Advertisement

ದಾಖಲೆ ಮಳೆ: ಬೆಳೆಗೆ ರೋಗ

03:20 PM Oct 23, 2022 | Team Udayavani |

ಮಂಡ್ಯ: ಕಳೆದ 20 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ದಾಖಲೆ ಮಳೆಯಾಗಿದ್ದು, ಜೂನ್‌ನಿಂದ ಸೆಪ್ಟೆಂಬರ್‌ ವರೆಗೂ ಮುಂಗಾರು ಅಬ್ಬರಿಸಿತ್ತು. ಈಗ ಹಿಂಗಾರು ಮಳೆಯೂ ಹವಾಮಾನ ವೈಪರೀತ್ಯದಿಂದಾಗಿ ಧಾರಾಕಾರವಾಗಿ ಸುರಿಯುತ್ತಿದೆ.

Advertisement

ಜಿಲ್ಲೆಯಲ್ಲಿ ಜೂನ್‌ನಿಂದಲೇ ನಿಧಾನವಾಗಿ ಆರಂಭಗೊಂಡ ಮಳೆ ಜುಲೈನಲ್ಲಿಯೇ ಅಬ್ಬರಿಸಿತ್ತು. ಪ್ರತಿ ವರ್ಷ ವಾಡಿಕೆಯಂತೆ ಸರಾಸರಿ 630 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಜುಲೈನಲ್ಲಿಯೇ 630ಕ್ಕಿಂತ ಹೆಚ್ಚು ಮಳೆ ಸುರಿದಿತ್ತು.

1389.8 ಮಿ.ಮೀ ಮಳೆ: ಅ.21ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲಾದ್ಯಂತ 1389.8 ಮಿ.ಮೀ ಸರಾಸರಿ ಮಳೆಯಾಗಿದ್ದು ಇದರಿಂದ ಶೇಕಡವಾರು 134 ಹೆಚ್ಚುವರಿ ಮಳೆ ಸುರಿದಿದೆ. ಕೆ.ಆರ್‌.ಪೇಟೆ 1451.7 ಮಿ.ಮೀ, ಮದ್ದೂರು 1368.1 ಮಿ.ಮೀ, ಮಳವಳ್ಳಿ 1263.4 ಮಿ.ಮೀ, ಮಂಡ್ಯ 1547.2 ಮಿ.ಮೀ, ನಾಗಮಂಗಲ 1360.6 ಮಿ.ಮೀ, ಪಾಂಡವಪುರ 1378.2 ಮಿ.ಮೀ, ಶ್ರೀರಂಗಪಟ್ಟಣ 1351.7 ಮಿ.ಮೀ ಮಳೆ ಸುರಿದಿದೆ.

4 ತಿಂಗಳಲ್ಲಿ 730 ಮಿ.ಮೀ ಮಳೆ: ಕಳೆದ ಜೂನ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೂ ಸರಾಸರಿ 730 ಮಿ.ಮೀ ಮಳೆಯಾಗಿದೆ. ಇದರಿಂದ ಶೇ.131 ಹೆಚ್ಚುವರಿ ಮಳೆಯಾಗಿತ್ತು. ಕೆ.ಆರ್‌.ಪೇಟೆ 672.7 ಮಿ.ಮೀ, ಮದ್ದೂರು 792 ಮಿ.ಮೀ, ಮಳವಳ್ಳಿ 629.1 ಮಿ.ಮೀ, ಮಂಡ್ಯ 870.7 ಮಿ.ಮೀ, ನಾಗಮಂಗಲ 787.8 ಮಿ.ಮೀ, ಪಾಂಡವಪುರ 644.1 ಮಿ.ಮೀ, ಶ್ರೀರಂಗಪಟ್ಟಣ 675.1 ಮಿ.ಮೀ ಮಳೆಯಾಗಿದೆ.

ಅಕ್ಟೋಬರ್‌ನಲ್ಲೇ 276.7 ಮಿ.ಮೀ ಮಳೆ: ಕಳೆದ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದುವರೆಗೂ ಅಕ್ಟೋಬರ್‌ನಲ್ಲಿ ಇಷ್ಟೊಂದು ಮಳೆ ಸುರಿದಿಲ್ಲ. ಕಳೆದ ಅ.1ರಿಂದ 21ರವರೆಗೆ 276.7 ಮಿ.ಮೀ ಮಳೆಯಾಗಿದೆ. ಕೆ.ಆರ್‌ .ಪೇಟೆ 309.9 ಮಿ.ಮೀ, ಮದ್ದೂರು 253.8 ಮಿ.ಮೀ, ಮಳವಳ್ಳಿ 280.8 ಮಿ.ಮೀ, ಮಂಡ್ಯ 311.7 ಮಿ.ಮೀ, ನಾಗಮಂಗಲ 207.4 ಮಿ.ಮೀ, ಪಾಂಡವಪುರ 330.1 ಮಿ.ಮೀ, ಶ್ರೀರಂಗಪಟ್ಟಣ 277.1 ಮಿ.ಮೀ ಮಳೆ ಸುರಿದಿದೆ.

Advertisement

ಬೆಳೆಗಳಿಗೆ ರೋಗ ಭೀತಿ: ಅತಿ ಹೆಚ್ಚು ಮಳೆ ಆಗುತ್ತಿರುವುದರಿಂದ ಹಾಗೂ ಪ್ರತಿದಿನ ಮೋಡ ಕವಿದ ವಾತಾವರಣವಿರುವುದರಿಂದ ಬೆಳೆಗಳಿಗೆ ರೋಗ ಭೀತಿ ಎದುರಾಗುತ್ತಿದೆ. ಈಗಾಗಲೇ ಅಲ್ಲಲ್ಲಿ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ರೈತರಲ್ಲಿ ಆತಂಕ ಮೂಡುವಂತೆ ಮಾಡಿದೆ. ಅಲ್ಲದೆ, ಭತ್ತದ ಬೆಳೆಗೆ ಫಸಲ್‌ ಬಿಮಾ ವಿಮೆ ಮಾಡಿಸದ ರೈತರು ನಷ್ಟ ಅನುಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ.

ಹಿಂಗಾರು ಮಳೆಯಿಂದ ರೈತರಿಗೆ ಸಂಕಷ್ಟ: ಆಗಸ್ಟ್‌ ಹಾಗೂ ಸೆಪ್ಟೆಂಬರ್‌ವರೆಗೂ ರೈತರು ಬಿತ್ತನೆಯಲ್ಲಿ ತೊಡಗಿದ್ದರು. ಆದರೆ, ವಿಪರೀತ ಮಳೆಯಿಂದ ತಡವಾಗಿ ರೈತರು ಬಿತ್ತನೆ ಕಾರ್ಯ ನಡೆಸಿದ್ದಾರೆ. ಅಲ್ಲದೆ, ಅಕ್ಟೋಬರ್‌ ಮೊದಲ ವಾರದವರೆಗೂ ಬಿತ್ತನೆ ಮಾಡಲಾಗಿದೆ. ಈಗ ಹಿಂಗಾರು ಮಳೆ ಸುರಿಯುತ್ತಿದ್ದು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.

ಬಿತ್ತನೆ ಕಾರ್ಯವೂ ಕುಂಠಿತವಾಗಿದ್ದು ಈಗಿರುವ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕಳೆದ 4ದಿನ ಸುರಿದ ಮಳೆಗೆ 430ಕ್ಕೂ ಹೆಕ್ಟೇರ್‌ನಲ್ಲಿ ಕೃಷಿ ಬೆಳೆಗಳು ನಾಶವಾಗಿವೆ.

ಅ.15-21ರವರೆಗೆ

160.5 ಮಿ.ಮೀ ಮಳೆ

ತಾಲೂಕು ಮಳೆ (ಮಿ.ಮೀ)

ಕೆ.ಆರ್‌.ಪೇಟೆ 144.3

ಮದ್ದೂರು 159.5

ಮಳವಳ್ಳಿ 193.3

ಮಂಡ್ಯ 222.6

ನಾಗಮಂಗಲ 103.9

ಪಾಂಡವಪುರ 163.7

ಈ ವರ್ಷ ವಿಚಿತ್ರದಂತೆ ಮಳೆ ಸುರಿಯುತ್ತಿದೆ. ರೈತರು ಅತಿ ಹೆಚ್ಚು ಯೂರಿಯಾ ಬಳಸುತ್ತಿರುವು ದರಿಂದ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯಿಂದ ರೈತರಿಗೆ ಜಾಗೃತಿ ಮೂಡಿಸ ಲಾಗುತ್ತಿದೆ. ಭತ್ತದ ಬೆಳೆಗೆ ವಿಮೆ ಮಾಡಿಸಲು ತಿಳಿಸಲಾಗಿತ್ತು. ಆದರೆ ಯಾವ ರೈತರೂ ವಿಮೆ ಮಾಡಿಸಿಲ್ಲ. ಅಶೋಕ್‌, ಕೃಷಿ ಜಂಟಿ ನಿರ್ದೇಶಕರು, ಮಂಡ್ಯ

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next