Advertisement

ಮರುಕಳಿಸಿದ ಭರಚುಕ್ಕಿ ಜಲಪಾತ ವೈಭವ

04:13 PM Jul 15, 2018 | Team Udayavani |

ಚಾಮರಾಜನಗರ: ಕಬಿನಿ ಜಲಾಶಯ ದಿಂದ 50 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿರುವ ಕಾರಣ ಜಿಲ್ಲೆಯ ಪ್ರಸಿದ್ಧ ಭರಚುಕ್ಕಿ ಜಲಪಾತ ಮೈದುಂಬಿಕೊಂಡಿದ್ದು ಜಲಧಾರೆ ಬೆಳ್ನೊರೆಯಾಗಿ ಧುಮ್ಮಿಕ್ಕುತ್ತಿದೆ.

Advertisement

ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆಯಾಗದೇ ಭರಚುಕ್ಕಿ ಜಲಪಾತಕ್ಕೆ ಈ ಪ್ರಮಾಣದ ನೀರು ಹರಿದುಬಂದಿರಲಿಲ್ಲ. ಹಾಗಾಗಿ ಈ ವೈಭವದ ದೃಶ್ಯ ಕಾಣಸಿಕ್ಕಿರಲಿಲ್ಲ. ಆದರೆ ಈ ಬಾರಿ ಕಾವೇರಿ, ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಬಿನಿ ಜಲಾಶಯದಿಂದ ಕಳೆದ ಮೂರು ದಿನಗಳಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಕಳೆದ ತಿಂಗಳ 18ರ ನಂತರ ಸಾಧಾರಣ ಪ್ರಮಾಣದ ನೀರು ಜಲಪಾತಕ್ಕೆ ಹರಿದು ಬಂದಿತ್ತು. ಆದರೆ ಕಳೆದ ಮೂರು ದಿನ ಗಳಿಂದ ಕಬಿನಿ ಜಲಾಶಯದಿಂದ ಬಿಡಲಾಗಿರುವ 50 ಸಾವಿರ ಕ್ಯೂಸೆಕ್‌ ನೀರಿನ ಜೊತೆಗೆ, ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಲು ಕೇವಲ 4 ಅಡಿ ಬಾಕಿಯಿದ್ದು, ಈಗ 3 ಸಾವಿರ ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಹೀಗಾಗಿ ಭರಚುಕ್ಕಿ ವೈಭವ ಮರುಕಳಿಸಿದೆ.

ಕೇರಳದ ವೈನಾಡಿನಲ್ಲಿ ಹುಟ್ಟಿ ಹರಿಯುವ ಕಪಿಲಾ, ತಲಕಾವೇರಿಯಿಂದ ಬರುವ ಕಾವೇರಿ, ಮೈಸೂರು ಜಿಲ್ಲೆಯ ತಿರುಮ ಕೂಡಲು ನರಸೀಪುರದಲ್ಲಿ ಒಂದಾಗುತ್ತಾರೆ. ನಂತರ ಕಬಿನಿ ಕಾವೇರಿ ಒಡಲಲ್ಲಿ ಸೇರಿ ಹೋಗುತ್ತಾಳೆ. ಈ ಕಾವೇರಿ ಜಿಲ್ಲೆಯ ಶಿವನಸಮುದ್ರ ಪ್ರದೇಶದಲ್ಲಿ ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುತ್ತಾಳೆ. ಈ ಪ್ರದೇಶ ಭರಚುಕ್ಕಿಯಾಗಿ ಪ್ರಸಿದ್ಧವಾಗಿದೆ. 

ಕರ್ನಾಟಕದ ನಯಾಗರಾ: ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುವ ಭರಚುಕ್ಕಿ, ಅಷ್ಟೇ ಅಗಲದ ಪ್ರದೇಶದಲ್ಲಿ ಅನೇಕ ಕವಲುಗಳೊಡೆದು ಧುಮ್ಮಿಕ್ಕುತ್ತದೆ. ನದಿಯಲ್ಲಿ ಹೆಚ್ಚು ನೀರು ಹರಿದಾಗ ಈ ಕವಲುಗಳ ಸಂಖ್ಯೆ ಹೆಚ್ಚಾಗಿ 100 ಅಡಿ ಅಗಲಕ್ಕೂ ಜಲಪಾತ ಮೈತುಂಬಿಕೊಳ್ಳುತ್ತದೆ. ಹೀಗಾಗಿ ಇದನ್ನು ಕರ್ನಾಟಕದ ನಯಾಗರ ಎಂದು ಬಣ್ಣಿಸಲಾಗುತ್ತದೆ.
 
ಕಾವೇರಿ ನದಿ ಸತ್ತೇಗಾಲದ ಸೇತುವೆ ಬಳಿ ಮೈದುಂಬಿ ಹರಿಯುತ್ತಿದೆ. ಬ್ರಿಟಿಷರ ಕಾಲದ ಹಳೆಯ ವೆಸ್ಲಿ ಸೇತುವೆಯ ಅರ್ಧ ಭಾಗ ದಷ್ಟು ಎತ್ತರಕ್ಕೆ ನೀರು ತುಂಬಿ ಹರಿಯುತ್ತದೆ. ಈ ಸೇತುವೆಯನ್ನು ಬಳಸಲಾಗುತ್ತಿಲ್ಲ. ಆದರೆ ಹಳೆಯ ಸೇತುವೆ ಕಣ್ಮನ ಸೆಳೆಯು ತ್ತದೆ. ಕೆಆರ್‌ಎಸ್‌ ಭರ್ತಿಯಾಗಿ ಅಲ್ಲಿಂ ದಲೂ ನೀರು ಹರಿದರೆ ಭರಚುಕ್ಕಿಯ ವೈಭವ ಮತ್ತಷ್ಟು ಹೆಚ್ಚುತ್ತದೆ.

Advertisement

ವಾರಾಂತ್ಯ ಪ್ರವಾಸಿಗರ ಹೆಚ್ಚಳ: ಭರಚುಕ್ಕಿ ಜಲಪಾತದ ವೈಭವ ಮರುಕಳಿಸಿರುವುದನ್ನು ನೋಡಲು ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ವಾರಾಂತ್ಯದ ರಜೆ ಇರುವುದರಿಂದ ಪ್ರವಾಸಿಗರ ಹೆಚ್ಚಾಗಿದ್ದಾರೆ.

ಈ ಬಾರಿ ಉತ್ಸವ ನಡೆಯುತ್ತದೆ: ಸಚಿವ ಎನ್‌.ಮಹೇಶ್‌
ಕೊಳ್ಳೇಗಾಲ: ವಿಶ್ವ ವಿಖ್ಯಾತ ತಾಲೂಕಿನ ಭರಚುಕ್ಕಿ ಜಲಪಾತ ದುಮ್ಮಿಕ್ಕಿ ಹರಿಯುತ್ತಿದ್ದು, ಸಾರ್ವಜನಿಕರ ಕಣ್ಮನ ತಣಿಸುವ ಸಲುವಾಗಿ ಸುಮಾರು 5 ಕೋಟಿ ರೂ ಅಂದಾಜಿನಲ್ಲಿ ಜಲಪಾತೋತ್ಸವ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌
ರವರು ಶನಿವಾರ ಹೇಳಿದರು.

ಬೆಂಗಳೂರಿನಲ್ಲಿ ಬಡೆಜೆಟ್‌ನಲ್ಲಿನ ಅಧಿವೇಶನದ ಬಳಿಕ ನಗರದ ಲೋಕೋಪ ಯೋಗಿ ಇಲಾಖೆಯ ವಸತಿ ಗೃಹಕ್ಕೆ ಆಗಮಿಸಿದಾಗ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು, ಈ ಬಾರಿ ತಾಲೂಕಿನ ಭರಚುಕ್ಕಿ ಜಲಪಾ ತೋತ್ಸವ ನಡೆಸಲು ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರವರ ಗಮನ ಸೇಳೆದಿದ್ದು 5 ಕೋಟಿ ಅಂದಾಜಿನಲ್ಲಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದರು.

ಉತ್ಸವ ನಡೆಸುವ ಬಗ್ಗೆ ಜಿಲ್ಲಾಧಿಕಾರಿ ಬಿ.ಕಾವೇರಿಯವರೊಂದಿಗೆ ಚರ್ಚಿಸಿ ಬಳಿಕ ಸೂಕ್ತ ದಿನಾಂಕ ನಿಗದಿಪಡಿಸಿ ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿ ಸೇರಿದಂತೆ ಶಾಸಕರುಗಳೊಂದಿಗೆ ಚರ್ಚಿಸಿ ಉತ್ಸವ ನಡೆಸಲಾಗುವುದು. ಸಚಿವರು ಈ ಬಾರಿ ಉತ್ಸವ ನಡೆದೆ ನಡೆಯುತ್ತದೆ ಎಂದರು.

ಭರಚುಕ್ಕಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿರುವುದರಿಂದ ಪ್ರವಾಸಿಗರ ರಕ್ಷಣೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂದು ಪ್ರವಾಸೋದ್ಯಮ, ಅರಣ್ಯ, ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
  ಬಿ.ಬಿ. ಕಾವೇರಿ, ಜಿಲ್ಲಾಧಿಕಾರಿ

ಈ ಬಾರಿ ಮಳೆಯಾಗಿ ನದಿಗಳು ತುಂಬಿ ಹರಿಯುತ್ತಿರುವುದ ರಿಂದ ಭರಚುಕ್ಕಿ ಜಲಪಾತ ಉತ್ಸವ ನಡೆಸಬೇಕು. ಈ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಕಲೆ ಜನಪದ ಹೊರ ಜಗತ್ತಿಗೆ ತಿಳಿಯಲು ಇಂಥ ಉತ್ಸವಗಳಿಂದ ಸಾಧ್ಯ. ಉತ್ಸವಗಳು ನಡೆದಾಗ ಪ್ರವಾಸಿಗರೂ ಹೆಚ್ಚಾಗುತ್ತಾರೆ.
  ಸಿ.ಎಂ. ನರಸಿಂಹಮೂರ್ತಿ, ಜನಪದ ಗಾಯಕ

Advertisement

Udayavani is now on Telegram. Click here to join our channel and stay updated with the latest news.

Next