Advertisement

Chinese ಜಾನಪದದಲ್ಲಿಯೂ ರಾಮಾಯಣ ಜನಪ್ರಿಯ

12:21 AM Jan 15, 2024 | Team Udayavani |

ಕ್ರಿ.ಶ. ಮೊದಲ ಶತಮಾನದಲ್ಲಿ ಬೌದ್ಧರು ರಾಮಾಯಣವನ್ನು ಚೀನದಲ್ಲಿ ಪರಿಚಯಿಸಿದರು. ಇಲ್ಲಿ ರಾಮನನ್ನು ಲೋಮೋ, ಭರತನನ್ನು ಪೊಲೊಟೋ, ಲಕ್ಷ್ಮಣನನ್ನು ಲೋಮನ್‌ ಎಂದು ಕರೆಯಲಾಗುತ್ತದೆ. ಪೂರ್ವ ರಾಷ್ಟ್ರಗಳಲ್ಲಿ ಹಿಂದೂ ಹಾಗೂ ಬೌದ್ಧ ಧರ್ಮಗಳ ಪರಿಚಯದ ಆರಂಭಿಕ ಸಮಯದಲ್ಲೇ ರಾಮಾಯಣವು ಪ್ರಸರಣವಾಯಿತು. ಜಾತಕ ಕಥೆಗಳಲ್ಲಿನ ರಾಜ ದಶರಥ, ಕೋತಿಗಳ ರಾಜ ಹಾಗೂ ಶಂಬೂಕ ಎಂಬ ಮೂರು ಕಥೆಗಳು ಚೀನದಲ್ಲಿ ರಾಮಾಯಣ ಪರಿಚಿತವಾಗುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಬೌದ್ಧ ಶೈಲಿಯಲ್ಲಿ ರಾಮಾಯಣವನ್ನು ನಿರೂಪಿಸಲಾಗಿದೆ.

Advertisement

ಚೀನದಲ್ಲಿ ಕಂಡುಬಂದ ಮೊದಲ ರಾಮಾಯಣದ ಕಥೆಯಲ್ಲಿ ಶ್ರೀರಾಮನ 14 ವರ್ಷಗಳ ವನವಾಸವನ್ನು ಹೊರತುಪಡಿಸಿ, ಉಳಿದೆಲ್ಲವೂ ಭಾರತದ ರಾಮಯಾಣವನ್ನೇ ಹೋಲುತ್ತದೆ. ಕ್ರಿ.ಶ.472 ಹಾಗೂ 251ರಲ್ಲಿ ಅನುವಾದಿತ ದಶರಥ ಜಾತಕ ಹಾಗೂ ಅನಾಮಿಕ ರಾಜನ ಕಥೆಯಲ್ಲಿ ರಾವಣನನ್ನು ನಾಗರ ರಾಜ ಎಂದು ಕರೆಯಲಾಗಿದೆ. ದಶರಥ ಜಾತಕವು ವಾಲ್ಮೀಕಿಯ ಸಂಸ್ಕೃತ ಶ್ಲೋಕದ ಪಾಲಿ ಭಾಷೆಯ ಅನುವಾದವನ್ನು ಒಳಗೊಂಡಿದೆ. ರಾಮನ ಕುರಿತಾದ ವಿವಿಧ ಜಾತಕ ಕಥೆಗಳು ಚೀನದಲ್ಲಿ ಜನಪ್ರಿಯತೆ ಯನ್ನು ಹೊಂದಿವೆ. ಬೌದ್ಧ ಗ್ರಂಥವಾದ ಲಿಉಡೂ ಜೀ ಜಿಂಗ್‌ನಲ್ಲಿ ಚೀನದಲ್ಲಿನ ಅತ್ಯಂತ ಪ್ರಾಚೀನ ರಾಮಾಯಣದ ಒಕ್ಕಣೆ ಕಂಡು ಬರುತ್ತದೆ. 16ನೇ ಶತಮಾನದಲ್ಲಿ ಬರೆದ ಗ್ರಂಥದಲ್ಲಿ ಕೋತಿಗಳ ರಾಜ, ಸುನ್‌ ವುಕೊಂಗ್‌ (ಹನುಮಾನ್‌) ನ ಉಲ್ಲೇಖವೂ ಇದೆ.
ಕ್ರಿ.ಶ. 9 ನೇ ಶತಮಾನದಲ್ಲಿ ಥೈಲ್ಯಾಂಡ್‌, ಮ್ಯಾನ್ಮಾರ್‌, ಜಾವಾ ಹಾಗೂ ಇತರ ದೇಶ ಗಳಲ್ಲಿನ ಸಾಹಿತ್ಯಕಾರರು ರಾಮಾಯಣವನ್ನು ಅಯಾ ದೇಶಗಳ ಭಾಷೆಗಳಲ್ಲಿ ಅನುವಾದಿಸಲು ಆರಂಭಿಸಿದ್ದರು. ಇದೇ ಸಮಯದಲ್ಲಿ ಅತೀ ವೇಗವಾಗಿ ಇದು ದಕ್ಷಿಣ ಹಾಗೂ ನೈಋತ್ಯ ಚೀನದ ಪ್ರದೇಶಗಳಿಗೆ ತಲುಪಿತು. ಚೀನದ ದಾಈ ಸಮುದಾಯವು ಜಾನಪದ ಸಂಪ್ರದಾಯದಲ್ಲಿ ರಾಮಾಯಣವನ್ನು ಪ್ರಪ್ರಥಮವಾಗಿ ಅಳವಡಿಸಿ ಕೊಂಡಿತ್ತು. ಬಳಿಕ ರಾಮಾಯಣವು ಚೀನದ ವಿವಿಧ ಪ್ರದೇಶಗಳಲ್ಲಿ ಪ್ರಚುರ ಗೊಂಡಿತು. ಚೀನದ ಯುನ್ನಾನ್‌ ಪ್ರಾಂತದಲ್ಲಿ ರಾಮಾಯಣವನ್ನು ಲಂಗಾ ಸಿಪ ಹೋರ ಎಂದು ಕರೆಯಲಾಗುತ್ತದೆ. ಇದು ಸಂಸ್ಕೃತ ಹಾಗೂ ಪಾಲಿ ಭಾಷೆಯಿಂದ ಹೆಚ್ಚಿನ ಭಾಗಗಳನ್ನು ಅಳವಡಿಸಿಕೊಂಡಿದೆ. ಯುನ್ನಾನ್‌ನ ನೈಋತ್ಯ ಭಾಗದಲ್ಲಿರುವ ದಾಈ ಸಮುದಾಯದಲ್ಲಿ ರಾಮಾಯಣವು ಲಂಕಾದ ಹತ್ತು ತಲೆಗಳು ಎಂದು ಪ್ರಚಲಿತವಾಗಿದೆ. ಇಲ್ಲಿಂದಲೇ ಈ ಕಥೆಯು ಬೌದ್ಧ ಧರ್ಮದ ಮೂಲಕ ಟಿಬೆಟ್‌ ಹಾಗೂ ಮಂಗೋಲಿಯಾದಲ್ಲೂ ಕೆಲವು ಬದಲಾವಣೆಗಳೊಂದಿಗೆ ಪರಿಚಯವಾಯಿತು. ಇದರ ಪ್ರಕಾರ ವನವಾಸದಲ್ಲಿ ರಾಮನ ಜತೆಗೆ ಲಕ್ಷಣನ ಬದಲು ಭರತನು ಹೋಗುತ್ತಾನೆ.

1950 ಹಾಗೂ 1962ರಲ್ಲಿ ಚೀನದಲ್ಲಿ ರಾಮಾಯಣವನ್ನು ಸಂಪೂರ್ಣವಾಗಿ ಅನುವಾದಿ ಸಲಾಯಿತು. ಆದರೆ ಇಂಗ್ಲಿಷ್‌ ಭಾಷೆಯ ಆವೃತ್ತಿಯಿಂದ ಇದನ್ನು ಅನುವಾದಿಸಲಾಗಿತ್ತು. ಆ ಬಳಿಕ 1984ರಲ್ಲಿ ಜೀ ಜಿಯಾನಲಿನ ಎಂಬ ಚೀನದ ವಿದ್ವಾಂಸ ಮೂಲ ಸಂಸ್ಕೃತ ರಾಮಾಯಣವನ್ನು ಚೀನದ ಭಾಷೆಗೆ ಸಂಪೂರ್ಣವಾಗಿ ಅನುವಾದಿಸಿ ದವರಲ್ಲಿ ಮೊದಲಿಗರಾಗಿದ್ದು, 8 ಆವೃತ್ತಿಗಳಲ್ಲಿ ಕೃತಿಯನ್ನು ಹೊರತಂದಿದ್ದರು. ಭಾರತೀಯ ಶಾಸ್ತ್ರಕ್ಕೆ ಇವರು ನೀಡಿದ ಅಪೂರ್ವ ಕೊಡುಗೆಯನ್ನು ಗುರುತಿಸಿ ಭಾರತ ಸರಕಾರವು 2008ರಲ್ಲಿ ಅವರಿಗೆ ಪದ್ಮಭೂಷಣದ ಪುರಸ್ಕಾರವನ್ನು ನೀಡಿತ್ತು.

ಅಗಸ್ತ್ಯರು ಬೋಧಿಸಿದ ಆದಿತ್ಯಹೃದಯವನ್ನು ಪಠಿಸಿದ ಮೇಲೆ ರಾಮನಿಂದ ರಾವಣನ ಹತ್ಯೆ
ಶ್ರೀರಾಮ-ರಾವಣರ ನಡುವಿನ ಯುದ್ಧ ತಾರಕಕ್ಕೇರಿತ್ತು. ರಾವಣನನ್ನು ಏನೇ ಮಾಡಿದರೂ ಮಣಿಸಲು ಆಗುತ್ತಿರಲಿಲ್ಲ. ರಾಮಸೇನೆ ಹತಾಶೆಗೊಂಡಿತ್ತು. ಆ ಸಂದರ್ಭದಲ್ಲಿ ಯುದ್ಧರಂಗಕ್ಕೆ ಆಗಮಿಸಿದ ಅಗಸ್ತ್ಯ ಮಹರ್ಷಿಗಳು, ಶ್ರೀರಾಮನಿಗೆ ಆದಿತ್ಯಹೃದಯ ಮಂತ್ರವನ್ನು ಉಪದೇಶಿಸುತ್ತಾರೆ. ಆದಿತ್ಯಹೃದಯ ಸೂರ್ಯನನ್ನು ಆರಾಧಿಸುವ ಮಂತ್ರಗಳನ್ನೊಳಗೊಂಡಿದೆ. ಅದನ್ನು ಪಠಿಸಿ ಸೂರ್ಯನನ್ನು ಆರಾಧಿಸಿದ ನಂತರ, ಶ್ರೀರಾಮ, ರಾವಣನನ್ನು ಸಂಹರಿಸುತ್ತಾನೆ. ವಿಶ್ವಾದ್ಯಂತ ಕೋಟ್ಯಂತರ ಮಂದಿ ಪಠಿಸುವ ಆದಿತ್ಯಹೃದಯದ ಮೂಲವೂ ರಾಮಾಯಣ ಎನ್ನುವುದು ಈ ಕೃತಿಯ ಮಹತ್ವವನ್ನು ತೋರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next