ಮಂಗಳವಾರ ವಿಧಾನಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ವರದಿಯನ್ನು ಮಂಡಿಸಿದರು.
Advertisement
ರಾಜ್ಯದಲ್ಲಿ ಪರಿಶಿಷ್ಟ ಹಾಗೂ ಇತರೆ ಜನಾಂಗದವರು ಶಾಂತಿ ಸೌಹಾರ್ದತೆಯಿಂದ ಇರಲು ಆಯಾ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದಾಗ ದಲಿತರ ಮನೆಗೆ ಹೋಗಿ ಅರಿವು ಮೂಡಿಸುವ ಕೆಲಸ ಆಗಬೇಕು. ಈ ಮೂಲಕ ಜಿಲ್ಲಾಡಳಿತ ಪರಿಶಿಷ್ಟರ ಸಹಕಾರಕ್ಕೆ ಬರಲಿದೆ ಎಂಬ ಜಾಗೃತಿ ಮೂಡಿಸುವ ಅಗತ್ಯವಿದೆ. ಅತಿ ಸೂಕ್ಷ್ಮ ಪ್ರದೇಶಗಳಾದ ಗ್ರಾಮಗಳಿಗೆ ಪೊಲೀಸರು ಆಗಾಗೆ ಭೇಟಿ ನೀಡಬೇಕು. ಗ್ರಾಮದ ಜನರಲ್ಲಿ ವಿಶ್ವಾಸ ಮೂಡಿಸುವ ಜತೆಗೆ ಪರಿಶಿಷ್ಟರು ಹಾಗೂ ಸಾಮಾನ್ಯರ ನಡುವೆ ಸೌಹಾರ್ದ ಜೀವನ ಸಾಗಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳಿಂದ ಅತ್ಯಂತ ಸೂಕ್ಷ್ಮ ಪ್ರದೇಶದ ಗ್ರಾಮಗಳಿಗೆ ಆಗಾಗೆ ಗಸ್ತು ನಡೆಸುತ್ತಿರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ನೈಜತೆಯನ್ನು ಪರಿಶೀಲಿಸದೇ ಸುಳ್ಳು ಜಾತಿ ಪ್ರಮಾಣಪತ್ರ ನೀಡುವ ಅಧಿಕಾರಿ, ನೌಕರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಐಐಟಿ, ಐಐಎಂ ಮೊದಲಾದ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಬದಲಾಗಿ ನಾಲ್ಕು ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು. ಪಿಎಚ್.ಡಿ ಮಾಡುವವರಿಗೆ ವಿಶ್ವವಿದ್ಯಾಲಯಗಳಲ್ಲಿ 35 ಸಾವಿರ ರೂ. ಏಕರೂಪ ಶಿಷ್ಯ ವೇತನ ನೀಡಬೇಕು. ಇದರ ವೆಚ್ಚವನ್ನು ವಿದ್ಯಾರ್ಥಿ ಕಲ್ಯಾಣ ನಿಧಿ ಹಾಗೂ ಇಲಾಖೆಯಿಂದ ಸಮಾನವಾಗಿ ಭರಿಸಬೇಕು. ಆಯಾ ಜಿಲ್ಲೆಗಳಲ್ಲೆ ವಿದ್ಯಾರ್ಥಿಗಳಿಗೆ ವಸತಿ ಶಾಲೆಯಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ವರದಿಯಲ್ಲಿ ತಿಳಿಸಿದೆ.