Advertisement

ಅನುಭವ ಮಂಟಪ ಉತ್ಸವಕ್ಕೆ ಸಿದ್ಧತೆ ಪೂರ್ಣ

10:53 AM Nov 25, 2017 | |

ಬಸವಕಲ್ಯಾಣ: ಸಾಮಾಜಿಕ ಕ್ರಾಂತಿ ಮಾಡಿದ ವಿಶ್ವ ಗುರು ಬಸವಣ್ಣನ ಕಾಯಕ ಭೂಮಿಯಲ್ಲಿ ವಿಶ್ವ ಬಸವ ಧರ್ಮ ಅನುಭವ ಮಂಟಪ ಟ್ರಸ್ಟ್‌ ನಿಂದ ಅನುಭವ ಮಂಟಪದ ಪರಿಸರದಲ್ಲಿ ನ.25 ಮತ್ತು 26ರಂದು ನಡೆಯಲಿರುವ 38ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿವೆ.

Advertisement

ಟ್ರಸ್ಟ್‌ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದೇವರು ನೇತೃತ್ವದಲ್ಲಿ ಅನುಭವ ಮಂಟಪದ ಪರಿಸರದಲ್ಲಿ ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕಾಗಿ ವಿಶಾಲ ಮೈದಾನದಲ್ಲಿ ಡಾ| ಎಂ.ಎಂ. ಕಲಬುರ್ಗಿ ಹೆಸರಿನಲ್ಲಿ 150×250 ಅಡಿ ಬೃಹತ್‌ ಮಂಟಪ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕಾಗಿ ಸಮಾಜ ವಿಜ್ಞಾನಿ ಡಾ| ಹಿರೇಮಲ್ಲೂರ ಈಶ್ವರನ್‌ ಅವರ ಹೆಸರಿನಲ್ಲಿ 35×60 ಭವ್ಯವಾದ ವೇದಿಕೆ ನಿರ್ಮಿಸಲಾಗಿದೆ. ಕಮ್ಮಟಕ್ಕಾಗಿ ಬರುವ ಬಸವ ಭಕ್ತರಿಗೆ ಕುಳಿತುಕೊಳ್ಳಲು ಮೂರು ಸಾವಿರ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ವೇದಿಕೆ ಮುಂಭಾಗದಲ್ಲಿ ಗಣ್ಯರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ
ಮಾಡಲಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯ, ನೆರೆಯ ಮಹಾರಾಷ್ಟ್ರ, ತೆಲಂಗಾಣದ ನಾನಾ ಕಡೆಗಳಿಂದ ಸಾವಿರಾರು ಬಸವ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. 

ಕಾರ್ಯಕ್ರಮ ಯಶಸ್ಸಿಗಾಗಿ ಪ್ರಮುಖರನ್ನೊಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದ್ದು, ಕಳೆದೊಂದು ತಿಂಗಳಿಂದ ನಾಡಿನ ವಿವಿಧ ಭಾಗದಲ್ಲಿ ಸಂಚರಿಸಿ ರಥ ಯಾತ್ರೆಗಳ ಮೂಲಕ ಎಲ್ಲೆಡೆ ಪ್ರಚಾರ ನಡೆಸಿ ಬಸವ ಭಕ್ತರನ್ನು ಆಹ್ವಾನಿಸಲಾಗಿದೆ. ಉತ್ಸವಕ್ಕೆ ಆಹ್ವಾನಿಸುವ ಭಿತ್ತಿಪತ್ರಗಳು, ಕಟೌಟ್‌ಗಳು ಗಮನ ಸೆಳೆಯುತ್ತಿವೆ. ಅನುಭವ ಮಂಟಪಕ್ಕೆ ಬರುವ ಮುಖ್ಯ ರಸ್ತೆಯಲ್ಲಿ ಮಹಾದ್ವಾರಗಳು ಸಿದ್ಧವಾಗುತ್ತಿವೆ.

ಉತ್ಸವದಲ್ಲಿ ಭಾಗವಹಿಸುವ ಭಕ್ತರಿಗಾಗಿ ದಾಸೋಹದ ವ್ಯವಸ್ಥೆಯನ್ನು ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಮಂಡಳಿಯಿಂದ ಮಾಡಲಾಗುತ್ತಿದೆ. ದೂರದಿಂದ ಬರುವ ಜನರಿಗಾಗಿ ಉಳಿದುಕೊಳ್ಳಲು ವಸತಿ
ವ್ಯವಸ್ಥೆ ಮಾಡಲಾಗುತ್ತಿದೆ. 

ಇಂದು ಉದ್ಘಾಟನೆ: ಅನುಭವ ಮಂಟಪ ಉತ್ಸವವನ್ನು ನ.25ರಂದು ಬೆಳಗ್ಗೆ 10ಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಗದಗ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಜಗದ್ಗುರು ಡಾ| ಸಿದ್ಧಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ, ಹಾರಕೂಡನ ಶ್ರೀ ಡಾ| ಚನ್ನವೀರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. 

Advertisement

ಮುಂಡರಗಿಯ ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಪ್ರಭು ತೋಟದಾರ್ಯ ಮಹಾಸ್ವಾಮೀಜಿ ಅನುಭಾವ ನೀಡಲಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರವಾಸೋದ್ಯಮ
ಸಚಿವ ಪ್ರಿಯಾಂಕ್‌ ಖರ್ಗೆ ಮುಖ್ಯ ಅತಿಥಿಗಳಗಿ ಭಾಗವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು.

ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಮಲ್ಲಿಕಾರ್ಜುನ ಖೂಬಾ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಎಂಎಲ್ಸಿ ವಿಜಯಸಿಂಗ್‌, ಶಾಸಕ ರಹೀಮಖಾನ್‌, ಬಿಡಿವಿಸಿ ಅಧ್ಯಕ್ಷ ಮಲ್ಲಯ್ಯ ಹಿರೇಮಠ, ಬಿಡಿಪಿಸಿ ಅಧ್ಯಕ್ಷ ವೀರಣ್ಣ ಹಲಶೆಟ್ಟಿ ಸೇರಿದಂತೆ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3ಕ್ಕೆ ಲಿಂಗಾಯತಕ್ಕೆ ಬಸವಣ್ಣನೇ ಕತೃ ಎನ್ನುವ ವಿಷಯ ಕುರಿತು ಗೋಷ್ಠಿ ನಡೆಯಲಿದ್ದು, ತಾಂಬೋಳನ ಶ್ರೀ ವಿಜಯಕುಮಾರ ಮಹಾಸ್ವಾಮೀಜಿ ಸಾನ್ನಿಧ್ಯ, ಬಸವಬೆಳವಿಯ ಶ್ರೀ ಶರಣಬಸವ ಮಹಾಸ್ವಾಮೀಜಿ ನೇತೃತ್ವ, ಬೇಲೂರನ ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಮ್ಮುಖ ವಹಿಸುವರು. 

ತೋಟಗಾರಿಕೆ ವಿವಿಯ ಅಶೋಕ ಆಲೂರ ಗೋಷ್ಠಿ ಉದ್ಘಾಟಿಸಲಿದ್ದು, ಡಾ| ಅಮರನಾಥ ಸೋಲಪುರೆ ಅಧ್ಯಕ್ಷತೆ ವಹಿಸುವರು. ಧಾರವಾಡದ ಎನ್‌.ಜಿ. ಮಹಾದೇವಪ್ಪ, ಶಹಾಪುರದ ವಿಶ್ವರಾಧ್ಯ ಸತ್ಯಂಪೇಟೆ, ಕೊಲ್ಲಾಪುರದ ರಾಜಾಭಾವು ಸಿರಗುಪ್ಪೆ ಅನುಭಾವ ನೀಡುವರು.

ಸಂಜೆ 6ಕ್ಕೆ ವಚನ ಭಜನೆ ಸ್ಪರ್ಧೆ ನಡೆಯಲಿದ್ದು, ಶ್ರೀ ಅಭಿನವ ಷಣ್ಮಖ ಮಹಾಸ್ವಾಮೀಜಿ ಸಾನ್ನಿಧ್ಯ, ಶ್ರೀ ಶಂಕರಲಿಂಗ ಮಹಾಸ್ವಾಮೀಜಿ, ಶ್ರೀ ಸಂಗಮೇಶ್ವರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಸ್ಪರ್ಧೆಗೆ ಚಾಲನೆ ನೀಡಲಿದ್ದು, ಕನ್ನಡ ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರಾಜಶೇಖರ
ಪಾಟೀಲ್‌ ಅಧ್ಯಕ್ಷತೆ ವಹಿಸುವರು.

ಪ್ರಶಸ್ತಿಗೆ ಶರಣ ಸಾಹಿತ್ಯ ಕೃತಿಗಳ ಆಯ್ಕೆ

ಬಸವಕಲ್ಯಾಣ: ವಿಶ್ವ ಬಸವಧರ್ಮ ಟ್ರಸ್ಟ್‌ ಅನುಭವ ಮಂಟಪ ಆಶ್ರಯದಲ್ಲಿ ಆಯೋಜಿಸಿರುವ 38ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ನಿಮಿತ್ತ ಪುಸ್ತಕ ಪ್ರಶಸ್ತಿಗಳಿಗೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.  ಶರಣ ಸಾಹಿತ್ಯಕ್ಕೆ ಸಂಬಂಧಿ ಸಿದ ವಿವಿಧ ವಿಷಯಗಳಲ್ಲಿ ಪುಸ್ತಕ ರಚಿಸಿದ 11ಜನ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಡಾ| ಮಲ್ಲಿಕಾರ್ಜುನ ಜೆ.ಆವೆ್ಣು ಅವರ ಅಧುನಿಕ ಸಾಹಿತ್ಯದಲ್ಲಿ ಬಸವಣ್ಣ ಸಂಶೋಧನಾ ಕೃತಿಗೆ ವ್ಯೋಮಕಾಯ ಸಿದ್ಧ ಅಲ್ಲಮ ಪ್ರಭುದೇವರ ಪ್ರಶಸ್ತಿ, ಡಾ| ಬಸವರಾಜ ಸಬರದ ಅವರ ಅಂಬಿಗ ನಿನ್ನ ನಂಬಿದೆ ನಾಟಕ ಕೃತಿಗೆ ಶಿವಯೋಗಿ ಸಿದ್ಧರಾಮೇಶ್ವರ ಪ್ರಶಸ್ತಿ, ಡಾ|  ಕುಂತಲಾ
ದುರಗಿ ಅವರ ಅಕ್ಕಮಹಾದೇವಿ ಮತ್ತು ಅಕ್ಕಮ್ಮನವರ ಆಯ್ದ ವಚನಗಳ ವ್ಯಾಖ್ಯಾನ ವಚನ ಚಿಂತನ ಕೃತಿಗೆ ವೀರ ವೈರಾಗ್ಯನಿಧಿ ಅಕ್ಕಮಹಾದೇವಿ ಪುಸ್ತಕ ಪ್ರಶಸ್ತಿ, ಡಾ| ಚಿತ್ಕಳಾ ಜೆ.ಮಠಪತಿ ಅವರ ಆಯ್ದಕ್ಕಿ ಮಾರಯ್ಯ ಮತ್ತು
ಲಕ್ಕಮ್ಮನವರು ಸಂಶೋಧನಾ ಕೃತಿಗೆ ಆಚಾರ ಪತ್ನಿ ಶರಣೆ ಗಂಗಾಂಬಿಕೆ ಪುಸ್ತಕ ಪ್ರಶಸ್ತಿ, ಡಾ| ಎಚ್‌.ಟಿ. ಪೋತೆ ಅವರ ಜಾಗತಿಕ ಚಿಂತಕರು ಮತ್ತು ಬಸವಣ್ಣನವರು ಸಂಪಾದನಾ ಕೃತಿಗೆ ಷಟ್‌ಸ್ಥಲ ಚಕ್ರವರ್ತಿ ಚನ್ನಬಸವಣ್ಣ ಪುಸ್ತಕ ಪ್ರಶಸ್ತಿ, ಡಾ| ಅಮರನಾಥ ಸೊಲಪುರೆ ಅವರ ಬಸವ ಪುರಾಣ ಮರಾಠಿ ಕೃತಿಗೆ ಶರಣ ಉರಿಲಿಂಗಪೆದ್ದಿ ಪುಸ್ತಕ ಪ್ರಶಸ್ತಿ, ಎಚ್‌. ಶಿನಾಥರೆಡ್ಡಿ ಅವರ ತ್ರಿಪದಿಗಳಲ್ಲಿ ಶಿವಶರಣರು ಜಾನಪದ ಕೃತಿಗೆ ಕ್ರಾಂತಿಗಂಗೋತ್ರಿ ನಾಗಲಾಂಬಿಕೆ ಪುಸ್ತಕ ಪ್ರಶಸ್ತಿ, ಸಂತೋಷಕುಮಾರ ಹೂಗಾರ ಅವರ ಶರಣೆಯರ ಅನುಭಾವ ಸಂಪದ ಕೃತಿ ಲದ್ದೆಯ ಸೋಮಣ್ಣ ಪ್ರಶಸ್ತಿ, ಮಾಣಿಕ ಭೂರೆ ಅವರ ದಲಿತ ಪೀಠಾಧಿಪತಿ ಕೃತಿಗೆ ಮಡಿವಾಳ ಮಾಚಿದೇವ ಪ್ರಶಸ್ತಿ, ರಮೇಶ ಸ್ವಾಮಿ ಕನಕಟ್ಟಾ ಅವರ ಬಸವದರ್ಶನ ಚರಿತ್ರೆ ಕೃತಿಗೆ ಧರ್ಮಗುರು ಬಸವಣ್ಣನವರ ಪ್ರಶಸ್ತಿ, ಶಂಕರಗೌಡ ಬಿರಾದಾರ ಗುಂಡಕನಾಳ (ಗುಂಬಿಶಂ) ಅವರ ವಚನ ವಿಶ್ಲೇಷಣೆ ಮೆರಮಿಂಡದೇವನ ವಚನಗಳ ಭಾವ-ಪರಭಾವ ಕೃತಿಗೆ ಶರಣೆ ನೀಲಾಂಬಿಕೆ ಪ್ರಶಸ್ತಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next