Advertisement

ಉಳ್ಳಾಲ ನಗರಸಭೆ ವ್ಯಾಪ್ತಿಯ ಪ್ರಗತಿ ಪರಿಶೀಲನ ಸಭೆ 

12:52 PM Jun 23, 2018 | |

ಉಳ್ಳಾಲ: ಕಾನೂನಿನ ಪ್ರಕಾರ ನಗರ ಪ್ರದೇಶಗಳಲ್ಲಿ ಮೂರಕ್ಕಿಂತ ಹೆಚ್ಚು ಅಂತಸ್ತಿನ ಕಟ್ಟಡವನ್ನು ಕಟ್ಟುವಂತಿಲ್ಲ. ಒಂದು ವೇಳೆ ಕಟ್ಟಿದರೂ ಕಡ್ಡಾಯವಾಗಿ ಚರಂಡಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಿದರೆ ಮಾತ್ರ ಅವರಿಗೆ ಕಟ್ಟಡ ಕಟ್ಟಲು ಸ್ಥಳೀಯಾಡಳಿತ ಅನುಮತಿ ನೀಡಬೇಕು ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ತಿಳಿಸಿದರು.

Advertisement

ಉಳ್ಳಾಲ ನಗರಸಭೆಯಲ್ಲಿ ಶುಕ್ರವಾರ ನಡೆದ ಉಳ್ಳಾಲ ನಗರಸಭೆ ವ್ಯಾಪ್ತಿಯ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೋಟ್ಯಾಂತರ ರೂ. ವ್ಯಯಿಸಿ ಬೃಹತ್‌ ಕಟ್ಟಡಗಳನ್ನು ಕಟ್ಟುತ್ತಾರೆ. ಆದರೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವುದಿಲ್ಲ. ಈ ನಿಟ್ಟಿನಲ್ಲಿ ನಾಲ್ಕರಿಂದ ಹೆಚ್ಚು ಅಂತಸ್ತಿನ ಕಟ್ಟಡ ಕಟ್ಟುವವರು ಕಡ್ಡಾಯವಾಗಿ ಚರಂಡಿನೀರಿನ ಸಂಸ್ಕರಣಾ ಘಟಕ ಸ್ಥಾಪಿಸಬೇಕೆಂದರು.

ಚರಂಡಿ ನೀರು ಅಧಿಕಾರಿಗಳ ತರಾಟೆ
ನಗರಸಭೆ ವ್ಯಾಪ್ತಿಯಲ್ಲಿ ಚರಂಡಿ ತೆರವು ಆಗದೇ ಮಳೆ ನೀರು ರಸ್ತೆಯಲ್ಲೇ ಹರಿದಾಡುತ್ತಿದೆ. ಈ ಬಗ್ಗೆ ಸಂಬಂಧಿಸಿದ ಇಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಶೀಘ್ರವೇ ಜೆಸಿಬಿ ಚರಂಡಿಗಳನ್ನು ತೆರವುಗೊಳಿಸಬೇಕು ಎಂದರು. ನಗರಸಭೆಯ 27 ವಾರ್ಡುಗಳಲ್ಲಿಯೂ ಚಪ್ಪಡಿ ಕಲ್ಲಿನ ಸಮಸ್ಯೆಯಿದ್ದು, ಇಂಜಿನಿಯರ್‌ ಕೂಡಲೇ ಗಮನ ಹರಿಸುವಂತೆ ಆಗ್ರಹಿಸಿದರು.

ಅನುದಾನ ಉಪಯೋಗಿಸಿ
ಭಟ್ನಗರ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರಿನಿಂದ ಹೊಂಡಗಳಾಗಿದ್ದು ವಿದ್ಯಾಥಿಗಳು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ. ಕೂಡಲೇ ದುರಸ್ತಿಗೊಳಿಸುವಂತೆ ಸಚಿವರಲ್ಲಿ ಸ್ಥಳೀಯರು ಮನವಿ ಮಾಡಿದರು. ಈಗಾಗಲೇ ಪ್ರತಿಯೊಂದು ವಾರ್ಡುಗಳಿಗೆ 8 ಲಕ್ಷ ರೂ.ಅನುದಾನ ಸಣ್ಣ ಸಮಸ್ಯೆಗಳಿಗೆ ಬಿಡುಗಡೆಗೊಳಿಸಲಾಗಿದೆ. ಅದನ್ನು ಸರಿಯಾಗಿ ಉಪಯೋಗಿಸದೇ ಇರುವುದರಿಂದ ಸಮಸ್ಯೆ ಉದ್ಭವಿಸಿದೆ. ಮುಂದೆ ನಗರೋತ್ಥಾನ ನಿಧಿಯಡಿ 1 ಕೋಟಿ ರೂ.ಅನುದಾನ ನೀಡಲಾಗುವುದು. ಪ್ರತಿ ವಾರ್ಡ್‌ ಸದಸ್ಯರು ಅದನ್ನು ಸೂಕ್ತ ಸಮಸ್ಯೆಗಳಿಗೆ ವಿನಿಯೋಗಿಸಬೇಕು ಎಂದರು.

ಮೆಸ್ಕಾಂ ಅಧಿಕಾರಿಗೆ ತರಾಟೆ
ಉಳ್ಳಾಲ ಭಾಗದಲ್ಲಿ ಹೆಚ್ಚುವರಿ ದಾರಿದೀಪಗಳ ಅಳವಡಿಕೆಗೆ, ವಿದ್ಯುತ್‌ ಕಂಬ ಹಾಗೂ ದೊಡ್ಡ ಯುನಿಟ್‌ನ ಟ್ರಾನ್ಸ್‌ ಫಾರ್ಮರ್‌ ಅಳವಡಿಕೆಯಾಗದೆ ಇರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಮೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದಾಗ ನಗರಸಭೆಯಿಂದ 13ಲ. ರೂ.ಬಾಕಿಯಿದೆ. ಇದರಿಂದ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಅಂದಾಗ, ಕೆರಳಿದ ಸಚಿವರು ‘ಭಾರೀ ಹಣ ಸಂಗ್ರಹಿಸಿದ ಅನಂತರವೇ ನೀವು ಕೆಲಸ ಮಾಡುತ್ತೀರಾ, ಖಾಸಗಿ ಸಂಸ್ಥೆಗಳಿಂದ ಬಾಕಿಯಿದ್ದರೆ ನೀವು ಕಾಮಗಾರಿ ಪೂರ್ಣಗೊಳಿಸುವುದಿಲ್ಲವೇ?, ಖಾಸಗಿ ಸಂಸ್ಥೆಗಳ ಲಿಸ್ಟ್‌ ನೀಡಿ, ಯಾರು ಎಷ್ಟು ಬಾಕಿಯಿಟ್ಟಿದ್ದಾರೆ ಅನ್ನುವುದನ್ನು ಜನತೆ ಮುಂದಿಡುತ್ತೇನೆ ಎಂದು ಗರಂ ಆದ ಸಚಿವರು ಮುಕ್ಕಾಲು ಭಾಗ ಹಣ ಪಾವತಿಸಿದರೂ, ಸ್ಥಳೀಯಾಡಳಿತದ ಮಾತುಗಳಿಗೆ ಬೆಲೆ ಕೊಡದೆ ಕಾಮಗಾರಿ ನಿಲ್ಲಿಸಿದ್ದೀರಾ? ಎಂದು ಗದರಿಸಿ ಕೂಡಲೇ ಕಾಮಗಾರಿ ನಡೆಸುವಂತೆ ಎಚ್ಚರಿಕೆ ನೀಡಿದರು.

Advertisement

ಮರತೆರವುಗೊಳಿಸಿ
ಬಹುತೇಕ ಕಡೆಗಳಲ್ಲಿ ನಗರಸಭೆಯಿಂದಲೇ ಮೆಸ್ಕಾಂಗೆ ತೊಂದರೆಯಾಗುವ ಉದ್ದೇಶದಿಂದ ಮರ ಕಡಿಯಲಾಗುತ್ತಿದೆ. ಅಪಾಯದ ಸೂಚನೆಯಿದ್ದರೂ ಮೆಸ್ಕಾಂನವರು ಗಮನಹರಿಸುತ್ತಿಲ್ಲ ಅನ್ನುವ ಪೌರಾಯುಕ್ತೆ ವಾಣಿ ವಿ. ಆಳ್ವ ಅವರ ದೂರಿಗೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ ಮರದ ಕೊಂಬೆಗಳು ಕಡಿಯಲೆಂದೇ ಒಂಭತ್ತು ಸಿಬಂದಿಯನ್ನು ಇಲಾಖೆಯಲ್ಲಿ ಇರಿಸಲಾಗಿದೆ. ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಸ್ಥಳೀಯಾಡಳಿತ, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದರು.

ಆದರೆ ಪೌರಾಯುಕ್ತರು ‘ ತಾವು ಹಲವು ಬಾರಿ ಅರಣ್ಯ ಇಲಾಖೆಗೆ ಅಪಾಯಕಾರಿ ಮರಗಳ ತೆರವಿಗೆ ಅನುಮತಿ ಕೋರಿದರೂ, ಅವರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದು, ಸಭೆ ಮುಗಿದ ಕೂಡಲೇ ಅಪಾಯಕಾರಿಯಾಗಿರುವ ಮರಗಳ ಕುರಿತು ಸರ್ವೇ ನಡೆಸಿ ವರದಿ ನೀಡುವಂತೆ ಆಗ್ರಹಿಸಿದರು. ಸಭೆಯಲ್ಲಿ ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್‌ ಕುಂಞಿಮೋನು, ಉಪಾಧ್ಯಕ್ಷೆ ಚಿತ್ರಾಚಂದ್ರಕಾಂತ್‌, ಯೋಜನಾ ನಿರ್ದೇಶಕ ಅರುಣ್‌ ಪ್ರಭಾ, ತಹಶೀಲ್ದಾರ್‌ ಗುರುಪ್ರಸಾದ್‌, ಉಪಪೊಲೀಸ್‌ ವರಿಷ್ಠಾಧಿಕಾರಿ ಎ.ರಾಮ ರಾವ್‌ ಉಪಸ್ಥಿತರಿದ್ದರು.

ಸಂಸದರ ಗಡುವು ಮುಗಿದ ಬಳಿಕ ಕ್ರಮ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಲವೆಡೆ ಬಹಳ ತೊಂದರೆಯಾಗುತ್ತಿದೆ. ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರಿಗೆ ಅಪಾಯವಿದೆ. ಗಂಟೆಗಟ್ಟಲೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಎನ್ನುವ ಪ್ರಶ್ನೆಗೆ ಈಗಾಗಲೇ ಸಂಸದರು ಗಡುವು ನೀಡಿದ್ದು ಟೋಲ್‌ ಸ್ಥಗಿತಗೊಳಿಸುವ ಹೇಳಿಕೆ ನೀಡಿದ್ದಾರೆ. ಗಡುವು ಮುಗಿದ ಬಳಿಕವೂ ಇಲಾಖೆ ಅಥವಾ ಗುತ್ತಿಗೆದಾರರು ಕಾರ್ಯಪ್ರವೃತ್ತರಾಗದಿದ್ದರೆ ಮುಂದಿನ ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುವುದು ಖಾದರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next