Advertisement

ರಸ್ತೆ ಅಭಿವೃದ್ಧಿ: ಧರಶಾಯಿಯಾಗಬೇಕಾಗಿದ್ದ ಮರಕ್ಕೆ  ಮರುಜೀವ

10:18 AM Dec 10, 2018 | Team Udayavani |

ಮಹಾನಗರ: ರಸ್ತೆ ವಿಸ್ತರಣೆ ಹಾಗೂ ಕರಂಗಲ್ಪಾಡಿ ವೃತ್ತ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಡಿಯಲು ಉದ್ದೇಶಿಸಲಾಗಿದ್ದ ಬಂಟ್ಸ್‌ ಹಾಸ್ಟೆಲ್‌ ವೃತ್ತದ ಬಳಿ ಇದ್ದ ಸುಮಾರು 200 ವರ್ಷಗಳ ಹಳೆಯ ಅಶ್ವತ್ಥ ಮರವನ್ನು ಬುಡಸಮೇತ ರವಿವಾರ ಸಿವಿ ನಾಯಕ್‌ ಹಾಲ್‌ ಮುಂಭಾಗಕ್ಕೆ ಸ್ಥಳಾಂತರಿಸಲಾಯಿತು. ಈ ಮೂಲಕ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪುರಾತನ, ಬೃಹತ್‌ ಗಾತ್ರದ ಮರವೊಂದನ್ನು ಸ್ಥಳಾಂತರಿಸಲಾಗಿದೆ. ರಸ್ತೆ ಅಭಿವೃದ್ಧಿಯ ನೆಪದಲ್ಲಿ ಧರಶಾಯಿ ಯಾಗಬೇಕಾಗಿದ್ದ ಮರಕ್ಕೆ ಮರುಜೀವ ನೀಡಿದಂತಾಗಿದೆ.

Advertisement

ಈ ಹಿಂದೆ ಪಂಪ್‌ವೆಲ್‌ ಹಾಗೂ ಉರ್ವದಲ್ಲಿದ್ದ ಎರಡು ಮರಗಳನ್ನು ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲಾಗಿತ್ತು. ಬಂಟ್ಸ್‌ ಹಾಸ್ಟೆಲ್‌ ಬಸ್‌ ನಿಲ್ದಾಣದ ಸಮೀಪದಲ್ಲೇ ಇದ್ದ ಅಶ್ವತ್ಥ ಮರ ಎಲ್ಲರಿಗೂ ಚಿರಪರಿಚಿತ. ಬಸ್‌ ನಿಲ್ದಾಣದ ಸಮೀಪವೇ ಇದ್ದುದ್ದರಿಂದ ಎಲ್ಲರೂ ಅಶ್ವತ್ಥ ಮರದಡಿಯಲ್ಲಿ ಆಶ್ರಯ ಪಡೆಯುತ್ತಿದ್ದರು. ಬಸ್‌ಗಾಗಿ ಕಾದು ನಿಂತ ಸಹಸ್ರ ಸಂಖ್ಯೆಯ ಪ್ರಯಾಣಿಕರಿಗೆ ಅಶ್ವತ್ಥ ಮರವು ನೆರಳು ನೀಡಿತ್ತು. ಜತೆಗೆ ಅಶ್ವತ್ಥ ಮರದ ಬಗ್ಗೆ ಹಿಂದೂ ಧರ್ಮದಲ್ಲಿ ಪೂಜ್ಯನೀಯ ನಂಬಿಕೆ ಇರುವುದರಿಂದ ಈ ಮರಕ್ಕೆ ಬಹುತೇಕ ಜನರು ಪೂಜೆ ಕೂಡ ಸಲ್ಲಿಸುತ್ತಿದ್ದರು. ಜತೆಗೆ ಪರಿಸರಪ್ರಿಯ ಮನಸ್ಸುಗಳಿಗೆ ಈ ಮರದ ಬಗ್ಗೆ ಅತೀವ ಪ್ರೀತಿ ಬೆಳೆದಿತ್ತು. ರಸ್ತೆ ಅಭಿವೃದ್ಧಿಯ ನೆಪದಲ್ಲಿ ಉರುಳಿಸುವ ಬಗ್ಗೆ ಮಾತು ಕೇಳಿ ಬಂದಾಗಲೇ ಎಲ್ಲ ಕಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕಡಿಯುವ ಬದಲು ಇನ್ನೊಂದು ಕಡೆಗೆ ಸ್ಥಳಾಂತರಿಸುವ ಕುರಿತಂತೆ ವ್ಯಾಪಕ ಆಗ್ರಹ ವ್ಯಕ್ತವಾಗಿತ್ತು. ಅಂತಿಮವಾಗಿ ಪರಿಸರಪ್ರಿಯರ, ಸ್ಥಳೀಯರ ಒತ್ತಾಯಕ್ಕೆ ಮಣಿದ ಮಹಾನಗರ ಪಾಲಿಕೆ ರವಿವಾರ ಮರವನ್ನೇ ಸ್ಥಳಾಂತರಿಸಲು ನಿರ್ಧರಿಸಿ, ಯಶಸ್ವಿ ಕಂಡಿದೆ. 

ಮರ ಸ್ಥಳಾಂತರ ಹಿನ್ನೆಲೆಯಲ್ಲಿ ಪಾಲಿಕೆ, ಮೆಸ್ಕಾಂ, ಟ್ರಾಫಿಕ್‌ ಪೊಲೀಸ್‌ ಸಹಿತ ಎಲ್ಲ ಇಲಾಖೆಯ ಪ್ರಮುಖರು ಕೈಜೋಡಿಸಿದ್ದರು. ಶುಕ್ರವಾರ ರಾತ್ರಿಯೇ ಮರದ ರೆಂಬೆಗಳನ್ನು ಕತ್ತರಿಸಲಾಗಿತ್ತು. ಹಿಂದೂ ಧರ್ಮದಲ್ಲಿ ಅಶ್ವತ್ಥ ಮರಕ್ಕೆ ಹೆಚ್ಚು ಪ್ರಾಶಸ್ತ್ಯ ಇರುವುದರಿಂದ ರೆಂಬೆಗಳನ್ನು ಕತ್ತರಿಸುವ ಮೊದಲು ಪುರೋಹಿತರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗಿತ್ತು. ರವಿವಾರ ಕೂಡ ಮರ ಸ್ಥಳಾಂತರ ಪ್ರಕ್ರಿಯೆಗೂ ಮುನ್ನ ಮತ್ತೊಮ್ಮೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ರಜಾ ದಿನವಾದ್ದರಿಂದ ರವಿವಾರ ವಾಹನ ದಟ್ಟಣೆ ಕಡಿಮೆ ಇರುವುದರಿಂದ ಮರ ಸ್ಥಳಾಂತರಕ್ಕೆ ನಿರ್ಧರಿಸಲಾಗಿತ್ತು. ಸುಮಾರು 1 ಲಕ್ಷ ಟನ್‌ ಭಾರ ಹೊರಬಲ್ಲ ತೆರಿ ಕ್ರೇನ್‌, ಜೇಸಿಬಿ ಸಹಾಯದ ಮೂಲಕ ಮರವನ್ನು ಬುಡ ಸಮೇತ ತೆಗೆದು ಕದ್ರಿ ರಸ್ತೆಯ ಸಿವಿ ನಾಯಕ್‌ ಹಾಲ್‌ ಮುಂಭಾಗದ ಪಾಲಿಕೆಯ ಖಾಲಿ ಸ್ಥಳದಲ್ಲಿ ನೆಡಲಾಯಿತು.

ಬೆಳಗ್ಗಿನಿಂದ ಸಂಜೆಯವರೆಗೆ!
ಸ್ಥಳಾಂತರ ಕಾಮಗಾರಿ ರವಿವಾರ ಬೆಳಗ್ಗೆ 5.30ಕ್ಕೆ ಆರಂಭಗೊಂಡು ಸಂಜೆ ಸುಮಾರು 7.30ಕ್ಕೆ ಮುಕ್ತಾಯಗೊಂಡಿತು. ಬೇರುಗಳು ಭೂಮಿಯಡಿ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಪಾಲಿಕೆ ಜೇಸಿಬಿ ಕಾಮಗಾರಿ ಕೈಗೊಂಡಿತ್ತು. ಸಂಜೆ ಸುಮಾರು 4.30ರ ವೇಳೆಗೆ ಮರವನ್ನು ಬುಡಸಮೇತ ಕ್ರೇನ್‌ ಸಹಾಯದಿಂದ ಮೇಲಕ್ಕೆತ್ತಿ, ಬೃಹತ್‌ ಗಾತ್ರದ ಲಾರಿಯಲ್ಲಿ ಇರಿಸಲಾಯಿತು. ಆ ಬಳಿಕ ಲಾರಿ ನಿಧಾನವಾಗಿ ಸುಮಾರು 50 ಮೀಟರ್‌ ದೂರ ಚಲಿಸಿ, ಸಿವಿ ನಾಯಕ್‌ ಹಾಲ್‌ ಮುಂಭಾಗಕ್ಕೆ ಆಗಮಿಸಿತು. ಬಂಟ್ಸ್‌ ಹಾಸ್ಟೆಲ್‌ – ಪಿವಿಎಸ್‌ ರಸ್ತೆಯನ್ನು ಕೆಲವು ಸಮಯ ಬಂದ್‌ ಮಾಡಲಾಗಿತ್ತು.

ಮರ ಸ್ಥಳಾಂತರಿಸುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದರು. ವಾಹನ ನಿಲ್ಲಿಸಿ ಮೊಬೈಲ್‌ ಮೂಲಕ ಮರ ಸ್ಥಳಾಂತರದ ವೀಡಿಯೋ, ಫೋಟೋ ಚಿತ್ರೀಕರಿಸುತ್ತಿದ್ದರು. ಕಾರ್ಪೊರೇಟರ್‌ ಡಿ.ಕೆ. ಅಶೋಕ್‌, ರಾಷ್ಟ್ರೀಯ ಪರಿಸರ ರಕ್ಷಣಾ ಫೌಂಡೇಶನ್‌ನ (ಎನ್‌ಇಸಿಎಫ್‌) ಶಶಿಧರ ಶೆಟ್ಟಿ, ಜಗದೀಶ್‌ ಶೇಣವ, ಪ್ರವೀಣ್‌ ಕುತ್ತಾರ್‌, ಜೀತ್‌ ಮಿಲನ್‌ ರೋಶೆ, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ , ಎಂಜಿನಿಯರ್‌ ರಾಜೇಶ್‌ ಕುಮಾರ್‌, ಮರಳಹಳ್ಳಿ, ನೇತೃತ್ವದಲ್ಲಿ ಕಾಮಗಾರಿ ನಡೆಯಿತು.

Advertisement

ಚತುಷ್ಪಥ ರಸ್ತೆ ನಿರ್ಮಾಣ
ಬಂಟ್ಸ್‌ಹಾಸ್ಟೆಲ್‌ ಅತೀ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶ. ಆದರೆ ಇಲ್ಲಿ ಲೇನ್‌ ಹಾಗೂ ಫುಟ್‌ಪಾತ್‌ ಇರಲಿಲ್ಲ. ಹಾಗಾಗಿ ದಿನನಿತ್ಯ ಟ್ರಾಫಿಕ್‌ ಸಮಸ್ಯೆ ಎದುರಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಅಶ್ವತ್ಥ ಮರವನ್ನು ಸ್ಥಳಾಂತರಿಸಿ 4 ಲೇನ್‌ ಹಾಗೂ ಫುಟ್‌ಪಾತ್‌ ಕಾಮಗಾರಿಯನ್ನು ನಡೆಸಲಾಗುತ್ತದೆ.
 - ಮಹಮ್ಮದ್‌ ನಝೀರ್‌, ಮನಪಾ ಆಯುಕ್ತ 

ಮರಗಳ ರಕ್ಷಣೆ ನಮ್ಮ ಹೊಣೆ
ಪಿವಿಎಸ್‌ನಿಂದ ಬಂಟ್ಸ್‌ ಹಾಸ್ಟೆಲ್‌ವರೆಗೆ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಕರಂಗಲ್ಪಾಡಿ ವೃತ್ತ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಅಶ್ವತ್ಥ ಮರವನ್ನು ಸ್ಥಳಾಂತರಿಸಲಾಗಿದೆ. ಕಾಮಗಾರಿಯಲ್ಲಿ ಪಾಲಿಕೆ ಅಧಿಕಾರಿಗಳು, ಮೆಸ್ಕಾಂ, ಟ್ರಾಫಿಕ್‌ ಪೊಲೀಸರ ಪಾತ್ರ ಶ್ಲಾಘನೀಯ.
– ಡಿ.ಕೆ. ಅಶೋಕ್‌,
ಕಾರ್ಪೊರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next