Advertisement

ಬಾಹ್ಯಾಕಾಶದಲ್ಲಿ ರಾವಣ

11:10 AM Mar 08, 2020 | Lakshmi GovindaRaj |

ರಾವಣ ಆ ಕಾಲದಲ್ಲಿಯೇ ವಿಮಾನ ಕುರಿತಾದ ಹಲವು ಕ್ರಾಂತಿಗೆ ಮುಂದಾದವನು ಎಂಬುದು ಲಂಕನ್ನರ ನಂಬಿಕೆ. ಈ ಕಾರಣದಿಂದಲೇ ಶ್ರೀಲಂಕಾವು ಬಾಹ್ಯಾಕಾಶಕ್ಕೆ ಕಳಿಸಿದ ತನ್ನ ಪ್ರಥಮ ಉಪಗ್ರಹಕ್ಕೆ “ರಾವಣ-1′ ಎಂದೇ ಹೆಸರಿಟ್ಟಿದೆ…

Advertisement

ರಾವಣನನ್ನು ಸಂಹರಿಸಿ, ಸೀತೆಯನ್ನು ಕರೆದುಕೊಂಡು ರಾಮ ಮರಳಿ ತಾಯ್ನಾಡಿಗೆ ಹೊರಟ. ರಾಜನನ್ನು ಕಳೆದುಕೊಂಡ ಲಂಕೆಯ ಗತಿ? ನ್ಯಾಯಪಕ್ಷಪಾತಿಯಾಗಿದ್ದ ವಿಭೀಷಣನಿಗೆ ಲಂಕೆಯ ಪಟ್ಟ ಒಲಿಯಿತು. ವಾಲ್ಮೀಕಿ ರಾಮಾಯಣದಲ್ಲಿ ಕೇಲನಿ ನದಿ ಮತ್ತು ಅಲ್ಲಿನ ವಿಭೀಷಣನ ಅರಮನೆಯನ್ನು ವರ್ಣಿಸಲಾಗಿದೆ. ಈಗ ಅಲ್ಲಿರುವ ಬೌದ್ಧ ಮಂದಿರದಲ್ಲಿ ವಿಭೀಷಣನಿಗೆ ಪಟ್ಟ ಕಟ್ಟುತ್ತಿರುವ ಅನೇಕ ಕೆತ್ತನೆಗಳಿವೆ. (ಬೌದ್ಧರು ವಿಭೀಷಣನ್ನು ದೇವ ಎಂದು ಪೂಜಿಸುತ್ತಾರೆ). ನ್ಯಾಯಪರತೆಗೆ ಹೆಸರಾಗಿದ್ದ ವಿಭೀಷಣನ ಈ ದೇಗುಲದಲ್ಲಿ, ಜನರು ತಮಗೆ ನ್ಯಾಯ ಸಿಗಲಿ ಎಂದು ಪ್ರಾರ್ಥಿಸುತ್ತಾರೆ. ಕೇಲನಿಯಾ, ರಾಜಧಾನಿ ಕೊಲೊಂಬೋದಿಂದ 10 ಕಿ.ಮೀ. ದೂರದಲ್ಲಿದೆ.

ಮುನ್ನೇಶ್ವರಮ್‌ ಕೋವಿಲ್‌: ಅಂತೂ ಪುಷ್ಪಕ ವಿಮಾನವನ್ನೇರಿ ರಾಮ, ಭಾರತದ ಕಡೆ ಪಯಣ ಬೆಳೆಸಿದ. ಆದರೆ ರಾವಣ, ಮಹಾಬ್ರಾಹ್ಮಣ. ಆತನನ್ನು ಹತ್ಯೆಮಾಡಿದ ಬ್ರಹ್ಮಹತ್ಯಾ ದೋಷ ರಾಮನನ್ನು ಹಿಂಬಾಲಿಸುತ್ತಿತ್ತು. ಮುನ್ನೇಶ್ವರಮ್‌ಗೆ ಬಂದಾಗ ಈ ದೋಷ ಸ್ಥಗಿತವಾಯಿತು. ರಾಮ ತನ್ನ ವಿಮಾನವನ್ನು ನಿಲ್ಲಿಸಿ ಶಿವನನ್ನು ಪರಿಹಾರಕ್ಕಾಗಿ ಪ್ರಾರ್ಥಿಸಿದ. ಶಿವನ ಸಲಹೆಯಂತೆ ಶ್ರೀಲಂಕೆಯ ಮೂರು ಕಡೆ ಮನಾವರಿ, ಟ್ರಿಕೋ, ಮನ್ನಾರ್‌ ಮತ್ತು ತಮಿಳುನಾಡಿನ ರಾಮೇಶ್ವರಮ್‌ನಲ್ಲಿ ರಾಮ, ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಿದ. ಮುನ್ನೇಶ್ವರಮ್‌ ಕೋವಿಲ್‌, ಪುಟ್ಟಾಲಮ್‌ ಜಿಲ್ಲೆಯ ಚಿಲಾವ್‌ನಲ್ಲಿದೆ.

ಈ ರೀತಿ ಶ್ರೀಲಂಕಾದಲ್ಲಿ ರಾಮಾಯಣದ ಸ್ಥಳಗಳನ್ನು ಹುಡುಕುತ್ತಾ, ಹಲವು ಸ್ವಾರಸ್ಯಕರ ಕತೆಗಳ ಜತೆ ಐತಿಹಾಸಿಕ ಕುರುಹುಗಳೂ ದೊರೆಯುತ್ತವೆ. ಸಿಂಹಳೀಯರು ರಾಮನನ್ನು ದೇವರು ಎಂದು ಪೂಜಿಸಿದರೂ ರಾವಣ ಅವರಿಗೆ ಕೆಟ್ಟವನಲ್ಲ. ಆತ, ದುರಂತ ಅಂತ್ಯ ಕಂಡ ನಾಯಕ ಎಂದು ಬಹಳ ಅಭಿಮಾನ. ವಿಜ್ಞಾನ- ತಂತ್ರಜ್ಞಾನ ಕುರಿತು ಅಪಾರ ಆಸಕ್ತಿ ಮತ್ತು ಅನುಭವ ಹೊಂದಿದ್ದ ರಾವಣನ ನಾಡಾದ ಲಂಕೆಯನ್ನು “ವಿಮಾನಗಳ ದೇಶ’ ಎಂದೇ ಕರೆಯಲಾಗುತ್ತಿತ್ತು. ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ ಪುಷ್ಪಕ ವಿಮಾನದ ಮೂಲಕ ಹಾದು ಹೋಗುವಾಗ ರಾಮ- ಲಕ್ಷ್ಮಣನಿಗೆ “ಲಂಕೆಯು ನಾನಾ ವಿಮಾನಗಳಿಂದ ಭೂಮಿ ಮೇಲೆ ಶೋಭಿಸುತ್ತಿದೆ’ ಎಂದು ಬಣ್ಣಿಸುತ್ತಾನೆ.

ಮಂಡೋದರಿಗಾಗಿ ವಿಮಾನ!: ಆ ಕಾಲದ ಎರಡು ಮುಖ್ಯ ವಿಮಾನಗಳಲ್ಲಿ ಒಂದು ಸೀತೆಯನ್ನು ಲಂಕೆಗೆ ಕರೆತಂದ ಪುಷ್ಪಕ ವಿಮಾನ. ಹೂವಿನ ವಿನ್ಯಾಸದಲ್ಲಿದ್ದ ಈ ವಿಮಾನಕ್ಕೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹಿಗ್ಗುವ ಕುಗ್ಗುವ ಮತ್ತು ಒಡೆಯನ ಇಚ್ಛೆಗೆ ತಕ್ಕಂತೆ ಹಾರುವ ವಿಶೇಷ ಶಕ್ತಿ ಇತ್ತು ಎಂದು ಉಲ್ಲೇಖೀಸಲಾಗಿದೆ. ಇನ್ನೊಂದು, ರಾವಣನ ಬಹುಪ್ರಸಿದ್ಧ ವಿಮಾನ “ದಂಡು ಮೊನರ’. ನವಿಲಿನ ಆಕಾರದಲ್ಲಿದ್ದ ಈ ವಿಮಾನವನ್ನು ಬಳಸಿ ರಾವಣ ತನ್ನ ರಾಣಿ ಮಂಡೋದರಿಯೊಂದಿಗೆ ಪಯಣಿಸುತ್ತಿದ್ದ ಎನ್ನಲಾಗುತ್ತದೆ .

Advertisement

ರಾಕೆಟ್‌ ಏರಿದ ರಾವಣ: ಐದು ಸಾವಿರ ವರ್ಷಗಳಷ್ಟು ಹಿಂದೆಯೇ ವೈಮಾನಿಕ ಜ್ಞಾನ ಹೊಂದಿದ್ದ ವಿಮಾನಗಳನ್ನು ಯಶಸ್ವಿಯಾಗಿ ಬಳಸುತ್ತಿದ್ದ ರಾವಣನನ್ನು, “ವಾಯುಯಾನದ ಪ್ರವರ್ತಕ’ ಎಂದು ಶ್ರೀಲಂಕಾ ಸರ್ಕಾರ ಘೋಷಿಸಿ, ಆತ ಬಳಸಿದ್ದ ವಿಮಾನ, ಚಾಲನಾತಂತ್ರಗಳನ್ನು ಕಂಡುಹಿಡಿಯಲು ಸಂಶೋಧನೆ ನಡೆಸಿದೆ. ಮಾತ್ರವಲ್ಲ, 2019ರ ಏಪ್ರಿಲ್‌ನಲ್ಲಿ ಶ್ರೀಲಂಕಾ, ಬಾಹ್ಯಾಕಾಶಕ್ಕೆ ಕಳಿಸಿದ ತನ್ನ ಪ್ರಥಮ ಉಪಗ್ರಹಕ್ಕೆ “ರಾವಣ-1′ ಎಂದು ಹೆಸರಿಟ್ಟು, ಗೌರವ ಸೂಚಿಸಿದೆ.

ಆ 6 ವಿಮಾನ ನಿಲ್ದಾಣಗಳು: ಶ್ರೀಲಂಕಾದಲ್ಲಿ ಪ್ರಚಲಿತವಿರುವ ರಾಮಾಯಣ ಹಾಗೂ ಸ್ಥಳೀಯ ಕತೆಗಳ ಪ್ರಕಾರ, ರಾವಣನ ಕಾಲದಲ್ಲಿ 6 ವಿಮಾನ ನಿಲ್ದಾಣಗಳಿದ್ದವಂತೆ. ವೆರಗಂಟೋಟ, ವಾರಿಯಪೊಲ, ಗುರುಲುಪೊತ, ತೋತುಪೊಲ, ಉಸ್ಸಂಗೋಡ ಮತ್ತು ವಾರಿಯಪೊಲ. ಈ ಎಲ್ಲಾ ಹೆಸರುಗಳು ವಿಮಾನಕ್ಕೆ ಸಂಬಂಧಿಸಿದ ಅರ್ಥವನ್ನು ಸಿಂಹಳಿಯಲ್ಲಿ ಹೊಂದಿದೆ. ಈ ಸ್ಥಳಗಳು ಕೂಡ ಸಮತಟ್ಟಾಗಿದ್ದು, ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಜಾಗದಂತೆಯೇ ತೋರುತ್ತವೆ.

* ಡಾ.ಕೆ.ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next