Advertisement

ಬಾಲ್ಯದ ಸ್ವಾತಂತ್ರ್ಯೋತ್ಸವದ ಮುಂಜಾವು: ವಿನೋದ, ಉತ್ಸಾಹ ತುಂಬಿದ ದಿನಗಳು

03:30 PM Aug 20, 2023 | Team Udayavani |

ಪ್ರತೀ ಆಗಸ್ಟ್‌ 15ರ ಮುಂಜಾನೆ ಭಾರತಕ್ಕೆ ಪ್ರಮುಖ ಹಬ್ಬವನ್ನಾಚರಿಸಿಕೊಳ್ಳುವ ಪರ್ವ ಕಾಲ. ಸ್ವಾತಂತ್ರೊéàತ್ಸವ, ಅಥವಾ ವಿಮೋಚನ ದಿನ ಕೆಂಪುಕೋಟೆಯಿಂದ ಮನೆಮನೆ ಗಳಲ್ಲೂ ಆಚರಿಸುವಷ್ಟು ಪವಿತ್ರ. ಸ್ವಾತಂತ್ರ್ಯ ದಿನವು “ಶೌರ್ಯ ಮತ್ತು ತ್ಯಾಗಕ್ಕೆ’ ಸಾಕ್ಷಿಯಾಗಿರುವ ದಿನ ಹಾಗೂ ನಮ್ಮ ಮಣ್ಣಿನ ಕಥೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಅದಾವ ಕಥೆಗಳು? ಗುಲಾಮಿತನದಿಂದ ವಿಮೋಚನೆಗೆ ಶ್ರಮಿಸಿದವರ ಕಥೆಗಳು. ಸಮಯವು ಎಷ್ಟು ವೇಗವಾಗಿ ಹಾರುತ್ತದೆ ಎಂಬುದು ಆಶ್ಚರ್ಯಕರವಾಗಿದೆ! ನಮ್ಮ 77ನೇ ಸ್ವಾತಂತ್ರ್ಯ ವರ್ಷವನ್ನು ಸಹ ಆಚರಿಸಲಾಯಿತು. ಪ್ರತೀ ವರ್ಷ, ಭಾರತವು ಜಾಗತಿಕವಾಗಿ ಮಾಡಿದ ಬೆಳವಣಿಗೆಯನ್ನೂ ಸಾಕ್ಷಿಯಾಗಿಸುವ ದಿನ, ಸ್ವಾತಂತ್ರ್ಯೋತ್ಸವ.

Advertisement

ಸಂಪ್ರತಿ ಪರದೇಶವಾಸಿಯಾಗಿದ್ದರೂ, ಸ್ವಾತಂತ್ರ್ಯೋತ್ಸವದ ಆಚರಣೆಯ ಲಗುಬಗೆ ಕಳೆದ ವರುಷದ್ದೇ ಇದ್ದರೂ, ಸಡಗರದ ಬಾಲ್ಯದ ನೆನಪುಗಳು ಬಹಳ ಅಮೂಲ್ಯ. ಈ ವಿಶೇಷ ದಿನಕ್ಕೆ ಸಂಬಂಧಿಸಿದ ನೆನಪುಗಳು ಮತ್ತು ಸಂತೋಷದ ಕ್ಷಣಗಳು, ವಿಶೇಷವಾಗಿ ನಮ್ಮ ಶಾಲ ದಿನಗಳಲ್ಲಿ, ನಮ್ಮ ಮನಸ್ಸಿನಲ್ಲಿ ಆಳವಾಗಿ ಕೆತ್ತಲ್ಪಟ್ಟಿವೆ. ವಾಸ್ತವವಾಗಿ, ಇದು ಸ್ವಾತಂತ್ರ್ಯ ದಿನವಾಗಿರಲಿ ಅಥವಾ ಇನ್ನಾವುದೇ ಹಬ್ಬವಾಗಿರಲಿ, ಬಾಲ್ಯದ ಆಚರಣೆಗಳು ಅನನ್ಯ. ಆ ದಿನಗಳಲ್ಲಿ, ಸ್ವಾತಂತ್ರ್ಯ ದಿನವು ಮುಖ್ಯವಾಗಿ ವಿನೋದ ಮತ್ತು ಉತ್ಸಾಹದ ದಿನವಾಗಿತ್ತು. ಅದರ ಮಹತ್ವದ ಬಗ್ಗೆ ನಮಗೆ ಸಂಪೂರ್ಣ ತಿಳುವಳಿಕೆ ಇಲ್ಲದಿದ್ದರೂ, ನಾವು ಹೆಮ್ಮೆಯಿಂದ ತ್ರಿವರ್ಣ ಧ್ವಜಗಳನ್ನು ಬೀಸಿ, ಉತ್ಸವಗಳಲ್ಲಿ ಉತ್ಸಾಹ ದಿಂದ ಭಾಗಿಯಾದ ನೆನಪು ಶಾಶ್ವತವಾಗಿ ಮನದಲ್ಲಿ ಅಚ್ಚೊತ್ತಿವೆ. ರಾಷ್ಟ್ರಧ್ವಜದ ಚಿತ್ರಗಳನ್ನು ರಚಿಸುವುದರಿಂದ ಹಿಡಿದು ದೇಶಭಕ್ತಿ ಗೀತೆಗಳನ್ನು ಹಾಡುವವರೆಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಹೇಳುವ ಸ್ಪರ್ಧೆಯವರೆಗೆ ವಿವಿಧ ಚಟುವಟಿಕೆಗಳನ್ನು ಶಾಲೆಗಳು ಹಾಗೂ ಇತರ ಖಾಸಗಿ ಸಂಸ್ಥೆಗಳು ಆಯೋಜಿಸುತ್ತಿದ್ದವು. ಈ ಎಲ್ಲ ಪ್ರಯತ್ನಗಳು ದೇಶಭಕ್ತಿಯ ಸ್ಫೂರ್ತಿಯ ಮೂಲಗಳಾಗಿ ಕಾರ್ಯನಿರ್ವಹಿಸಿದವು ಹಾಗೂ ಈ ಪ್ರಮುಖ ದಿನದ ಮಹತ್ವವನ್ನು ಗುರುತಿಸಲು ನಮಗೆ ಸಹಾಯ ಮಾಡಿದವು.

ಶಾಲೆ ಆರಂಭವಾಗುವ ಹಾಗೆ, ಆಚರಿಸುವ ಮೊದಲ ಹಬ್ಬವೇ ಇದು. ಬಹಳಷ್ಟು ಸನ್ನಿವೇಶಗಳಲ್ಲಿ ಸ್ವಾತಂತ್ರ್ಯೋತ್ಸವ ಶ್ರಾವಣ ಹಬ್ಬ. ಧ್ವಜಾರೋಹಣ ಸಮಾರಂಭಕ್ಕೆ ಸುಮಾರು ಒಂದೆರಡು ವಾರ ಮುಂಚಿತವಾಗಿ ವಿವಿಧ ಸಿದ್ಧತೆಗಳ ಪ್ರಾರಂಭವಾಗಿರುತ್ತಿತ್ತು, ವಿದ್ಯಾರ್ಥಿ-ಶಿಕ್ಷಕರು ಮತ್ತು ಸ್ವಯಂ ಸೇವಕರೆಲ್ಲ ಸೇರಿ ಶಾಲಾ ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಶ್ರದ್ಧೆಯಿಂದ ಸ್ವತ್ಛ ಗೊಳಿಸುವುದು, ವಿದ್ಯಾರ್ಥಿಗಳು ತರಗತಿಯಂತೆ ಧ್ವಜಸ್ತಂಭದ ಮುಂದೆ ನಿಲ್ಲಲು ಮೈದಾನದ ನೆಲದಲ್ಲಿ “ಸುಣ್ಣದಿಂದ ಟ್ರ್ಯಾಕ್‌’ ರಚಿಸುವುದು, ಇದಲ್ಲದೆ ಧ್ವಜ ಹಾರಿಸುವಿಕೆ ಮತ್ತು ಅಸೆಂಬ್ಲಿ ಕಾರ್ಯವಿಧಾನಗಳನ್ನು ಪೂರ್ವಾಭ್ಯಾಸ ಮಾಡುವುದು.

ಇವೆಲ್ಲವೂ ಖಂಡಿತವಾಗಿಯೂ ನಮ್ಮಲ್ಲಿ ಸ್ವಾತಂತ್ರ್ಯ ದಿನಾ ಚರಣೆಯ ಉತ್ಸಾಹವನ್ನು ದ್ವಿಗುಣಗೊಳಿಸಿದವು. ಆಗಸ್ಟ್‌ 15 ರ ಬೆಳಗ್ಗೆ, ಪ್ಲಾಸ್ಟಿಕ್‌ ತ್ರಿವರ್ಣ ಧ್ವಜಗಳನ್ನು ಹಿಡಿದು ಕೊಂಡು, ಸಮವಸ್ತ್ರದ ಮೇಲೆ ಭಾರತೀಯ ಧ್ವಜದ ಬ್ಯಾಡ್ಜ್ ಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾ ಶಾಲೆಗೆ ಹೋಗುವುದೇ ಒಂದು ಚೆಂದ! ಬ್ಯಾಡ್ಜ್ಗಳನ್ನು ಸ್ನೇಹಿತರೊಂದಿಗೆ ಹೋಲಿಸುವುದು ಮತ್ತು ತ್ರಿವರ್ಣ ರಿಸ್ಟ್‌ ಬ್ಯಾಂಡ್‌ಗಳನ್ನು ವಿನಿಮಯ ಮಾಡಿಕೊಳ್ಳುವುದು, ಇವೆಲ್ಲವೂ ಸ್ನೇಹ ಮತ್ತು ದೇಶಭಕ್ತಿಯ ಬಂಧಗಳನ್ನು ಗಟ್ಟಿಗೊಳಿಸುತ್ತಿದ್ದವು.

ಮುಂಜಾನೆಯ ಸೂರ್ಯನ ಬೆಳಕಿನಲ್ಲಿ, ಮೈದಾನದಲ್ಲಿ ಸಹಪಾಠಿಗಳೊಂದಿಗೆ ಧ್ವಜಕ್ಕೆ ಅತ್ಯಂತ ಗೌರವದಿಂದ ನಮಸ್ಕರಿಸುತ್ತಾ ಸೆಲ್ಯುಟ್‌ ಮಾಡಿ, ರಾಷ್ಟ್ರಗೀತೆ ಹಾಡುವಾಗ, ಎಲ್ಲರಲ್ಲೂ ಆಳವಾದ ಮತ್ತು ಸಂತಸದ ಹೆಮ್ಮೆಯ ಭಾವನೆಗಳು ತುಂಬಿ ಬರುವುದು ಸತ್ಯವೇ ಹೌದು. ಸರ್ವೇ ಸಾಮಾನ್ಯವಾಗಿ ಸ್ವಾತಂತ್ರ್ಯೋತ್ಸವ ದಿನದ ಆಗಂತುಕ ಅತಿಥಿ ಮಳೆಯೇ. ಕೆಲವೊಮ್ಮೆ ಧಾರಾಕಾರವಾದ ಮಳೆಯಲ್ಲಿ ನಿಂತು ಧ್ವಜಾರೋಹಣ ಮುಗಿಸಿ ಅನಂತರ ಚುರುಕಾಗಿ ಶಾಲಾ ತರಗತಿಯ ಕಡೆಗೆ ಧಾವಿಸಿದ್ದ ನೆನಪು ಇನ್ನು ಸ್ಪಷ್ಟವಾಗಿದೆ. ಅನಂತರದ ಸಾಂಸ್ಕೃತಿಕ ಪ್ರದರ್ಶನಗಳು ನಮ್ಮ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸಿತು – ದೇಶಭಕ್ತಿ ನಾಟಕಗಳು, ನೃತ್ಯಗಳು ಮತ್ತು ಹಾಡುಗಳು, ಇವೆಲ್ಲ ಪ್ರದರ್ಶನಗಳು ಗಾಥೆಗಳಾಗಿ ಕಾರ್ಯನಿರ್ವಹಿಸಿದವು. ಬಹುಮಾನಗಳ ವಿತರಣೆ, ಅತಿಥಿಗಳ ಭಾಷಣಗಳು ಈ ದಿನದ ಮಹತ್ವಕ್ಕೆ ಪ್ರಬಲ ಸಾಕ್ಷಿಯಾಗಿ ಕಾರ್ಯನಿರ್ವಹಿಸಿದವು. ಕೊನೆಯದಾಗಿ ಸಿಹಿತಿಂಡಿಗಳ ಹಂಚಿಕೆಯೊಂದಿಗೆ ಹಬ್ಬ ಕೊನೆಗೊಳ್ಳುತ್ತಿತ್ತು. ಇದರ ಅನಂತರ ಊರಿನ ಆಸುಪಾಸಿನ ಸಂಘ ಸಂಸ್ಥೆಗಳ ಹಬ್ಬದಾಚರಣೆ ಆರಂಭ.

Advertisement

ಶಾಲಾ ಆವರಣದ ನೆನಪಿನ ಬುತ್ತಿಗಳು ಒಂದೆಡೆಯಾದರೆ, ಮತ್ತೂಂದೆಡೆ ಬೀದಿ ಬೀದಿಯಲ್ಲೂ ದೇಶ ಭಕ್ತಿ ಗೀತೆಗಳ ಹಾಡುಗಳು ಕೇಳಿ ಬರುತ್ತಿತ್ತು, ಅನಂತರ ಅಂಚೆ ಕಚೇರಿ ಗಳು, ಸರಕಾರಿ ಕಟ್ಟಡಗಳು, ಬ್ಯಾಂಕ್‌ಗಳು, ಸೊಸೈಟಿ ಗಳು, ಬೈಸಿಕಲ…-ಕಾರು-ಆಟೋ ರಿಕ್ಷಾಗಳ ಜಾಥಾ, ವಾಹನಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡುವುದನ್ನು ನೋಡುವುದೇ ಒಂದು ಚೆಂದ. ದೂರದರ್ಶನದ ಬೆಳಗ್ಗಿನ ಪ್ರಧಾನಿಗಳ ಧ್ವಜ ವಂದನೆ, ಮಧ್ಯಾಹ್ನದ ಅನಂತರದ ದೇಶಭಕ್ತಿಯನ್ನು ಜಾಗೃತಿ ಗೊಳಿಸುವ ಚಲನಚಿತ್ರಗಳು ಬಾಲ್ಯದ ನೆನಪನ್ನು ಸಮೃದ್ಧ ಗೊಳಿಸಿದ್ದು ನೆನಪಿಸಿದರೇ ತಿಳಿಯುವುದು.

– ವಿಟ್ಲ ತನುಜ್‌ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next