Advertisement

ಉಡುಪಿ ನಗರದಲ್ಲಿ ರಸ್ತೆ ಗುಂಡಿಗಳ ಹೆಚ್ಚಳ

06:00 AM Oct 11, 2018 | Team Udayavani |

ಉಡುಪಿ: ನಗರದ ಕೇಂದ್ರ ಭಾಗದ ಪ್ರಮುಖ ರಸ್ತೆಗಳೂ ಸೇರಿದಂತೆ ನಗರ ಸಭೆ ವ್ಯಾಪ್ತಿಯ ಹಲವೆಡೆ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇವುಗಳು ವಾಹನ ಸಂಚಾರಕ್ಕೆ ಮತ್ತು ಅಪಘಾತಕ್ಕೂ ಕಾರಣವಾಗುತ್ತಿವೆ. 

Advertisement

ಡಯಾನಾದಲ್ಲಿ ವಾಹನಗಳ ಸರ್ಕಸ್‌  
ಹಳೆ ತಾಲೂಕು ಕಚೇರಿ, ಕೋರ್ಟ್‌ ಎದುರು, ಡಯಾನ ಸರ್ಕಲ್‌ವರೆಗಿನ ರಸ್ತೆ ಈ ಹಿಂದೆಂದಿಗಿಂತಲೂ ಹೆಚ್ಚು ಕೆಟ್ಟು ಹೋಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ವಾಹನಗಳು ಪರಸ್ಪರ ಢಿಕ್ಕಿಯಾಗುತ್ತಿರು ವುದಲ್ಲದೆ ಪಾದಚಾರಿಗಳ ಮೇಲೂ ನುಗ್ಗುತ್ತಿವೆ.  

ಹೆಜ್ಜೆಗೊಂದರಂತೆ ಹೊಂಡ 
ಅಂಬಾಗಿಲು- ಕಲ್ಸಂಕ ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಹೊಂಡಗಳು ಕಾಣಸಿಗುತ್ತವೆ. ಒಂದು ಹೊಂಡ ತಪ್ಪಿಸುವಾಗ ಇನ್ನೊಂದು ಬರುತ್ತವೆ. ಈ ರಸ್ತೆ ಕಾಮಗಾರಿ ಆರಂಭದಲ್ಲೇ ಅಸಮರ್ಕವಾಗಿ ನಡೆದ ಬಗ್ಗೆ ದೂರುಗಳಿದ್ದವು. ದುರಸ್ತಿ ನಡೆಸಿದರೂ ಪ್ರಯೋಜನವಾಗಿಲ್ಲ. ಈಗ ಈ ರಸ್ತೆಯಲ್ಲಿ ಹೊಂಡ ತಪ್ಪಿಸಿ ವಾಹನ ಓಡಿಸುವುದು ಸವಾಲು ಎಂಬಂತಾಗಿದೆ. 

ನೀತಿ ಸಂಹಿತೆ ಬಿಸಿ
ರಾಷ್ಟ್ರೀಯ ಹೆದ್ದಾರಿ 66ರ ಕರಾವಳಿ ಬೈಪಾಸ್‌ನಿಂದ ಉಡುಪಿ ನಗರ ಪ್ರವೇಶಿಸುವಲ್ಲಿ, ಬನ್ನಂಜೆಯಿಂದ ಬ್ರಹ್ಮಗಿರಿ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿಯೂ ಹೊಂಡಗಳಿವೆ. ನಗರಸಭೆ ಚುನಾವಣೆ, ಮಳೆ, ಇದೀಗ ಮತ್ತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆಯಿಂದಾಗಿ ನಗರದ ರಸ್ತೆಗಳು ದುರಸ್ತಿ ಭಾಗ್ಯ ಕಂಡಿಲ್ಲ. ಇನ್ನೇನಿದ್ದರೂ ನವೆಂಬರ್‌ ಬಳಿಕವೇ ಕಾಮಗಾರಿ ನಡೆಯುವ ಸಾಧ್ಯತೆ ಇದೆ.

ಅನುದಾನವೂ ಇಲ್ಲ
ನಗರಸಭೆಯಲ್ಲಿ ಸದ್ಯ ಚುನಾಯಿತ ಆಡಳಿತವೂ ಇಲ್ಲ. ಹಾಗಾಗಿ ಕ್ರಿಯಾಯೋಜನೆ ತಯಾರಿಸಲಾಗಿಲ್ಲ. ಇದರಿಂದಾಗಿ ಕಾಮಗಾರಿಗಳಿಗೆ ಅನುದಾನ ಹೊಂದಿಸುವುದು ಹೇಗೆಂದು ಅಧಿಕಾರಿಗಳಿಗೆ ತಿಳಿಯುತ್ತಿಲ್ಲ. ಇರುವ ಸ್ವಲ್ಪ ಅನುದಾನದಲ್ಲಿ ತೇಪೆ ಹಾಕುವ ಯೋಜನೆ ಅಧಿಕಾರಿಗಳದ್ದು.

Advertisement

ನೀತಿಸಂಹಿತೆಯಿಂದ ತೊಡಕು
ಕೆ.ಎಂ ಮಾರ್ಗದಿಂದ ಹಳೆ ತಾಲೂಕು ಕಚೇರಿವರೆಗಿನ ರಸ್ತೆ ಹಾಗೂ  ಅಂಬಾಗಿಲು-ಕಲ್ಸಂಕ ರಸ್ತೆ ದುರಸ್ತಿಗೆ ಈಗಾಗಲೇ ಟೆಂಡರ್‌ ಆಗಿದೆ. ಆದರೆ ಈಗ ನೀತಿ ಸಂಹಿತೆ ಇರುವುದರಿಂದ ಕಾಮಗಾರಿ ನಡೆಸಲು ಅಸಾಧ್ಯವಾಗುತ್ತಿದೆ. ಮಳೆ ಕೂಡ ಅಡ್ಡಿಯಾಗಿದೆ. ಆದಷ್ಟು ಶೀಘ್ರ ಕಾಮಗಾರಿ ನಡೆಸಲಾಗುವುದು.
– ಆಯುಕ್ತರು,ಉಡುಪಿ ನಗರಸಭೆ

ಆಡಳಿತ ವೈಫ‌ಲ್ಯ
ನಗರದ ಪ್ರಮುಖ ರಸ್ತೆಗಳು ಈ ರೀತಿ ಯಾವತ್ತು ಕೂಡ ಕೆಟ್ಟು ಹೋಗಿಲ್ಲ. ಮುಖ್ಯ ರಸ್ತೆಗಳೇ ಹೀಗಿದ್ದರೆ ಇನ್ನು ಇತರ ರಸ್ತೆಗಳು ಹೇಗಿರಬಹುದು ಎಂಬುದನ್ನು ಅಂದಾಜಿಸಿಕೊಳ್ಳಲು ಕಷ್ಟವೇನಿಲ್ಲ. ಸುಮಾರು ಒಂದು ತಿಂಗಳು ಮಳೆಯೇ ಇರಲಿಲ್ಲ. ಆಗ ನಮ್ಮ ಆಡಳಿತ ವ್ಯವಸ್ಥೆ ಏನು ಮಾಡಿತ್ತು? ಇನ್ನು ಸಣ್ಣಪುಟ್ಟ ದುರಸ್ತಿ ಮಾಡಿದರೆ ಸಾಕಾಗದು. ಕೂಡಲೇ ಕಾರ್ಯಪ್ರವೃತ್ತರಾಗಬೇಕು.
– ಕಿರಣ್‌ ಕುಮಾರ್‌, 
ಮಾಜಿ ಅಧ್ಯಕ್ಷರು,ಉಡುಪಿ ನಗರಸಭೆ

ಹೊಂಡ ತಪ್ಪಿಸುವುದು ಕಷ್ಟ
ಹೊಂಡ ತಪ್ಪಿಸಲು ಹೋಗುವ ಬೈಕ್‌ ಸವಾರರು ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಹೆಚ್ಚು ಹೊಂಡಗಳಿರುವ ರಸ್ತೆಗಳಲ್ಲಿ ಪೊಲೀಸ್‌ ಸಿಬಂದಿಗಳನ್ನಾದರೂ ನಿಯೋಜಿಸಲಿ. ಮಳೆ ಇದೆ ಎಂದು ಬಿಟ್ಟರೆ ಹೊಂಡಗಳು ಮತ್ತೆ ದೊಡ್ಡದಾಗುತ್ತಾ ಹೋಗುತ್ತವೆ.
– ವೆಂಕಟೇಶ್‌, 
ರಿಕ್ಷಾ ಚಾಲಕರು

Advertisement

Udayavani is now on Telegram. Click here to join our channel and stay updated with the latest news.

Next