Advertisement

ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು

11:48 AM Aug 08, 2020 | Suhan S |

ಶ್ರೀರಂಗಪಟ್ಟಣ: ಕಳೆದ ವಾರದಿಂದ ಕೊಡಗಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ಪ್ರವಾಹದಂತೆ ಹರಿದುಬರುವ ನೀರನ್ನು ಜಲಾಶಯದಲ್ಲಿ ಇರಿಸಿಕೊಳ್ಳಲಾಗದೆ ಜಲಾಶಯದಿಂದ 30 ಸಾವಿರಕ್ಕೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ.

Advertisement

ಜಲಾಶಯದ ಕೆಳಭಾಗದ ಸಾರ್ವಜನಿಕರಿಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದ್ದು ಸಾರ್ವಜನಿಕರು ನದಿ ಪಾತ್ರದತ್ತ ಹೋಗದಿರಲು ಜಿಲ್ಲಾಧಿಕಾರಿಗಳ ಮೂಲಕ ನದಿ ಪಾತ್ರದ ಹಳ್ಳಿಗಳಿಗೆ ಸೂಚನೆ ನೀಡಲಾಗಿದೆ. ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಪ್ರಸ್ತುತ 50 ಸಾವಿರ ಕ್ಯೂಸೆಕ್‌ ಹೆಚ್ಚುವರಿ ನೀರು ಬಿಡಲಾಗಿದ್ದು ಜಲಾಶಯದ ನೀರಿನ ಮಟ್ಟ ಕಾಪಾಡಿಕೊಳ್ಳಲು ನೀರಾವರಿ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ  ಜಲಾಶಯದಿಂದ ಕಾವೇರಿ ನದಿಗೆ 30 ಸಾವಿರ ಕ್ಯೂಸೆಕ್‌ ನೀರನ್ನು ಶುಕ್ರವಾರ ಸಂಜೆ ಹೊರಬಿಡಲಾಗಿದೆ ಎಂದು ಕಾವೇರಿ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ ಶಂಕರೇಗೌಡ ತಿಳಿಸಿದ್ದಾರೆ.

ಜಲಾಶಯದ ಗರಿಷ್ಟ ಮಟ್ಟ 124.80 ಅಡಿಯಾಗಿದ್ದು ಪ್ರಸ್ತುತ ಜಲಾಶಯದಲ್ಲಿ  115.90 ಅಡಿ ನೀರಿದೆ. ಜಲಾಶಯಕ್ಕೆ 55,563ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 33,271ಕ್ಯೂಸೆಕ್‌ ನೀರು ಹೊರ ಬಿಡಲಾಗಿದೆ. ಜಲಾಶಯ ದಲ್ಲಿ 38.084 ಟಿಎಂಸಿ ನೀರು ಸಂಗ್ರಹವಾಗಿದೆ.

ಸ್ಥಗಿತ: ಪ್ರಸಿದ್ಧ ಪ್ರವಾಸಿ ತಾಣ ಪಕ್ಷಿಧಾಮದಲ್ಲಿ ಕೊರೊನಾ ಹಿನ್ನೆಲೆ ಈಗಾಗಲೇ ಲಾಕ್‌ಡೌನ್‌ ಆದಾಗಿನಿಂದ ಪ್ರವಾಸಿಗರ ಪ್ರವೇಶ ಇರಲಿಲ್ಲ. ಇದರಿಂದ ಪಕ್ಷಿಧಾಮದ ದೋಣಿ ವಿಹಾರಗಳೆಲ್ಲವೂ ಸ್ಥಗಿತಗೊಂಡಿದ್ದವು. 30 ಸಾವಿರ ಕ್ಯೂಸೆಕ್‌ ನೀರು ನದಿಗೆ ಬಿಟ್ಟಿದ್ದರಿಂದ ಪಕ್ಷಿಧಾಮದಲ್ಲಿ ವಾಸಿಸುವ ಪಕ್ಷಿಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next