Advertisement

ಉರುಳುತ್ತಿದೆ ಕಾಲಚಕ್ರ…ಬ್ರಹ್ಮನ ವಿಶ್ವ ಸೃಷ್ಟಿಯ ವಿರಾಟ್ ದರ್ಶನ

12:37 PM Jul 24, 2018 | |

      ಬ್ರಹ್ಮದೇವರು ನಾರಾಯಣನಿಂದ ಸೃಷ್ಟಿಯ ವಿಷಯವನ್ನು ಅರಿತು ಪುನಃ ನೂರುವರ್ಷ ತಪಸ್ಸನ್ನು ಆಚರಿಸಿ ತದನಂತರ ಸೃಷ್ಟಿಯ ರಚನೆ ಮಾಡಲು ಮುಂದಾದರು, ಆಗ ಅವರು ತಮ್ಮ ಶರೀರದಿಂದ ಮೊದಲಿಗೆ ತಮಸ್ಸು, ಮೋಹ ,ಮಹಾಮೋಹ, ತಾಮಿಸ್ರ, ಅಂಧತಾಮಿಸ್ರ ಗಳೆಂಬ ಅಜ್ಞಾನದ ಐದು ವೃತ್ತಿಗಳನ್ನೂ ಸೃಷ್ಟಿಸಿದರು. ಆದರೆ ಈ ಅತ್ಯಂತ ಪಾಪಮಯ ಸೃಷ್ಟಿಯನ್ನು ನೋಡಿ ಅವರಿಗೆ ಸಂತೋಷವಾಗಲಿಲ್ಲ.

Advertisement

        ಆಗ ಅವರು ತಮ್ಮ ಮನಸ್ಸನ್ನು ಭಗವಂತನ ಧ್ಯಾನದಿಂದ ಪವಿತ್ರವಾಗಿಸಿಕೊಂಡು ಸನಕ, ಸನಂದನ, ಸನಾತನ, ಸನಾತ್ಕುಮಾರರೆಂಬ ನಾಲ್ಕು ಮಂದಿ ಧರ್ಮಪಾರಾಯಣರಾದ ಮುನಿ ಶ್ರೇಷ್ಠರನ್ನು ಸೃಷ್ಟಿಸಿದರು. ನಂತರ ಬ್ರಹ್ಮದೇವರು ತನ್ನ ಮಾನಸ ಪುತ್ರರಿಗೆ ” ಪುತ್ರರೇ ನೀವು ಸೃಷ್ಟಿಯಲ್ಲಿ ತೊಡಗಿರೆಂದು ಹೇಳಿದರು”. ಆದರೆ ಹುಟ್ಟಿನಿಂದಲೇ ಮೋಕ್ಷಧರ್ಮವುಳ್ಳ ವಾಸುದೇವ ಪಾರಾಯಣರಾದ ಸನಕಾದಿಗಳು ಪ್ರವೃತ್ತಿಧರ್ಮ ರೂಪವಾದ ಸೃಷ್ಟಿಯನ್ನು ಮಾಡಲು ಇಚ್ಚಿಸಲಿಲ್ಲ, ತನ್ನ ಪುತ್ರರು ತನ್ನ ಅಪ್ಪಣೆಯನ್ನು ತಿರಸ್ಕರಿಸಿದ್ದರಿಂದ ಬ್ರಹ್ಮದೇವರಿಗೆ ಬಹಳ ಕ್ರೋಧವುಂಟಾಯಿತು. 

           ಆ ಕ್ರೋಧವು ಪ್ರಜಾಪತಿಯ ಹುಬ್ಬುಗಳ ಮಧ್ಯದಿಂದ ನೀಲಿ ಮತ್ತು ಕೆಂಪು ಬಣ್ಣದ ಬಾಲಕನ ರೂಪದಲ್ಲಿ ಪ್ರಕಟಗೊಂಡಿತು, ಆ ಬಾಲಕನೇ ದೇವತೆಗಳಿಗೆಲ್ಲ ಮೊದಲು ಹುಟ್ಟಿದ ಮಹಾದೇವನು. ಆ ಬಾಲಕನು ಅಳುತ್ತಾ “ಸೃಷ್ಟಿಕರ್ತನೇ  ನನಗೆ ಹೆಸರನ್ನು ಮತ್ತು ವಾಸಸ್ಥಾನವನ್ನು ತಿಳಿಸು ಎಂದು ಕೇಳಿದನು.

            ಆಗ ಪದ್ಮಸಂಭವನು ಮಗು ನೀನು ಹುಟ್ಟಿದೊಡನೆ ಬಾಲಕನಂತೆ ಅಳತೊಡಗಿದೆ ಆದ್ದರಿಂದ ಜನರು ನಿನ್ನನ್ನು ರುದ್ರನೆಂದು ಕರೆಯುವರು, ನಿನಗೆ ವಾಸಿಸಲು ಹೃದಯ, ಇಂದ್ರಿಯ, ಪ್ರಾಣ, ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ, ಸೂರ್ಯ, ಚಂದ್ರ ಮತ್ತು ತಪಸ್ಸು ಎಂಬ ಏಕಾದಶ ಸ್ಥಾನಗಳನ್ನು ಮೊದಲೇ ರಚಿಸಿರುವೆನು, ನೀನು ಮನ್ಯು, ಮನು, ಮಹಿನಸ, ಮಹಾನ್, ಶಿವ, ಋತದ್ವಜ, ಉಗ್ರರೇತಸ, ಭವ, ಕಾಲ, ವಾಮದೇವ, ಧೃತವ್ರತ ಎಂಬ ಹನ್ನೊಂದು ಹೆಸರುಗಳಿಂದ ಕ್ರಮವಾಗಿ ಧೀ, ವೃತ್ತಿ ,ಉಶನಾ, ಉಮಾ , ನಿಯುತ್ , ಸರ್ಪಿ, ಇಳಾ, ಅಂಬಿಕಾ , ಇರಾವತೀ, ಸುಧಾ ಹಾಗೂ ದೀಕ್ಷಾ ಎಂಬ ಹನ್ನೊಂದು ರುದ್ರಾಣಿಯರೊಂದಿಗೆ ಖ್ಯಾತನಾಗುವೆ.  ಈ ಸ್ಥಾನಗಳನ್ನು, ಹೆಸರುಗಳನ್ನೂ ಪತ್ನಿಯರನ್ನು ಸ್ವೀಕರಿಸಿ ಪ್ರಜಾಪತಿಯಾಗಿ ಇವರ ಮೂಲಕ ಬಹುಮಂದಿ ಪ್ರಜೆಗಳನ್ನು ಸೃಷ್ಟಿಸು ಎಂದು ಅಪ್ಪಣೆ ಮಾಡಿದನು. 

         ಬ್ರಹ್ಮನ ಆಜ್ಞೆಯನ್ನು ಶಿರಸಾವಹಿಸಿದ ನೀಲಲೋಹಿತನು ಬಲ, ಆಕಾರ ಮತ್ತು ಸ್ವಭಾವಗಳಲ್ಲಿ ತನ್ನಂತೆಯೇ ಇರುವ ಪ್ರಜೆಗಳನ್ನು ಸೃಷ್ಟಿಸತೊಡಗಿದನು. ರುದ್ರನಿಂದ ಉತ್ಪನ್ನರಾದ ಈ ಅಸಂಖ್ಯ ರುದ್ರರು ಜಗತ್ತನ್ನು ಭಕ್ಷಿಸ ತೊಡಗಿದರು, ಇದನ್ನು ಕಂಡ ಬ್ರಹ್ಮದೇವರು “ರುದ್ರನೇ ನಿನ್ನ ಪ್ರಜೆಗಳು ಎಲ್ಲ ದಿಕ್ಕುಗಳನ್ನು ಸುಟ್ಟುಹಾಕತೊಡಗಿದ್ದರೆ ಇಂತಹ ಸೃಷ್ಟಿಯನ್ನು ಮುಂದೆ ಸೃಷ್ಟಿಸಬೇಡ, ಈಗ ನೀನು ತಪಸ್ಸನ್ನಾಚರಿಸಿ ಆ ತಪಸ್ಸಿನ ಪ್ರಭಾವದಿಂದ ಸೃಷ್ಟಿಯ ಕಾರ್ಯವನ್ನು ಮುಂದುವರೆಸು” ಎಂದು ಹೇಳಿದರು. ಬ್ರಹ್ಮನ್ನ ಅಪ್ಪಣೆಯಂತೆ ಶಿವನು ತಪಸ್ಸಿಗಾಗಿ ವನಕ್ಕೆ ತೆರಳಿದನು.  

Advertisement

           ಅನಂತರ ಭಗವಂತನ ಶಕ್ತಿಯಿಂದ ಕೂಡಿದ ಬ್ರಹ್ಮದೇವರು ಸೃಷ್ಟಿಯನ್ನು ಮಾಡಲು ಸಂಕಲ್ಪಿಸಿ ತನ್ನ ತೊಡೆಯಿಂದ ನಾರದನನ್ನೂ, ಅಂಗುಷ್ಠದಿಂದ ದಕ್ಷನನ್ನೂ, ಪ್ರಾಣದಿಂದ ವಸಿಷ್ಠನನ್ನೂ, ತ್ವಚೆಯಿಂದ ಭೃಗುವನ್ನೂ , ಕೈಯಿಂದ ಕ್ರತುವನ್ನೂ , ನಾಭಿಯಿಂದ ಪುಲಹನನ್ನೂ, ಕಿವಿಯಿಂದ ಪುಲಸ್ತ್ಯರನ್ನೂ , ಬಾಯಿಯಿಂದ ಅಂಗೀರಸನನ್ನೂ , ನೇತ್ರಗಳಿಂದ ಅತ್ರಿಯನ್ನೂ, ಮನದಿಂದ ಮರೀಚಿಯನ್ನೂ ಸೃಷ್ಟಿಸಿದರು. 

       ನಂತರ ಬ್ರಹ್ಮದೇವರ ಬಲಗಡೆಯ ಸ್ತನದಿಂದ ಧರ್ಮದ ಉತ್ಪನ್ನವಾಯಿತು ಅದರಿಂದ ಸ್ವಯಂ ನಾರಾಯಣನು ಅವತರಿಸಿದನು. ಬ್ರಹ್ಮದೇವರ ಬೆನ್ನಿನಿಂದ ಅಧರ್ಮದ ಜನ್ಮವಾಯಿತು. ಅದರಿಂದ ಜಗತ್ತಿಗೆ ಭಯವನ್ನುಂಟುಮಾಡುವ ಮೃತ್ಯುವು ಜನಿಸಿದನು. ಹೀಗೆಯೇ ಹೃದಯದಿಂದ ಕಾಮವೂ, ಹುಬ್ಬುಗಳಿಂದ ಕ್ರೋಧವೂ, ಕೆಳಗಿನ ತುಟಿಯಿಂದ ಲೋಭವೂ, ಬಾಯಿಯಿಂದ ಸರಸ್ವತಿಯೂ, ಲಿಂಗದಿಂದ ಸಮುದ್ರವೂ, ಗುದದಿಂದ ನಿಋ್ರುತಿಯೂ ,ನೆರಳಿನಿಂದ ಕರ್ದಮರೂ ಜನಿಸಿದರು. ಹೀಗೆ ಇಡೀ ಜಗತ್ತು ಸೃಷ್ಟಿಕರ್ತರಾದ ಬ್ರಹಮ್ಮದೇವರ ಶರೀರ ಹಾಗೂ ಮನಸ್ಸುಗಳಿಂದ ಉಂಟಾಗಿದೆ.

            ನಂತರ ಬ್ರಹ್ಮದೇವರು ತಮ್ಮ ಪೂರ್ವ ದಿಕ್ಕಿನ ಮುಖದಿಂದ ಋಗ್ವೇದವನ್ನೂ, ದಕ್ಷಿಣದಿಂದ ಯಜರುವೇದ, ಪಶ್ಚಿಮದಿಂದ ಸಾಮವೇದ, ಉತ್ತರದಿಂದ ಅಥರ್ವವೇದಗಳನ್ನು ಹೀಗೆ ನಾಲ್ಕು ವೇದಗಳನ್ನೂ ಪ್ರಕಟಪಡಿಸಿದರು. ಇದೆ ಕ್ರಮದಲ್ಲೇ ನಾಲ್ಕು ಮಂದಿ ಋತ್ವಿಕ್ಕುಗಳಾದ ಹೋತೃವಿನ ಕರ್ಮವಾದ ಶಸ್ತ್ರವನೂ, ಅದ್ವರ್ಯುವಿನ ಕರ್ಮವಾದ ಇಜ್ಯೆಯನ್ನೂ ,ಉದ್ಗತೃವಿನ ಕರ್ಮವಾದ ಸ್ತುತಿ ಸ್ತೋಮವನ್ನು ಮತ್ತು ಬ್ರಹ್ಮನ ಕರ್ಮವಾದ ಪ್ರಯಶ್ಚಿತ್ತವನ್ನೂ ಹೊರಹೊಮ್ಮಿಸಿದರು.

               ಹೀಗೆಯೆ ಆಯುರ್ವೇದ, ಧನುರ್ವೇದ, ಗಾಂಧರ್ವವೇದ ಮತ್ತು ಸ್ಥಾಪತ್ಯವೇದ ಈ ನಾಲ್ಕು ಉಪವೇದಗಳನ್ನು ಕ್ರಮವಾಗಿ ಪೂರ್ವದಿ ದಿಕ್ಕುಗಳ ಮುಖಗಳಿಂದಲೇ ನಿರ್ಮಾಣಮಾಡಿದರು. ಮತ್ತೆ ಸರ್ವಜ್ಞರಾದ ಆ ಬ್ರಹ್ಮದೇವರು ಇತಿಹಾಸ ಪುರಾಣರೂಪವಾದ ಐದನೆಯ ವೇದವನ್ನು ನಿರ್ಮಿಸಿದರು.  ವಿದ್ಯೆ, ದಾನ, ತಪಸ್ಸು , ಸತ್ಯ ಎಂಬ ಧರ್ಮದ ನಾಲ್ಕು ಪಾದಗಳನ್ನೂ ಹಾಗೂ ನಾಲ್ಕು ಆಶ್ರಮಗಳು ಹಾಗೂ ಅವುಗಳ ವೃತ್ತಿಗಳು, ಎಲ್ಲವೂ ಬ್ರಹ್ಮ ದೇವರ ಮುಖಗಳಿಂದ ಉದ್ಭವಿಸಿದವು. ಹೀಗೆ ಬ್ರಹ್ಮದೇವರು ತಮ್ಮ ಶರೀರ ಮತ್ತು ಮನಸಿನಿಂದ ಈ ಜಗತ್ತನ್ನು ಸೃಷ್ಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next