ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯಾ ದೊರಕಿಸಿಕೊಡಬೇಕೆಂದು ನಡೆದ ಸ್ವಾತಂತ್ರ್ಯಾ ಸಂಗ್ರಾಮದಲ್ಲಿ ಕುಗ್ರಾಮದಿಂದ ಬಂದಿದ್ದ
ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯಾದ ಕಿಚ್ಚು ಹಚ್ಚಿದ್ದರು ಎಂದು ಕರ್ನಾಟಕ ಉತ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೆ. ಫಣಿಂದ್ರ ಹೇಳಿದರು.
ಅವರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ 72ನೇ ಸ್ವಾತಂತ್ರೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತವು ಹಲವು ಧರ್ಮಗಳ ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಈ ಸಂಸ್ಕೃತಿಯಲ್ಲಿ ನಾವೆಲ್ಲ ಬೆಳೆದಿದ್ದು, ಇಂತಹ ಸೌಹಾರ್ದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ತಿಳಿಹೇಳಬೇಕಾಗಿದೆ ಎಂದರು.
ಭಾರತವನ್ನು ನಾವು ಇನ್ನು ಅಭಿವೃದ್ಧಿ ಹೊಂದಿದ ದೇಶ ಎಂದು ಕರೆಯುತ್ತಿಲ್ಲ. ಅಭಿವೃದ್ಧಿ ಹೊಂದಿದ ದೇಶದ ಪಟ್ಟಿಯಲ್ಲಿ ಭಾರತವನ್ನು ನಾವು ಕಾಣಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದೇಶ ಸೇವೆಗೆ ತಮ್ಮದೆ ಆದ ಅಳಿಲು ಸೇವೆ ಸಲ್ಲಿಸಲು ಸಶಕ್ತರಾಗಬೇಕು. ಪಾಲಕರು-ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ರೀತಿ ನೀತಿ ಕಲಿಸಬೇಕು. ಯುವ ಸಮುದಾಯ ಸ್ವಾತಂತ್ರ್ಯಾ ಹೋರಾಟದ ಇತಿಹಾಸ ತಿಳಿದುಕೊಂಡು ಉತ್ತಮ ಪ್ರಜೆಯಾಗಿ ಜೀವನ ಸಾಗಿಸಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಟಿ. ಕಟ್ಟಿಮನಿ, ಜಿಲ್ಲಾ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಕರ್ನಾಟಕ ವಕೀಲರ ಪರಿಷತ್ ಸದಸ್ಯ ಕಾಶೀನಾಥ ಮೋತಕಪಲ್ಲಿ, ಬಾರ್ ಅಸೊಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಪಾಟೀಲ ಹಾಗೂ ವಿವಿಧ ಶ್ರೇಣಿಯ ಹಿರಿಯ-ಕಿರಿಯ ನ್ಯಾಯಾಧೀಶರು, ನ್ಯಾಯವಾದಿಗಳು, ಬಾರ್ ಕೌನ್ಸಿಲ್ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.