Advertisement

ಕನ್ನಡಿಗರ ಕ್ಷಮೆ ಕೋರಿದ ಆರ್‌ಜೆ ರಶ್ಮಿ

01:32 PM Apr 05, 2018 | Team Udayavani |

ಸೋಶಿಯಲ್‌ ಮೀಡಿಯಾದ ಸಂದರ್ಶನದಲ್ಲಿ ಕನ್ನಡಿಗರನ್ನು ಅವಹೇಳನ ಮಾಡಿದ್ದ ಭಂಡಾರಿ ಬ್ರದರ್ಸ್‌, ಮಂಗಳವಾರ ಬೇಷರತ್‌ ಕ್ಷಮೆ ಕೋರಿದ್ದರು. ಈಗ ಆ ಕಾರ್ಯಕ್ರಮ ನಡೆಸಿಕೊಟ್ಟಿದ್ದ ರ್ಯಾಪಿಡ್‌ ರಶ್ಮಿ ಕೂಡ ಕನ್ನಡಿಗರಲ್ಲಿ ಕ್ಷಮೆ ಕೋರಿದ್ದಾರೆ.

Advertisement

ಬುಧವಾರ ವಾಣಿಜ್ಯ ಮಂಡಳಿಗೆ ಬಂದು, ಅಧ್ಯಕ್ಷ ಸಾ.ರಾ.ಗೋವಿಂದು ಅವರಲ್ಲಿ ಚರ್ಚಿಸಿದ ಬಳಿಕ ಕನ್ನಡಿಗರಿಗೆ ಕ್ಷಮಿಸುವಂತೆ ಕೈ ಮುಗಿದು ಕೇಳಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿರುವ ವೀಡಿಯೋದಲ್ಲಿ ಮಾತನಾಡಿರುವ ರಶ್ಮಿ, “ರ್ಯಾಪಿಡ್‌ ರಶ್ಮಿ ಶೋನಲ್ಲಿ “ರಾಜರಥ’ ತಂಡ ಬಂದಾಗ, ಮಾತುಕತೆಯಲ್ಲಿ ವಿವಾದಾತ್ಮಕ ಪದಗಳು ಬಂದಿದ್ದರಿಂದ ಕನ್ನಡಿಗರಿಗೆ ನೋವಾಗಿದೆ. ಅದು ನಮಗೂ ಅರಿವಾಗಿದೆ. ಆ ವಿವಾದ ಪ್ರತಿ ದಿನ ಒಂದೊಂದು ತಿರುವು ಪಡೆದುಕೊಂಡಿದ್ದರಿಂದ ನಾನೇ ಖುದ್ದು, ವಾಣಿಜ್ಯ ಮಂಡಳಿಗೆ ಬಂದು, ಅಧ್ಯಕ್ಷರೊಂದಿಗೆ ತಪ್ಪಿನ ಬಗ್ಗೆ ಹೇಳಿಕೊಂಡಿದ್ದೇನೆ.

 ನಾನು ನಡೆಸಿಕೊಟ್ಟ ಆ ಶೋನಿಂದ ದೊಡ್ಡ ತಪ್ಪಾಗಿದೆ. ನಮ್ಮ ಕಡೆಯಿಂದ ಕ್ಷಮೆ ಇರಲಿ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ತಪ್ಪು ನಡೆಯುವುದಿಲ್ಲ. ಆ ಸಮಯದಲ್ಲಿ ಅವರೆಲ್ಲರೂ ಕನ್ನಡಿಗರನ್ನು ಅವಮಾನಿಸುವಾಗ, ನೀವು ಯಾಕೆ ಸುಮ್ಮನಿದ್ದಿರಿ ಎಂಬ ಪ್ರಶ್ನೆಗಳು ಬಂದವು. ಆದರೆ, ಆ ಕ್ಷಣಕ್ಕೆ ನನಗೇನೂ ಹೊಳೆಯಲಿಲ್ಲ. ಹಾಗಾಗಿ, ನಮ್ಮಿಂದ ಆದಂತಹ ತಪ್ಪನ್ನು ಕ್ಷಮಿಸಿ. ಇನ್ನು ಮುಂದೆ ಯಾವತ್ತೂ ಕನ್ನಡಿಗರ ಮನಸ್ಸಿಗೆ ನೋವಾಗದಂತೆ ಎಚ್ಚೆತ್ತುಕೊಳ್ಳುತ್ತೇನೆ. ನಾನು ಇಷ್ಟು ದಿನಗಳ ಕಾಲ ಆರ್‌ಜೆ ಆಗಿ, ಕನ್ನಡ ಚಿತ್ರರಂಗದ ಪರ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಶೋ ನಡೆಸಿ, ಹಲವು ಚಿತ್ರಗಳ ಪ್ರಚಾರ ಮಾಡಿದ್ದೇನೆ. ಈಗ ಆಗಿರುವ ತಪ್ಪನ್ನು ಕ್ಷಮಿಸಿಬಿಡಿ’ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.

ಈ ವೇಳೆ ಸಾ.ರಾ.ಗೋವಿಂದು, “ರಶ್ಮಿ ನನಗೇ ದೂರವಾಣಿ ಕರೆ ಮಾಡಿ, ಭೇಟಿ ಮಾಡಿದ್ದಾರೆ. ನಡೆದ ಘಟನೆ ಬಗ್ಗೆ ಸಂಪೂರ್ಣ ವಿವರಿಸಿದ್ದಾರೆ. ಇದು ದೊಡ್ಡ ಅಪರಾಧ.ಆದರೂ, ಅಪರಾಧ ಒಪ್ಪಿದ್ದಾರೆ. ಕನ್ನಡಿಗರಲ್ಲಿ ಕ್ಷಮೆ ಕೋರಿದ್ದಾರೆ. ಇನ್ನೊಮ್ಮೆ ಇಂತಹ ತಪ್ಪು ನಡೆಯುವುದಿಲ್ಲ ಎಂಬ ಭರವಸೆ ಕೊಟ್ಟಿದ್ದಾರೆ. ಕನ್ನಡಿಗರು ಪ್ರೀತಿಸುವಂತಹ ಕೆಲಸ ಮಾಡಬೇಕು’ ಎಂದು ಕಿವಿ ಮಾತು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next