Advertisement

ರಮೇಶ್‌ ಆಸ್ಫೋಟ

03:39 PM Sep 22, 2017 | |

ಸಿನಿಮಾ ತಡವಾಗಬಹುದು; ರಿಸರ್ಚ್‌ ನಿಲ್ಲಿಸಲ್ಲ “ನಾನು ಸಿನಿಮಾ ಮಾಡ್ತಿಲ್ಲ ಅಂತ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಮಾಡಿದ್ರೆ ಸರಿಯಾಗಿ ಮಾಡಬೇಕು. ಎಲ್ಲಾ ಸರಿಯಾಗಿದೆ ಅಂತ ನನಗೇ ಅನಿಸಬೇಕು. ಸರಿ ಅಂದ್ರೆ ಮಾತ್ರ ಮಾಡ್ತೀನಿ. ಇಲ್ಲಾಂದ್ರೆ ಸರಿಯಾಗೋವರೆಗೂ ಕಾಯ್ತಿ …’ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು. ಎ.ಎಂ. ಆರ್‌. ರಮೇಶ್‌ ಹಾಗೆ ಹೇಳುವುದಕ್ಕೂ ಕಾರಣವಿದೆ.

Advertisement

ಯಾವುದೇ ಘಟನೆಗಳಾದರೂ, ಅದರ ಕುರಿತು ರಮೇಶ್‌ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿಯಾಗುತ್ತದೆ. ಸುದ್ದಿಯಾಗುತ್ತದೆಯೇ ಹೊರತು, ಆ ಸಿನಿಮಾಗಳು ಆಗಿಲ್ಲ. ರಾಜೀವ್‌ ಗಾಂಧಿ ಅವರ ಹತ್ಯೆಯ ಕುರಿತಾಗಿ ರಮೇಶ್‌, “ಆನ್ಪೋಟ’ ಎಂಬ ಚಿತ್ರ ಮಾಡುವುದಾಗಿ ಹೇಳಿದ್ದರು. ಅವರು ಹೇಳಿದಂತೆ ಆಗಿದ್ದರೆ, ಚಿತ್ರ ಮೇನಲ್ಲೇ ಬಿಡುಗಡೆಯಾಗಬೇಕಿತ್ತು. ಬಿಡುಗಡೆಯಾಗುವುದಿರಲಿ, ಚಿತ್ರ ಶುರುವೇ ಆಗಿಲ್ಲ. ಆಗಾಗ ಚಿತ್ರದ ಬಗ್ಗೆ ಸುದ್ದಿಯಾಗುವುದು ಬಿಟ್ಟರೆ, ಬೇರೇನೂ ಆಗಿಲ್ಲ. ಆ ಚಿತ್ರ ಶುರುವಾಗುವ ಮುನ್ನವೇ
ಅವರು “ರೂಪಾ ವರ್ಸಸ್‌ ಶಶಿಕಲಾ’, “ಹೂ ಕಿಲ್ಡ್‌ ಗೌರಿ’ ಎಂಬ ಚಿತ್ರಗಳನ್ನು ಮಾಡುತ್ತಾರೆ ಎಂಬ ಸುದ್ದಿ ಇದೆ. ಈ ಚಿತ್ರಗಳು ಯಾವಾಗ ಶುರುವಾಗುತ್ತದೋ ಗೊತ್ತಿಲ್ಲ. ಆದರೆ, ರಮೇಶ್‌ ಸುದ್ದಿಯಲ್ಲಿರುವುದಕ್ಕೆಂದೇ ಈ ತರಹದ ಚಿತ್ರಗಳನ್ನು ಮಾಡುವುದಾಗಿ ಘೋಷಿಸುತ್ತಾರೆ ಎಂಬ ಆರೋಪವೊಂದು ಅವರ ಮೇಲಿದೆ. ಈ ಆರೋಪವನ್ನು ರಮೇಶ್‌ ತಳ್ಳಿಹಾಕುತ್ತಾರೆ. 

ತಾವು ಖಂಡಿತಾ ಈಗಾಗಲೇ ಘೋಷಿಸಿರುವ ಚಿತ್ರಗಳನ್ನು ಮಾಡುವುದಾಗಿ ಹೇಳುತ್ತಾರೆ. “ನಾನು ಸುಮ್ಮನೆ ಹೇಳುತ್ತಿಲ್ಲ. ಖಂಡಿತಾ ಚಿತ್ರ ಮಾಡಿಯೇ ಮಾಡುತ್ತೇನೆ. ಇಂತಹ ಚಿತ್ರಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ರೀಸರ್ಚ್‌ ಮಾಡಬೇಕು. “ಆಸ್ಫೋಟ; ಚಿತ್ರಕ್ಕಾಗಿ ಕಳೆದ 25 ವರ್ಷಗಳಿಂದ ಸಂಶೋಧನೆ ಮಾಡುತ್ತಲೇ ಇದ್ದೀನಿ. ಅದೇ ವಿಷಯವಾಗಿ, ನಾಲ್ಕು ಬಾರಿ ಶ್ರೀಲಂಕಾಗೆ, ಮೂರು ಬಾರಿ ಕೆನಡಾಗೆ, ಮೂರು ಬಾರಿ ಅಮೇರಿಕಾಗೆ ಹೋಗಿ ಸಾಕಷ್ಟು ಜನರನ್ನು ಮಾತಾಡಿಸಿ ಬಂದಿದ್ದೀನಿ. ನಾನು
ಯಾವುದೇ ಚಿತ್ರವನ್ನು ಸಾಕ್ಷ್ಯವಿಲ್ಲದೆ, ರೀಸರ್ಚ್‌ ಇಲ್ಲದೆ ಮಾಡಿಲ್ಲ. ಅದೇ ಕಾರಣಕ್ಕೆ ಅಂತಹ ಹಾಟ್‌ ಟಾಪಿಕ್‌ಗಳನ್ನು ತೆಗೆದುಕೊಂಡರೂ ವಿವಾದಕ್ಕೆ ಸಿಲುಕಿಲ್ಲ. ಸಂಶೋಧನೆ ಮಾಡಬೇಕು ಎಂದರೆ ಅದಕ್ಕೆ ಸಾಕಷ್ಟು ಜನರನ್ನು ಭೇಟಿ ಮಾಡಬೇಕಾಗುತ್ತದೆ, ಹಲವು ಮಾಹಿತಿಗಳನ್ನು ತೆಗೆಯಬೇಕಾ ಗುತ್ತದೆ, ಇದೆಲ್ಲದರಿಂದ ಸಾಕಷ್ಟು  ಸಮಯ ಆಗುತ್ತದೆ. ಈಗಾಗಲೇ “ಆಸ್ಫೋಟ’ ಸ್ಕ್ರಿಪ್ಟ್ ರೆಡಿಯಾಗಿದೆ.  

ರಾಣಾ ದಗ್ಗುಬಾಟಿ ಎಸ್‌ ಎನ್ನುತ್ತಿದ್ದಂತೆಯೇ ಚಿತ್ರ ಶುರು ಮಾಡಬಹುದು. ಅವರಿಗಾಗಿ ಕಾಯುತ್ತಲೇ, ಇನ್ನಷ್ಟು ಏನಾದರೂ ಸಿಗಬಹುದಾ ಅಂತ ನೋಡುತ್ತೀನಿ. ಒಂದೂವರೆ ವರ್ಷಗಳ ಹಿಂದೆಯೇ ನಾನು ಈ ಸಿನಿಮಾ ಮಾಡಿದ್ದರೆ, ಒಂದು ದೊಡ್ಡ ವಿಷಯವನ್ನೇ ಬಿಟ್ಟುಬಿಡುತ್ತಿದ್ದೆ.  ಆದರೆ, ಸ್ವಲ್ಪ ತಡವಾಗಿ ತನಿಖೆ ಮಾಡಿದ್ದರಿಂದ, ಯಾರಿಗೂ ಗೊತ್ತಿಲ್ಲದ ಒಂದು ಅದ್ಭುತ ವಿಷಯ ನನಗೆ ಸಿಕ್ಕಿದೆ ಮತ್ತು ಆ ವಿಷಯವನ್ನು ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೀನಿ’ ಎನ್ನುತ್ತಾರೆ ಅವರು.

ಒಂದು ಚಿತ್ರವನ್ನು ಎಲ್ಲಾ ಆ್ಯ ಂಗಲ್‌ನಿಂದ ನೋಡುತ್ತೀನಿ ಎನ್ನುವ ಅವರು, “ನಾನು ಸುಮ್ಮನೆ ಸಿನಿಮಾ ಮಾಡುವುದಿಲ್ಲ. ಒಂದು ಚಿತ್ರವನ್ನು ಎಲ್ಲಾ ಆ್ಯಂಗಲ್‌ನಿಂದ ನೋಡುವುದಕ್ಕೆ ಪ್ರಯತ್ನಿಸುತ್ತೀನಿ. ಈಗ ರೂಪಾ ಅಥವಾ ಗೌರಿ ಲಂಕೇಶ್‌ ಅವರ ಕುರಿತಾದ ಚಿತ್ರಗಳ ಬಗ್ಗೆ ಹೇಳುವುದಾದರೆ, ಆ ಪ್ರಕರಣಗಳು ಇನ್ನೂ ಹೊಸದು. ತನಿಖೆ ಇನ್ನೂ ಪೂರ್ತಿಯಾಗಿಲ್ಲ. ಎರಡೂ ಘಟನೆಗಳೂ ದಿನಕ್ಕೊಂದು ತಿರುವು ಪಡೆಯುತ್ತಿವೆ. ಯಾವುದೋ ಒಂದು ಕಡೆ ವಾಲುವುದಕ್ಕೆ ನನಗೆ ಇಷ್ಟವಿಲ್ಲ. ತನಿಖೆ ನಡೆಯುತ್ತಿದೆ. ಎಲ್ಲವೂ ಬಗೆಹರಿದ ಮೇಲೆ, ನಾನು ನನ್ನದೇ ರೀತಿಯಲ್ಲಿ ಇನ್ನೊಮ್ಮೆ ರಿಸರ್ಚ್‌ ಮಾಡಿ, ನಂತರ ಅದನ್ನು ಚಿತ್ರಕಥೆಯನ್ನಾಗಿ ಮಾಡುತ್ತೀನಿ. ಅದಕ್ಕೆ ಸಾಕಷ್ಟು ಸಮಯ ಹಿಡಿಯಬಹುದು. ನನಗೆ ಆ ಬಗ್ಗೆ ಬೇಸರವಿಲ್ಲ. ಆ ಬಗ್ಗೆ ಬೇರೆ ಯಾರಾದರೂ ಸಿನಿಮಾ ಮಾಡಿದರೂ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಸಿನಿಮಾ ತಡವಾದರೂ ನಾನು ಯೋಚಿಸುವುದಿಲ್ಲ. ಆದರೆ, ನಾನು ಮಾತ್ರ ರೀಸರ್ಚ್‌ ನಿಲ್ಲಿಸುವುದಿಲ್ಲ. ಪ್ರತಿ ದಿನ ಸಂಶೋಧನೆ ಮಾಡುತ್ತಲೇ ಇರುತ್ತೇನೆ. ಏಕೆಂದರೆ, ಗೌರಿ ಅವರನ್ನು ಹತ್ತಿರದಿಂದ ನೋಡಿದವನು ನಾನು. ಅದೇ ರೀತಿ ಜೈಲಿನಲ್ಲಿ ಏನೆಲ್ಲಾ  ಆಗುತ್ತದೆ ಎಂದು ನನಗೆ ಗೊತ್ತಿದೆ.

Advertisement

ಇನ್ನು ರಾಜೀವ್‌ ಹತ್ಯೆ ಆದ ಸಂದರ್ಭದಲ್ಲಿ ಏನೆಲ್ಲಾ ಆಯಿತು ಎಂದು ಗೊತ್ತಿದೆ. ಹೀಗಾಗಿ ಬಿಡುವುದಕ್ಕೆ ಸಾಧ್ಯವೇ ಇಲ್ಲ. ಈಗಾಗಲೇ ಸಾಕಷ್ಟು ರೀಸರ್ಚ್‌ ಮಾಡಿದ್ದೀನಿ, ಅದನ್ನು ಇನ್ನೂ ಮುಂದುವರೆಸುತ್ತೀನಿ’ ಎನ್ನುತ್ತಾರೆ ಅವರು. ಎಲ್ಲಾ ಸರಿ, ರಮೇಶ್‌ಗೆ ಯಾಕೆ ಈ ನೈಜ ಘಟನೆಗಳ ಹಿಂದೆ ಬೆನ್ನು ಬೀಳುತ್ತಾರೆ. ಅದಕ್ಕೂ ಅವರ ಬಳಿ ಉತ್ತರವಿದೆ. “ಇಡೀ ಭಾರತದಲ್ಲಿ ನೈಜ ಘಟನೆಗಳನ್ನಿಟ್ಟುಕೊಂಡು, ಅಷ್ಟೇ ನೈಜವಾಗಿ ಚಿತ್ರಿಸುವುದು ಇಬ್ಬರೇ. ಒಬ್ಬರು ಶೇಖರ್‌ ಕಪೂರ್‌. ಇನ್ನೊಬ್ಬ ನಾನು. ನಾನು ಯಾವತ್ತೂ ನೈಜ ಘಟನೆಗಳನ್ನಿಟ್ಟುಕೊಂಡು, ನೈಜವಾಗಿ ಚಿತ್ರಿಸುವ ಪ್ರಯತ್ನ ಮಾಡುತ್ತೇನೆ. ಅದೇ ಲೊಕೇಶನ್‌ಗಳಲ್ಲಿ
ಶೂಟ್‌ ಮಾಡುತ್ತೇನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದೇ ಹೆಸರನ್ನು ಪಾತ್ರಗಳಿಗೆ ಇಡುತ್ತೇನೆ. ಇದಕ್ಕೆಲ್ಲಾ ಆಳವಾಗಿ ಅಧ್ಯಯನ ಮಾಡಬೇಕು ಮತ್ತು ಅದಕ್ಕೆ ಸಾಕಷ್ಟು ಸಮಯ ಬೇಕು. ಹಾಗಾಗಿ ಚಿತ್ರ ತಡವಾಗಬಹುದು. ಪ್ರಚಾರಕ್ಕೆ ಮಾಡಿದರೆ ಕಮರ್ಷಿಯಲ್‌ ಚಿತ್ರಗಳನ್ನು ಮಾಡಬಹುದು. ಆದರೆ, ನನಗೆ ಸುಮ್ಮನೆ ಏನೋ ಮಾಡುವುದಕ್ಕೆ ಇಷ್ಟವಿಲ್ಲ. ಐ ಲವ್‌ ಇನ್‌ವೆಸ್ಟಿಗೇಷನ್‌’
ಎಂದು ಮಾತು ಮುಗಿಸುತ್ತಾರೆ ಅವರು. 

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next