Advertisement

ಪರಂಪರಾಗತ ಕಸುಬುಗಳಿಗೆ ಮರುಜೀವ ಅಗತ್ಯ

01:09 AM Mar 17, 2021 | Team Udayavani |

ದೇಶೀಯವಾದ ಗ್ರಾಮೀಣ ಭಾಗದ ಗುಡಿ ಕೈಗಾರಿಕೆಗಳಿಗೆ ಜೀವ ತುಂಬುವುದರ ಮೂಲಕ ಸ್ವಾವಲಂಬನೆ ಸಾಧಿಸಬಹುದು. ಈ ಕಸುಬುಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳಕಿನಲ್ಲಿ ಮತ್ತೆ ಜೀವ ತುಂಬಬೇಕಾಗಿದೆ. ಸಮಾಜದ ಬುಡಕಟ್ಟು ಜನಾಂಗದವರ ಸಹಿತ ಅನೇಕ ವರ್ಗದವರ ಅದ್ಭುತವಾದ ಕುಶಲ ಕೈಗಾರಿಕೆಗಳು ಅಧುನಿಕ ಶಿಕ್ಷಣ ಪದ್ಧತಿಯ ಎದುರು ಸೊರಗಿವೆ. ಕೆಲವು ಕಸುಬುಗಳು ಸಂಪೂರ್ಣ ಕಣ್ಮರೆಯಾಗಿದ್ದರೆ, ಕೆಲವು ಕಸುಬುಗಳು ಬೆರಳೆಣಿಕೆಯಷ್ಟು ಹಿರಿಯ ತಲೆಮಾರಿನವರಲ್ಲಿ ಉಳಿದಿದೆ.

Advertisement

ವೃತ್ತಿ ಗೌರವ, ಇಂದು ಮನುಷ್ಯನನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದವರು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಮ್ಮ ಶಿಕ್ಷಣ ಕ್ರಮದ ಪಠ್ಯವಿನ್ಯಾಸವೂ ಈ ವೃತ್ತಿಗಳನ್ನು ಪಡೆದುಕೊಳ್ಳಲು ಪೂರಕವಾಗಿದೆ. ಶಾಲಾ, ಕಾಲೇಜುಗಳು ನೀಡುತ್ತಿರುವ ಶಿಕ್ಷಣದ ಉದ್ದೇಶವೇ ಉದ್ಯೋಗಗಳ ಬೇಟೆ. ಇದಕ್ಕ ನುಗುಣವಾಗಿ ಶಿಕ್ಷಣ ವ್ಯವಸ್ಥೆಯೂ ಕಾಲದಿಂದ ಕಾಲಕ್ಕೆ ಬದಲಾಗುತ್ತಿದೆ.

ಬ್ರಿಟಿಷರು ನಮ್ಮನ್ನು ಆಳುವಾಗ ಇದೊಂದು ಗುಲಾಮಗಿರಿ ಎಂಬ ಭಾವನೆ ಬಲವಾಗಿತ್ತು. ಹಾಗಾಗಿ ಕೃಷಿಯಿಂದ ಹಿಡಿದು ಎಲ್ಲ ಪರಂಪರಾಗತ ಕಸುಬುಗಳಿಗೆ ವಿಶೇಷ ಮನ್ನಣೆ ಲಭಿಸುತ್ತಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗುತ್ತಿದ್ದಂತೆಯೇ ಪರಂಪರಾಗತ ಕಸುಬುಗಳತ್ತ ಆಸಕ್ತಿಯೂ ದೂರವಾಯಿತು.

ವಚನ ಚಳವಳಿಯಲ್ಲಿ ವೃತ್ತಿ ಗೌರವ: 12ನೇ ಶತಮಾನದ ವಚನ ಚಳವಳಿಯು ಇಂಥ ಅಪಾಯದ ಬಗ್ಗೆ ಮುನ್ಸೂಚನೆ ನೀಡಿತು. ಶರಣ ಚಳವಳಿಯಲ್ಲಿ ಕುಲಕಸುಬುಗಳ ಕುರಿತ ವೃತ್ತಿ ಗೌರವವು ಒಂದು ಪ್ರಧಾನ ಅಂಶವಾಗಿತ್ತು. ಬಸವಣ್ಣನವರೇ “ಕಾಸಿ ಕಮ್ಮಾರನಾದ, ವೇದವನೋದಿ ಹಾರುವನಾದ, ಬೀಸಿ ಮಡಿವಾಳನಾದ’ ಎಂದು ಘೋಷಿಸಿ, ಜಾತಿಯ ಹುಟ್ಟಿಗೆ ವೃತ್ತಿಯೇ ಕಾರಣ ಎಂದರು. ವೃತ್ತಿಯಲ್ಲಿ ಮೇಲು -ಕೀಳು ಎಂಬ ಅಂತರವನ್ನು ತೊಡೆದು ಹಾಕಲು ಬಸವಣ್ಣನವರು ಪ್ರಯತ್ನಿಸಿದರು.

ಅದರ ಪರಿಣಾಮವಾಗಿ ತಮ್ಮ ವೃತ್ತಿ ಅದು ಎಷ್ಟೇ ಚಿಕ್ಕದಾಗಿರಲಿ, ಶರಣರು ಹೆಸರಿನ ಮುಂದೆ ಅಭಿಮಾನದಿಂದ ಹೇಳಿಕೊಂಡರು. ಹಾಗಾಗಿ ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಮೊದಲಾದವರು ತಮ್ಮ ಹೆಸರುಗಳ ಹಿಂದೆ ತಮ್ಮ ವೃತ್ತಿಯನ್ನು ಅಭಿಮಾನದಿಂದ ಹೇಳಿಕೊಂಡರು. ಆದರೆ ವಚನ ಚಳವಳಿಯು ಕಾಲಗರ್ಭದಲ್ಲಿ ಸೇರಿದಂತೆ ಈ ಅಭಿಮಾನವೂ ಕೊನೆಯಾಯಿತು.

Advertisement

ಮೆಕಾಲೆ ಶಿಕ್ಷಣ ಪದ್ಧತಿ: ಬ್ರಿಟಿಷರು ಭಾರತವನ್ನು ಆಳಲು ಆರಂಭಿಸಿದಂದಿನಿಂದ ನಮ್ಮಲ್ಲಿ ಮಹತ್ವದ ಬದಲಾವಣೆಗಳಾದವು. ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಆಕರ್ಷಣೆ ಕಳೆದುಕೊಂಡಿತು. ನಲಂದಾ ಮೊದಲಾದ ಪ್ರಾಚೀನ ವಿದ್ಯಾಲಯಗಳ ವೈಭವ ಮಾತ್ರ ನಮ್ಮ ನೆನಪಿನಲ್ಲಿ ಉಳಿಯಿತು. ಬ್ರಿಟಿ ಷರು ಭಾರತೀಯ ಶಿಕ್ಷಣಕ್ಕೆ ಪರ್ಯಾಯವಾಗಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು. ಈ ಶಿಕ್ಷಣದ ಮುಖ್ಯ ಉದ್ದೇಶ ಭಾರತೀಯರ ಆತ್ಮ ವಿಶ್ವಾಸವನ್ನು ಕುಗ್ಗಿಸುವುದು, ಗುಲಾಮಗಿರಿಯ ಮನೋಸ್ಥಿತಿಯನ್ನು ಬಿತ್ತುವುದು. ಇದರಿಂದಾಗಿ ಭಾರತದ ಇತಿಹಾಸದಲ್ಲಿ ಕಂಡುಕೊಂಡ ಅನೇಕ ಕುಶಲ ಕರ್ಮಗಳು ಅವಸಾನದಂಚಿಗೆ ತಲುಪಿದವು. ಭಾರತೀಯ ಶಿಲ್ಪಕಲೆಯನ್ನೇ ತೆಗೆದುಕೊಳ್ಳೋಣ. ಅದ್ಭುತವಾದ ಶಿಲ್ಪಿಗಳು ನಮ್ಮ ದೇಶದಲ್ಲಿದ್ದರು. ಪರಂಪರಾಗತ ಈ ಕಸುಬುಗಳು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದವು. ಇಂದಿಗೂ ಪ್ರವಾಸಿ ಕೇಂದ್ರಗಳಾಗಿ ಆಕರ್ಷಿಸಲ್ಪಡುತ್ತಿರುವ ದೇಶದ ಹಲವು ಪ್ರಾಚೀನ ಶಿಲ್ಪಗಳು ಆ ಕಾಲದಲ್ಲಿದ್ದ ವಿಶಿಷ್ಠ ಕಲಾತ್ಮಕ ಕೌಶಲಗಳನ್ನು ನೆನಪಿಸುತ್ತವೆ. ಇನ್ನೊಂದು ನಿದರ್ಶನ ಕೊಡುವುದಾದರೆ ನಮ್ಮ ಪಂಡಿತ ಪರಂಪರೆಯ ಕೊಂಡಿ ಕಳಚುತ್ತಿರುವುದು. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ವ್ಯಾಕರಣಗಳ ದೊಡ್ಡ ಪಂಡಿತ ಪರಂಪರೆ ಹಿಂದೆ ನಮ್ಮಲ್ಲಿ ಇದ್ದಿತ್ತು. ಆದರೆ ಇಂದು ಈ ಪಂಡಿತ ಪರಂಪರೆ ಹುಡುಕಿದರೂ ಸಿಗುವುದು ಕಷ್ಟ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶೀಯತೆ: ಭಾರತದ ಸ್ವಾತಂತ್ರ್ಯ ಚಳವಳಿಯ ದಿನಗಳಲ್ಲಿ ದೇಶ ಪ್ರೇಮ ಮತ್ತೆ ಜಾಗೃತವಾಯಿತು. ಬ್ರಿಟಿಷರ ಮೆಕಾಲೆ ಶಿಕ್ಷಣದ ವಿರುದ್ಧ ಹೋರಾಟ ಅನಿವಾರ್ಯವಾಯಿತು. ಸ್ವಾಮಿ ವಿವೇಕಾನಂದರಂಥ ದಾರ್ಶನಿಕರು ಈ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿ ಅಡಿಪಾಯದ ಶಿಕ್ಷಣದ ಅಗತ್ಯವನ್ನು ತಿಳಿಸುತ್ತಾ; ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಇಂದು ಅಗತ್ಯ ಎಂದು ಪ್ರತಿಪಾದಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಅನೇಕ ನಾಯಕರು ಮೆಕಾಲೆ ಶಿಕ್ಷಣಕ್ಕೆ ವಿರುದ್ಧವಾಗಿ ರಾಷ್ಟ್ರೀಯ ಶಾಲೆಗಳನ್ನು ಸ್ಥಾಪಿಸಿದರು. ದೇಶ ಭಕ್ತಿ ಹಾಗೂ ದೇಶೀಯ ಸಂಸ್ಕೃತಿಗೆ ಪೂರಕವಾದ ಶಿಕ್ಷಣವನ್ನು ಈ ಶಾಲೆಗಳು ನೀಡಲಾರಂಭಿಸಿದವು. ಸ್ವಾತಂತ್ರ್ಯ ಚಳವಳಿಯಲ್ಲಿ ದೇಶೀಯ ವಸ್ತುಗಳ ಪುರಸ್ಕಾರ ಹಾಗೂ ವಿದೇಶಿ ವಸ್ತುಗಳ ಬಹಿಷ್ಕಾರವೂ ಪ್ರಬಲವಾಯಿತು. ದೇಶಭಕ್ತರ ಮನೆ ಮನೆಗಳಲ್ಲಿ ಚರಕಗಳು ದೇಶಭಕ್ತಿಯ ಸಂಕೇತವಾಗಿ ಕಾಣಿಸಿ ಕೊಂಡವು. ದೇಶೀಯ ಮಾದರಿಯ ಖಾದಿ ವಸ್ತ್ರಗಳ ವಿನ್ಯಾಸ ಪ್ರಾಶಸ್ತ್ಯ ಪಡೆಯಿತು.

ಜಾಗತೀಕರಣ: ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜಾಗತೀಕರಣದ ರೂಪದಲ್ಲಿ ಮತ್ತೂಮ್ಮೆ ವಿದೇಶಿ ವಸ್ತುಗಳು ಭಾರತದ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟವು. ಈ ಉತ್ಪನ್ನಗಳ ಎದುರು ದೇಶೀಯ ಉತ್ಪನ್ನಗಳು ಪೈಪೋಟಿ ನೀಡುವಲ್ಲಿಯೂ ವಿಫ‌ಲವಾದವು. ಚೀನ, ಅಮೆರಿಕ ಮೊದಲಾದ ದೇಶಗಳ ಉತ್ಪನ್ನಗಳ ಮೇಲೆ ಭಾರತದ ಮಾರುಕಟ್ಟೆಯು ಅವಲಂಬಿಸಿತು. ಇದಕ್ಕೆ ವಿರುದ್ಧವಾಗಿ ದೇಶೀಯ ಉತ್ಪನ್ನಗಳನ್ನು ಪ್ರೋತ್ಸಾಹಿ ಸುವ, ದೇಶೀಯ ಉತ್ಪನ್ನಗಳ‌ ಮೇಲೆ ಅವಲಂಬಿತ ವಾಗುವ ವಾತಾವರಣವೂ ನಿರ್ಮಾಣವಾಗಲಿಲ್ಲ. ದೇಶೀಯ ಉದ್ಯಮಗಳು ಈ ನಿಟ್ಟಿನಲ್ಲಿ ಸೊರಗಿದವು.

ಆತ್ಮನಿರ್ಭರ ಭಾರತ: ಈಗ ಮತ್ತೂಮ್ಮೆ ಭಾರತವು ಸ್ವಾವಲಂಬಿಯಾಗುವತ್ತ ಮುಂದಡಿ ಇಡುತ್ತಿದೆ. ಆತ್ಮ ನಿರ್ಭರ ಭಾರತ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಕೃಷಿ ಯನ್ನೇ ತೆಗೆದುಕೊಂಡರೆ ಸಾವಯವ ಕೃಷಿಯತ್ತ ಸರಕಾರವು ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಕೊರೊನಾ ಲಸಿಕೆಯ ತಯಾರಿಕೆಯಲ್ಲಿಯೂ ಭಾರತವು ಮುಂಚೂಣಿಯಲ್ಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲೂ “ಕೂ’ ನಂಥ ಆ್ಯಪ್‌ ವಾಟ್ಸ್‌ಆ್ಯಪ್‌ಗೆ ಪರ್ಯಾಯ ವಾಗಿ ಬೆಳೆಯುತ್ತಿದೆ. ನಿರುದ್ಯೋಗ ಸಮಸ್ಯೆಗೂ ಆತ್ಮನಿರ್ಭರ ಭಾರತದ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ಸರಕಾರ ಹಾಗೂ ಸಮಾಜದ ಪ್ರೋತ್ಸಾಹ: ಈ ವಿಧದ ಚಿಂತನೆ ಗ್ರಾಮೀಣ ಭಾಗದ ವಿದ್ಯಾವಂತರ ಪ್ರಗತಿಗೆ ವಿರೋಧವಲ್ಲ. ತಮ್ಮ ವಿದ್ಯಾಭ್ಯಾಸದ ವೇಳೆಯ ವಿರಾಮದಲ್ಲಿಯಾದರೂ ತಮ್ಮ ಹಿರಿಯರೊಂದಿಗೆ ಇಂಥ ಕಸುಬುಗಳನ್ನು ಕಲಿಯುವುದು ಇಂದು ಅಗತ್ಯ. ವಿದ್ಯಾಭ್ಯಾಸ ಪಡೆದು ಉದ್ಯೋಗವನ್ನು ಅರಸುತ್ತಾ ನಗರಕ್ಕೆ ವಲಸೆ ಹೋಗುವ ಬದಲು ತಮ್ಮ ವಿದ್ಯೆಯನ್ನು ಇಂಥ ಕಸುಬುಗಳ ಹೊಸ ವಿನ್ಯಾಸಕ್ಕೆ ಕೌಶಲರೂಪದಲ್ಲಿ ಬಳಸಿಕೊಂಡು, ಉದ್ಯೋಗಕ್ಕಿಂತಲೂ ಅಧಿಕ ಆದಾಯ ಬರುವ ಅವಕಾಶಗಳಿದ್ದರೆ ಈ ಕಸುಬುಗಳನ್ನೇ ಮುಂದುವರಿಸಬಹುದಲ್ಲವೇ? ನಮ್ಮಲ್ಲಿ ಎಲ್ಲ ವಿಷಯಗಳಿಗೂ ವಿಶ್ವವಿದ್ಯಾನಿಲಯಗಳಿವೆ.

ಈ ಗ್ರಾಮೀಣ ಕಸುಬುಗಳನ್ನು ಉಳಿಸಲು ವಿಶ್ವವಿದ್ಯಾ ನಿಲಯವೊಂದನ್ನು ಏಕೆ ತೆರೆಯಬಾರದು? ಇಂಥ ಕಸುಬುಗಳಲ್ಲಿ ತಜ್ಞರಾದವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಏಕೆ ಬಳಸಬಾರದು? ವಿಶ್ವವಿದ್ಯಾ ನಿಲಯದ ಪದವಿ ಇವರಲ್ಲಿ ಇಲ್ಲದಿರಬಹುದು. ಆದರೆ ಆ ಕ್ಷೇತ್ರದಲ್ಲಿ ಸಾಕಷ್ಟು ಅನುಭವಗಳಿವೆಯಲ್ಲ? ಅಷ್ಟು ಸಾಲದೇ?. ಸರಕಾರವೂ ಈ ಕಸುಬುಗಳನ್ನು ಮುಂದುವರಿಸಲು ಆರ್ಥಿಕ ನೆರವು ನೀಡಬೇಕು. ಅಲ್ಲಿನ ಉತ್ಪನ್ನಗಳಿಗೆ ವ್ಯಾಪಕವಾದ ಮಾರು ಕಟ್ಟೆಯ ಸೌಲಭ್ಯವನ್ನು ಒದಗಿಸಿಕೊಡಬೇಕು. ಹಿಂದೆ ವೈಭವಯುತವಾಗಿ ಮೆರೆದ ಇಂಥ ನೂರಾರು ವೃತ್ತಿಗಳು ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿಯಲ್ಲಿ ಮತ್ತೆ ಗರಿಗೆದರಲಿ. ಮೆಕಾಲೆ ಶಿಕ್ಷಣದ ಪ್ರಭಾವಕ್ಕೆ ಒಳಗಾಗಿ ಅವಸಾನದ ಹಾದಿ ಹಿಡಿದಿರುವ ಇಂಥ ನೂರಾರು ಕುಶ‌ಲ ಕಲೆಗಳು ಮತ್ತೆ ವಿಜೃಂಭಿಸಲಿ. ನೂತನ ಶಿಕ್ಷಣ ನೀತಿಯಲ್ಲಿ ಇದಕ್ಕೆ ಉತ್ತೇಜನ ಸಿಗುವಂತಾಗಲಿ.

– ಶ್ರೀಕಾಂತ್‌ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next