Advertisement

ಧನುಷ್‌ ಚಿತ್ರಕ್ಕೆ ರಿಷಿ ನಾಯಕ

11:56 AM May 09, 2018 | |

ತಮಿಳು ನಟ ಧನುಷ್‌, ಅಭಿನಯದ ಜೊತೆಗೆ ತಮ್ಮ ಬ್ಯಾನರ್‌ನಲ್ಲಿ ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಇದುವರೆಗೆ ತಮಿಳು ಚಿತ್ರಗಳನ್ನು ನಿರ್ಮಿಸುತ್ತಿದ್ದ ಧನುಷ್‌, ಈಗ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಕನ್ನಡದಲ್ಲೊಂದು ಚಿತ್ರ ನಿರ್ಮಿಸುವ ತಯಾರಿ ಮಾಡಿಕೊಂಡಿದ್ದಾರೆ ಧನುಷ್‌. ಅವರೊಂದಿಗೆ ನಿರ್ಮಾಣದಲ್ಲಿ ಜೇಕಬ್‌ ವರ್ಗೀಸ್‌ ಕೂಡ ಕೈ ಜೋಡಿಸಿದ್ದಾರೆ ಎಂಬುದು ವಿಶೇಷ. 

Advertisement

ಎಲ್ಲಾ ಸರಿ, ಧನುಷ್‌ ಬ್ಯಾನರ್‌ನಲ್ಲಿ ನಟಿಸುತ್ತಿರುವ ಹೀರೋ ಯಾರು ಗೊತ್ತಾ? ಅದು ರಿಷಿ. “ಆಪರೇಷನ್‌ ಅಲಮೇಲಮ್ಮ’ ಮೂಲಕ ಗುರುತಿಸಿಕೊಂಡಿದ್ದ ನಾಯಕ ರಿಷಿ, ಪುನೀತ್‌ ರಾಜಕುಮಾರ್‌ ನಿರ್ಮಾಣದ ಹೇಮಂತ್‌ ಕುಮಾರ್‌ ನಿರ್ದೇಶನದ “ಕವಲು ದಾರಿ’ಗೆ ಹೀರೋ ಆಗಿದ್ದರು. ಆ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗ ಬಿಡುಗಡೆಯ ತಯಾರಿಯಲ್ಲಿದೆ. ಈಗ ಧನುಷ್‌ ಬ್ಯಾನರ್‌ನಲ್ಲಿ ತಯಾರಾಗಲಿರುವ ಚಿತ್ರಕ್ಕೆ ರಿಷಿ ಹೀರೋ ಆಗಿದ್ದಾರೆ.

ಈ ಚಿತ್ರವನ್ನು ಇಸ್ಲಾಂವುದ್ದೀನ್‌ ನಿರ್ದೇಶಿಸುತ್ತಿದ್ದಾರೆ. ಯುಕೆಯ ಫಿಲ್ಮ್ ಅಕಾಡೆಮಿಯಲ್ಲಿ ನಿರ್ದೇಶನ ಕೋರ್ಸ್‌ ಮಾಡಿರುವ ಇಸ್ಲಾಂವುದ್ದೀನ್‌ ಅವರಿಗೆ ಕನ್ನಡದಲ್ಲಿ ಇದು ಮೊದಲ ನಿರ್ದೇಶನದ ಚಿತ್ರ. ಇದಕ್ಕೂ ಹಿಂದೆ ಸಾಕಷ್ಟು ಜಾಹಿರಾತುಗಳನ್ನು ನಿರ್ದೇಶಿಸಿದ್ದಾರೆ. ಬಾಲಿವುಡ್‌ನ‌ಲ್ಲಿ ಶೇಖರ್‌ ಕಪೂರ್‌ ಬಳಿ ಕೆಲಸ ಮಾಡಿದ ಅನುಭವ ಹೊಂದಿರುವ ಇಸ್ಲಾಂವುದ್ದೀನ್‌, ಹೊಸ ಬಗೆಯ ಕಥೆ ಹೆಣೆದಿದ್ದಾರೆ. ಅದೊಂದು ಪಕ್ಕಾ ಕಾಮಿಡಿ ಡ್ರಾಮಾ ಇರುವ ಸಿನಿಮಾ.

ಜೊತೆಯಲ್ಲಿ ಲವ್‌, ಎಮೋಷನ್ಸ್‌ ಎಲ್ಲವೂ ಒಳಗೊಂಡಿದೆ. ಧನುಷ್‌ ಅವರಿಗೆ ಇಸ್ಲಾಂವುದ್ದೀನ್‌ ಹೇಳಿದ ಕಥೆ ಇಷ್ಟವಾಗಿದ್ದರಿಂದ ಅವರು ಕನ್ನಡದಲ್ಲಿ ಈ ಚಿತ್ರ ಮಾಡುವ ಮನಸ್ಸು ಮಾಡಿದ್ದಾರೆ. ಚಿತ್ರಕ್ಕನ್ನೂ ಶೀರ್ಷಿಕೆ ಇಟ್ಟಿಲ್ಲ. ತಂತ್ರಜ್ಞರ ಹಾಗು ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮೇ ಅಂತ್ಯದಲ್ಲಿ ಧನುಷ್‌ ನಿರ್ಮಾಣದ ಹೊಸ ಚಿತ್ರಕ್ಕೆ ಚಾಲನೆ ಸಿಗಲಿದೆ.

ರಿಷಿ ಸದ್ಯಕ್ಕೆ ಖುಷಿಯಲ್ಲಿದ್ದಾರೆ. “ಆಪರೇಷನ್‌ ಅಲಮೇಲಮ್ಮ’ ಮಾಡಿದ್ದೇ ತಡ, ಪುನೀತ್‌ ಬ್ಯಾನರ್‌ನಲ್ಲಿ ಕೆಲಸ ಮಾಡುವ ಅದೃಷ್ಟ ಅವರದ್ದಾಗಿದೆ. ಆ ಚಿತ್ರ ಮುಗಿಯುತ್ತಿದ್ದಂತೆಯೇ, ಈಗ ಧನುಷ್‌ ನಿರ್ಮಾಣದ ಚಿತ್ರದಲ್ಲಿ ನಟಿಸುವ ಖುಷಿಯಲ್ಲಿದ್ದಾರೆ. “ಕವಲು ದಾರಿ’ ಚಿತ್ರದಲ್ಲಿ ರಿಷಿ ಇನ್ಸ್‌ಪೆಕ್ಟರ್‌ ಪಾತ್ರ ನಿರ್ವಹಿಸಿದ್ದಾರೆ. ಅದೊಂದು ಔಟ್‌ ಅಂಡ್‌ ಔಟ್‌ ಥ್ರಿಲ್ಲರ್‌ ಸಿನಿಮಾ. “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಮಾಡಿದ್ದ ಹೇಮಂತ್‌, ಅದೇ ತಂಡ ಕಟ್ಟಿಕೊಂಡು “ಕವಲು ದಾರಿ’ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next