Advertisement

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ; ಸರ್ಕಾರದ ಮೌನ ಸರಿಯಲ್ಲ

01:27 PM Aug 13, 2021 | Team Udayavani |

ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವುದಾಗಿ ಸರಕಾರ ನೀಡಿದ ಭರವಸೆ ಸೆಪ್ಟೆಂಬರ್‌ಗೆ ಅಂತ್ಯವಾಗಲಿದ್ದು, ಸರಕಾರದ ಮೌನ ಸರಿಯಲ್ಲ. ಅಧಿವೇಶನದಲ್ಲಿ ದಾಖಲಾಗಿರುವುದನ್ನು ಕಾರ್ಯಗತಗೊಳಿಸಬೇಕು. ಇಲ್ಲದಿದ್ದರೆ ಸಮಾಜ ಮತ್ತೂಂದು ಹಂತದ ಹೋರಾಟಕ್ಕೆ ಮುಂದಾಗಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

Advertisement

ಗುರುವಾರ ಖಾಸಗಿ ಹೋಟೆಲ್‌ನಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ಚಳವಳಿಗಾರ ದುಂಡು ಮೇಜಿನ ಸಭೆ ಹಾಗೂ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ರಾಜ್ಯ ಅಭಿಯಾನದ ನೇತೃತ್ವ ವಹಿಸಿ ಮಾತನಾಡಿದರು. ಸಮಾಜದ 10 ಲಕ್ಷ ಜನರು ಹೋರಾಟ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಸರಕಾರ ಅಧಿವೇಶನದಲ್ಲಿ ಭರವಸೆ ನೀಡಿ ಪಡೆದಿದ್ದ ಕಾಲಾವಕಾಶ ಸೆಪ್ಟೆಂಬರ್‌ ಗೆ ಪೂರ್ಣಗೊಳ್ಳಲಿದೆ. ಆದರೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರವನ್ನು ಎಚ್ಚರಿಸುವ ಕಾರಣಕ್ಕೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಹಿಂದಿನ ಮುಖ್ಯಮಂತ್ರಿಗಳ ಪುತ್ರ ಸಮಾವೇಶಕ್ಕೆ ಅರಮನೆ ಮೈದಾನ ದೊರೆಯದಂತೆ ಕುತಂತ್ರ ಮಾಡಿದರು. ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮೈದಾನ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದರು. ಪಂಚಮಸಾಲಿ ಸಮಾಜದ ಮುಖಂಡರೊಬ್ಬರು ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಅದನ್ನು ಅವರದೇ ಪಕ್ಷದ ನಾಯಕರು ತಪ್ಪಿಸಿದರು. ಕೆಲ ಸಮಾಜದ ಮಠಗಳಿಗೆ ಇಂತಹವರೇ ಮುಖ್ಯಮಂತ್ರಿಯಾಗಬೇಕು ಎಂಬುದಿದೆ. ಆದರೆ ಪಂಚಮಸಾಲಿ ಪೀಠ ತನ್ನ ಸಮಾಜದ ಮಕ್ಕಳಿಗೆ ಮೀಸಲಾತಿ ದೊರಕಿಸಲು ಮೊದಲ ಆದ್ಯತೆ ನೀಡಿದೆ. ಪಂಚಮಸಾಲಿ ಸಮಾಜದ ವಿಶ್ವಾಸದ್ರೋಹ ಮಾಡಿ ಅಧಿಕಾರ ಕಳೆದುಕೊಂಡ ಉದಾಹರಣೆಗಳಿವೆ ಎಂದರು.

ಪಂಚಮಸಾಲಿ ಸಮಾಜ 2ಎ ಹಾಗೂ ಉಳಿದ ಲಿಂಗಾಯತ ಸಮಾಜಗಳನ್ನು ಒಗ್ಗೂಡಿಸಿಕೊಂಡು ಹೋಗುವ ಮನಸ್ಥಿತಿ ಹೊಂದಿದೆ. ಒಬಿಸಿ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಈ ನಿರ್ಧಾರದ ಹಿಂದೆ ಪಂಚಮಸಾಲಿ ಹೋರಾಟದ ಫಲವಿದೆ. ಹಿಂದಿನ ಹೋರಾಟದ ಸಂದರ್ಭದಲ್ಲಿ ಕೆಲ ಸಚಿವರು, ಶಾಸಕರು ತದ್ವಿರುದ್ಧ ಹೇಳಿಕೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಿದರು ಎಂದರು.

ಶಾಸಕ ಹಾಗೂ ಮೀಸಲಾತಿ ಚಳವಳಿ ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಹಾಗೂ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ನಂದಿಹಳ್ಳಿ ಹಾಲಪ್ಪ, ಮಲ್ಲೇಶ, ಸಂಗಮೇಶ, ರಮೇಶಗೌಡ, ದಿನೇಶ ಪಾಟೀಲ, ಪಂಚನಗೌಡ ಪಾಟೀಲ, ನಾಗರಾಜ ಗೌರಿ, ಬಸಲಿಂಗಪ್ಪ ಬೂಟಿಹಾಳ, ಲಿಂಗಪ್ಪ  , ಅನೀಲ ಪಾಟೀಲ, ಪುಟ್ಟಸ್ವಾಮಿ, ಅಮರೇಶ ನಾಗೂರು ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next