Advertisement

Governor ವಿರುದ್ಧ ಕಾಂಗ್ರೆಸ್‌ ಚಲೋ :ರಾಜಭವನಕ್ಕೆ ಪಾದಯಾತ್ರೆ

12:21 AM Sep 01, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ರಣಕಹಳೆ ಮೊಳಗಿಸಿರುವ ರಾಜ್ಯ ಕಾಂಗ್ರೆಸ್‌ ಶನಿವಾರ ವಿಧಾನಸೌಧ-ವಿಕಾಸಸೌಧ ನಡುವಣ ಗಾಂಧಿ ಪ್ರತಿಮೆ ಬಳಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಾಜಭವನ ಚಲೋ ನಡೆಸಿತು.

Advertisement

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆಡಳಿತಾ ರೂಢ ಕಾಂಗ್ರೆಸ್‌ ಶಾಸಕರು, ಸಚಿವರು, ಸಂಸದರು ಪ್ರಮುಖ ನಾಯಕರು ರಾಜ್ಯಪಾಲರು ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಫ‌ಲಕಗಳನ್ನು ಹಿಡಿದು ಪ್ರತಿಭಟಿಸಿದರು.

“ತೊಲಗಲಿ… ತೊಲಗಲಿ ಗೌರ್ನರ್‌ ತೊಲ ಗಲಿ’, “ಗಣಿ ಕಳ್ಳರಿಗೆ, ಕೋವಿಡ್‌ ಕಳ್ಳರಿಗೆ, ಶೇ. 40ರ ಕಮಿಷನ್‌ ಬಿಜೆಪಿಗೆ, ಬಿಜೆಪಿ ಕಳ್ಳರಿಗೆ, ಜೆಡಿಎಸ್‌ ಕಳ್ಳರಿಗೆ, ಸಂವಿಧಾನ ವಿರೋಧಿ ರಾಜ್ಯ ಪಾಲರಿಗೆ, ಕೈಗೊಂಬೆ ರಾಜ್ಯಪಾಲರಿಗೆ ಧಿಕ್ಕಾರ’ ಎಂದು ಪ್ರತಿಭಟನನಿರತ ಶಾಸಕರು ಕೂಗಿದರು.
“ಸ್ವಲ್ಪ ನಗಿ ಸರ್‌, ಪರ್ವಾಗಿಲ್ಲ’

ಶನಿವಾರ ಬೆಳಗ್ಗೆ 10 ಗಂಟೆಯಿಂದಲೇ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಕೈ ಶಾಸಕರು, ಸಚಿವರು, ಫ‌ಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು. ಬಳಿಕ ಡಿ.ಕೆ. ಶಿವಕುಮಾರ್‌ ಕೂಡ ಧರಣಿಯಲ್ಲಿ ಭಾಗಿಯಾದರು. ಕೊನೆಯಲ್ಲಿ ಸಿದ್ದರಾಮಯ್ಯ ಆಗಮಿಸಿದರು. ಪ್ರತಿಭಟನೆ ನಡುವೆ ಆಗಾಗ ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರ ಕೊಡುತ್ತಿದ್ದ ಸಿಎಂ, ಅತ್ತ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದದ್ದರಿಂದ ಕೊಂಚ ಒತ್ತಡದಲ್ಲೇ ಇದ್ದಂತೆ ಕಂಡುಬಂತು. ಇದನ್ನು ಗಮನಿಸಿದ ಡಿಕೆಶಿ, “ಸ್ವಲ್ಪ ನಗಿ ಸರ್‌ ಏನೂ ಆಗಲ್ಲ, ಪರ್ವಾಗಿಲ್ಲ’ ಎಂದು ತಮಾಶೆ ಮಾಡಿದರು. ಸಿಎಂ ನಗುತ್ತಲೇ ಪ್ರತಿಭಟನೆಯಲ್ಲಿ ಭಾಗಿಯಾದರು.

ಮನವಿ ಪತ್ರ ದಿಟ್ಟಿಸಿದ ಸಿಎಂ
ಪ್ರತಿಭಟನೆ ನಡೆಯುತ್ತಿರುವ ವೇಳೆ ರಾಜ್ಯಪಾಲರಿಗೆ ನೀಡಬೇಕಾದ ಮನವಿ ಪತ್ರವನ್ನು ಡಿಸಿಎಂ ಗಹನವಾಗಿ ಅಧ್ಯಯನ ಮಾಡುತ್ತಿದ್ದರು. ಇದನ್ನು ಕಂಡ ಸಿಎಂ ಕೂಡ ಮನವಿ ಪತ್ರದಲ್ಲಿ ಏನಿದೆ ಎಂದು ಕುತೂಹಲದಿಂದ ದಿಟ್ಟಿಸಿ ನೋಡಿದರು. ಘೋಷಣೆಗಳನ್ನು ಕೂಗುತ್ತಿದ್ದ ಶಾಸಕ ಪ್ರದೀಪ್‌ ಈಶ್ವರ್‌, “ಸಿಎಂ ಸಿದ್ದರಾಮಯ್ಯ ಅವರಿಗೆ ಜೈ, ಡಿಸಿಎಂ ಶಿವಕುಮಾರ್‌ ಅವರಿಗೆ ಜೈ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೈ’ ಎನ್ನುತ್ತಿದ್ದಂತೆ ಸಿಎಂ, ಡಿಸಿಎಂ, “ಏ ಅವೆಲ್ಲ ಬೇಡ ಬಿಡಪ್ಪ’ ಎಂದು ಕೈಸನ್ನೆ ಮಾಡಿದರು.

Advertisement

ಇದು ಸಿಎಂ ಪರವಾದ ಹೋರಾಟವಲ್ಲ
ಪ್ರತಿಭಟನೆ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ನಾವು ಸಿದ್ದರಾಮಯ್ಯ ಪರವಾಗಿ ಅಥವಾ ಅವರ ಪ್ರಕರಣದ ವಿಷಯವಾಗಿ ಈ ರಾಜಭವನ ಚಲೋ ಹಮ್ಮಿಕೊಂಡಿಲ್ಲ. ಈಗಾಗಲೇ ಆ ವಿಷಯ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ಇಲ್ಲಿ ಪ್ರಸ್ತಾವಿಸಿಲ್ಲ. ರಾಜಭವನ ಒಂದು ಪಕ್ಷದ ಕಚೇರಿ ಆಗಬಾರದು, ಸಂವಿಧಾನಬದ್ಧವಾಗಿ ನಡೆಯಬೇಕು ಎಂಬುದನ್ನು ಮನವಿ ಮಾಡಲು ಹೋಗುತ್ತಿದ್ದೇವೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್‌ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧ ತನಿಖಾ ಸಂಸ್ಥೆಗಳು ಅಭಿಯೋಜನೆಗೆ ಅನುಮತಿ ಕೇಳಿದರೂ ರಾಜ್ಯಪಾಲರು ಕೊಟ್ಟಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಯಾರೋ ಕೇಳಿದ ಕೂಡಲೇ ಅನುಮತಿ ಕೊಟ್ಟಿದ್ದಾರೆ. ಹೀಗಾಗಿ ನಮಗೆ ಅನುಮಾನಗಳಿವೆ. ರಾಜ್ಯಪಾಲರು ಕೈಗೊಂಬೆಯಾಗಿ ಕೆಲಸ ಮಾಡಬಾರದು.

ಜನರಿಂದ ಚುನಾಯಿತವಾದ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆದಿದೆ. ಇದಕ್ಕಾಗಿ ಬಿಜೆಪಿ, ಜೆಡಿಎಸ್‌ನವರು ರಾಜ್ಯಪಾಲರು ಹಾಗೂ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದರ ವಿರುದ್ಧ ನಮ್ಮ ಪಕ್ಷದ ಶಾಸಕರು, ಸಂಸದರೆಲ್ಲ ಸೇರಿ ಹೋರಾಟ ನಡೆಸಿದ್ದೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಯಾರೋ ದೂರು ಕೊಟ್ಟ ತತ್‌ಕ್ಷಣ ಮುಖ್ಯಮಂತ್ರಿಯವರಿಗೆ ಶೋಕಾಸ್‌ ನೋಟಿಸ್‌ ಕೊಟ್ಟರು. ವಿಪಕ್ಷ ನಾಯಕರ
ವಿರುದ್ಧ ಅಭಿಯೋಜನೆಗೆ ಅನುಮತಿ ಕೇಳಿದ್ದರೂ ನಮ್ಮ ಬಳಿ ಏನೂ ಬಾಕಿ ಇಲ್ಲ, ವಿಲೇವಾರಿ ಮಾಡಿದ್ದೇವೆ ಎಂದಿದ್ದಾರೆ. ನಿಜವೋ ಸುಳ್ಳೋ ನೋಡಬೇಕು.
 -ಡಿ.ಕೆ. ಶಿವಕುಮಾರ್‌, ಡಿಸಿಎಂ

ಸಿಎಂ-ಡಿಸಿಎಂ ಹಾಗೂ ಕಾಂಗ್ರೆಸ್‌ ನಾಯಕರು ಮಾಡಿದ ತಪ್ಪಿಗೆ ಕ್ಷಮೆ ಏನಾದರೂ ಕೇಳಬೇಕೆಂದಿದ್ದರೆ ರಾಜಭವನ ಕ್ಕಲ್ಲ, “ಮುಡಾ ಚಲೋ’ ಕೈಗೊಳ್ಳಲಿ. ಸಿಎಂ ಇಲ್ಲಸಲ್ಲದ ನಾಟಕ ಮಾಡುವುದು ಬಿಟ್ಟು ತನಿಖೆಗೆ ಸಹಕಾರ ನೀಡಲಿ. ತಪ್ಪು ಮಾಡಿಲ್ಲ ಎಂದಾದರೆ ಸಿಎಂ ತನಿಖೆಗೆ ಯಾಕೆ ಹೆದರುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಪಕ್ಷದಿಂದ ಪ್ರತಿಭಟನೆ ಎನ್ನುವುದಾದರೆ ಎಲ್ಲ ಸಚಿವರು ರಾಜೀನಾಮೆ ನೀಡಿ, ಪ್ರತಿಭಟನೆ ಮಾಡಲಿ. ನೀವು ಡಬಲ್‌ ಆ್ಯಕ್ಟಿಂಗ್‌ ಮಾಡುವುದು ಬೇಡ. ರಾಜಭವನದ ದುರು ಪಯೋಗ ಎನ್ನುವ ಆರೋಪ ಸವಕಲು ನಾಣ್ಯ. ಸಿದ್ದರಾಮಯ್ಯ ಅವರಿಗೆ ಭಯ ಏಕೆ? ಅವರ ರಕ್ಷಣೆಗೆ ನ್ಯಾಯಾಲಯವಿದೆ.
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next