Advertisement

ಕನ್ನಡಿಗರಿಗೆ ಮೀಸಲು: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ

11:29 PM Jul 17, 2024 | Team Udayavani |

ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ವಲಯದ ಸಂಸ್ಥೆ, ಕಂಪೆನಿ, ಕೈಗಾರಿಕೆ, ಉದ್ದಿಮೆ, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಂಬಂಧ ರಾಜ್ಯ ಸರಕಾರ ಸಿದ್ಧಪಡಿಸಿರುವ ಮಸೂದೆಯನ್ನು ಸದ್ಯಕ್ಕೆ ವಿಧಾನಮಂಡಲದಲ್ಲಿ ಮಂಡಿ ಸದಿರಲು ಸರಕಾರ ನಿರ್ಧರಿಸಿದೆ. ಉದ್ಯಮಿಗಳ ವಿರೋಧ ಹಾಗೂ ಸರಕಾರದ ಇಲಾಖೆ ನಡುವಿನ ಗೊಂದಲದ ಬೆನ್ನಲ್ಲೇ ಸರಕಾರ ಈ ನಿರ್ಧಾರಕ್ಕೆ ಬಂದಿದೆ.

Advertisement

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಚರ್ಚೆಗೀಡಾಗುತ್ತಿದ್ದು. ಉದ್ಯಮಿಗಳ ಪ್ರಮುಖರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಅಷ್ಟೇ ಸರಕಾರದ ಪ್ರಮುಖ ಸಚಿವರೂ ಸಹ ತಮ್ಮ ಅತೃಪ್ತಿಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಕಾರ್ಮಿಕ ಸಚಿವಾಲಯ, ಕಾನೂನು ಸಚಿವಾಲಯ ಹಾಗೂ ಕೈಗಾರಿಕ ಸಚಿವಾಲಯದ ನಡುವೆ ಸಮನ್ವಯತೆ ಇಲ್ಲದೆ ಇರುವುದು ಬೆಳಕಿಗೆ ಬಂದಿದೆ. ಅಲ್ಲದೆ ಇದರ ಲಾಭವನ್ನು ಪಡೆದುಕೊಳ್ಳಲು ಸಜ್ಜಾಗಿರುವ ನೆರೆಯ ಆಂಧ್ರ ಮತ್ತು ಕೇರಳ ರಾಜ್ಯಗಳು ಉದ್ಯಮಗಳಿಗೆ ತಮ್ಮ ರಾಜ್ಯಗಳಿಗೆ ಆಹ್ವಾನಿಸುತ್ತಿರುವುದು ಅನಪೇಕ್ಷಣೀಯ ಬೆಳವಣಿಗೆ.

ಈ ನಡುವೆ, ಮಸೂದೆ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಒಂದು ವೇಳೆ ಮೀಸಲಾತಿ ವ್ಯಾಪ್ತಿಯಲ್ಲಿ ಸೂಕ್ತ ಅಭ್ಯರ್ಥಿಗಳು ಸಿಗದೆ ಹೋದರೆ ಹೊರರಾಜ್ಯದವರನ್ನು ತೆಗೆದುಕೊಳ್ಳುವ ಅವಕಾಶ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಕಾನೂನು ಜಾರಿಗೆ ಬಂದದ್ದೇ ಆದಲ್ಲಿ ಈ ನಾಡಿನ ನಾಗರಿಕರ ದಶಕಗಳ ಬೇಡಿಕೆಯೊಂದು ಈಡೇರಿ, ನ್ಯಾಯ ದೊರಕಿಸಿ ಕೊಟ್ಟಂತಾಗಲಿದೆ.

ತಂತ್ರಜ್ಞಾನ, ಉದ್ದಿಮೆ, ಕೈಗಾರಿಕೆ ಆದಿಯಾಗಿ ವಾಣಿಜ್ಯಾತ್ಮಕವಾಗಿ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಭಾರೀ ಸಂಖ್ಯೆಯಲ್ಲಿ ಖಾಸಗಿ ಸಂಸ್ಥೆಗಳು, ಉದ್ಯಮಗಳು ಕಾರ್ಯಾಚರಿಸುತ್ತಿವೆ. ಖಾಸಗಿ ವಲಯ ರಾಜ್ಯದ ಆರ್ಥಿಕತೆಗೆ ಬಲುದೊಡ್ಡ ಕೊಡುಗೆಯನ್ನು ನೀಡುತ್ತ ಬಂದಿದೆೆ. ಖಾಸಗಿ ವಲಯದ ಬಹುತೇಕ ಉದ್ಯಮಗಳಲ್ಲಿ ತೀರಾ ಕೆಳಹಂತದ ಕೆಲಸಗಳಿಗೆ ಮಾತ್ರವೇ ಸ್ಥಳೀಯರನ್ನು ಬಳಸಿಕೊಳ್ಳಲಾಗುತ್ತಿದೆಯೇ ವಿನಾ ಅನ್ಯಭಾಷಿಗರೇ ಪ್ರಮುಖ ಹುದ್ದೆಗಳಿಗೆ ನೇಮಕಗೊಳ್ಳುತ್ತಿದ್ದಾರೆ. ಈ ಸಂಬಂಧ ಕಳೆದ ಮೂರ್ನಾಲ್ಕು ದಶಕಗಳಿಂದ ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಕೆ, ಹೋರಾಟ ನಡೆಯುತ್ತಲೇ ಬಂದಿದೆಯಾದರೂ ಇದಕ್ಕೆ ಸೂಕ್ತ ಸ್ಪಂದನೆ ಲಭಿಸಿರಲಿಲ್ಲ. ಕೊನೆಗೂ ರಾಜ್ಯ ಸರಕಾರ ಕನ್ನಡಿಗರ ದಶಕಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಆಡಳಿತಾತ್ಮಕ ಉನ್ನತ ಹುದ್ದೆಗಳಿಗೆ ಶೇ.50, ವ್ಯವಸ್ಥಾಪಕೇತರ ಹಾಗೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ.50- 75ರಷ್ಟನ್ನು ಕನ್ನಡಿಗರಿಗೆ ಮೀಸಲಿರಿಸುವ ನಿಯಮ ವನ್ನು ಪ್ರಸ್ತಾವಿತ ಮಸೂದೆ ಒಳಗೊಂಡಿದೆ.

ಅಪಸ್ವರ ಎತ್ತಿರುವ ಕೆಲವು ಉದ್ಯಮಿಗಳು ಅರ್ಹತೆ, ಕೌಶಲದ ಕೊರತೆಯ ಕಾರಣ ವನ್ನು ಮುಂದೊಡ್ಡಿದ್ದಾರೆ. ಆದರೆ ಇವೆಲ್ಲವನ್ನೂ ಸೂಕ್ತ ತರಬೇತಿ ನೀಡುವ ಮೂಲಕ ಬಗೆಹರಿಸಲು ಪ್ರಯತ್ನಿಸಬಹುದಾಗಿದೆ. ಸರಕಾರವು ಈ ನಿಟ್ಟಿನಲ್ಲಿ ಹೆಜ್ಜೆ ಇಡ ಬೇಕಾಗಿದೆ. ಇದೇ ವೇಳೆ ಸ್ಥಳೀಯರಿಗೆ ಉದ್ಯೋಗ ಕಡ್ಡಾಯಗೊಳಿಸುವ ಪರಿ ಣಾಮ, ರಾಜ್ಯದಲ್ಲಿ ಹೂಡಿಕೆ ಮಾಡಲು, ಉದ್ದಿಮೆ, ಕೈಗಾರಿಕೆಗಳ ಸ್ಥಾಪನೆಗೆ ಕಂಪೆನಿ ಗಳು ನಿರಾಸಕ್ತಿ ತೋರುವಂತಹ ಪರಿಸ್ಥಿತಿ ನಿರ್ಮಾಣ ವಾಗದಂತೆ ಸರಕಾರ ಎಚ್ಚರಿಕೆ ವಹಿಸಬೇಕು. ಕನ್ನಡಿಗರ ಹಿತಾಸಕ್ತಿ ರಕ್ಷಣೆಯ ಜತೆಯಲ್ಲಿ ಖಾಸಗಿ ಸಂಸ್ಥೆ, ಕೈಗಾರಿಕೆಗಳ ಹಿತರಕ್ಷಣೆಯೂ ಸರಕಾರದ ಜವಾಬ್ದಾರಿ. ರಾಜ್ಯದ ವಾಣಿಜ್ಯ-ವ್ಯವಹಾರ ಮತ್ತು ಆರ್ಥಿಕತೆಗೆ ಧಕ್ಕೆಯಾಗದಂತೆ ಈ ಕಾನೂನನ್ನು ಹೆಚ್ಚು ಆಸ್ಥೆಯಿಂದ ಜಾರಿಗೆ ತರುವ ಗುರುತರ ಹೊಣೆಗಾರಿಕೆ ಸರಕಾರದ ಮೇಲಿದೆ. ಇಂಥ ಲೋಪದೋಷಗಳ ಕುರಿತು ಎಲ್ಲರೊಡನೆ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆಯನ್ನು ಪರಿಷ್ಕರಿಸಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next