Advertisement

Ramanagara District: ರಾಮನಗರ-ಬೆಂ.ದಕ್ಷಿಣ ಯಾವುದು ಮೇಲು?

04:13 PM Oct 31, 2023 | Team Udayavani |

ರಾಮನಗರ: ಬೆಂಗಳೂರಿನ ಉಪನಾಮ ರಾಮನಗರ ಜಿಲ್ಲೆಗೆ ಸೇರಿದರೆ ಜಿಲ್ಲೆಯ ಅಭಿವೃದ್ಧಿಗೆ ವೇಗ ದೊರೆಯುತ್ತದಾ..? ಬೆಂಗಳೂರು ಬ್ರಾಂಡ್‌ ಕೇವಲ ರಾಜಕೀಯ ಲಾಭಕ್ಕಾ? ಇಲ್ಲವೇ ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ನಿಜಕ್ಕೂ ಲಾಭವಿದೆಯಾ ಎಂಬ ಚರ್ಚೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ಬೆನ್ನಲ್ಲೇ ಜಿಲ್ಲಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

Advertisement

2007ರಲ್ಲಿ ಬೆಂ.ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ರಾಮನಗರ ಜಿಲ್ಲೆಯಾಗಿ ರಚನೆ ಮಾಡಲಾಯಿತು. ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಸ್ಥಳೀಯ ವಾಗಿ ಹೆಚ್ಚಿನ ಒತ್ತಡವಿಲ್ಲದಿದ್ದರೂ ಅಂದಿನ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ತಾವು ಪ್ರತಿನಿಧಿಸುತ್ತಿದ್ದ ರಾಮ ನಗರ ಕ್ಷೇತ್ರವನ್ನು ಜಿಲ್ಲಾ ಕೇಂದ್ರವಾಗಿಸಿ ನೂತನ ಜಿಲ್ಲೆ ಘೋಷಿಸಿದರು. ಅಂದಿ ನಿಂದಲೂ ನಮ್ಮ ಜಿಲ್ಲೆ ಬೆಂಗಳೂರಿನ ಹೆಸರಿನಿಂದಲೇ ಕರೆಸಿಕೊಳ್ಳ ಬೇಕು ಎಂದು ವಾದಿಸುತ್ತಲೇ ಇದ್ದ ಡಿ.ಕೆ.ಶಿವಕುಮಾರ್‌ ಇದೀಗ ತಮಗೆ ಸಿಕ್ಕಿರುವ ಅಧಿಕಾರ ಬಳಸಿ ಎಚ್‌ಡಿಕೆ ಸ್ಥಾಪಿಸಿದ ಜಿಲ್ಲೆ ಹೆಸರು ಬದಲಿಗೆ ಮುಂದಾಗಿದ್ದಾರೆ. ಇದು ರಾಜಕೀಯ, ಸಾಂಸ್ಕೃತಿಕ ಹಾಗೂ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹೆಸರು ಬದಲಾವಣೆ ಹೊಸದಲ್ಲ: ರಾಮನಗರಕ್ಕೆ ಹೆಸರು ಬದಲಾವಣೆ ಇತಿಹಾಸದ ಕಾಲದಿಂದ ನಡೆದಿದೆ ಎಂದು ಹೇಳಲಾಗುತ್ತದೆ. ಟಿಪ್ಪು ಆಳ್ವಿಕೆ ಕಾಲದಲ್ಲಿ ರಾಮನಗರವನ್ನು ಶಂಷರಾಬಾದ್‌ ಎಂದು ಕರೆಯಲಾಗುತ್ತಿತ್ತೆಂದು, ಬಳಿಕ ಈ ಭಾಗದಲ್ಲಿ ಸರ್‌ ಬ್ಯಾರಿಕ್ಲೋಸ್‌ ಎಂಬ ಇಂಗ್ಲಿಷ್‌ ಆಧಿಕಾರಿ ಆಳುತ್ತಿದ್ದ ಕಾರಣ ಈ ನಗರಕ್ಕೆ ಕ್ಲೋಸ್‌ಪೇಟೆ ಎಂದೂ ಕರೆಯಲಾಗುತಿತ್ತು. ಸ್ವಾತಂತ್ರ್ಯ ಬಳಿಕ ಕೆಂಗಲ್‌ ಹನುಮಂತಯ್ಯ ರಾಮನಗರ ಎಂಬ ಹೆಸರನ್ನು ನಾಮಕರಣ ಮಾಡಿದರು. ಇದಕ್ಕೆ ಮುಖ್ಯ ಕಾರಣ ಇಲ್ಲಿನ ರಾಮಗಿರಿ ಬೆಟ್ಟದಲ್ಲಿ ಶ್ರೀರಾಮಚಂದ್ರ ನೆಲೆಸಿದ್ದ ಎಂಬ ರಾಮಾಯಣದ ಪೌರಾಣಿಕ ಕಥೆ.

ಕಡಿಮೆ ಬಡವರು ಇರುವ ಜಿಲ್ಲೆ: ನೀತಿ ಆಯೋಗ ಬಿಡುಗಡೆ ಮಾಡಿರುವ ಬಹು ಆಯಾಮದ ಬಡತನ ಸಮೀಕ್ಷೆ ಪ್ರಕಾರ ರಾಮನಗರ ರಾಜ್ಯದಲ್ಲೇ ಅತಿ ಕಡಿಮೆ ಬಡವರನ್ನು ಹೊಂದಿದೆ. ಇಲ್ಲಿನ ಜನರ ತಲಾ ಆದಾಯ 2.23 ಲಕ್ಷ ಇದ್ದು, ಜಿಡಿಪಿಯಲ್ಲಿ 22ನೇ ಸ್ಥಾನ ಪಡೆದಿದೆ. ಇನ್ನು ಜಿಲ್ಲೆಯಲ್ಲಿ 24 ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಇದ್ದು ಬಿಡದಿ 1ನೇ ಹಂತ, 2ನೇ ಹಂತ, 2ನೇ ಹಂತದಲ್ಲಿ 1 ಮತ್ತು 2ನೇ ಸೆಕ್ಟರ್‌, ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1 ಮತ್ತು 2ನೇ ಹಂತ ಸೇರಿ 5 ಕೈಗಾರಿಕಾ ಪ್ರದೇಶಗಳಿವೆ. ಕೆಐಎಡಿಬಿ 1067 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನಪಡಿಸಿ 803.35 ಎಕರೆ ಭೂಮಿ ಅಭಿವೃದ್ಧಿ ಪಡಿಸಿ 645 ಪ್ಲಾಟ್‌ ಹಂಚಿಕೆ ಮಾಡಿದೆ. ಜಿಲ್ಲೆಯಲ್ಲಿ 15026 ಮಂದಿಗೆ ಇಲ್ಲಿನ ಕೈಗಾರಿಕೆ ಉದ್ಯೋಗ ಸೃಷ್ಟಿ ಮಾಡಬಹುದಿದೆ.

ಹೆಸರು ಬದಲಾವಣೆಯ ಲಾಭ:

  • ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಇರುವ ಬ್ರಾಂಡ್‌ ಈ ಭಾಗಕ್ಕೂ ಸಿಗಲಿದೆ.
  • ಆಡಳಿತಾತ್ಮಕವಾಗಿ ರಾಮನಗರ ಜಿಲ್ಲಾಕೇಂದ್ರವಾಗಿರುತ್ತದೆ. ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗಲ್ಲ. ಬೆಂಗಳೂರು ಎಂಬ ಬ್ರ್ಯಾಂಡ್‌ಗೆ ಜಾಗತಿಕ ಮಟ್ಟದ ಖ್ಯಾತಿಯ ಲಾಭವನ್ನು ರಾಮನಗರವೂ ಪಡೆಯಬಹುದಾಗಿದೆ.
  • ಬೆಂಗಳೂರು ಬ್ರ್ಯಾಂಡ್‌ನಿಂದ ಹೂಡಿಕೆ ಕೆಲ ವಿದೇಶಿ ಬಂಡವಾಳಗಾರರು ಹೂಡಿಕೆ ಮಾಡಲು ಉತ್ಸಾಹ ತೋರುತ್ತಾರೆ.
  • ಪ್ರಸ್ತುತ ಬೆಂಗಳೂರು ನಗರದ ಸುತ್ತಮುತ್ತ ಕೇಂದ್ರೀಕರಿಸಿರುವ ಐಟಿ-ಬಿಟಿ, ಸೇವಾ ಕ್ಷೇತ್ರ, ರಿಯಲ್‌ ಎಸ್ಟೇಟ್‌ ಕ್ಷೇತ್ರ ಈ ಭಾಗದತ್ತ ಗಮನಹರಿಸುತ್ತವೆ.
  • ಹೊಸ ಉದ್ಯಮಗಳಿಂದ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಸ್ಥಳೀಯರು ಸಣ್ಣಪುಟ್ಟ ವ್ಯಾಪಾರ, ಪೂರಕ ಉದ್ಯಮ ನಡೆಸಲು ಸಹಕಾರಿ.
  • ಬೆಂಗಳೂರಿನ ಮೆಟ್ರೋ, ಸಬ್‌ ಅರ್ಬನ್‌, ಹೈಡೆನ್ಸಿಟಿ ಕಾರಿಡಾರ್‌ ವಿಸ್ತರಣೆಗೆ ಅವಕಾಶ. ಬೆಂ.ದಕ್ಷಿಣ ಜಿಲ್ಲೆ ತಾಲೂಕುಗಳನ್ನು ಬೆಂಗಳೂರು ಉಪನಗರಗಳಾಗಿ ಅಭಿವೃದ್ಧಿಪಡಿಸಲು ಅವಕಾಶ.
  • ಬೆಂ.ದಕ್ಷಿಣ ಎಂಬ ಹೆಸರಿನಿಂದಾಗಿ ಕೈಗಾರಿಕೆ, ಉದ್ಯಮ ಇತ್ತ ಗಮನಹರಿಸಲಿದ್ದು ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಆಗುತ್ತದೆ.
  • ಬೆಂಗಳೂರು ಉಪನಾಮದಿಂದಾಗಿ ಇಲ್ಲಿನ ಭೂಮಿಗಳ ಬೆಲೆ ಹೆಚ್ಚಳವಾಗುತ್ತದೆ. ರೈತರಿಗೆ ಒಳ್ಳೆಯ ಲಾಭ ದೊರೆಯುತ್ತದೆ.
Advertisement

ಹೆಸರು ಬದಲಿನಿಂದಾಗುವ ಸಮಸ್ಯೆ ಏನು? :

  • ರಾಮನಗರಕ್ಕೆ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಇದೆ. ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸುವುದರಿಂದ ರಾಮನಗರದ ಆಸ್ಮಿತೆಗೆ ಧಕ್ಕೆ ಆಗಲಿದೆ.
  • ರಾಮನಗರ ಕೃಷಿ ಪ್ರಧಾನ ಜಿಲ್ಲೆ. ರೇಷ್ಮೆ, ಮಾವು, ಹೈನುಗಾರಿಕೆ ಇಲ್ಲಿನ ಪ್ರಮುಖ ಕೃಷಿ. ಬೆಂಗಳೂರು ಎಂದು ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಪ್ರಾರಂಭವಾದರೆ ಕೃಷಿಗೆ ದಕ್ಕೆಯಾಗುತ್ತದೆ.
  • ಬೆಂಗಳೂರು ಉಪನಾಮದಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಬೆಳೆದು ಸ್ಥಳೀಯ ರೈತರು ಭೂಮಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ರೈತರು ಭೂಮಿ ಮತ್ತು ಬದುಕು ಎರಡನ್ನೂ ಕಳೆದುಕೊಳ್ಳುತ್ತಾರೆ.
  • ಬೆಂಗಳೂರು ನಗರದ ಪರಭಾಷಿಗರ ಹಾವಳಿ, ಕಾಸ್ಮೋಪಾಲಿಟನ್‌ ಸಂಸ್ಕೃತಿ ಇಲ್ಲಿಯೂ ಬೆಳೆದು ಜಿಲ್ಲೆಯ ಸಾಂಸ್ಕೃತಿಕ ವಾತಾವರಣಕ್ಕೆ ಹಾನಿಯಾಗುತ್ತದೆ.
  • ಈಗಾಗಲೇ ರಾಮನಗರ ಜಿಲ್ಲೆ ಸ್ಥಾಪನೆ ಸಮಯದಲ್ಲಿ ಹೆಸರಿನ ಬಗ್ಗೆ ಆಡಳಿತಾತ್ಮಕವಾಗಿ, ತಾಂತ್ರಿಕವಾಗಿ ಪರಿಶೀಲನೆ ನಡೆಸಲಾಗಿದ್ದು ಹೆಸರು ಬದಲಾವಣೆ ಸರಿಯಲ್ಲ.
  • ಜಿಲ್ಲೆಯ ಹೆಸರು ಬದಲಿಂದ ಎಲ್ಲಾ ದಾಖಲೆ ತಿದ್ದಬೇಕಿದ್ದು, ಇದು ವಿನಾಕಾರಣ ಹಲವು ಗೊಂದಲ, ಆಡಳಿತಾತ್ಮಕವಾಗಿ ಹೆಚ್ಚು ವೆಚ್ಚಕ್ಕೆ ದಾರಿ ಮಾಡಿಕೊಡಲಿದೆ.
  • ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿಯಾಗುತ್ತದೆ ಎಂಬುದು ಕೇವಲ ಭ್ರಮೆ. ಮುಂಬೈ ದೊಡ್ಡನಗರವಾಗಿದ್ದರೂ ಅದರ ಪಕ್ಕದ ಪುಣೆಯನ್ನು ಅದೇ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಅದೇ ರೀತಿ ಹೆಸರು ಬದಲಾವಣೆ ಮಾಡದೆಯೂ ಅಭಿವೃದ್ಧಿ ಮಾಡಬಹುದು.

ರಾಜ್ಯದ 29ನೇ ಜಿಲ್ಲೆಯಾಗಿ 2007ರಲ್ಲಿ ಘೋಷಣೆ ಆಗಿದ್ದ ರಾಮನಗರ ಜಿಲ್ಲೆ :

ರಾಜ್ಯದ 29ನೇ ಜಿಲ್ಲೆಯಾಗಿ 2007ರಲ್ಲಿ ಘೋಷಣೆಯಾದ ರಾಮನಗರ ಜಿಲ್ಲೆ 4 ಮಂದಿ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದೆ. 3576 ಚ.ಕಿ.ಮೀ. ವಿಸ್ತೀರ್ಣವಿರುವ ಈ ಜಿಲ್ಲೆ 5 ತಾಲೂಕು 823 ಕಂದಾಯ ಗ್ರಾಮ, 1400ಕ್ಕೂ ಹೆಚ್ಚು ಹ್ಯಾಮ್ಲೆಟ್‌ ಗ್ರಾಮ ಹೊಂದಿದ್ದು, ಪ್ರತಿ ಕಿ.ಮೀ.ಗೆ 288 ಜನಸಾಂದ್ರತೆ ಹೊಂದಿದೆ.1082735 ಮಂದಿ ಜನಸಂಖ್ಯೆ 2011ರ ಜನಗಣತಿ ಪ್ರಕಾರ ಈ ಜಿಲ್ಲೆ ಶೇ.69.2 ಸಾಕ್ಷರತಾ ಪ್ರಮಾಣ ಹೊಂದಿದೆ.

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next