Advertisement
ಕಸ್ತೂರಿ ರಂಗನ್ ವರದಿ ಇನ್ನೂ ರದ್ದಾಗಿಲ್ಲ, ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಲೂ ಆಗಾಗ ವರದಿ ಜಾರಿಗೆ ಆಕ್ಷೇಪಗಳು ಕೇಳಿಸುತ್ತಿತ್ತು, ಈಗಲೂ ಮುಂದುವರಿದಿದೆ. ಗಾಡ್ಗಿಳ್ ವರದಿಗೆ ಕಾಡಂಚಿನ ಜನರಿಂದ ಪ್ರತಿರೋಧ ಬಂದ ಬಳಿಕ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಕೇಂದ್ರ ಸರಕಾರ ಕರಡು ಅಧಿಸೂಚನೆ ಪ್ರಕಟಿಸಿ ಆಕ್ಷೇಪ ಸಲ್ಲಿಸಲು ಸೂಚಿಸಿತ್ತು. ಆಗ ವಿಪಕ್ಷದಲ್ಲಿದ್ದ ಬಿಜೆಪಿ ಭಾರೀ ಗುಲ್ಲೆಬ್ಬಿಸಿತ್ತು. ಬಳಿಕ ನಾಲ್ಕೈದು ಕರಡು ಅಧಿಸೂಚನೆ ಪ್ರಕಟವಾಗಿತ್ತು. ಆಗ ರಾಜ್ಯದಲ್ಲಿ ನಾನು ಅರಣ್ಯ ಸಚಿವನಾಗಿದ್ದೆ. ಹಿಂದೆ ಕಸ್ತೂರಿ ವರದಿ ಅನುಷ್ಠಾನಗೊಳಿಸಿ ಜನರನ್ನು ಬೀದಿಗೆ ತಳ್ಳುತ್ತಾರೆ ಎಂದಿದ್ದ ಬಿಜೆಪಿಯವರು ಈ ಸಂದರ್ಭದಲ್ಲಿ ರಾಜ್ಯ ಸರಕಾರ ಸಲ್ಲಿಸಿದ ವರದಿಯೇ ಸರಿ ಇಲ್ಲ ಎಂದರು. ಅಂತಿಮವಾಗಿ ನಮ್ಮ ಅವಧಿಯ ರಾಜ್ಯ ಸರಕಾರ ರಂಗನ್ ವರದಿ ಜಾರಿ ಬೇಡ ಎಂದು ಕೇಂದ್ರಕ್ಕೆ ಪತ್ರ ಕಳುಹಿಸಿದ್ದೆವು ಎಂದರು.
ಎತ್ತಿನಹೊಳೆ ಯೋಜನೆ ಜಾರಿಗೆ ತಂದಾಗ ಪ್ರತಿಭಟನೆ, ಪಾದಯಾತ್ರೆ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲು ಇದೀಗ ಹಾಸನ, ಕೋಲಾರ ಭಾಗದಲ್ಲಿ ಸಭೆ ನಡೆಸಿ, ಅದನ್ನು ನಾವೇ ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ನಾನು ಎಂದೂ ಹಿಪಾಕ್ರಸಿ ಪಾಲಿಟಿಕ್ಸ್ ಮಾಡಿಲ್ಲ. ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರು ನಡೆಸುತ್ತಿರುವ ಕುತಂತ್ರ ಎಂದು ಟೀಕಿಸಿದರು. ಮನಪಾ ಸದಸ್ಯ ಶಶಿಧರ ಹೆಗ್ಡೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಪಕ್ಷದ ಅಲ್ಪಸಂಖ್ಯಾಕರ ಜಿಲ್ಲಾ ಘಟಕ ಅಧ್ಯಕ್ಷ ಶಾಹುಲ್ ಹಮೀದ್, ಅಪ್ಪಿ, ಗಣೇಶ್ ಪೂಜಾರಿ, ಉಮೇಶ್ ದಂಡಕೇರಿ, ಜಯಶೀಲ ಅಡ್ಯಂತಾಯ, ಬಿ.ಎಲ್. ಪದ್ಮನಾಭ, ಶಬೀರ್ ಸಿದ್ದಕಟ್ಟೆ, ನಝೀರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.