Advertisement

ಗುಲಾಬಿ ಬೆಳೆದು  ಜಿಲೇಬಿ ತಿಂದ ಮಲ್ಲಿಕಾರ್ಜುನ

03:45 AM Jul 03, 2017 | Harsha Rao |

ಧಾರವಾಡ ತಾಲೂಕಿನ ಮರೆವಾಡ ಗ್ರಾಮದ ಮಲ್ಲಿಕಾರ್ಜುನ ಮಹಾದೇವಪ್ಪ ಹೆಬ್ಟಾಳರು, ಗುಲಾಬಿ ಕೃಷಿಯಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇವರಿಗೆ 35 ಎಕರೆ ಜಮೀನು ಇದೆ. ಜೋಳ, ಹತ್ತಿ, ಶೇಂಗಾ, ಆಲೂಗಡ್ಡೆ, ಹೆಸರು ಬೆಳೆಯುತ್ತಾರೆ. ಮುಂಗಾರಿನಲ್ಲಿ ಕಡಲೆ, ಬಿಳಿಜೋಳ, ಗೋಧಿ ಬೆಳೆಯುತ್ತಾರೆ. ದಿನ ನಿತ್ಯ ಆದಾಯ ತಂದುಕೊಡುವ ಹೂವಿನ ಕೃಷಿಯಲ್ಲಿ ಇವರಿಗೆ ವಿಶೇಷ ಆಸಕ್ತಿ. ಇಪ್ಪತ್ತು ವರ್ಷಗಳ ಹಿಂದೆಯೇ ಗುಲಾಬಿ ಕೃಷಿ ಆರಂಭಿಸಿದ್ದರು. ಧಾರವಾಡದ ಸುತ್ತಮುತ್ತಲಿನ ಹಳ್ಳಿಗಳಿಗೆ ಮೊಟ್ಟ ಮೊದಲಿಗೆ ಗುಲಾಬಿ ಗಿಡಗಳನ್ನು ಪರಿಚಯಿಸಿದ ಕೀರ್ತಿ ಇವರದು. ಗ್ಲಾಡಿಯೇಟರ್‌ ತಳಿಯ ಗಿಡಗಳನ್ನು ನಾಟಿ ಮಾಡಿದ್ದಾರೆ. 

Advertisement

ಗುಲಾಬಿ ಕೃಷಿಯಲ್ಲಿ ಇವರದು ಪಳಗಿದ ಕೈಗಳು. ಗಿಡಗಳ ಗುಣಲಕ್ಷಣದ ಆಧಾರದಲ್ಲಿಯೇ ಗಿಡಗಳಿಗೆ ಎಷ್ಟು ಗೊಬ್ಬರ ಹಾಕಬೇಕು? ಯಾವ ಔಷಧ ಸಿಂಪಡಿಸಬೇಕು ಎನ್ನುವುದನ್ನು ಅಳೆದುಬಿಡುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ ಇವರು ಗುಲಾಬಿ ಗಿಡಗಳನ್ನು ನಾಟಿ ಮಾಡಿದಾಗ ಸುತ್ತಮುತ್ತಲಿನವರು ಅಚ್ಚರಿ ತುಂಬಿದ ಕಣ್ಣುಗಳಲ್ಲಿ ಗಮನಿಸುತ್ತಿದ್ದರು.

ಮೂವತ್ತೆ„ದು ಎಕರೆ ಜಮೀನಿದ್ದುಕೊಂಡು ನಿತ್ಯ ಕಿರಿಕಿರಿಯ ಈ ಹೂವಿನ ಕೃಷಿ ಮಾಡಿದ್ದಕ್ಕೆ ಕುಹಕವಾಡಿದ ಮಂದಿಯೂ ಸಾಕಷ್ಟಿದ್ದರು. ಆದರೆ ಇವರು ಇದಕ್ಕೆಲ್ಲಾ ಸೊಪ್ಪು ಹಾಕಿರಲಿಲ್ಲ. ಅವರಿವರು ಹೇಳಿದ್ದನ್ನು ಆಲಿಸಿ ಅವರ ದಡ್ಡತನ ಪ್ರದರ್ಶನಕ್ಕೆ ಮರುಗುತ್ತಿದ್ದರು.

ಇವರ ಜಮೀನಿನಲ್ಲಿ ಎರಡು ಬೋರ್‌ವೆಲ್‌ಗ‌ಳಿವೆ. ಮಿತವಾಗಿ ನೀರುಣಿಸುವ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಹೊಲಗಳಲ್ಲಿ ಬಿರು ಬೇಸಿಗೆಯಿಂದ ಕೊಳವೆ ಬಾವಿಗಳು ನೀರನ್ನು ಕುಂದಿಸಿಕೊಂಡಿವೆ. ಎರಡು ವರ್ಷದಿಂದ ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಜೀವನ ನಿರ್ವಹಣೆ ದುಸ್ತರವಾಗಿ ಬಿಟ್ಟಿದೆ ಎನ್ನುವ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ಇವರ ಮುಖದಲ್ಲಿನ ನಗು ಮಾಸಿಲ್ಲ. ತೋಟದಲ್ಲಿ ಅರಳುತ್ತಿರುವ ಸಾವಿರಾರು ಕೆಂಬಣ್ಣದ ಗುಲಾಬಿ ಹೂವುಗಳು ನಿತ್ಯವೂ ಸಂತೋಷ ಮನೆಮಾಡುವಂತೆ ಮಾಡಿದೆ.

ಇವರ ಹೂದೋಟದಲ್ಲಿರುವ ಗಿಡಗಳಿಗೆ ಎರಡು ವರ್ಷ ಆಯಸ್ಸು. ಈ ಹಿಂದೆ ತಂದು ನೆಟ್ಟ ಗಿಡಗಳ ಆಯಸ್ಸು ಮುಗಿದು ಹೂವಿನ ಇಳುವರಿ ಕಡಿತ ಮಾಡಿಕೊಂಡಿದ್ದರಿಂದ ಎರಡು ವರ್ಷಗಳ ಹಿಂದೆ ಬೆಂಗಳೂರಿನಿಂದ ಗ್ಲಾಡಿಯೇಟರ್‌ ತಳಿಯ ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಪ್ರತಿ 6-7 ವರ್ಷಕ್ಕೊಮ್ಮೆ ಗಿಡಗಳನ್ನು ಬದಲಿಸುತ್ತಾರೆ. ಪ್ರತಿ ಬಾರಿ ಬದಲಿಸಿದಾಗಲೂ ಗಿಡ ನಾಟಿ ಮಾಡುವ ಸ್ಥಳವನ್ನು ಬದಲಾಯಿಸುತ್ತಾರೆ. ಈ ಬಾರಿ ಮೂರು ಎಕರೆಯಲ್ಲಿ ಹೂವಿನ ಕೃಷಿ ಇದೆ. ಗಿಡಗಳ ನಾಟಿ ಪೂರ್ವ ಭೂಮಿ ಸಿದ್ಧತೆಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಎಕರೆಗೆ ಐದು ಲೋಡ್‌ ಕೊಟ್ಟಿಗೆ ಗೊಬ್ಬರ ಹಾಕಿ ಎರಡು ಬಾರಿ ಆಳವಾಗಿ ಉಳುಮೆ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ ಮೂರು ಅಡಿ, ಸಾಲಿನಿಂದ ಸಾಲಿಗೆ ಆರು ಅಡಿ ಅಂತರವಿದೆ. ಐದು ಸಾವಿರ ಗಿಡ ನಾಟಿ ಮಾಡಿದ್ದಾರೆ. ತಿಂಗಳಿಗೊಮ್ಮೆ ಪ್ರತಿ ಗಿಡಗಳಿಗೆ ಮೂವತ್ತು ಗ್ರಾಂ. ರಸಗೊಬ್ಬರ ಹಾಕುತ್ತಾರೆ. ಎರಡು ದಿನಕ್ಕೊಮ್ಮೆ ಡ್ರಿಪ್‌ ಮೂಲಕ ನೀರುಣಿಸುತ್ತಾರೆ. ಹದಿನೈದು ದಿನಕ್ಕೊಮ್ಮೆ ಕಳೆ ತೆಗೆಸುತ್ತಾರೆ.

Advertisement

ಗಿಡ ನಾಟಿ ಮಾಡಿದ ಒಂದುವರೆ ತಿಂಗಳಿನಿಂದ ಹೂವಿನ ಇಳುವರಿ ಆರಂಭವಾಗಿದೆ. ಮೂರು ತಿಂಗಳವರೆಗೆ ಮೊಳೆತ ಮೊಗ್ಗುಗಳನ್ನು ಚಿವುಟು ಹಾಕಿದ್ದಾರೆ. ಗಿಡಗಳ ಗಾತ್ರ ವೃದ್ಧಿಯಾಗಲು ಭವಿಷ್ಯದಲ್ಲಿ ಉತ್ತಮ ಹೂವಿನ ಇಳುವರಿ ಪಡೆಯಲು ಮೊಗ್ಗು ಚಿವುಟುವುದರಿಂದ ಸಾಧ್ಯವಾಗುತ್ತದೆ ಎನ್ನುವುದು ಇವರ ಅನುಭವದ ನುಡಿ. ಮೂರು ತಿಂಗಳ ನಂತರದಿಂದ ಹೂ ಕೊಯ್ಲು ಮಾಡಲು ಆರಂಭಿಸಿದ್ದಾರೆ. ಆರು ತಿಂಗಳವರೆಗೆ ಸಿಗುತ್ತಿರುವ ಹೂವಿನ ಪ್ರಮಾಣ ಕಡಿಮೆ ಇತ್ತು. ಒಂದು ಗಿಡದಿಂದ ತಿಂಗಳಿಗೆ 6-8 ಹೂ ದೊರೆಯುತ್ತಿದ್ದವು. ನಂತರದಲ್ಲಿ ಇಳುವರಿಯಲ್ಲಿ ಏರಿಕೆ ಕಂಡು ಬಂತು. ಚಳಿಗಾಲದಲ್ಲಿ ಹೂವಿನ ಇಳುವರಿ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ಬೂದು ರೋಗ ಬಾಧಿಸುವ ಸಾಧ್ಯತೆ ಜಾಸ್ತಿ.

ಔಷಧ ಸಿಂಪರಣೆ ಮಾಡಿ ನಿಯಂತ್ರಿಸಿಕೊಳ್ಳಬೇಕು. ಆಗಸ್ಟ್‌, ಸೆಪ್ಟೆಂಬರ್‌ ತಿಂಗಳ ವೇಳೆಗೆ ಹೂವಿನ ಇಳುವರಿಯಲ್ಲಿ ಏರಿಕೆ ಕಂಡು ಬರುತ್ತದೆ. ಹೂ ಆಕಾರ ಹಾಗೂ ಹೊಳಪಿನಲ್ಲಿಯೂ ಆಕರ್ಷಣೀಯವಾಗಿರುತ್ತದೆ. ಹೂವಿನ ಮಾರಾಟಕ್ಕೆ ಕಸರತ್ತು ಮಾಡುವ ಅಗತ್ಯರುವುದಿಲ್ಲ.

ಬಿಸಿಲಿನ ಪ್ರಖರತೆ ಇರದ ಹಾಗೂ ಅತಿ ಹೆಚ್ಚು ತಂಪಿನ ವಾತಾವರಣ ಇರದ ದಿನಗಳನ್ನು ನೋಡಿಕೊಂಡು ಗಿಡಗಳನ್ನು ಬುಡದಿಂದ ಎರಡುವರೆ ಅಡಿ ಎತ್ತರದಲ್ಲಿ ಕತ್ತರಿಸುತ್ತಾರೆ. ಕತ್ತರಿಸಿದ ಭಾಗಕ್ಕೆ ಸೆಗಣಿ, ಕೆಂಪುಮಣ್ಣು, ಬಾಸ್ಟಿನ್‌ ಪುಡಿಯ ಹದವಾದ ಮಿಶ್ರಣದ ಪೇಸ್ಟ್‌ಅನ್ನು ಲೇಪಿಸುತ್ತಾರೆ. ಈ ಕ್ರಮ ಅನುಸರಿಸುವುದರಿಂದ ಕತ್ತರಿಸಿದ ಗಿಡಗಳ ಭಾಗ ಕೊಳೆಯುವುದಿಲ್ಲ. ಹುಳ ಹುಪ್ಪಡಿಗಳು, ಕ್ರಿಮಿಗಳು ಗಿಡವನ್ನು ಮೇಯುತ್ತಾ ಒಳಗೆ ಹೋಗುವ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ ಇದರಿಂದಾಗಿ ತೇವಾಂಶ ಸಮಪ್ರಮಾಣದಲ್ಲಿ ದೊರೆತು ಉತ್ತಮ ಚಿಗುರು ಜಾಸ್ತಿ ಬರಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಮಹದೇವಪ್ಪ.  ಗಿಡ ಕತ್ತರಿಸಿದ ಒಂದೂವರೆ ತಿಂಗಳಿನಿಂದ ಹೂವಿನ ಇಳುವರಿ ಆರಂಭವಾಗುತ್ತದೆ. ಹೊಸ ಚಿಗುರಿನಿಂದ ಮೊದಲ ತಿಂಗಳ ಅವಧಿಯಲ್ಲಿ ಪ್ರತಿ ಗಿಡದಿಂದ 5-6 ಹೂವು ಸಿಗುತ್ತದೆ. ಮೂರು ತಿಂಗಳ ನಂತರ 8-10 ಹೂವಿಗೆ ಏರಿಕೆಯಾಗುತ್ತದೆ. ಮೂರು ತಿಂಗಳ ನಂತರದಲ್ಲಿ ಒಂದು ಗಿಡದಿಂದ 10-15 ಹೂವುಗಳು ಸಿಗುವುದೂ ಇದೆ ಎನ್ನುತ್ತಾರೆ.

ಪ್ರತಿ ದಿನ ಬೆಳಗಿನ ಜಾವ ಹೂ ಕೊಯ್ಲಿನ ತರಾತುರಿ ಆರಂಭ. ದಿನವೊಂದಕ್ಕೆ 2,000-2,500 ಹೂ ಕೊಯ್ಲಿಗೆ ಸಿಗುತ್ತದೆ. ಕತ್ತರಿಸುವಲ್ಲಿ ಜಾಣತನ ಅನುಸರಿಸುತ್ತಾರೆ. ಹೂರುವ ಭಾಗದಿಂದ ಒಂದು ಅಡಿ ಕೆಳ ಭಾಗದಲ್ಲಿ ಕತ್ತರಿಸುತ್ತಾರೆ. ಹತ್ತು ಹೂವುಗಳನ್ನು ಒಂದೆಡೆ ಸೇರಿಸಿ ಗುಚ್ಚ ತಯಾರಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಧಾರವಾಡ ಮಾರುಕಟ್ಟೆಗೆ ತಾವೇ ಹೋಗಿ ಹೂವುಗಳನ್ನು ಕೊಟ್ಟು ಬರುತ್ತಾರೆ. ಪ್ರತಿ ಹೂವಿಗೆ ಐವತ್ತು ಪೈಸೆ ದರ ಸಿಗುತ್ತಿದೆ. ತಿಂಗಳಿಗೆ 75,000-80,000 ಹೂವು ವಿಲೇವಾರಿ ಮಾಡುತ್ತಿದ್ದು ನಲವತ್ತು ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಔಷಧ, ಗೊಬ್ಬರ, ಕೂಲಿ ಖರ್ಚು ಸೇರಿ ಮಾಸಿಕ 20,000 ವೆಚ್ಚವಾಗುತ್ತಿದೆ.

ಇವರ ಮೂರು ಎಕರೆ ಗುಲಾಬಿ ತೋಟದಲ್ಲಿ ಎರಡು ರೀತಿಯ ಮಣ್ಣು ಕಂಡು ಬರುತ್ತದೆ. ಎರಡು ಎಕರೆ ಕಪ್ಪು ಮಣ್ಣಿನ ಭೂಮಿ. ಒಂದೆಕರೆ ಕೆಂಪು ಮಿಶ್ರಿತ ಮಣ್ಣು. ಎರೆ ಮಣ್ಣಿನಲ್ಲಿ ಬೆಳೆದ ಗಿಡಗಳು ಹುಲುಸಾಗಿವೆ. ಎತ್ತರೆತ್ತರ ಬೆಳೆದಿದೆ. ಕೆಂಪು ಮಣ್ಣಿನ ಭೂಮಿಯ ಗಿಡಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ದಪ್ಪ ಕಾಂಡಗಳು, ಕಸುವು ಹೊಂದಿರುವ ಚಿಗುರು, ಎರಡು ಪಟ್ಟು ಹೆಚ್ಚಿನ ಇಳುವರಿ ಕಂಡುಬರುತ್ತಿದೆ. ಎರೆ ಮಣ್ಣಿನ ಗಿಡಗಳಿಗೆ ಗೊಬ್ಬರ ಹಾಕುವ, ಔಷಧ ಸಿಂಪಡಿಸುವ ಪ್ರಮಾಣವೂ ಕಡಿಮೆ ಎನ್ನುವುದು ಇವರ ಮಾತು. 

ಬಯಲು ನಾಡಿನ ಬಯಲಿನಲ್ಲಿರುವ ಹೂವಿನ ತೋಟದಲ್ಲಿ ಇವರು ಮಲೆನಾಡಿನ ವಾತಾವರಣ ಸೃಷ್ಟಿಸಿದ್ದಾರೆ. ಬದುವಿನಲ್ಲಿ ಅಲ್ಲಲ್ಲಿ ತೆಂಗಿನ ಮರಗಳಿವೆ. ಸಾಗವಾನಿ ಮರಗಳು ಶಿಸ್ತು ಬದ್ದವಾಗಿ ಎದ್ದು ನಿಂತಿದೆ. 1992 ರಲ್ಲಿ ಅರಣ್ಯ ಇಲಾಖೆಯಿಂದ ಸಾಗವಾನಿ ಗಿಡಗಳನ್ನು ತಂದು ನಾಟಿ ಮಾಡಿದ್ದರು. ಎರಡು ದಿಕ್ಕಿನಿಂದಲೂ ಇಪ್ಪತ್ತೆ„ದು ಅಡಿ ಅಂತರದಲ್ಲಿ ಬೆಳೆದು ನಿಂತ ತೇಗದ ಮರಗಳು ತಂಪನೆಯ ವಾತಾವರಣ ಸೃಷ್ಟಿಸಿವೆ. ಬಿರು ಬಿಸಿಲಿನಲ್ಲಿಯೂ ಬಿಸಿಲಿನ ನೇರ ಹೊಡೆತ ಹೂವಿನ ಗಿಡಗಳಿಗಾಗದಂತೆ ತಡೆಯುತ್ತಿದೆ. ನೆರಳು ಗುಲಾಬಿ ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನೇನೂ ಬೀರಿಲ್ಲ ಎನ್ನುವ ಅಭಿಪ್ರಾಯ ಇವರದು. ಸಾಕಷ್ಟು ಜಮೀನು ಹೊಂದಿದ್ದರೂ ದಿನ ನಿತ್ಯ ಕಾಸು ಎಣಿಸಬಲ್ಲ ಮೂಲವಾದ ಹೂವಿನ ಕೃಷಿ ಪದ್ಧತಿ ಅನುಸರಿಸುತ್ತಿರುವ ಇವರ ಕೃಷಿ ಮಾದರಿ ಇತರರಿಗೆ ಮಾದರಿಯಾಗಿದೆ.

– ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next