ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾಂ) ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರುವ ಕುಂದಾಪುರದ ಬೆಟಕೇರಿ ನಿವಾಸಿ ರಾಕೇಶ್ ಬಿ. ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಕುಮಟಾದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಕೇಶ್ ಬಿ. ತನ್ನ ನೆರೆಯ ಬಿಇಡಿ ಓದುತ್ತಿದ್ದ ಯುವತಿಯ ಜತೆ ಪ್ರೇಮ ಸಂಬಂಧ ಹೊಂದಿದ್ದ. ಆ ಬಳಿಕ ಬಂಟ್ವಾಳ ಮತ್ತು ತದನಂತರ ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದ. 2015ರಲ್ಲಿ ಕುಂದಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಯುವತಿಯನ್ನು ಕುಂದಾಪುರಕ್ಕೆ ಕರೆಸಿಕೊಂಡಿದ್ದ ರಾಕೇಶ್, ಯುವತಿಯ ಒಪ್ಪಿಗೆ ಪಡೆಯದೆ ದೈಹಿಕ ಸಂಪರ್ಕ ಬೆಳೆಸಿದ್ದ. ರಾಕೇಶ್ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಕುಂದಾಪುರ ನ್ಯಾಯಾಲಯ ರಾಕೇಶ್ ಬಿ.ಯನ್ನು ದೋಷಮುಕ್ತಗೊಳಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಯುವತಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಪ್ರಭಾಕರ ಶಾಸಿŒ, ನ್ಯಾ| ಉಮೇಶ್ ಅಡಿಗ ಅವರನ್ನು ಒಳಗೊಂಡಿದ್ದ ದ್ವಿಸದಸ್ಯ ನ್ಯಾಯಪೀಠ, ರಾಕೇಶ್ ಬಿ. ದೋಷಿ ಎಂದು ತೀರ್ಪಿತ್ತಿದೆ.
ರಾಕೇಶ್ಗೆ 7 ವರ್ಷಗಳ ಸಜೆ, 50 ಸಾವಿರ ರೂ ದಂಡ, ದಂಡ ಕಟ್ಟಲು ವಿಫಲವಾದರೆ ಮತ್ತೆ 6 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಮೋಸ ಸಾಬೀತಾದ ಹಿನ್ನೆಲೆಯಲ್ಲಿ 6 ತಿಂಗಳ ಜೈಲು ಶಿಕ್ಷೆ ನೀಡಲಾಗಿದ್ದು, ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ಕೋರ್ಟ್ ಹೇಳಿದೆ. ದಂಡದಲ್ಲಿ 45 ಸಾವಿರ ರೂ ಸಂತ್ರಸ್ತೆಗೆ ಮತ್ತು 5 ಸಾವಿರ ರೂಗಳನ್ನು ರಾಜ್ಯ ಸರಕಾರಕ್ಕೆ ಪಾವತಿಸಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತೆಗೆ ಪಾವತಿಸಬೇಕಾದ ಪರಿಹಾರ ಮೊತ್ತದ ಬಗ್ಗೆ ಆರು ತಿಂಗಳೊಳಗೆ ತೀರ್ಮಾನ ಕೈಗೊಳ್ಳಬೇಕು, ರಾಕೇಶ್ 45 ದಿನದೊಳಗೆ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಪ್ರಕರಣದಲ್ಲಿ ಕುಂದಾಪುರದ ವಕೀಲ ರವಿಕಿರಣ ಮುಡೇಶ್ವರ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮತ್ತು ಸಂತ್ರಸ್ತ ಯುವತಿ ಪರ ಹರೀಶ್ ಟಿ. ಭಂಡಾರಿ ವಾದಿಸಿದ್ದರು.