ಮೊಹಾಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಾರ್ಚ್ 4ರಂದು ಮೊಹಾಲಿಯಲ್ಲಿ ಆರಂಭವಾಗಲಿದೆ. ಇಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ ತಂಡದ ಕಾಂಬಿನೇಶನ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳಪೆ ಫಾರ್ಮ್ ಕಾರಣದಿಂದ ಲಂಕಾ ವಿರುದ್ಧದ ಸರಣಿಯಿಂದ ಹೊರಬಿದ್ದ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಬಗ್ಗೆ ರೋಹಿತ್ ಪ್ರಸ್ತಾಪ ಮಾಡಿದ್ದಾರೆ.
ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ತಂಡದ ಭವಿಷ್ಯದ ಯೋಜನೆಗಳಲ್ಲಿ ಉಳಿಯುತ್ತಾರೆ ಮತ್ತು ಅವರನ್ನು ಸರಿದೂಗಿಸುವುದು ಸುಲಭವಲ್ಲ ಎಂದು ರೋಹಿತ್ ಹೇಳಿದ್ದಾರೆ.
“ಪೂಜಾರ ಮತ್ತು ರಹಾನೆಯಂತಹ ಆಟಗಾರರ ಜಾಗದಲ್ಲಿ ಆಡುವುದು ಸಲುಭದ ಮಾತಲ್ಲ. ಅವರ ಜಾಗಕ್ಕೆ ಬಂದವರ ಕೆಲಸವೂ ಸುಲಭವಾಗಿಲ್ಲ. ನಿಜವಾಗಿ ಹೇಳಬೇಕಾದರೆ ಪೂಜಾರ ಮತ್ತು ರಹಾನೆ ಜಾಗಕ್ಕೆ ಯಾರು ಬರುತ್ತಾರೆ ಎಂದು ನನಗೂ ಗೊತ್ತಿಲ್ಲ. ಅವರಿಬ್ಬರೂ ಇಷ್ಟು ವರ್ಷಗಳಲ್ಲಿ ತಂಡಕ್ಕೆ ನೀಡಿದ ಕೊಡುಗೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. 80-90 ಟೆಸ್ಟ್ ಗಳು, ವಿದೇಶಿ ಜಯಗಳು, ಭಾರತ ಮೊದಲ ಶ್ರೇಯಾಂಕ ಪಡೆಯುವಲ್ಲಿ ಅವರ ಸಾಧನೆ ದೊಡ್ಡದಿದೆ” ಎಂದು ರೋಹಿತ್ ಹೇಳಿದ್ದಾರೆ.
ಇದನ್ನೂ ಓದಿ:ಎರಡು ಸ್ಥಾನಕ್ಕೆ ಮೂವರ ಸ್ಪರ್ಧೆ: ಟೆಸ್ಟ್ ತಂಡದಲ್ಲಿ ಪೂಜಾರ- ರಹಾನೆ ಸ್ಥಾನ ತುಂಬುವವರು ಯಾರು?
“ಪೂಜಾರ ಮತ್ತು ರಹಾನೆಯನ್ನು ಕಡೆಗಣಿಸಲಾಗುವುದಿಲ್ಲ. ನಮ್ಮ ಭವಿಷ್ಯದ ಯೋಜನೆಗಳಲ್ಲಿ ಅವರಿದ್ದಾರೆ. ಅಯ್ಕೆ ಸಮಿತಿ ಹೇಳಿದಂತೆ ಸದ್ಯಕ್ಕೆ ಮಾತ್ರ ಅವರನ್ನು ಪರಿಗಣಿಸಲಾಗಿಲ್ಲ” ಎಂದು ಮೊದಲ ಬಾರಿಗೆ ಟೆಸ್ಟ್ ನಾಯಕತ್ವ ವಹಿಸುತ್ತಿರುವ ರೋಹಿತ್ ಹೇಳಿದರು.
ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಯಾರು ಇನ್ನಿಂಗ್ಸ್ ಆರಂಭ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್, “ ನಾನು ನಾಯಕ. ಎಲ್ಲರೂ ತಂಡದಲ್ಲಿರಬೇಕು ಎಂದು ಬಯಸುತ್ತೇನೆ. ನಾವು ಎಲ್ಲವನ್ನೂ ನೋಡಿ ವಿಶ್ಲೇಷಿಸುತ್ತೇವೆ. ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಉತ್ತಮ ಆಟಗಾರರು ಮತ್ತು ಭಾರತೀಯ ಕ್ರಿಕೆಟ್ ನ ಭವಿಷ್ಯ” ಎಂದು ಹೇಳಿದ್ದಾರೆ.