Advertisement

ಮೃತದೇಹವೇ ಸಿಗದಿದ್ದರೆ, ತಾರ್ಕಿಕ ಅಂತ್ಯ ಹೇಗೆ?

12:57 AM Dec 14, 2022 | Team Udayavani |

ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ಎರಡು ಕೊಲೆಗಳ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಕರ್ನಾಟಕದ ಬಾಗಲಕೋಟೆಯಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಮಗನೇ ಅಪ್ಪನನ್ನು ಕೊಂದು, 32 ತುಂಡುಗಳನ್ನಾಗಿ ಮಾಡಿ, ಬೋರ್‌ವೆಲ್‌ನೊಳಗೆ ಹಾಕಿದ್ದಾನೆ. ಇದಕ್ಕೂ ಮುನ್ನ ದೆಹಲಿಯಲ್ಲಿ ನಡೆದಿದ್ದ ಎರಡು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳು ಮೃತದೇಹಗಳನ್ನು ತುಂಡು-ತುಂಡುಗಳನ್ನಾಗಿ ಕತ್ತರಿಸಿ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದಾರೆ. ಇಂತಹ ಘನಘೋರ ಪ್ರಕರಣಗಳ ಹಾದಿ ಹೇಗೆ? ಆರೋಪಿಗಳ ಕೃತ್ಯ ಸಾಬೀತು ಪಡಿಸಲು ತನಿಖಾಧಿಕಾರಿ ಏನೆಲ್ಲಾ ಸಾಕ್ಷಿ ಸಂಗ್ರಹಿಸಬೇಕು? ಜತೆಗೆ ಈ ರೀತಿ ಮೃತ ದೇಹಗಳನ್ನು ತುಂಡು ಮಾಡಿರುವ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ದೇಹದ ಎಲ್ಲ ಭಾಗಗಳು ಪತ್ತೆಯಾಗಬೇಕು. ಆಗ ಮಾತ್ರ ತಾರ್ಕಿಕ ಅಂತ್ಯ ಕಾಣುತ್ತದೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಗಳು ತಮ್ಮದೇ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

-ಡಿಎನ್‌ಎ ವರದಿ ಮುಖ್ಯ
ಎಸ್‌.ಕೆ.ಉಮೇಶ್‌, ನಿವೃತ್ತ ಪೊಲೀಸ್‌ ಅಧಿಕಾರಿ

ಮೃತದೇಹಗಳನ್ನು ತುಂಡು-ತುಂಡು ಮಾಡಿದ ಪ್ರಕರಣಗಳು ಕೋರ್ಟ್‌ನಲ್ಲಿ ಇತ್ಯರ್ಥವಾಗಲು ದೇಹದ ಎಲ್ಲ ಭಾಗಗಳು ಪತ್ತೆಯಾಗಬೇಕು. ಜತೆಗೆ ಡಿಎನ್‌ಎ ವರದಿ ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ ತಾಂತ್ರಿಕ ಸಾಕ್ಷ್ಯಾಧಾರಗಳ ಸಂಗ್ರಹ ಪ್ರಮುಖವಾಗಿದೆ. ಆಗ ಮಾತ್ರ ತನಿಖಾಧಿಕಾರಿ ಕೋರ್ಟ್‌ನಲ್ಲಿ ಪ್ರಕರಣ ಸಾಬೀತು ಪಡಿಸಲು ಸಾಧ್ಯ.

ಸಾಮಾನ್ಯ ಕೊಲೆ ಪ್ರಕರಣಗಳು ಬಹುಬೇಗ ಇತ್ಯರ್ಥ ಪಡಿಸಬಹುದು. ಕಾರಣ, ಮೃತದೇಹದ ಗುರುತು ಪತ್ತೆಯಾಗುತ್ತದೆ. ಆದರೆ, ಕೊಲೆಗೈದು ದೇಹಗಳ ತುಂಡುಗಳನ್ನಾಗಿ ಕತ್ತರಿಸಿದಾಗ, ದೇಹದ ಎಲ್ಲ ಭಾಗಗಳು ಪತ್ತೆ ಹಚ್ಚಬೇಕು. ಜತೆಗೆ ಎಲ್ಲ ಭಾಗಗಳು ಮೃತ ವ್ಯಕ್ತಿಯದ್ದೆ ಎಂಬುದನ್ನು ಸಾಬೀತು ಪಡಿಸಬೇಕು. ಅದಕ್ಕೆ ಪೂರಕವಾಗಿ ಡಿಎನ್‌ಎ ಪರೀಕ್ಷೆ ನಡೆಯುತ್ತದೆ. ಒಂದು ವೇಳೆ ದೇಹದ ಭಾಗಗಳು ಪತ್ತೆಯಾಗದಿದ್ದರೆ ಅಥವಾ ಅವುಗಳನ್ನು ಸಂಪೂರ್ಣವಾಗಿ ನಾಮಶೇಷ ಮಾಡಿದರೆ, ಅದು ಕೂಡ ಪೊಲೀಸ್‌ ತನಿಖೆಗೆ ದೊಡ್ಡ ಸವಾಲಾಗುತ್ತದೆ. ಈಗ ತಾಂತ್ರಿಕವಾಗಿ ಪೊಲೀಸ್‌ ಇಲಾಖೆ ಬಲಿಷ್ಠವಾಗಿರುವುದರಿಂದ ಅಂತಹ ಸಾಕ್ಷ್ಯ ಸಂಗ್ರಹದ ತೊಂದರೆ ಇರುವುದಿಲ್ಲ.

ಮೃತದೇಹ ಸಿಗಬೇಕು, ಆದರೂ….
ರೇವಣಸಿದ್ದಯ್ಯ, ನಿವೃತ್ತ ಪೊಲೀಸ್‌ ಮಹಾನಿರ್ದೇಶಕ
ಕಾನೂನು ಪ್ರಕಾರ ಕೊಲೆಯಾದ ವ್ಯಕ್ತಿಯ ಮೃತದೇಹ ಸಿಗಬೇಕು. ಜತೆಗೆ ನಾಪತ್ತೆಯಾಗಿರುವ ಅಥವಾ ನಿರ್ದಿಷ್ಟ ವ್ಯಕ್ತಿಯೇ ಕೊಲೆಯಾದಿದ್ದಾನೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ಕೊಲೆಯಾದ ವ್ಯಕ್ತಿಗೆ ಸಂಬಂಧಿಸಿದ ವ್ಯಕ್ತಿಗೆ ಸಂಬಂಧಿಸಿದ ವಸ್ತುಗಳು, ಸಾಕ್ಷಿಗಳು, ಆತನ ಮುಖಚಹರೆ, ರಕ್ತದ ಮಾದರಿ ಎಲ್ಲವನ್ನು ಪತ್ತೆ ಹಚ್ಚಬೇಕು.

Advertisement

ಇದರೊಂದಿಗೆ ಕೊಲೆಯಾದ ವ್ಯಕ್ತಿ, ಈತನೇ ಎಂದು ದೃಢಪಡಿಸಲು ಆತನ ಕೂದಲು, ಮಲಗಿದ್ದಾಗ ಬಟ್ಟೆ ಮೇಲೆ ಬಿದ್ದಿದ್ದ ಜೋಲು(ಕೆಲ ಸಂದರ್ಭದಲ್ಲಿ) ಕೂಡ ವ್ಯಕ್ತಿಯನ್ನು ದೃಢಪಡಿಸುವ ಸಾಧ್ಯತೆಯಿದೆ. ಕೆಲ ಸಂದರ್ಭದಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದರೆ, ಆಗ ಮರಣೋತ್ತರ ಪರೀಕ್ಷೆ ಮುಖ್ಯವಾಗುತ್ತದೆ. ಈ ಮೂಲಕ ವ್ಯಕ್ತಿಯ ಒಂದಷ್ಟು ಅಂದಾಜು ಮಾಹಿತಿ ಲಭ್ಯವಾಗುತ್ತದೆ.

ಕೊಲೆ ಪ್ರಕರಣಗಳಲ್ಲಿ ದೇಹವನ್ನು ಎಷ್ಟು ತುಂಡು ಮಾಡಿದರೂ, ಎಲ್ಲೆ ಬಿಸಾಡಿದರೂ ಬಹುತೇಕ ಪ್ರಕರಣಗಳಲ್ಲಿ ಪತ್ತೆಯಾಗುತ್ತದೆ. ಆಗ ದೇಹದ ಭಾಗಗಳು ಮಾತ್ರವಲ್ಲ, ಮೂಳೆ, ಸ್ಥಳದಲ್ಲಿ ದೊರೆಯುವ ರಕ್ತದ ಮಾದರಿ, ಮಾಂಸದ ಚೂರು, ಬಟ್ಟೆ, ಉಗುರು ಹೀಗೆ ಮೃತ ವ್ಯಕ್ತಿಯ ದೇಹಕ್ಕೆ ಪೂರಕವಾದ ಎಲ್ಲವೂ ಸಾಕ್ಷ್ಯಗಳಾಗುತ್ತವೆ. ಅವುಗಳನ್ನು ಸಂಗ್ರಹಿಸುವ ಹೊಣೆ ತನಿಖಾಧಿಕಾರಿಗಳ ಮೇಲೆ ಇರುತ್ತದೆ. ಇಂತಹ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ತನಿಖಾಧಿಕಾರಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಆರೋಪಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆ ಕೊಡಿಸುವ ಅವಕಾಶಗಳು ಇರುತ್ತದೆ.

ಮೃತನ ತಲೆ ಸಿಗಬೇಕು!
ಟೈಗರ್‌ ಅಶೋಕ್‌ಕುಮಾರ್‌, ನಿವೃತ್ತ ಪೊಲೀಸ್‌ ಅಧಿಕಾರಿ
ದೆಹಲಿಯಲ್ಲಿ ನಡೆದ ಕೊಲೆಗಳು ಭೀಕರವಾಗಿವೆ. ಈ ಪ್ರಕರಣಗಳು ಬೇರೆ ಕೊಲೆ ಪ್ರಕರಣಗಳ ರೀತಿ ಅಲ್ಲ. ಸಾಮಾನ್ಯ ಕೊಲೆ ಪ್ರಕರಣದಲ್ಲಿ ಮೊದಲಿಗೆ ಮೃತದೇಹಗಳ ಗುರುತು ಪತ್ತೆ ಆಗುತ್ತದೆ. ಅನಂತರ ಆರೋಪಿಗಳು ಪತ್ತೆಯಾಗುತ್ತದೆ. ಆದರೆ, ದೆಹಲಿ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿ ಈತನೇ ಎಂದು ದೃಢಪಡಿಸಬೇಕು. ಮೊದಲಿಗೆ ಡಿಎನ್‌ಎಂ ಪರೀಕ್ಷೆ ನಡೆಸಿ, ಈತನೇ ಕೊಲೆಯಾಗಿದ್ದಾನೆ ಎಂಬುದು ದೃಢಪಡಿಸಿಕೊಳ್ಳಬೇಕು. ಈ ಮೂಲಕವೇ ಶೇ.70ರಷ್ಟು ಪ್ರಕರಣದ ತನಿಖೆ ಮುಕ್ತಾಯವಾಗುತ್ತದೆ. ಕೊಲೆಯಾದವರ ಕೈ, ಕಾಲುಗಳು ಸಿಗುವುದು ಮಾತ್ರವಲ್ಲ, ತಲೆ ಸಿಗಬೇಕು. ಬಳಿಕ ಕೊಲೆಯಾದ ವ್ಯಕ್ತಿ ಎಷ್ಟು ದಿನಗಳಿಂದ ನಾಪತ್ತೆಯಾಗಿದ್ದ? ಈ ಕುರಿತು ಯಾವ ದಿನ ಕೇಸ್‌ ದಾಖಲಿಸಲಾಗಿದೆ? ದೂರು ನೀಡಲು ತಡ ಮಾಡಿದ್ದೇಕೆ? ಕುಟುಂಬ ಸದಸ್ಯರಿಗಿಂತ, ಆತನ ಮನೆ ಅಕ್ಕ-ಪಕ್ಕದ ವ್ಯಕ್ತಿಗಳು ನೀಡುವ ಹೇಳಿಕೆ ಮುಖ್ಯವಾಗುತ್ತದೆ. ಯಾಕೆಂದರೆ, ಕೆಲವೊಮ್ಮೆ ಕುಟುಂಬ ಸದಸ್ಯರೇ ಕೊಲೆಗೈದು “ಬುದ್ದಿವಂತಿಕೆ’ ಪ್ರದರ್ಶಿಸುತ್ತಾರೆ. ಆಗ ಸ್ಥಳೀಯರು ಅಥವಾ ಕೊಲೆಯಾದವ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ವಿಚಾರಣೆ ನಡೆಸಿದಾಗ ಕೆಲವೊಂದು ಪೂರಕ ಸಾಕ್ಷ್ಯಗಳು ದೊರೆಯುತ್ತದೆ.

ಹಾಗೆಯೇ, ಮೃತದೇಹ ದೇಹದ ಭಾಗಗಳು ಪತ್ತೆಯಾದ ಸ್ಥಳಗಳಿಗಿಂತ ಕೊಲೆಯಾದ ಸ್ಥಳವೇ ಪ್ರಮುಖ ಸಾಕ್ಷ್ಯವಾಗುತ್ತದೆ. ಮೃತಪಟ್ಟ ಬಳಿಕ ಮಾರಕಾಸ್ತ್ರಗಳಿಂದ ದೇಹವನ್ನು ತುಂಡು ಮಾಡುತ್ತಾರೆ. ಆದರೆ, ಅದಕ್ಕೂ ಮೊದಲು ಯಾವ ರೀತಿ ಕೊಲೆ ಮಾಡಿದ್ದಾರೆ? ಉಸಿರುಗಟ್ಟಿಸಿ, ವಿಷಊಣಿಸಿ, ನಿದ್ದೆ ಮಾತ್ರೆ ಹಾಕಿ ಹಾಗೂ ಚಾಕುವಿನಿಂದ ಕೊಲೆಗೈದಿದ್ದಾರೆಯೇ? ಎಂಬುದು ಪತ್ತೆ ಹಚ್ಚಬೇಕು. ದೆಹಲಿ ಎರಡು ಕೊಲೆ ಪ್ರಕರಣಗಳಲ್ಲಿ ಮೃತದೇಹದ ಭಾಗಗಳನ್ನು ದಿನಗಟ್ಟಲೇ ಫ್ರೀಡ್ಜ್ನಲ್ಲಿ ಇಡಲಾಗಿತ್ತು. ಹೀಗಾಗಿ ಆ ಫ್ರೀಡ್ಜ್ನ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪರೀಕ್ಷಿಸುತ್ತಾರೆ. ಆಗ ಎಷ್ಟು ದಿನ ಇಡಲಾಗಿತ್ತು ಎಂಬುದು ಪತ್ತೆಯಾಗುತ್ತದೆ. ಜತೆಗೆ ಫ್ರೀಡ್ಜ್ನಲ್ಲಿರುವ ರಕ್ತದ ಮಾದರಿಗಳು ಹಾಗೂ ಭಾಗಗಳು ಸಿಕ್ಕ, ಅದರಲ್ಲಿರುವ ರಕ್ತದ ಮಾದರಿಗಳು ಒಂದೆಯೇ ಎಂಬುದು ದೃಢವಾಗುತ್ತದೆ. ಯಾಕೆಂದರೆ, ಹಂತಕ ಮತ್ತೂಬ್ಬ ವ್ಯಕ್ತಿಯನ್ನು ಕೊಲೆಗೈದಿರುವ ಸಾಧ್ಯತೆಯಿದೆ. ಹೀಗಾಗಿ ಕೊಲೆಯಾದ ಸ್ಥಳ ಮತ್ತು ದೇಹದ ಭಾಗಗಳು ಸಿಕ್ಕ ಸ್ಥಳದಲ್ಲಿ ದೊರೆಯುವ ರಕ್ತದ ಮಾದರಿಯಿಂದ ಎಲ್ಲ ರೀತಿಯ ಸಾಕ್ಷ್ಯಾಗಳು ಮುಖ್ಯವಾಗುತ್ತವೆ.

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next