Advertisement

ದಶಕದ ಬೇಡಿಕೆಗೆ ಮರುಜೀವ

12:04 AM Nov 20, 2020 | mahesh |

ನೆರೆ ರಾಜ್ಯಗಳ ಹಿಡಿತದಲ್ಲಿರುವ ರೈಲ್ವೇ ವಲಯಕ್ಕೆ ಒಳಪಟ್ಟ ಕರಾವಳಿ ಭಾಗದ ರೈಲ್ವೇ ಬೇಡಿಕೆಗೆ ಪ್ರಾತಿನಿಧ್ಯ ಸಿಗಬೇಕಾದರೆ ಮಂಗಳೂರು ಪ್ರತ್ಯೇಕ ವಲಯವಾಗಬೇಕು. ಈ ಕೂಗು ಹಲವು ವರ್ಷಗಳದ್ದು. ಅದಿನ್ನೂ ಈಡೇರಿಲ್ಲ. ಕೊನೇಪಕ್ಷ ಮಂಗಳೂರು ವಲಯ ರಚನೆಗೆ ಪೂರಕವೆನಿಸುವ ಕರಾವಳಿ ಭಾಗದ ಉಳ್ಳಾಲ ಸೇತುವೆಯಿಂದ ತೋಕೂರುವರೆಗಿನ 30 ಕಿ.ಮೀ. ವ್ಯಾಪ್ತಿಯನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರಿಸಬೇಕಿದೆ. ಈ ಅಗತ್ಯವನ್ನು ಮನಗಂಡು ರೈಲ್ವೇ ಮಂಡಳಿಯು ಒಪ್ಪಿಗೆ ನೀಡಿದ್ದು, ಅಧಿಸೂಚನೆ ಹೊರಡಿಸಬೇಕಿದೆ. ಇದಕ್ಕೆ ಸಂಬಂಧಪಟ್ಟ ಕಡತ 6 ವರ್ಷಗಳಿಂದ ಒಂದಿಂಚೂ ಅಲುಗಾಡಿಲ್ಲ. ಈಗ ಮಂಗಳೂರನ್ನು ನೈಋತ್ಯ ವಲಯಕ್ಕೆ ಸೇರಿಸಲು ಕರಾವಳಿಗರು ಸಂಘಟಿತರಾಗಬೇಕಿದೆ. ಜನಪ್ರತಿನಿಧಿಗಳೂ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕರಾವಳಿಗರ ಬೇಡಿಕೆಯನ್ನು ಸರಕಾರಗಳಿಗೆ ತಲುಪಿಸಿ ಕನಸು ನನಸಾಗಿಸುವುದೇ ಉದಯವಾಣಿ ಅಭಿಯಾನದ ಆಶಯ.

Advertisement

ಮಂಗಳೂರು: ಶತಮಾನದ ಇತಿಹಾಸ ಹೊಂದಿ ರುವ ಮಂಗಳೂರಿನ ರೈಲ್ವೇಯ ಬಡತನ ಕೇಳುವಂತಿಲ್ಲ. ಯಾಕೆಂದರೆ ಇದುವರೆಗೂ ಆಡಳಿತಾತ್ಮಕವಾಗಿ ತನ್ನದೇ ಆದ ಒಂದು ಪ್ರಬಲ ವ್ಯವಸ್ಥೆಯನ್ನು ಹೊಂದಿಯೇ ಇಲ್ಲ. ಆದ ಕಾರಣ ರೈಲ್ವೇ ಸೇವೆ ಕರಾವಳಿ ಜನತೆಗೆ ವರವಾಗಿಲ್ಲ. ಮೂರು ವಿಭಾಗಗಳಲ್ಲಿ ಹಂಚಿಹೋಗಿರುವ ಮಂಗಳೂರು ರೈಲ್ವೇ ವಿಭಾಗ ಪ್ರತ್ಯೇಕ ರೈಲ್ವೇ ವಲಯವೂ ಆಗಲಿಲ್ಲ, ಅತ್ತ ನೈಋತ್ಯ ವಲಯಕ್ಕೂ ಸೇರದೆ ತ್ರಿಶಂಕು ಸ್ಥಿತಿಯಲ್ಲಿದೆ.

ಮಂಗಳೂರು ರೈಲ್ವೇಯ ವ್ಯಾಪ್ತಿಯು ಪ್ರಸ್ತುತ ದಕ್ಷಿಣ ರೈಲ್ವೇ ವಲಯ, ಮಹಾರಾಷ್ಟ್ರ ಮತ್ತು ಗೋವಾದ ಪಾರುಪತ್ಯ ಹೊಂದಿರುವ ಕೊಂಕಣ ರೈಲ್ವೇ ನಿಗಮ ಹಾಗೂ ನೈಋತ್ಯ ರೈಲ್ವೇ ವಲಯದಲ್ಲಿ ಹಂಚಿಹೋಗಿದೆ. ಆದ್ದರಿಂದ ವ್ಯವಸ್ಥಿತ, ಸರ್ವಾಂ ಗೀಣ ಅಭಿವೃದ್ಧಿ ದೊಡ್ಡ ಕೊರತೆಯಾಗಿದೆ. ಪ್ರತೀ ಬಾರಿ ಈ ಭಾಗದ ಜನರ ರೈಲ್ವೇ ಬೇಡಿಕೆಗಳು ಅಥವಾ ರೈಲು ಸೌಲಭ್ಯ ಗಳ ವಿಚಾರ ಬಂದಾಗ ಕೇಳು ವವರೇ ಇಲ್ಲ ವಾಗಿದೆ. ಹಾಗಾಗಿ ಅನ್ಯಾಯ- ತಾರತಮ್ಯ ಸಾಮಾನ್ಯವಾಗಿದೆ.

ಮಂಗಳೂರು ರೈಲ್ವೇ ಭಾಗವನ್ನು ಹೊಸ ವಲಯವನ್ನಾಗಿ ಘೋಷಿ ಸು ವಂತೆ ಕರಾವಳಿಗರು ಆಗ್ರಹಿಸು ತ್ತಿದ್ದಾರೆ. ಆದರೆ ಅದಕ್ಕೆ ದಕ್ಷಿಣ ರೈಲ್ವೇ ಮತ್ತು ಕೇರಳದಿಂದ ತಡೆ ಯಾಗು ತ್ತಿದೆ. ಮಂಗಳೂರು ರೈಲ್ವೇ ವಲಯ ರಚನೆ ಕೂಗು ಜೋರಾದಾಗ ತಾಂತ್ರಿಕ ಸಬೂಬು ನೀಡಿ ನಿರಾ ಕರಿಸ ಲಾಗುತ್ತಿದೆ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹೋರಾಟಗಾರರೂ ಮತ್ತೆ ಸಂಘಟಿತ ರಾಗಬೇಕಿದೆ. ಅದಕ್ಕಿಂತ ಮೊದಲು ಕನಿಷ್ಠ ಮಂಗಳೂರು ವಿಭಾಗವನ್ನು ನೈಋತ್ಯ ರೈಲ್ವೇಗೆ ಸೇರಿಸಲು ಹೋರಾಟ ರೂಪಿಸಬೇಕಾಗಿದೆ.

ಶತಮಾನದ ಇತಿಹಾಸ
ಮಂಗಳೂರಿನ ರೈಲ್ವೇ ಸಂಪರ್ಕ ಜಾಲ 1907ರಲ್ಲಿ ಆರಂಭಗೊಂಡಿದ್ದು, ಶತಮಾನದ ಇತಿಹಾಸವಿದೆ. ಆದರೆ ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ರೈಲ್ವೇ ಜಾಲ ಹೆಚ್ಚು ಅಭಿವೃದ್ಧಿಯಾಗಿಯೇ ಇಲ್ಲ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ರೈಲ್ವೇ ಸೌಲಭ್ಯಗಳಿಂದ ವಂಚಿತವಾಗಿವೆ. ರೈಲ್ವೇ ಇಲಾಖೆಯು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಅಸಮಾಧಾನ ಸಹಜವಾಗಿಯೇ ಈ ಭಾಗದ ಜನರಲ್ಲಿ ಈಗಲೂ ಇದೆ.

Advertisement

ಕೇಂದ್ರ ಸರಕಾರ ಮತ್ತು ರೈಲ್ವೇ ಮಂಡಳಿಯ ನಿರಂತರ ನಿರ್ಲಕ್ಷ್ಯವೇ ಮಂಗಳೂರು ರೈಲ್ವೇ ವಿಭಾಗದ ಬೇಡಿಕೆ ಹುಟ್ಟಲು ಕಾರಣ. ಒಂದು ರೈಲು ವಲಯ ರಚಿಸಬೇಕಾದರೆ ಕನಿಷ್ಠ 600ರಿಂದ 700 ಕಿ.ಮೀ. ವ್ಯಾಪ್ತಿ ಹೊಂದಿರಬೇಕು. ಆದರೆ ದಕ್ಷಿಣ ರೈಲ್ವೇ ವಲಯಕ್ಕೆ ಒಳಪಟ್ಟಿರುವ ಮಂಗಳೂರು ವಿಭಾಗ ರಚನೆಗೆ ಇಷ್ಟೊಂದು ವ್ಯಾಪ್ತಿ ಹೊಂದಿಲ್ಲ ಎಂಬ ಕಾರಣ ನೀಡಿ ಜನರ ಬೇಡಿಕೆಯನ್ನು ಅವಗಣಿಸಲಾಗುತ್ತಿದೆ.

ಪ್ರಸ್ತಾವ ಮತ್ತೆ ಮುನ್ನೆಲೆಗೆ
ತೋಕೂರು ಮತ್ತು ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣವನ್ನು ಒಳಗೊಂಡ ಮಂಗಳೂರು ಸಂಕೀರ್ಣವನ್ನು ನೈಋತ್ಯ ರೈಲ್ವೇ ವ್ಯಾಪ್ತಿಯಲ್ಲಿರುವ ಮೈಸೂರು ವಿಭಾಗಕ್ಕೆ ಜೋಡಿಸುವ ಈ ಹಿಂದಿನ ಪ್ರಸ್ತಾವ ಈಗ ಮುನ್ನೆಲೆಗೆ ಬಂದಿದೆ. ಈ ಬೇಡಿಕೆಯೂ ಹೊಸದೇನಲ್ಲ, ಸುಮಾರು 16 ವರ್ಷಗಳಷ್ಟು ಹಳೆಯದು. ಈಗ ಇದಾದರೂ ಈಡೇರಬೇಕೆಂಬ ಕೂಗು ಜೋರಾಗುತ್ತಿದೆ. ಏಕೆಂದರೆ ತೋಕೂರಿನಿಂದ ಮಂಗಳೂರು ಸೆಂಟ್ರಲ್‌ ವರೆಗಿನ ವ್ಯಾಪ್ತಿಯನ್ನು ನೈಋತ್ಯ ವಲಯಕ್ಕೆ ಸೇರಿಸಲು 2004ರಲ್ಲಿ ರೈಲ್ವೇ ಮಂಡಳಿ ಆದೇಶಿಸಿತ್ತು. ಆದರೆ ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಹಳಿ ಪರಿವರ್ತನೆ ನಡೆಯತ್ತಿದ್ದ ಕಾರಣ ಅಧಿಸೂಚನೆ ಹೊರಡಿಸಿರಲಿಲ್ಲ.

ಆ ಬಳಿಕ ಇತರ ರೈಲ್ವೇ ವಲಯಗಳ ತೀವ್ರ ಲಾಬಿಯೂ ಸಹಿತ ಹಲವಾರು ಕಾರಣಗಳಿಂದ ಆದೇಶ ಜಾರಿಯಾಗಲೇ ಇಲ್ಲ. ಈ ಮಧ್ಯೆ 2004ರ ಆದೇಶವನ್ನು ಜಾರಿಗೊಳಿಸಲು ಅವಕಾಶ ಕೋರಿ ನೈಋತ್ಯ ರೈಲ್ವೇ ವಲಯವು 2014ರಲ್ಲಿ ಮತ್ತೆ ರೈಲ್ವೇ ಮಂಡಳಿಗೆ ಮನವಿ ಮಾಡಿತು. ಪ್ರಯೋಜನವಾಗಿರಲಿಲ್ಲ. ಈಗ ಮತ್ತೆ ಫೆಬ್ರವರಿಯಲ್ಲಿ ನೈಋತ್ಯ ರೈಲ್ವೇ ವಲಯದವರು ಆದೇಶ ಜಾರಿಗೊಳಿಸಲು ಕೋರಿದರು. ಎಂಟು ತಿಂಗಳಾದರೂ ಇದಕ್ಕೆ ಸಂಬಂಧಿಸಿದ ಕಡತ ಅಲುಗಾಡದಿರುವುದು ಕರಾವಳಿಗರನ್ನು ಮತ್ತೆ ರೊಚ್ಚಿಗೆಬ್ಬಿಸಿದೆ.

ಪೇಶಾವರಕ್ಕೆ ರೈಲು ಸಂಚಾರ ಇತಿಹಾಸ
1907ರಲ್ಲಿ ಮದ್ರಾಸ್‌-ಮಂಗಳೂರು ರೈಲುಮಾರ್ಗ ಆರಂಭಗೊಂಡಿದ್ದು ಮದ್ರಾಸ್‌ನ ಗವರ್ನರ್‌ ಮಂಗಳೂರಿಗೆ ಬಂದು ವೆಸ್ಟ್‌ಕೋಸ್ಟ್‌ ರೈಲು ಅನ್ನು ಉದ್ಘಾಟಿಸಿದ್ದರು. ಆಗ ದೇಶದಲ್ಲಿದ್ದ 3 ರೈಲುಗಳ ಪೈಕಿ ಇದು ಒಂದಾಗಿತ್ತು. 1929ರಲ್ಲಿ ಇಲ್ಲಿಂದ ಪೇಶಾವರಕ್ಕೆ ಗ್ರ್ಯಾಂಡ್‌ ಟ್ರಂಕ್‌ ರೈಲು ಆರಂಭಗೊಂಡಿತು ಮತ್ತು ಭಾರತ ಉಪಖಂಡದ ಅತ್ಯಂತ ಉದ್ದದ ರೈಲು ಸಂಚಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1930ರಲ್ಲಿ ಈಗಿನ ರೈಲು ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2007ರಲ್ಲಿ ಶತಮಾನೋತ್ಸವ ಆಚರಿಸಲಾಯಿತು. 1979ರಲ್ಲಿ ಹಾಸನ-ಮಂಗಳೂರು, 1983ರಲ್ಲಿ ಮಂಗಳೂರು-ಎನ್‌ಎಂಪಿಟಿ, 1996ರಲ್ಲಿ ಮಂಗಳೂರು-ರೋಹಾ ( ಕೊಂಕಣ್‌ ಎಕ್ಸ್‌ಪ್ರೆಸ್‌) ರೈಲು ಪ್ರಾರಂಭವಾಯಿತು. ಜಾರ್ಜ್‌ ಫೆರ್ನಾಂಡೀಸ್‌ ಅವರ ಪ್ರಬಲ ಇಚ್ಛಾಶಕ್ತಿಯೊಂದಿಗೆ ಕೊಂಕಣ ರೈಲ್ವೇ ಯೋಜನೆಯನ್ನು ಕಾರ್ಯಗತಗೊಳಿಸದಿರುತ್ತಿದ್ದರೆ ಕರಾವಳಿಯ ರೈಲು ಸಂಪರ್ಕದ ಸ್ಥಿತಿ ಇನ್ನೂ ಶೋಚನೀಯವಾಗಿರುತ್ತಿತ್ತು.

3 ರೈಲ್ವೇ ವಲಯದ ವ್ಯಾಪ್ತಿಗೆ
ಉಳ್ಳಾಲ ಸೇತುವೆಯಿಂದ ತೋಕೂರುವರೆಗಿನ 30 ಕಿ.ಮೀ. ಮಾರ್ಗವು ದಕ್ಷಿಣ ರೈಲ್ವೇ ವಲಯಕ್ಕೆ ಸೇರಿಕೊಂಡಿದ್ದರೆ, ಮಹಾರಾಷ್ಟ್ರ ಮತ್ತು ಗೋವಾದ ಕಡೆಯಿಂದ ಹೆಚ್ಚಿನ ರೈಲುಗಳು ಬಂದು ಹೋಗುವ ತೋಕೂರು ನಿಲ್ದಾಣವು ಕೊಂಕಣ ರೈಲ್ವೇಗೆ ಸೇರಿದೆ. ಬೆಂಗಳೂರು- ಹಾಸನದ ಕಡೆಯಿಂದ ಬರುವ ಪಡೀಲ್‌ವರೆಗಿನ ರೈಲ್ವೇ ವ್ಯಾಪ್ತಿಯು ನೈಋತ್ಯ ರೈಲ್ವೇ ವಲಯದ ಅಧೀನದಲ್ಲಿದೆ. ಈ ರೀತಿ ಮೂರು ರೈಲ್ವೇ ವಲಯದ ವ್ಯಾಪ್ತಿಗೆ ಹಂಚಿಕೆಯಾಗಿದೆ.

 ಮಂಗಳೂರು ರೈಲ್ವೇ ನಿಲ್ದಾಣಕ್ಕೆ 100 ವರ್ಷದ ಇತಿಹಾಸ
 ಕೊಂಕಣ, ದಕ್ಷಿಣ, ನೈಋತ್ಯ ರೈಲ್ವೇ ವಲಯಕ್ಕೆ ಒಳಪಟ್ಟಿರುವ ಮಂಗಳೂರು
 ದಕ್ಷಿಣ ರೈಲ್ವೇ ವಲಯಕ್ಕೆ ಸೇರಿದ ತೋಕೂರು-ನೇತ್ರಾವತಿ ಸೇತುವೆ ವರೆಗಿನ 30 ಕಿ.ಮೀ.
 30 ಕಿ.ಮೀ. ವ್ಯಾಪ್ತಿಯನ್ನು ನೈಋತ್ಯ ವಲಯಕ್ಕೆ ಸೇರ್ಪಡೆಗೆ ಹಕ್ಕೊತ್ತಾಯ
 ಮಂಗಳೂರು ವ್ಯಾಪ್ತಿ ನೈಋತ್ಯ ವಲಯಕ್ಕೆ ಸೇರಿದರೆ ಕರಾವಳಿಗೆ ಹೆಚ್ಚಿನ ರೈಲು ಬಲ

- ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next