ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪರಪ್ಪನ ಅಗ್ರಹಾರದಲ್ಲೇ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗಪಡಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು, ಪ್ರಕರಣದ ಮತ್ತೊಬ್ಬ ಸಂಚುಕೋರ, ಶಿವಮೊಗ್ಗದ ಪ್ರಾಯೋಗಿಕ ಸ್ಫೋಟ ಹಾಗೂ ಮಂಗಳೂರು ಗೋಡೆ ಬರಹ ಪ್ರಕರಣದ ಶಂಕಿತ ಮಾಜ್ ಮುನೀರ್ನನ್ನು ಬಂಧಿಸಿದ್ದಾರೆ.
ಶಂಕಿತ ಮಾಜ್ ಮುನೀರ್ ಈಗಾಗಲೇ ಶಿವಮೊಗ್ಗ ಮತ್ತು ಮಂಗಳೂರು ಪ್ರಕರಣದಲ್ಲಿ ಜೈಲಿನಲ್ಲಿದ್ದು, ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಚಿಕ್ಕಮಗಳೂರಿನ ಮುಜಾಮಿಲ್ ಷರೀಫ್ನ ಹೇಳಿಕೆ ಆಧರಿಸಿ ಈತನನ್ನು ಬಾಡಿ ವಾರಂಟ್ ಪಡೆದು ಬಂಧಿಸಲಾಗಿದೆ. ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸಿ ಮತ್ತೊಮ್ಮೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಫೆ ಸ್ಫೋಟ ಪ್ರಕರಣ ಬೆನ್ನಲ್ಲೇ ಮಾ.5ರಂದು ಎನ್ಐಎ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲು ಸಹಿತ ದೇಶದ 18 ಜೈಲುಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು. ಈ ವೇಳೆಯೇ ಮಾಜ್ ಮುನೀರ್ನನ್ನು 8 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆಗ ಆರೋಪಿ ಅಸ್ಪಷ್ಟ ಮಾಹಿತಿ ನೀಡಿದ್ದ. ಈ ಮಾಹಿತಿಯನ್ನೇ ಆಧರಿಸಿ ಸುದೀರ್ಘ ತನಿಖೆ ನಡೆಸಿದಾಗ ಚಿಕ್ಕಮಗಳೂರಿನ ಮುಜಾಮಿಲ್ ಷರೀಫ್ ನ ಕೈವಾಡ ಕಂಡುಬಂದು ಬಂಧಿಸಲಾಗಿತ್ತು. ಈಗ ಮುಜಾಮಿಲ್ ಷರೀಫ್ ವಿಚಾರಣೆಯಲ್ಲಿ ಮಾಜ್ ಮುನೀರ್ ಕೈವಾಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಾಜ್ನನ್ನು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಾಜ್ ಮುನೀರ್ ಎಂಜಿನಿಯರ್ ಪದವೀಧರನಾಗಿದ್ದು, ಕೆಲವು ವರ್ಷಗಳ ಹಿಂದೆ ನಡೆದ ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನು ಪಡೆದುಕೊಂಡಿದ್ದ. ಅನಂತರ ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ನಡೆಸಿದ್ದ. ಈ ಪ್ರಕರಣದಲ್ಲಿ ಬಂಧಿಸಿದಾಗ ಐಸಿಸ್ ಸಂಚು ಬಹಿರಂಗವಾಗಿದಲ್ಲದೆ, ರಾಜ್ಯದಲ್ಲಿ ಐಸಿಸ್ ಕಾರ್ಯಾಚಟುವಟಿಕೆ ಬಗ್ಗೆ ಸ್ಫೋಟಕ ಮಾಹಿತಿ ಸಿಕ್ಕಿತ್ತು.
ಮತ್ತೂಂದೆಡೆ ಐಇಡಿ ತಯಾರಿಯಲ್ಲಿ ಶಂಕಿತ ಮಾಜ್ ಮನೀರ್ ಹಾಗೂ ಅಬ್ದುಲ್ ಮತೀನ್ ತಾಹಾ ಪರಿಣಿತರಾಗಿದ್ದಾರೆ. ಇತರ ಶಂಕಿತರಿಗೂ ಈ ಇಬ್ಬರು ತರಬೇತಿ ನೀಡುತ್ತಿದ್ದರು. ಅದೇ ರೀತಿ ಕೆಫೆ ಸ್ಫೋಟದ ಬಾಂಬರ್ ಮುಸಾವೀರ್ ಹುಸೇನ್ ಶಾಜೀಬ್ಗೂ ತರಬೇತಿ ನೀಡಿದ್ದರು. ಆತ ಚಿಕ್ಕಮಗಳೂರಿನ ಮುಜಾಮಿಲ್ ಷರೀಫ್ನ ನೆರವು ಪಡೆದು ನಗರದ ಹೊರವಲಯದಲ್ಲಿ ಐಇಡಿ ತಯಾರಿಸಿ ಮಾ.1ರಂದು ಕೆಫೆಯಲ್ಲಿ ಸ್ಫೋಟಿಸಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಎನ್ಕ್ರಿಪ್ಟ್ ಆ್ಯಪ್ಗಳ ಮೂಲಕ ಸಂವಹನ
ಅಬ್ದುಲ್ ಮತೀನ್ ತಾಹಾನ ಆಪ್ತರಲ್ಲಿ ಒಬ್ಬನಾಗಿರುವ ಮಾಜ್ ಮುನೀರ್, ತಾಹಾನ ಸೂಚನೆ ಮೇರೆಗೆ ಎನ್ಕ್ರಿಪ್ಟ್ ಮಾಡಿದ ಆ್ಯಪ್ಗಳ ಮೂಲಕವೇ ಸಂಹವನ ಮಾಡುತ್ತಿದ್ದ. ಇದೇ ಆ್ಯಪ್ಗಳ ಮೂಲಕವೇ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ ರೂವಾರಿ ಮೊಹಮ್ಮದ್ ಶಾರೀಕ್ ಮತ್ತು ಸಂಚುಕೋರ ಅರಾಫತ್ ಜತೆ ಸಂವಹನ ನಡೆಸಿದ್ದಾನೆ. ಜತೆಗೆ ಕೆಲವು ಎನ್ಕ್ರಿಪ್ಟ್ ವೆಬ್ಸೈಟ್/ಆ್ಯಪ್ಗ್ಳ ಮೂಲಕವೇ ಗ್ರೂಪ್ಗಳ ನ್ನು ರಚಿಸಿಕೊಂಡು ನಿರ್ದಿಷ್ಟ ಸಮುದಾಯದ ಯುವಕರನ್ನು ಉಗ್ರ ಸಂಘಟನೆಗೆ ಪ್ರಚೋದಿಸುತ್ತಿದ್ದರು. ಇದೇ ರೀತಿಯೇ ಮುಜಾಮಿಲ್ ಷರೀಫ್ನನ್ನು ಸಂಘಟನೆಗೆ ಸೇರಿಸಿಕೊಂಡು ವಿಧ್ವಂಸಕ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್ಐಎ ಸದ್ಯ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದೆ. ಮಾಜ್ ಮುನೀರ್, ಮುಸಾವೀರ್ ಹುಸೇನ್ ಶಾಜೀಬ್, ಅಬ್ದುಲ್ ಮತೀನ್ ತಾಹಾ ಹಾಗೂ ಚಿಕ್ಕಮಗಳೂರಿನ ಮುಜಾಮಿಲ್ ಷರೀಫ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.