Advertisement

Bengaluru Rameshwaram cafe ಬಾಂಬ್‌ ಸ್ಫೋಟ: ಬಂಧಿತರು 10 ದಿನ ಎನ್‌ಐಎ ವಶಕ್ಕೆ

11:39 PM Apr 13, 2024 | Team Udayavani |

ಬೆಂಗಳೂರು: ಕುಂದಲ ಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಂಬರ್‌ ಮುಸಾವಿರ್‌ ಹುಸೇನ್‌ ಶಾಜೀಬ್‌ ಮತ್ತು ಸೂತ್ರಧಾರ ಅಬ್ದುಲ್‌ ಮತೀನ್‌ ತಾಹಾನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) 10 ದಿನಗಳ ವರೆಗೆ ವಶಕ್ಕೆ ಪಡೆದುಕೊಂಡಿದೆ.

Advertisement

ಮಾ.1ರಂದು ಕೆಫೆ ಸ್ಫೋಟ ಪ್ರಕರಣದ ತನಿಖೆ ಕೈಗೊಂಡಿದ್ದ ಎನ್‌ಐಎ ಅಧಿಕಾರಿಗಳು, ಮುಸಾವಿರ್‌ ಹುಸೇನ್‌ ಮತ್ತು ಅಬ್ದುಲ್‌ ಮತೀನ್‌ ತಾಹಾನನನ್ನು ಪಶ್ಚಿಮ ಬಂಗಾಲದ ಪೂರ್ವ ಮೇದಿನನಿಪುರದ ಹೊಟೇಲೊಂ ದರಲ್ಲಿ ಎ.12ರಂದು ಬಂಧಿಸಿ, ಶನಿವಾರ ಮುಂಜಾನೆ ಬೆಂಗಳೂರಿಗೆ ಕರೆ ತಂದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಬಳಿಕ ಆರೋಪಿಗಳು ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಹಾಗೂ ಇತರ ಕಾರಣಗಳನ್ನು ನೀಡಿ 10 ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ಮನವಿ ಮಾಡಿಕೊಂಡರು. ಮನವಿ ಪುರಸ್ಕರಿಸಿದ ಕೋರ್ಟ್‌ ಇಬ್ಬರು ಶಂಕಿತರನ್ನು 10 ದಿನಗಳ ಎನ್‌ಐಎ ವಶಕ್ಕೆ ನೀಡಿ ಆದೇಶ ನೀಡಿದೆ. ಶಂಕಿತರನ್ನು ಮಡಿವಾಳದ ವಿಶೇಷ ವಿಚಾರಣ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ.

ಯಾವ ಕಾರಣಕ್ಕೆ ವಶಕ್ಕೆ?
ಶಂಕಿತರು ಶಿವಮೊಗ್ಗದ ಪ್ರಾಯೋಗಿಕ ಸ್ಫೋಟ ಮತ್ತು ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ ಹಾಗೂ ಚೆನ್ನೈನ ಕೊಯಮತ್ತೂರಿನ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿ ದ್ದಾರೆ. ಆದರೆ ಪರಾರಿಯಾಗಿದ್ದರು. ಹೀಗಾಗಿ ಎಲ್ಲಿ ತಪ್ಪಿಸಿಕೊಂಡಿದ್ದರು? ಆಶ್ರಯ ನೀಡಿದವರು ಯಾರು? ಈ ಕೇಸ್‌ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರಿಗೆ ಸಹಕಾರ ನೀಡಿದವರು ಯಾರು? ಬಾಂಬ್‌ ಅನ್ನು ಇವರೇ ತಯಾರಿಸಿದ್ದಾರಾ? ಇವರೇ ತಯಾರಿಸಿದ್ದರೆ ತರಬೇತಿ ನೀಡಿದವರ್ಯಾರು? ಅಥವಾ ಬೇರೆ ಯಾರಾದರೂ ಬಾಂಬ್‌ ಕೊಟ್ಟಿದ್ದಾರಾ? ಬಾಂಬ್‌ ತಯಾರಿಕೆಗೆ ಹಣಕಾಸು ನೆರವು ನೀಡಿದವರು ಯಾರು? ಇನ್ನು ಯಾವ ನಿಷೇಧಿತ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದಾರೆ? ಈ ಹಿಂದಿನ ದಾಳಿ ವೇಳೆ ಕೆಲ ಡಿಜಿಟಲ್‌ ಸಾಕ್ಷ್ಯಗಳು ಸಿಕ್ಕಿವೆ. ಅವುಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಬೇಕು. ಪ್ರಮುಖವಾಗಿ ಹೆಚ್ಚು ಜನಸಂದಣಿ ಸ್ಥಳದಲ್ಲಿ ಬಾಂಬ್‌ ಇರಿಸಿ ಸ್ಫೋಟಿಸಿ, ಜನರಲ್ಲಿ ಭಯ ಉಂಟು ಮಾಡಲಾಗಿದೆ.

ಭಯೋತ್ಪಾದನೆಯ ದೊಡ್ಡ ಸಂಚಿನ ಭಾಗ ಇದಾಗಿದೆ. ಇದರಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿ¨ªಾರೆ. ಸಂಚಿನ ಪ್ರತಿಯೊಂದು ಸಂಗತಿಯನ್ನು ಪತ್ತೆ ಮಾಡಬೇಕಿದೆ. ಇದಕ್ಕಾಗಿ ಶಂಕಿತರ ವಿಚಾರಣೆ ಅಗತ್ಯವಿದೆ ಎಂದರು.
ವಾದ ಆಲಿಸಿದ ನ್ಯಾಯಾಧೀಶರು, ಇಬ್ಬರೂ ಆರೋಪಿಗಳನ್ನು ಮುಂದಿನ 10 ದಿನಗಳ ವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು.

ಸೂತ್ರಧಾರನ ತಂದೆ ನಿವೃತ್ತ ಯೋಧ
ತೀರ್ಥಹಳ್ಳಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸೂತ್ರಧಾರ ಅಬ್ದುಲ್‌ ಮತೀನ್‌ ತಾಹನ ತಂದೆ ದೇಶಕ್ಕಾಗಿ ಹೋರಾಡಿದ ಯೋಧ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅಬ್ದುಲ್‌ ಮತೀನ್‌ ತಾಹ ಅತ್ಯಂತ ಚುರುಕು ಸ್ವಭಾವದ ಎಂಜಿನಿಯರಿಂಗ್‌ ಪದವೀಧರ.

Advertisement

ತೀರ್ಥಹಳ್ಳಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಬೆಂಗಳೂರಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದ. ಬೆಂಗಳೂರಿಗೆ ಬಂದ ವೇಳೆ ಉಗ್ರರ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. ಈತ ಪೋಷಕರಿಗೆ ಒಬ್ಬನೇ ಮಗನಾಗಿದ್ದು, ಐಇಡಿ ಬಾಂಬ್‌ ತಯಾರಿಕೆಯಲ್ಲಿ ಪರಿಣಿತನಾಗಿದ್ದ. ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ ಈತ ಬೇರೆ ಬೇರೆ ಹೆಸರನ್ನು ಇಟ್ಟುಕೊಂಡಿದ್ದ ಹಾಗೂ ವಿವಿಧ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ. ಈತನ ತಂದೆ ವರ್ಷದ ಹಿಂದೆ ಮೃತಪಟ್ಟಿದ್ದರು.

ಮುಸಾವಿರ್‌ ಸಾಜಿದ್‌ ಯಾರು?
ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಹೊಂದಿರುವ ಮುಸಾವಿರ್‌ ಸಾಜಿದ್‌ ಹುಸೇನ್‌ ಬಗ್ಗೆ ಸ್ಥಳೀಯರಿಗೆ ಗೊತ್ತಿರುವುದೇ ಕಡಿಮೆ. ಮುಸಾವಿರ್‌ ಅಕ್ಕಪಕ್ಕದವರು, ಕುಟುಂಬದವರು ಸಹಿತ ಯಾರ ಜತೆಗೂ ಹೆಚ್ಚು ಬೆರೆಯುತ್ತಿರಲಿಲ್ಲ. ನಗರದ ಮಾರ್ಕೆಟ್‌ ರಸ್ತೆಯಲ್ಲಿರುವ ಈತನ ಮನೆಯಲ್ಲಿ ತಾಯಿ ಮಾತ್ರ ಇದ್ದಾರೆ. ತಂದೆ ಇಲ್ಲದ ಈತನಿಗೆ ಅಣ್ಣ ಮತ್ತು ತಮ್ಮ ಇದ್ದಾರೆ. ಅಣ್ಣ ಬೇರೆ ಕಡೆ ವ್ಯವಹಾರ ಮಾಡಿಕೊಂಡಿದ್ದು, ಈತನ ಕುಟುಂಬಕ್ಕೆ ಕಟ್ಟಡ ಬಾಡಿಗೆಯೇ ಮೂಲ ಆದಾಯ. ಉದ್ದನೆಯ ನಿಲುವಂಗಿ ಧರಿಸಿ ಮನೆ ಮಹಡಿ ಮೇಲೆ ಮೊಬೈಲ್‌ ನೋಡುತ್ತಾ ಕೂರುತ್ತಿದ್ದ. ಉಳಿದ ವೇಳೆ ತನಗೆ ಅತ್ಯಂತ ಬೇಕಾದ ತನ್ನದೇ ಸಮುದಾಯದ ಒಂದೆರಡು ಸ್ಥಳಗಳಲ್ಲಿ ಮತ್ತು ಮಸೀದಿಯಲ್ಲಿರುತ್ತಿದ್ದ ಎಂದು ಸ್ಥಳೀಯರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next