Advertisement

Rameshwaram Cafe: ಬಾಂಬ್‌ಗೆ ಬೆಂಗಳೂರಲ್ಲೇ ಐಟಂ ಖರೀದಿ

10:31 AM Mar 04, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟಕ್ಕೆ ಬಳಸಿದ್ದ ಸುಧಾರಿತಾ ಸ್ಫೋಟಕ ಸಾಧನಾ (ಐಇಡಿ) ತಯಾರಿಸಲು ಬೆಂಗಳೂರಲ್ಲೇ ಕಚ್ಚಾ ವಸ್ತುಗಳನ್ನು ಖರೀದಿಸಲಾಗಿದೆ ಎಂಬುದು ತನಿಖಾ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಸ್ಫೋಟ ನಡೆದ ಸ್ಥಳದಲ್ಲಿ ಬ್ಯಾಟರಿಗಳು, ಗನ್‌ ಪೌಡರ್‌, ಪೋಟ್ಯಾಷಿಯಂ ನೈಟ್ರೇಟ್‌, ಹೈಡ್ರೋಜನ್‌ ಪರಾಕ್ಸೈಡ್‌ ಮತ್ತು ಟೈಮರ್‌ ಹಾಗೂ ಬಿಸಿಯಾಗುವ ಬಲ್ಬ್ಗಳು ಪತ್ತೆಯಾಗಿದ್ದವು. ಈ ಎಲ್ಲ ವಸ್ತುಗಳನ್ನು ಸ್ಥಳೀಯವಾಗಿಯೇ ನೇರವಾಗಿ ಅಥವಾ ಆನ್‌ಲೈನ್‌ ಮೂಲಕ ಖರೀದಿಸಲಾಗಿದೆ ಎಂಬ ಮಾಹಿತಿ ಸ್ಪಷ್ಟವಾಗಿದೆ.

ಈ ಹಿಂದೆ ನಡೆದ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಮತ್ತು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ನಡೆದ ಪ್ರಾಯೋಗಿಕ ಸ್ಫೋಟದಲ್ಲೂ ಇದೇ ರಾಸಾಯಿಕ ವಸ್ತುಗಳನ್ನು ಬಳಸಲಾಗಿದೆ. ರಾಮೇಶ್ವರ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ, ಕೃತ್ಯದಲ್ಲಿ ಐಸಿಸ್‌ ಸಂಘಟನೆ ಕೈವಾಡದ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಶಂಕಿತ ವ್ಯಕ್ತಿ ಹಾಗೂ ಆತನ ಸಹಚರರು ಸ್ಥಳೀಯವಾಗಿ ರಾಸಾಯನಿಕ ವಸ್ತುಗಳನ್ನು ಖರೀದಿಸಿ ನಗರದ ಹೊರವಲಯ ಅಥವಾ ಗಡಿಭಾಗದಲ್ಲೇ ತಯಾರು ಮಾಡಿರುವ ಸಾಧ್ಯತೆ ಇದೆ. ಅದಕ್ಕೆ ಪುಷ್ಟಿ ನೀಡುವಂತೆ ಶಂಕಿತ ವ್ಯಕ್ತಿಯ ಚಲನವಲನಗಳು ಸೆರೆಯಾಗಿರುವ ಸಿಸಿ ಕ್ಯಾಮೆರಾ ದೃಶ್ಯಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರಿಗೆ ಸಿಕ್ಕಿರುವ ದೃಶ್ಯಾವಳಿಗಳಲ್ಲಿ ಆರೋಪಿ ರಾಮೇಶ್ವರ ಹೋಟೆಲ್‌ಗಿಂತ ಹಿಂದೆ 2 ಕಿಲೋ ಮೀಟರ್‌ ದೂರ ದಲ್ಲೇ ಬಸ್‌ ಹತ್ತಿರುವುದು ಸೆರೆಯಾಗಿದೆ. ಸಿಟಿ ಯಿಂದ ಹೊರಡುವ 500ಡಿ ಬಸ್‌ನಲ್ಲಿ ಆರೋಪಿ ಬಸ್‌ ಹತ್ತಿ, ಕುಂದಲಹಳ್ಳಿ ಬಸ್‌ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಹೋಟೆಲ್‌ಗೆ ನಡೆದುಕೊಂಡೇ ಹೋಗಿದ್ದಾನೆ. ಮತ್ತೂಂದೆಡೆ ಮುಖ ಚಹರೆ ಪತ್ತೆಯಾಗಬಾರದೆಂಬ ಕಾರಣಕ್ಕೆ ಶಂಕಿತ ಬಸ್‌ ಏರಿದಾಗ, ಮುಖಕ್ಕೆ ಧರಿಸಿದ್ದ ಮಾಸ್ಕ್, ಟೋಪಿ ಹಾಗೂ ಬ್ಯಾಗ್‌ ತೆಗೆಯಲು ಮುಂದಾಗಿದ್ದಾನೆ. ಆದರೆ ಬಸ್‌ ನಲ್ಲಿ ಸಿಸಿ ಕ್ಯಾಮರಾ ಇರುವುದು ಗಮನಿಸುತ್ತಿದ್ದಂತೆ ಮತ್ತೆ ಮಾಸ್ಕ್, ಟೋಪಿ, ಕಣ್ಣಿನ ಗ್ಲಾಸ್‌ ಸರಿ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಗಡಿಭಾಗದ ಹೋಟೆಲ್‌ ಆರಿಸಿದ್ದೇಕೆ?: ರಾಮೇಶ್ವರಂ ಕೆಫೆಯಿಂದ ಹೊಸೂರು ಮಾರ್ಗವಾಗಿ ನೆರೆ ರಾಜ್ಯಕ್ಕೆ ತೆರಳಲು ಕನಿಷ್ಠ 1 ಗಂಟೆ ಬೇಕು. ಹೀಗಾಗಿ ಶಂಕಿತ, ತಾನೂ ಹೋಟೆಲ್‌ನಿಂದ ತೆರಳಿ ಒಂದು ಗಂಟೆ ಬಳಿಕ ಬಾಂಬ್‌ ಸ್ಫೋಟಿಸಲು ಟೈಮರ್‌ ಅಳವಡಿಸಿದ್ದಾನೆ. ಸ್ಫೋಟದ ಬಳಿಕ ಪೊಲೀಸರು ಸ್ಥಳಕ್ಕೆ ಬರುವ ಸಮಯ ಹಾಗೂ ನಗರಾದ್ಯಂತ ಅಲರ್ಟ್‌ ಆಗಿ ನಾಕಾಬಂದಿ ಹಾಕಲು ಕನಿಷ್ಠ 10-15 ನಿಮಿಷ ಬೇಕು. ಅಷ್ಟರಲ್ಲಿ ಗಡಿ ದಾಟಬಹುದು ಎಂಬುದು ಶಂಕಿತನ ಲೆಕ್ಕಚಾರ ಇರಬಹುದು ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.

Advertisement

700ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ‌. ಜತೆಗೆ ತಮಿಳುನಾಡಿನ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ತನಿಖಾ ಸಂಸ್ಥೆಗಳಿಗೆ ತಮ್ಮ ವ್ಯಾಪ್ತಿಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ವ್ಯಕ್ತಿಗಳ ವಿಚಾರಣೆ :

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣ ನಿಮಿತ್ತ ತನಿಖೆ ಚುರುಕುಗೊಳಿಸಿರುವ ತನಿಖಾ ತಂಡಗಳು, ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹೋಟೆಲ್‌ ಹಾಗೂ ಹೊರಭಾಗದಲ್ಲಿ ದೊರೆತ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದು ಆಡುಗೋಡಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಶನಿವಾರ ರಾತ್ರಿಯೇ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾದ ಚಹರೆ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆಯಲಾಗಿತ್ತು ಬಳಿಕ ಇಬ್ಬರ ಪಾತ್ರ ಇಲ್ಲವೆಂದು ಗೊತ್ತಾಗಿ, ಬಿಟ್ಟು ಕಳುಹಿಸಲಾಗಿದೆ.

ಸದ್ಯ ಇಬ್ಬರ ವಿಚಾರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ಮತ್ತು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್‌ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಇದರೊಂದಿಗೆ ಎನ್‌ಐಎ, ಕೇಂದ್ರ ಗುಪ್ತಚರ, ಐಎಸ್‌ಡಿ ಅಧಿಕಾರಿಗಳು ಕೂಡ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸದ್ಯ ವಶದಲ್ಲಿರುವ ವ್ಯಕ್ತಿಗಳ ಪೂರ್ವ ಪರ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಈ ಮೂಲಕ ಶಂಕಿತ ವ್ಯಕ್ತಿಯ ಸುಳಿವು ಸಿಗಬಹುದೇ ಎಂಬ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next