Advertisement

ಸರಕು ವಾಹನಗಳ ನಕಲಿ ಕ್ಲೀನರ್‌ಗಳಿಂದ ಅಪಾಯ

01:28 PM Apr 29, 2020 | Sriram |

ಕೋಟ: ಲಾಕ್‌ಡೌನ್‌ ಹೊರ ತಾಗಿಯೂ ತುರ್ತು ಸೇವೆಯ ನೆಲೆಯಲ್ಲಿ ಸರಕು ಸಾಗಣೆ ವಾಹನಗಳಿಗೆ ಹೊರ ಜಿಲ್ಲೆ ಮತ್ತು ರಾಜ್ಯಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಈ ವಾಹನಗಳಲ್ಲಿ “ನಕಲಿ ಕ್ಲೀನರ್‌’ಗಳಾಗಿ ಅಕ್ರಮವಾಗಿ ಊರಿಂದೂರಿಗೆ ಸಂಚರಿಸುವ ಜನರಿಂದ ಕೋವಿಡ್ 19 ಹರಡುವ ಭೀತಿ ಉಂಟಾಗಿದೆ.

Advertisement

ಸರಕು ಸಾಗಣೆ ವಾಹನಗಳಿಗೆ ಮುಕ್ತ ಅವಕಾಶ ನೀಡಬೇಕೆನ್ನುವ ಆದೇಶದಿಂದಾಗಿ ಇಂತಹ ವಾಹನ ಗಳನ್ನು ಚೆಕ್‌ಪೋಸ್ಟ್‌ಗಳಲ್ಲಿಯೂ ಸರಿಯಾಗಿ ತಪಾಸಣೆ ನಡೆಸುತ್ತಿಲ್ಲ. ಇದನ್ನೇ ಬಳಸಿಕೊಂಡು ವಾಹನ ಚಾಲಕರ ನೆರವಿನೊಂದಿಗೆ “ನುಸುಳುಕೋರರು’ ಹೊರ ಪ್ರದೇಶಗಳಿಗೆ ಹೋಗುತ್ತಿದ್ದಾರೆ.

ಇದೇ ರೀತಿ ಕೋವಿಡ್ 19 ಬಾಧಿತ ವ್ಯಕ್ತಿ ಯೋರ್ವ ಮುಂಬಯಿಯಿಂದ ಮಂಡ್ಯಕ್ಕೆ ಪ್ರಯಾಣಿಸಿ ರಾಷ್ಟ್ರೀಯ ಹೆದ್ದಾರಿ 66ರ ದಾರಿಯಲ್ಲೆಲ್ಲ ಭಯವನ್ನು ಬಿತ್ತಿದ್ದಾನೆ.

ಇದೇ ರೀತಿ ಇತ್ತೀಚೆಗೆ ಉಡುಪಿಯ ಸಾಸ್ತಾನ ಸಮೀಪದ ವ್ಯಕ್ತಿಯೋರ್ವ ಲಾಕ್‌ಡೌನ್‌ ನಡುವೆ ಮೈಸೂರಿನಿಂದ ಹುಟ್ಟೂರು ಸೇರಿದ್ದ. ಆತನನ್ನು ವಿಚಾರಿಸಿದಾಗ ಸರಕುವಾಹನದಲ್ಲಿ ಬಂದಿರುವುದಾಗಿ ಒಪ್ಪಿಕೊಂ ಡಿದ್ದು ಕ್ವಾರಂಟೈನ್‌ಗೆ ಒಳಪಡಿಸಲಾಯಿತು. ಇಂತಹ ಹಲವು ಪ್ರಕರಣ ನಡೆಯುತ್ತಿವೆ.

ಸರಕು ವಾಹನದಲ್ಲಿ ಚಾಲಕ ಹಾಗೂ ಕ್ಲೀನರ್‌ಗೆ ಅವಕಾಶವಿದೆ. ಲಾಕ್‌ಡೌನ್‌ ಆರಂಭವಾದ ಮೇಲೆ ಕೆಲವು ವಾಹನಗಳಲ್ಲಿ ಚಾಲಕ ಮಾತ್ರ ಇದ್ದು ಆತ ಹಣದಾಸೆಗಾಗಿ ಕ್ಲೀನರ್‌ ಎಂದು ಹೇಳಿಕೊಂಡು ಬೇರೆಯವರನ್ನು ಕರೆದೊಯ್ಯುವುದು ಕಂಡುಬರುತ್ತಿದೆ. ಈ ರೀತಿಯ ಪ್ರಯಾಣಕ್ಕೆ ಮುಂಬಯಿಯಿಂದ ಉಡುಪಿಗೆ 5-6 ಸಾವಿರ ರೂ., ಮೈಸೂರಿನಿಂದ ಉಡುಪಿಗೆ 2-3 ಸಾವಿರ ರೂ. ಪಡೆಯುತ್ತಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇದು ರಾಜ್ಯಾದ್ಯಂತ ನಡೆಯುತ್ತಿದೆ. ಕೆಲವು ತರಕಾರಿ ಸಾಗಾಟದ ವಾಹನಗಳಲ್ಲಿ ಹಿಂಬದಿ ಜನರನ್ನು ಕುಳಿತುಕೊಳ್ಳಿಸಿ ಅವರಿಗೆ ಅಡ್ಡವಾಗಿ ಕ್ರೇಟ್‌ಗಳನ್ನು ಜೋಡಿಸಿ ಸಾಗಿಸುತ್ತಿರುವ ದೂರುಗಳೂ ಬಂದಿದ್ದವು.

Advertisement

ಸ್ವಯಂ ಅಪಾಯಕ್ಕೂ ಕಾರಣ
ಚಾಲಕರು ಅಲ್ಪ ಹಣದ ಆಸೆಗಾಗಿ ಈ ರೀತಿ ಅಪರಿಚಿತರನ್ನು ಕರೆದುಕೊಂಡು ಬರುತ್ತಿರುವುದರಿಂದ ಸ್ವತಃ ಅವರೂ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಮಂಡ್ಯಕ್ಕೆ ವ್ಯಕ್ತಿಯನ್ನು ಕರೆತಂದ ಚಾಲಕನನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮಾತ್ರವಲ್ಲದೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇನ್ನಷ್ಟೇ ವರದಿ ಬರಬೇಕಿದೆ.

ಚೆಕ್‌ಪೋಸ್ಟ್‌ನಲ್ಲೂ ಸರಳ ತಪಾಸಣೆ
ಆವಶ್ಯಕ ಸಾಮಗ್ರಿಗಳ ಸಾಗಾಟ ಮಾಡುವವರಿಗೆ ಚೆಕ್‌ಪೋಸ್ಟ್‌ನಲ್ಲಿ ಸಮಸ್ಯೆ ಮಾಡಬಾರದು ಎನ್ನುವ ಸರಕಾರದ ಆದೇಶ ಅಕ್ರಮವೆಸಗುವ ಇಂತಹ ವಾಹನಗಳಿಗೆ ವರದಾನವಾಗಿದೆ. ಒಂದು ವೇಳೆ ಪೊಲೀಸರು ತಪಾಸಣೆ ನಡೆಸಿದರೆ ತುರ್ತು ವಾಹನಗಳಿಗೂ ಕಿರುಕುಳ ನೀಡಲಾಗುತ್ತಿದೆ ಎಂದು ಮೇಲಧಿಕಾರಿಗಳಿಗೆ ದೂರು ನೀಡಿ ತಪಾಸಣೆಗೆ ಮುಂದಾದ ಸಿಬಂದಿಯನ್ನೇ ತಪ್ಪಿತಸ್ಥನನ್ನಾಗಿ ಮಾಡುವ ಪ್ರಕರಣಗಳು ನಡೆಯುತ್ತಿವೆ.

ಗುರುತು ಪತ್ರ ಅಗತ್ಯ
ಸರಕು ಸಾಗಾಟ ವಾಹನದ ಚಾಲಕ, ಕ್ಲೀನರ್‌ಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ವತಿಯಿಂದ ಭಾವಚಿತ್ರವನ್ನೊಳಗೊಂಡ ಗುರುತುಪತ್ರ ನೀಡುವ ವ್ಯವಸ್ಥೆಯನ್ನು ಸರಕಾರ ಜಾರಿಗೊಳಿಸಬೇಕು. ಪಾಸ್‌ ಹೊಂದಿ ದವರ ಹೊರತು ಬೇರೆಯವರ ಪ್ರಯಾಣಕ್ಕೆ ಅವಕಾಶ ನೀಡಬಾರದು. ತುರ್ತು ಸೇವೆಯ ವಾಹನಗಳನ್ನು ಕೂಡ ಸಮಗ್ರವಾಗಿ ಪರಿಶೀಲಿಸಿ, ಅಕ್ರಮಗಳು ಕಂಡುಬಂದರೆ ಕಠಿನ ಕ್ರಮ ಕೈಗೊಳ್ಳುವಂತಾಗಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸರಕು ಸಾಗಾಟದ ವಾಹನಗಳಲ್ಲಿ ಅಕ್ರಮ ಪ್ರಯಾಣವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ವಾಹನಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಸರಕಾರದ ಮೂಲಕ ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next