಈ ವಿಚಾರವನ್ನು ಯುರಾಶ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ದಶಕಗಳ ಪ್ರೀತಿ ಈ ರೀತಿಯಲ್ಲಿ ಮಣ್ಣಾಯಿತು. ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು’ ಎಂದು ಬರೆದುಕೊಂಡಿದ್ದಾರೆ.

12 ಮಕ್ಕಳ ತಾಯಿ ಬಲಿ :

ಉಕ್ರೇನ್‌ನ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗೆ ಉಕ್ರೇನ್‌ನ 12 ಮಕ್ಕಳ ತಾಯಿ ಬಲಿಯಾಗಿದ್ದಾರೆ. 48 ವರ್ಷದ ಓಲ್ಗಾ ಸೆಮಿದ್ಯಾನೋವಾ ಆರು ಮಕ್ಕಳಿಗೆ ಜನ್ಮ ನೀಡಿದ್ದರೆ, ಮತ್ತೆ ಆರು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದರು. ಅವರಿಗೆ ಉಕ್ರೇನ್‌ನ ಮದರ್‌ ಹೀರೋಯಿನ್‌ ಪ್ರಶಸ್ತಿಯನ್ನೂ ಕೊಟ್ಟು ಅಲ್ಲಿನ ಸರಕಾರ ಗೌರವಿಸಿತ್ತು. 2014ರಲ್ಲಿ ಸೇನೆ ಸೇರಿದ್ದ ಅವರು ರಷ್ಯಾ ದಾಳಿ ವೇಳೆ ಡಾನೆಸ್ಕ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದರು. ಇತ್ತೀಚೆಗೆ ರಷ್ಯಾ ಪಡೆಯ ಜತೆ ನೇರ ಹಣಾಹಣಿಯಲ್ಲಿ ಓಲ್ಗಾ ಅವರ ಹೊಟ್ಟೆಗೆ ಗುಂಡು ತಗಲಿದ್ದು, ಅವರು ಸಾವನ್ನಪ್ಪಿದ್ದಾರೆ. ಯುದ್ಧ ಮುಂದುವರಿದ ಕಾರಣ ಓಲ್ಗಾ ಅವರ ಮೃತದೇಹವನ್ನೂ ತರಲಾಗದೆ ಕುಟುಂಬ ಕಣ್ಣೀರಿಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next