Advertisement

ಜಲಪಾತದಂತಾದ ರಸ್ತೆ ಮಾರ್ಗ: ಸಂಚಾರ ಅಸ್ತವ್ಯಸ್ತ

11:29 PM Aug 27, 2022 | Team Udayavani |

ರಾಮನಗರ: ಜಿಲ್ಲಾದ್ಯಂತ ಸುರಿಯಲಾರಂಭಿಸಿರುವ ಮಳೆಗೆ ನಿಜಕ್ಕೂ ಜನತೆ ಹೈರಾಣಾಗಿದ್ದಾರೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರ ಪ್ರದೇಶಗಳಲ್ಲೇ ಮನೆಗೆ ನೀರು ನುಗ್ಗಲಾರಂಬಿಸಿದ್ದು ಹಲವೆಡೆ ಅವಾಂತರಗಳನ್ನ ಸೃಷ್ಟಿಸಿದೆ. ಅಲ್ಲದೆ ಬೆಂಗಳೂರು-ಮೈಸೂರು ಹೆದ್ದಾರಿ ಯಂತೂ ಮಳೆಗೆ ಕೆರೆಯಂತಾಗಿ ರೂಪುಗೊಂಡಿದೆ.

Advertisement

ನಗರದ ಟಿಪ್ಪುನಗರದಲ್ಲಿ ಬ್ರಿಡ್ಜ್ ಕಟ್ಟಿಕೊಂಡಿದ್ದು, ನೀರಿನ ಹರಿವು ಕಷ್ಟವಾಗಿದ್ದು, ಸುರಿದ ಧಾರಾಕಾರ ಮಳೆಗೆ ನೀರು ಮನೆಗಳಿಗೆ ನುಗ್ಗಲಾರಂಭಿಸಿದೆ. 23ನೇ ವಾರ್ಡ್‌ ಟಿಪ್ಪುನಗರದಲ್ಲಿ ಬರುವ ಸೀರಳ್ಳ ತುಂಬಿ ಹರಿಯುತ್ತಿದ್ದು, ಆ ಭಾಗದ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನತೆ ರಾತ್ರಿ ನಿದ್ರೆ ಇಲ್ಲದೆ ನೀರು ಮನೆಗೆ ನುಗ್ಗದಂತೆ ನೋಡಿಕೊಳ್ಳುವುದೇ ಆಗಿತ್ತು. ಅಲ್ಲದೆ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿಟ್ಟಿದ್ದ ಪಡಿತರ ಸೇರಿದಂತೆ ಆಹಾರ ಸಾಮಗ್ರಿ ಹಾಗೂ ಬಟ್ಟೆ ಬರೆ ಎಲ್ಲವೂ ನೀರಿನಲ್ಲಿ ತೋಯ್ದು ಕೆಲವು ಕಡೆ ಕೊಚ್ಚಿಕೊಂಡು ಹೋದ ದೃಶ್ಯ ಸಾಮಾನ್ಯವಾಗಿತ್ತು.

ಮನೆಗಳಿಗೆ ನುಗ್ಗಿದ ನೀರು: ವಾರ್ಡ್‌ ನಂ 21ರ ಅರ್ಕೇ ಶ್ವರ ಕಾಲೋನಿಯಲ್ಲಿ ನೀರು ಮನೆಗಳಿಗೆ ನುಗ್ಗಿದ್ದು, ಸೇತುವೆಯ ಕೆಳಭಾಗ ನೀರು ತುಂಬಿ ಹುಣಸನಹಳ್ಳಿ, ಕೊತ್ತಿಪುರ ಸೇರಿದಂತೆ ಇತರ ಮಾರ್ಗದ ಕೆಳ ಸೇತುವೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಅಲ್ಲದೆ, ನಗರದ ಕೊಳಚೆ ನೀರು ಮನೆಗಳಿಗೆ ಹೆಚ್ಚಾಗಿ ನುಗ್ಗಿದ್ದು ದುರ್ನಾತ ಹೊಡೆ ಯಲಾರಂಭಿಸಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿ ದ್ದಾರೆ. ಚನ್ನಮಾನಹಳ್ಳಿ ಬಳಿಯ ಕೆರೆ ಕೋಡಿ ಹೊಡೆದು ನೀರು ಕನಕಪುರ ರಸ್ತೆಯತ್ತ ನುಗ್ಗಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಅರ್ಚಕಹಳ್ಳಿ ಬಳಿಯ ರಂಗರಾಯರದೊಡ್ಡಿ ಕೆರೆ ಕೋಡಿ ಹೊಡೆದ ಪರಿಣಾಮ ಬೆಂಗಳೂರು-ಮೈಸೂರು ರಸ್ತೆಗೆ ನೀರು ನುಗ್ಗಿದ್ದು, ಕೆಲ ಕಾಲ ಪ್ರವಾಹದಂತ ಅನುಭವ ನೀಡಿತ್ತು.

ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗ ಬದಲಾವಣೆ
ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ನಿಂತು ಕೆರೆಯಂತಾಗಿದ್ದರಿಂದ ಜೀವ ಕೈಯಲ್ಲಿಡಿದು ವಾಹನ ಚಾಲಕರು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಜಿಲ್ಲಾಡಳಿತ ಬೆಂಗಳೂರು ಮತ್ತು ಮೈಸೂರು ನಡುವಣ ಸಂಚಾರಕ್ಕೆ ರಸ್ತೆ ಬಳಸದಂತೆ ಎಚ್ಚರಿಕೆ ನೀಡಿದ್ದು, ಪರ್ಯಾಯ ಮಾರ್ಗವಾಗಿ ಕನಕಪುರ ಮಾರ್ಗ ಅಥವಾ ಮಾಗಡಿ ಮಾರ್ಗದ ರಸ್ತೆಗಳಲ್ಲಿ ಸಂಚಾರಕ್ಕೆ ಬಳಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ವಿಶೇಷವಾಗಿ ಬೆಂಗಳೂರಿನಿಂದ-ಮೈಸೂರಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳಪೆ ಕಾಮಗಾರಿಯಾಗಿದ್ದು, ರಸ್ತೆ ನಿರ್ಮಾಣದ ವೇಳೆ ಬಿದ್ದ ನೀರು ಮೋರಿ ಅಥವಾ ರಾಜಕಾಲುವೆಗೆ ನೇರವಾಗಿ ಹೋಗುವಂತೆ ಕಾಮಗಾರಿ ನಿರ್ಮಿಸುವಲ್ಲಿ ವಿಫಲವಾಗಿದ್ದೆ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next