Advertisement

ರೆಡ್‌ ಝೋನ್‌ಗಳಲ್ಲಿ ರ್‍ಯಾಂಡಮ್‌ ಚೆಕ್‌

04:18 PM Apr 27, 2020 | mahesh |

ಬೆಂಗಳೂರು: ಸತತ ನಾಲ್ಕು ದಿನಗಳಿಂದ ನಿರಂತರವಾಗಿ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದ ಹೊಂಗಸಂದ್ರದಲ್ಲಿ ಭಾನುವಾರ ಯಾವುದೇ ಕೋವಿಡ್  ಸೋಂಕು ಪ್ರಕರಣ ದೃಢಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಆ ಭಾಗದ ಜನ ತಾತ್ಕಾಲಿಕ ನಿಟ್ಟುಸಿರು ಬಿಟ್ಟಿದ್ದಾರೆ. ಇದರ ನಡುವೆ ಪಾಲಿಕೆ “ರೆಡ್‌ ಝೋನ್‌’ಗಳಲ್ಲಿ ರ್‍ಯಾಂಡಮ್‌ (ಆಯ್ದ ಮಾದರಿ) ತಪಾಸಣೆಗೆ ಮುಂದಾಗಿದೆ.
ವಿದ್ಯಾಜ್ಯೋತಿ ನಗರದಲ್ಲಿ ಒಟ್ಟು 30 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದರೂ, ಇದರ ಮಿಸ್ಸಿಂಗ್‌ಲಿಂಕ್‌ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಮುಂಜಾಗ್ರತಾ ಕ್ರಮವಾಗಿ ವಿದ್ಯಾ ಜ್ಯೋತಿ ನಗರದಲ್ಲಿ ಬಿಹಾರ ಮೂಲದ ಕಾರ್ಮಿಕರು ನೆಲೆಸಿದ್ದ ಸುತ್ತಲಿನ ಮನೆಗಳಲ್ಲಿ ನೆಲೆಸಿದ್ದ 71 ಜನರಿಗೆ ಕೋವಿಡ್ ಸೋಂಕು ಪರೀಕ್ಷೆ ಮಾಡಲಾಯಿತು. ಕೊರೊನಾ ಸೋಂಕಿನ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ಹಂತವಾಗಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರ ಜತೆಗೆ ಸೋಂಕು ದೃಢಪಟ್ಟವರು ನೆಲೆಸಿದ್ದ ಕಟ್ಟಡಗಳ ಸಮೀಪದ ಆಯ್ದ ಮನೆಗಳಲ್ಲಿರುವ 71ಜನರನ್ನು ಪ್ರತ್ಯೇಕ ಕ್ವಾರಂಟೈನ್‌ ಮಾಡಲಾಗಿದ್ದು, ಅವರೆಲ್ಲರಿಗೂ ಭಾನುವಾರ ಪರೀಕ್ಷೆ ಮಾಡಲಾಗುವುದು. ಇದಕ್ಕೆ ಈ ಭಾಗದ ಜನರೂ ಸಹಕರಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಬೊಮ್ಮನಹಳ್ಳಿ ವಿಶೇಷ ಆಯುಕ್ತ ಲೋಕೇಶ್‌ “ಉದಯವಾಣಿ’ಗೆ ತಿಳಿಸಿದರು.

ಅಲ್ಲದೆ, ಇಲ್ಲಿನ ಕೆಲವು ಭಾಗದಲ್ಲಿ ಸೋಂಕು ಲಕ್ಷಣಗಳು ಇರುವುದು ಅನುಮಾನ ಬಂದರೂ, ರ್‍ಯಾಂಡಮ್‌ ಆಗಿ ಕೋವಿಡ್  ಪರೀಕ್ಷೆ ಮಾಡುತ್ತೇವೆ. ಈಗಾಗಲೇ ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿನ ಮನೆಗಳಿಂದ ಯಾರೂ ಹೊರಗೆ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ತಪಾಸಣೆ ನಿರಂತರವಾಗಿ  ಮಾಡಲಾಗುತ್ತಿದ್ದು, ಈವರೆಗೆ 810 ಮನೆಗಳಿಗೆ ಆಹಾರದ ಕಿಟ್‌ ಅನ್ನು ಬಿಬಿಎಂಪಿಯಿಂದ ವಿತರಣೆ ಮಾಡಲಾಗಿದೆ. ಕಂಟೈನ್ಮೆಂಟ್‌ನಿಂದ ಯಾವುದೇ ಕಾರಣಕ್ಕೂ ಸಾರ್ವಜನಿಕರು ಆಚೆ ಬರದಂತೆ ಎಚ್ಚರ ವಹಿಸಬೇಕು ಹಾಗೂ ಅಗತ್ಯ ಸೇವಗಳಲ್ಲಿ ಲೋಪ ವಾಗದಂತೆ ನೋಡಿ ಕೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬಿಹಾರಿ ಮೂಲದ ವ್ಯಕ್ತಿಯಿಂದ ಶುರುವಾದ ಸೋಂಕು ಆತನೊಂದಿಗಿದ್ದ ಪ್ರಾಥಮಿಕ ಮತ್ತು ಆ ಮೂಲಕ ದ್ವಿತೀಯ ಸಂಪರ್ಕಿತರಲ್ಲಿ ನಾಲ್ವರಿಗೆ ಹಾಗೂ 6 ವರ್ಷದ ಮಗುವೂ ಸೇರಿದಂತೆ ಒಟ್ಟು 30 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಭಾನುವಾರ ಹೊಂಗಸಂದ್ರದ ವಿದ್ಯಾಜ್ಯೋತಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿನ ಪೌರಕಾರ್ಮಿಕರಿಗೆ ರಕ್ಷಣಾ ಕವಚ ನೀಡಿ ಕಸ ಸಂಗ್ರಹಣೆ ಮಾಡಲಾಯಿತು.

ಪುಂಡರ ಬಂಧಿಸಲು ಹೋದ ಪೊಲೀಸರಿಗೆ ಕ್ವಾರಂಟೈನ್‌
ಬೆಂಗಳೂರು: ಪಾದರಾಯನಪುರ ಘಟನೆಯಲ್ಲಿ ಭಾಗಿಯಾದವರನ್ನು ಬಂಧಿಸಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಭಾನುವಾರವೂ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, 25 ಮಂದಿಯನ್ನು ಖಾಸಗಿ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ
ಮೂಲಕ ಇದುವರೆಗೂ 48 ಮಂದಿ ಪೊಲೀಸ್‌ ಅಧಿಕಾರಿ-ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

Advertisement

ಚಾಮರಾಜಪೇಟೆಯ ಸಿಎಆರ್‌ ಮೈದಾನದಲ್ಲಿ ಭಾನುವಾರ ಸುಮಾರು 150 ಮಂದಿ ಪೊಲೀಸ್‌ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಈ ವೇಳೆ 25 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ 25 ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿಗಳ ದಸ್ತಗಿರಿ ಮಾಡುವ ಸಂದರ್ಭದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದರು. “ಕ್ವಾರಂಟೈನ್‌ಗೆ ಒಳಪಟ್ಟ
ಎಲ್ಲಾ 25 ಮಂದಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಯಾರಲ್ಲೂ ಸೋಂಕಿನ ಲಕ್ಷಣಗಳು ಇಲ್ಲ. ಆದರೆ ಅವರು ಬಂಧಿಸಿದ ಆರೋಪಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಸುಮಾರು 150 ಮಂದಿಗೆ ಪೊಲೀಸ್‌ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಪಾದರಾಯನಪುರದಲ್ಲೂ ತಪಾಸಣೆ
ಪಾದರಾಯನಪುರದಲ್ಲಿ ದ್ವಿತೀಯ ಸಂಪರ್ಕಿತರಲ್ಲೂ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿನ 22 ಜನರಿಗೆ ರ್‍ಯಾಂಡಮ್‌ ಆಗಿ ಕೊರೊನಾ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಈ ರೀತಿ ರ್‍ಯಾಂಡಮ್‌ ಚೆಕ್‌ ಮಾಡುವುದರಿಂದ ಸೋಂಕು ಸಮುದಾಯಕ್ಕೆ ಹಬ್ಬಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂಬುದು ಅಧಿಕಾರಿಗಳ ಅಂಬೋಣ. ಅಲ್ಲದೆ, ಕೊರೊನಾ ಸೋಂಕು ಪತ್ತೆಯಾದವರ ಪೈಕಿ ಹಲವರಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ “ರೆಡ್‌ ಝೋನ್‌’ಗಳಲ್ಲಿ ರ್‍ಯಾಂಡಮ್‌ ಚೆಕ್‌ ಮೊರೆ ಹೋಗಲಾಗಿದೆ. ಇನ್ನು ರಾಜರಾಜೇಶ್ವರಿ ನಗರದಲ್ಲಿನ ಪತ್ರಕರ್ತರ ಪ್ರಕರಣಕ್ಕೆ ಸಂಬಂಧಿಸಿದಂತೆ 38 ಜನರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಿ ಕ್ವಾರಂಟೈನ್‌ ಮಾಡಲಾಗಿದ್ದು, ದ್ವಿತೀಯ ಸಂಪರ್ಕಿತರ ಪಟ್ಟಿ ಸಿದ್ಧಪಡಿಸಿಕೊಳ್ಳುತ್ತಿದ್ದೇವೆ. ಸೋಮವಾರದಿಂದ ಅವರನ್ನು ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧನಕ್ಕೆ ಮುನ್ನ ತಪಾಸಣೆ ಅವಶ್ಯ
ಪಾದರಾಯನಪುರ ಪುಂಡರ ಪೈಕಿ ಐವರಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಇನ್ಮುಂದೆ ನಗರದ ಪ್ರತಿ ಪೊಲೀಸ್‌ ಠಾಣಾಧಿಕಾರಿಗಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೊದಲು ಕೋವಿಡ್‌-19 ಪರೀಕ್ಷೆ ಮಾಡಿಸಿ ದೃಢೀಕರಣ ಪತ್ರ ನೀಡಬೇಕು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಆದೇಶಿಸಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐದು ಸಾವಿರ ಬಂಧಿಗಳಿದ್ದು, ಸಾಮರ್ಥ್ಯಕ್ಕಿಂತ ಅಧಿಕವಾಗಿದ್ದಾರೆ. ಕೊರೊನಾ ಹರಡದಂತೆ ಈಗಾಗಲೇ ಜೈಲಿನಲ್ಲಿ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ.ಹೀಗಾಗಿ ಮುಂದಿನ ದಿನಗಳಲ್ಲಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೊದಲು ಆರೋಪಿಗಳಿಗೆ ಸಂಬಂಧಿಸಿದ ಠಾಣಾ ಸಿಬ್ಬಂದಿ-ಅಧಿಕಾರಿಗಳು ಕಡ್ಡಾಯವಾಗಿ ಕೋವಿಡ್‌-19 ಪರೀಕ್ಷೆ ನಡೆಸಿ ಕೋವಿಡ್ ವೈರಸ್‌ ಇಲ್ಲದಿರುವ ಬಗ್ಗೆ ದೃಡಪಟ್ಟ ಪತ್ರವನ್ನು ಕಾರಾಗೃಹಕ್ಕೆ ಸಲ್ಲಿಸಬೇಕು. ಒಂದು ವೇಳೆ ರೋಗ ಪತ್ತೆಯಾದರೆ ಪೊಲೀಸ್‌ ವಶದಲ್ಲಿಯೇ ಪ್ರತ್ಯೇಕವಾಗಿ ಇಟ್ಟುಕೊಂಡು ಚಿಕಿತ್ಸೆಕೊಡಿಸಿ, ಮುಗಿದ ಬಳಿಕ ಗುಣಮುಖವಾದ ನಂತರ ಕಾರಾಗೃಹಕ್ಕೆ ಒಪ್ಪಿಸಬೇಕು ಎಂದು ಠಾಣಾಧಿಕಾರಿಗಳಿಗೆ ಕೇಂದ್ರ ಕಾರಾಗೃಹದ ಮುಖ್ಯಅಧೀಕ್ಷಕ ವಿ.ಶೇಷುಮೂರ್ತಿ ಪತ್ರ ಮೂಲಕ ತಿಳಿಸಿದ್ದಾರೆ.

ಇರ್ಫಾನ್‌ ನಾಪತ್ತೆ
ಪ್ರಕರಣದ ಮಾಸ್ಟರ್‌ ಮೈಂಡ್‌ ಹಾಗೂ ಸಂಘಟನೆಯೊಂದರ ಸದಸ್ಯ ಇರ್ಫಾನ್‌ ನಾಪತ್ತೆಯಾಗಿದ್ದಾನೆ. ಆತನಿಗಾಗಿ ವಿಶೇಷ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಆತ ಪತ್ತೆಯಾದ ಬಳಿಕ ಪ್ರಕರಣದ ಸಂಚು ಬಯಲಾಗಲಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next