Advertisement

ಪನ್ನೀರ್‌ ಇಕ್ಕಟ್ಟು, ಡಿಎಂಕೆ ಜಲ್ಲಿಕಟ್ಟು

07:39 AM Feb 19, 2017 | Team Udayavani |

ಚೆನ್ನೈ: ಎಐಎಡಿಎಂಕೆ ಪಕ್ಷದ ರಾಜಕೀಯ ಬಿಕ್ಕಟ್ಟು ತೆರೆ ಕಾಣುವಲ್ಲಿ ಅತ್ಯಂತ ನಿರ್ಣಾಯಕ ದಿನವಾಗಿದ್ದ ಶನಿವಾರ ತಮಿಳುನಾಡು ವಿಧಾನಸಭೆಯು ರಣರಂಗವಾಗಿ ಮಾರ್ಪಟ್ಟಿದ್ದನ್ನು ನೋಡಿದವರಿಗೆ ಇದೊಂದು ಅಚ್ಚರಿಯ ಸಂಗತಿಯಾಗಿ ಕಾಣಬಹುದು. ಇದಕ್ಕೆ ಕಾರಣ- ಶಶಿಕಲಾ ಬಣದ ವಿರುದ್ಧ ಸಿಡಿದು, ಬಂಡಾಯದ ರಣಕಹಳೆ ಮೊಳಗಿಸಿದ್ದ ಮಾಜಿ ಸಿಎಂ ಪನ್ನೀರ್‌ಸೆಲ್ವಂ ಅವರು ಕಲಾಪದ ಅವಧಿಯಲ್ಲಿ ಮೌನಕ್ಕೆ ಶರಣಾಗಿದ್ದರೆ, ಎಐಎಡಿಎಂಕೆಯೊಳಗಿನ ಆಂತರಿಕ ಬಿಕ್ಕಟ್ಟಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಾ ಬಂದಿದ್ದ ಡಿಎಂಕೆ ಹೈಡ್ರಾಮಾ ನಡೆಸಿದ್ದು!

Advertisement

ಶನಿವಾರದ ಬೆಳವಣಿಗೆಯಲ್ಲಿ ಡಿಎಂಕೆಯ ವರ್ತನೆಯು ಉಳಿದವರಿಗೆ ದಿಗ್ಬ†ಮೆ ಮೂಡಿಸಿದ್ದರೂ ಅದು ಅವರ ರಾಜಕೀಯ ಲೆಕ್ಕಾಚಾರದ ಒಂದು ಭಾಗವಾಗಿತ್ತು. ತಮಿಳುನಾಡಿನ ಕದಡಿದ ನೀರಲ್ಲಿ ಮೀನು ಹಿಡಿಯುವುದೇ ಈ ಪಕ್ಷದ ಮುಖ್ಯ ಉದ್ದೇಶವಾಗಿತ್ತು.  ಶಶಿಕಲಾ-ಪನ್ನೀರ್‌ ಬಣವೆಂದು ಪ್ರತ್ಯೇಕಗೊಂಡ ಎಐಎಡಿಎಂಕೆಯನ್ನು ಇಬ್ಭಾಗ ಮಾಡಿ, ಈಗಾಗಲೇ ಅಸ್ಥಿರವಾಗಿರುವ ಸರಕಾರವನ್ನು ಇನ್ನಷ್ಟು ಗೊಂದಲಕ್ಕೀಡುಮಾಡುವ ಹಾಗೂ ಎಐಎಡಿಎಂಕೆ ಕುರಿತು ಜನರಿಗಿರುವ ಭಾವನೆಗೆ ಮತ್ತು ಪಕ್ಷದ ಇಮೇಜ್‌ಗೆ ಧಕ್ಕೆ ತರುವ ಪ್ಲ್ರಾನ್‌ ಡಿಎಂಕೆಯದ್ದಾಗಿತ್ತು.

ಅದಕ್ಕೆಂದೇ, ಕಲಾಪ ಆರಂಭವಾದ ಕೂಡಲೇ ಡಿಎಂಕೆ ಶಾಸಕರು ವಿಶ್ವಾಸಮತ ಸಾಬೀತುಪಡಿಸುವ ದಿನಾಂಕ ಮುಂದೂಡುವಂತೆಯೂ, ರಹಸ್ಯ ಮತದಾನ ನಡೆಸುವಂತೆಯೂ ಒತ್ತಾಯಿಸತೊಡಗಿ­ದರು. ಇದರಲ್ಲಿ ಒಂದಕ್ಕೆ ಒಪ್ಪಿಗೆ ಸಿಕ್ಕಿದರೂ ಲಾಭವಾಗುತ್ತಿದ್ದದ್ದು ಡಿಎಂಕೆಗೆ. ಏಕೆಂದರೆ, ಪಳನಿಸ್ವಾಮಿ ಪರವಿದ್ದ ಶಾಸಕರು ಮನಸ್ಸು ಬದಲಿಸಿ ಪನ್ನೀರ್‌ಸೆಲ್ವಂಗೆ ಬೆಂಬಲ ನೀಡುವ ಸಾಧ್ಯತೆಯಿತ್ತು. ಕೆಲವರು ಪನ್ನೀರ್‌ಗೆ ಬೆಂಬಲ ಕೊಟ್ಟರೂ, ಸರಕಾರ ಪತನವಾಗುವುದು ಖಚಿತ. ಇದು ಸಾಧ್ಯವಾಗದಿದ್ದರೆ, ವಿಶ್ವಾಸಮತಕ್ಕೆ ಅಡ್ಡಿಪಡಿಸಿ, ರಾಜ್ಯದಲ್ಲಿ ಸಾಂವಿಧಾನಿಕ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ರಾಜ್ಯಪಾಲರಿಗೆ ದೂರು ಕೊಟ್ಟು, ರಾಷ್ಟ್ರಪತಿ ಆಳ್ವಿಕೆ ಹೇರಿಸುವುದು, ಎಐಎಡಿಎಂಕೆಯಲ್ಲಿನ ಬಿಕ್ಕಟ್ಟು ಹಿರಿದಾಗಿ, ಯಾರಿಗೂ ವಿಶ್ವಾಸಮತ ಸಿಗದೇ ಇದ್ದಾಗ, ಹೊಸದಾಗಿ ಚುನಾವಣೆಗೆ ಹೋಗುವುದು… ಹೀಗೆ ರಾಜಕೀಯ ತಂತ್ರಗಳನ್ನು ಹೆಣೆದೇ ಡಿಎಂಕೆ ವಿಧಾನಸಭೆಗೆ ಆಗಮಿಸಿತ್ತು. ಆದರೆ, ಡಿಎಂಕೆ ಶಾಸಕರನ್ನು ಹೊರಗಿಟ್ಟು ಮತದಾನ ನಡೆಸುವ ಮೂಲಕ ಸ್ಪೀಕರ್‌ ಧನಪಾಲ್‌ ಅವರು ಡಿಎಂಕೆಯ ಎಲ್ಲ ತಂತ್ರಗಳನ್ನೂ ವಿಫ‌ಲಗೊಳಿಸಿದರು.

ಸ್ಟಾಲಿನ್‌ ಅಂಗಿ ಹರಿದ್ರು, ಪ್ರತಿಭಟಿಸಿದ್ದಕ್ಕೆ ವಶಕ್ಕೆ ಪಡೆದ್ರು!
ಅಸೆಂಬ್ಲಿಯಲ್ಲಿ ನಡೆದ ಹಂಗಾಮದ ವೇಳೆ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್‌ ಅವರ ಅಂಗಿಯೂ ಹರಿದಿದ್ದು, ಅದನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದ ಅವರು, “ನೋಡಿ, ಆಡಳಿತಾರೂಢ ಪಕ್ಷದ ಆದೇಶದ ಮೇರೆಗೆ ನಮ್ಮನ್ನು ಮುತ್ತಿಗೆ ಹಾಕಲಾಯಿತು. ನನ್ನನ್ನು ಅಸೆಂಬ್ಲಿಯಿಂದ ಹೊರಹಾಕಲಾಯಿತು’ ಎಂದರು. ಇದಕ್ಕೂ ಮೊದಲು, ಸದನದೊಳಗೆ ಗದ್ದಲವೆಬ್ಬಿಸಿ, ವಿಶ್ವಾಸಮತಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಸೂಚನೆಯಂತೆ, ಡಿಎಂಕೆ ಸದಸ್ಯರನ್ನು ಹೊರಗೆ ಕಳುಹಿಸಲಾಗಿತ್ತು. ಸ್ಟಾಲಿನ್‌ರನ್ನು ಮಾರ್ಷಲ್‌ಗ‌ಳು ಎತ್ತಿಕೊಂಡೇ ಹೊರಗೆ ಕರೆದೊಯ್ದಿದ್ದರು. ಇದನ್ನೆಲ್ಲ ಖಂಡಿಸಿ, ಸಂಜೆ ವೇಳೆ ಸ್ಟಾಲಿನ್‌ ಅವರು ಮರೀನಾ ಬೀಚ್‌ನಲ್ಲಿ ನಿರಶನ ಆರಂಭಿಸಿದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಸ್ಟಾಲಿನ್‌ ವಶಕ್ಕೆ ಪಡೆದಿದ್ದನ್ನು ಖಂಡಿಸಿ ಡಿಎಂಕೆ ಮತ್ತೆ ಪ್ರತಿಭಟನೆ ನಡೆಸಿತು. ಇದೇ ವೇಳೆ, ನಾವು ರಾಜ್ಯಪಾಲರನ್ನು ಭೇಟಿಯಾಗಿ ಸ್ಪೀಕರ್‌ ವಿರುದ್ಧ ದೂರು ನೀಡುವುದಾಗಿಯೂ ಡಿಎಂಕೆ ಹೇಳಿದೆ.

ದಿನಕರನ್‌ ಕೈತಪ್ಪಿದ ಸಚಿವ ಸ್ಥಾನ: ಮೂಲ ಯೋಜನೆಯ ಪ್ರಕಾರ, ಶಶಿಕಲಾ ಸಂಬಂಧಿ ಹಾಗೂ ಆಪ್ತ ದಿನಕರನ್‌ ಅವರಿಗೂ ಪಳನಿ ಸಂಪುಟದಲ್ಲಿ ಸ್ಥಾನ ನೀಡಲು ನಿರ್ಧರಿಸಲಾಗಿತ್ತು. ಆದರೆ, ಅವರ ವಿರುದ್ಧ ಹಲವು ಕೇಸುಗಳು ಇರುವ ಕಾರಣ, ಮುಂದೆ ಕಾನೂನು ತೊಡಕು ಉಂಟಾಗಬಹುದು ಎಂದು ರಾಜ್ಯಪಾಲರು ಸೂಚಿಸಿದ ಹಿನ್ನೆಲೆಯಲ್ಲಿ ದಿನಕರನ್‌ ಹೆಸರನ್ನು ಕೈಬಿಡಲಾಯಿತು.

Advertisement

ಮತ್ತೆ ಕುಟುಕಿದ ಕಮಲ್‌ ಹಾಸನ್‌ 
ಜಯಾ ನಿಧನದ ದಿನದಿಂದಲೂ ತಮಿಳುನಾಡಿನ ರಾಜಕೀಯ ಬೆಳವಣಿಗೆ ಕುರಿತು ಟ್ವೀಟ್‌ ಮೂಲಕ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ನಟ ಕಮಲ್‌ ಹಾಸನ್‌, ಶನಿವಾರವೂ ಟ್ವಿಟರ್‌ ಮೊರೆಹೋಗಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಶಾಸಕರ ವರ್ತನೆ, ರಾಜಕೀಯದಾಟವನ್ನು ವ್ಯಂಗ್ಯವಾಡಿದ್ದಾರೆ ಕಮಲ್‌. “”ತಮಿಳುನಾಡಿನ ಜನರೇ, ನಿಮ್ಮ ಶಾಸಕರು ವಾಪಸ್‌ ಬರುತ್ತಿದ್ದಾರೆ. ಅವರಿಗೆ “ತಕ್ಕುದಾದ ಗೌರವ’ ನೀಡಿ ಸ್ವಾಗತಿಸಿ,” ಎನ್ನುತ್ತಾ ರೆಸಾರ್ಟ್‌ನಲ್ಲಿದ್ದ ಶಾಸಕರನ್ನು ಕುಟುಕಿದ್ದಾರೆ. ಪಳನಿಸ್ವಾಮಿ ವಿಶ್ವಾಸಮತ ಗೆದ್ದೊಡನೆ ಮತ್ತೂಂದು ಟ್ವೀಟ್‌ ಮಾಡಿ, “ಅಂತೂ, ನಮಗೆ ಮತ್ತೂಬ್ಬ ಸಿಎಂ ಸಿಕ್ಕಿದ್ದಾರೆ. ಜೈ ಡೆ-ಮಾಕ್‌-ಕ್ರೇಜಿ (ಛಛಿಧಿಞಟckrಚzy)’ ಎಂದೂ “ಅಂದಿನ ಎಡಿಎಂಕೆ ಅಂದರೆ ಈಗಿನ ಕಾಂಗ್ರೆಸ್‌ ಶಾಸಕರು ಮೈಕ್ರೋಫೋನ್‌ಗಳೊಂದಿಗೇ ಸದನದಿಂದ ಹೊರನಡೆದಿದ್ದರು. ಆಂಗ್ಲ ಟಿವಿ ಚಾನೆಲ್‌ಗ‌ಳಿಗೆ ಇದು ನೆನಪಿರಲಿಕ್ಕಿಲ್ಲ. ಆದರೆ, ನಮಗಿದೆ’ ಎಂದೂ ಕಮಲ್‌ ಟ್ವೀಟಿಸಿದ್ದಾರೆ. ಈ ನಡುವೆ “ಎನ್‌ಡಿಟಿವಿ’ ಜತೆ ಮಾತನಾಡಿದ ಅವರು, ರಾಜಕೀಯ ಸೇರುವ ಇರಾದೆ ಇಲ್ಲ. ನನಗೆ ಕೋಪ ಬಂದಿದೆ ಎಂದಿದ್ದಾರೆ. 

ಕಾಂಗ್ರೆಸ್‌ ಕೈಜೋಡಿಸಿದ್ದೇಕೆ?
ತಮಿಳುನಾಡು ವಿಧಾನಸಭೆಯಲ್ಲಿ ಕೇವಲ 8 ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್‌, ಶನಿವಾರ ಡಿಎಂಕೆ ಜತೆ ಕೈಜೋಡಿಸಿತ್ತು. ಎಐಎಡಿಎಂಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯವಿತ್ತು. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಶಶಿಕಲಾ ಪರ ನಿಂತಿದ್ದರೆ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಹಾಗೂ ರಾಜ್ಯದ ಮಾಜಿ ನಾಯಕರಾದ ಇಳಂಗೋವನ್‌, ಕೆ.ವಿ. ತಂಗಬಾಲು ಮತ್ತಿತರರು ಎಐಎಡಿಎಂಕೆ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು ಬೇಡ ಎಂದು ಕುಳಿತಿದ್ದರು. ಆದರೆ, ಗದ್ದಲದಿಂದ ವಿಶ್ವಾಸಮತದ ದಿನಾಂಕ ಮುಂದೂಡಲ್ಪಟ್ಟರೆ, ಹೆಚ್ಚಿನ ಶಾಸಕರು ಪಳನಿಸ್ವಾಮಿ ಕೈತಪ್ಪಿ ಸರಕಾರ ಪತನಗೊಳ್ಳಬಹುದು. ಆಗ, ಹೊಸ ಚುನಾವಣೆ ಮೂಲಕ ಅಧಿಕಾರಕ್ಕೆ ಬರಲು ನಮಗೊಂದು ಅವಕಾಶ ಸಿಗಬಹುದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿತ್ತು.

2 ದಿನ ರೆಸಾರ್ಟ್‌ ಬಂದ್‌!
ಎಐಡಿಎಂಕೆ ಶಾಸಕರೆಲ್ಲ ತಂಗಿದ್ದ ಗೋಲ್ಡನ್‌ ಬೇ ರೆಸಾರ್ಟ್‌ ಈಗ ಹಾಸ್ಯಾಸ್ಪದ ತಾಣ! “ರೂಮ್‌ ಇದೆಯಾ?’ ಎನ್ನುತ್ತಾ ದಿನಕ್ಕೆ ಹಲವಾರು ತಮಾಷೆಯ ಫೋನು ಕರೆಗಳನ್ನು ಸ್ವೀಕರಿಸಿ ರೆಸಾರ್ಟ್‌ ಸಿಬಂದಿಗೆ ತಲೆನೋವು ಬಂದಿದೆ. ಅಲ್ಲದೆ, ರೆಸಾರ್ಟ್‌ ಸಂಪೂರ್ಣ ಅಸ್ತವ್ಯಸ್ತವಾ­ಗಿದ್ದು, ಶುಚಿಗೊಳಿಸುವ ಕಾರಣಕ್ಕೆ ಎರಡು ದಿನಗಳ ಮಟ್ಟಿಗೆ ಬಂದ್‌ ಮಾಡಲಾಗಿದೆ. ಹುಲ್ಲುಹಾಸು ವಿಪರೀತ ಗಲೀಜಾ ಗಿದ್ದು, ಹಲವು ಊಟದ ತಟ್ಟೆಗಳು ಮುರಿದು ಹೋಗಿವೆ. ಶಶಿಕಲಾ ಜೈಲಿಗೆ ಹೋಗುವ ಮುನ್ನ ದಿನಸಿ ಖರ್ಚಿಗೆಂದು 2 ಲಕ್ಷ ರೂ. ಮಾತ್ರ ನೀಡಲಾಗಿತ್ತು. ಮಿಕ್ಕ ಬಿಲ್‌ ಅನ್ನು ಶಶಿಕಲಾ ಬೆಂಬಲಿಗರು ಇನ್ನೂ ಪಾವತಿಸಿಲ್ಲ. ದಿನಕ್ಕೆ ಕನಿಷ್ಠ 4-5 ಲಕ್ಷ ರೂಪಾಯಿ ಬಿಲ್‌ ಆಗಿದೆ ಎನ್ನಲಾಗಿದೆ.

ಎಲ್ಲೆಡೆ ಪ್ರತಿಭಟನೆ
ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌ ಅವರನ್ನು ಮರೀನಾ ಬೀಚ್‌ನಿಂದ ಬಲವಂತವಾಗಿ ವಶಕ್ಕೆ ಪಡೆದುಕೊಂಡದ್ದು ತಮಿಳುನಾಡಿನಾದ್ಯಂತ ಅವರ ಪಕ್ಷದ ಆಕ್ರೋಶಕ್ಕೆ ಕಾರಣವಾಯಿತು. ಮಧುರೆಯಲ್ಲಿ ಹಲವಾರು ಮಂದಿ ಡಿಎಂಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮನಾಥಪುರಂ ಮತ್ತು ಕರೂರ್‌ಗಳಲ್ಲಿಯೂ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರಿ ಸ್ವಾಮ್ಯದ ಕಚೇರಿಗಳು, ಬಸ್‌ಗಳಿಗೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸ್ಟಾಲಿನ್‌ರನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಕರೂರ್‌, ಕಡಲೂರುಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಲಾಯಿತು.

ವಿಶ್ವಾಸಮತ ಗೆದ್ದರೂ ಉಳಿಸುವುದು ಕಷ್ಟ
ವಿಧಾನಸಭೆಯಲ್ಲಿ 122 ಶಾಸಕರ ಬೆಂಬಲದೊಂದಿಗೆ ಪಳನಿಸ್ವಾಮಿ ವಿಶ್ವಾಸಮತ ಗೆದ್ದಿರಬಹುದು. ಆದರೆ, ಅವರಿಗೆ ಯಾವತ್ತೂ ಇದು ಹಗ್ಗದ ಮೇಲಿನ ನಡಿಗೆಯೇ. ಎಲ್ಲ ಶಾಸಕರ ಬೆಂಬಲವನ್ನೂ ಉಳಿಸಿಕೊಂಡು, ಸರಕಾರ ನಡೆಸಿಕೊಂಡು ಹೋಗುವುದು ಕಷ್ಟ. ಏಕೆಂದರೆ,

1. ಕೇಂದ್ರ ಸರಕಾರ‌ವು ಪನ್ನೀರ್‌ಸೆಲ್ವಂ ಸಿಎಂ ಆಗಬೇಕೆಂದು ಬಯಸಿತ್ತು. ಆದರೆ, ಶಶಿಕಲಾ ಕ್ಷಿಪ್ರಕ್ರಾಂತಿ ಇದಕ್ಕೆ ತೊಡಕಾಯಿತು. ಹೀಗಾಗಿ, ಕೇಂದ್ರಕ್ಕೆ ಪಳನಿ ಆಡಳಿತ ಇಷ್ಟವಾಗದಿದ್ದರೆ, ಇಂದಲ್ಲ ನಾಳೆ ಸರಕಾರಕ್ಕೆ ಆಘಾತವಾಗುವುದು ಖಚಿತ.

2. ಜಯಲಲಿತಾ ಅವರಿಗೆ ಪಕ್ಷದ ಮೇಲೆ ಹಿಡಿತವಿತ್ತು. ಭಾರಿ ಜನಬೆಂಬಲವೂ ಇತ್ತು. ಆದರೆ, ಅದನ್ನು ಉಳಿಸಿಕೊಳ್ಳುವಲ್ಲಿ ಶಶಿಕಲಾ ಸಫ‌ಲರಾಗುವುದು ಅನುಮಾನ. ದೂರದ ಜೈಲಿನಲ್ಲಿದ್ದುಕೊಂಡು, ಪಕ್ಷವನ್ನು ನಿಭಾಯಿಸುವುದೂ ಕಷ್ಟವೇ.

3. ಪಳನಿಸ್ವಾಮಿ ಮನ್ನಾರ್‌ಗುಡಿಯ ಕುಟುಂಬಕ್ಕೆ ಸೇರಿದವರಲ್ಲ. ಶಶಿಕಲಾ ಗೈರುಹಾಜರಿಯಲ್ಲಿ ಪಕ್ಷವು ಅವರ ಸಂಬಂಧಿ ದಿನಕರನ್‌ ಮತ್ತು ವೆಂಕಟೇಶ್‌ ಕೈಯ್ಯಲ್ಲಿರುತ್ತದೆ. ಹೀಗಾಗಿ, ಎರಡು ಅಧಿಕಾರ ಕೇಂದ್ರಗಳು ಪಕ್ಷಕ್ಕೆ ಯಾವತ್ತೂ ಅಪಾಯವೇ.

4. ಸಿಎಂ ಹುದ್ದೆಯ ರುಚಿ ಕಂಡಿರುವ ಪನ್ನೀರ್‌ಸೆಲ್ವಂ, ಪಕ್ಷವನ್ನು ಒಡೆಯಲು ಎಲ್ಲವನ್ನೂ ಮಾಡಬಲ್ಲರು. ಈಗಾಗಲೇ ಕೆಲವು ಶಾಸಕರು ಸೆಲ್ವಂ ಬಣದಲ್ಲಿದ್ದು, ಪಳನಿ ಪರ ಇರುವ ಕೆಲವು ಶಾಸಕರನ್ನು ತನ್ನತ್ತ ಸೆಳೆದು ಸರಕಾರಕ್ಕೆ ಸೆಲ್ವಂ ಕೊಡಲಿಯೇಟು ನೀಡಬಹುದು.

5. ಈಗ ಪಕ್ಷದಲ್ಲಿ ಗೌಂಡರ್‌ ವರ್ಸಸ್‌ ತೇವಾರ್‌ ಎಂಬಂತೆ ಪ್ರಬಲ ಜಾತಿಗಳ ವಿಭಜನೆ ಆಗಿದೆ. ಪಳನಿಸ್ವಾಮಿ ಗೌಂಡರ್‌ ಸಮುದಾಯದವರು. ಶಶಿಕಲಾ ಸಂಬಂಧಿಗಳಾದ ದಿನಕರನ್‌, ವೆಂಕಟೇಶ್‌ ತೇವಾರ್‌ ಸಮುದಾಯದವರು. ಇವರು ಪಳನಿಯನ್ನು  ಹೆಚ್ಚು ದಿನ ಸಿಎಂ ಆಗಿ ಉಳಿಸಿಕೊಳ್ಳಲಿಕ್ಕಿಲ್ಲ.

ಕೆಲವರು ಡಿಎಂಕೆ ಜತೆ ಸೇರಿ ಅಮ್ಮಾ ಕಟ್ಟಿದ ಪಕ್ಷವನ್ನು ಒಡೆದು, ಸರಕಾರವನ್ನು ಬೀಳಿಸಲು ನೋಡಿದರು. ಅವರ ನೈಜ ಮುಖ ಸದನದಲ್ಲಿ ಬಯಲಾಯಿತು. ಇಂದಿನ ನಮ್ಮ ವಿಜಯದ ಮೂಲಕ ಚಿನ್ನಮ್ಮಾರ ಮೊದಲ ಶಪಥ ಈಡೇರಿದಂತಾಗಿದೆ.
ಪಳನಿಸ್ವಾಮಿ, ತಮಿಳುನಾಡು ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next